ಮೆಲ್ಬರ್ನ್ ಚಿತ್ರೋತ್ಸವ ಬಳಿಕ ಅಹಮದಾಬಾದ್ ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಬರಗೂರು 'ಚಿಣ್ಣರ ಚಂದ್ರ'
ಬರಗೂರು ರಾಮಚಂದ್ರಪ್ಪ ನಿರ್ದೇಶನದ 'ಚಿಣ್ಣರ ಚಂದ್ರ' ಸುದ್ದಿಯಲ್ಲಿದೆ. ಈಗಾಗಲೇ ಈ ಸಿನಿಮಾ ಮೆಲ್ಬರ್ನ್ ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿ ಸ್ಪರ್ಧೆಯ ಅಂತಿಮ ಹಂತ ತಲುಪಿದೆ. ಇದೀಗ ಅಹಮದಾಬಾದ್ ಅಂತರರಾಷ್ಟ್ರೀಯ ಮಕ್ಕಳ ಚಿತ್ರೋತ್ಸವಕ್ಕೆ 'ಚಿಣ್ಣರ ಚಂದ್ರ' ಹೊರಟು ನಿಂತಿದೆ.
ಅಧಿಕೃತವಾಗಿ ಚಿತ್ರೋತ್ಸವಕ್ಕೆ ಆಯ್ಕೆ ಆಗಿರುವ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಪ್ರವೇಶ ಪಡೆದಿದೆ. 'ಚಿಣ್ಣರ ಚಂದ್ರ' ಚಿತ್ರ ಶಿಕ್ಷಣದ ಮಹತ್ವ ಸಾರುವ ಜೊತೆ ಜೊತೆಗೆ ಸಮಾಜದಲ್ಲಿ ಸದಭಿರುಚಿ, ಸೌಹಾರ್ದತೆ ಮತ್ತು ಸಮಾನತೆ ಅಗತ್ಯ ಎಂಬುದನ್ನೂ ಮಕ್ಕಳ ಮೂಲಕ ಅಭಿವ್ಯಕ್ತ ಪಡಿಸುತ್ತದೆ. ಜೊತೆಗೆ ಜನಪದ ಕಥೆಗಳು ಮಕ್ಕಳ ಮನಸ್ಸಿನ ಭಾಗವಾಗುವುದನ್ನು ಕಟ್ಟಿಕೊಟ್ಟಿದೆ.

ಬರಗೂರರ ರಾಮಚಂದ್ರಪ್ಪ ಅವರ 'ಅಡಗೂಲಜ್ಜಿ' ಕಾದಂಬರಿ ಆಧರಿಸಿದ ಈ ಚಿತ್ರವನ್ನು ಜಿ.ಎಸ್ ಗೋವಿಂದರಾಜು ನಿರ್ಮಿಸಿದ್ದಾರೆ. ಚಿತ್ರದ ತಾರಾಗಣದಲ್ಲಿ ಷಡ್ಜ, ಈಶಾನ್, ಆಕಾಂಕ್ಷ್ ಬರಗೂರ್, ನಿಕ್ಷೇಪ, ಅಭಿನವ್ ನಾಗ್, ಸುಂದರರಾಜ್, ರೇಖಾ, ವತ್ಸಲ ಮೋಹನ್, ರಾಧ ರಾಮಚಂದ್ರ, ರಾಘವ, ರಾಜಪ್ಪ ದಳವಾಯಿ, ಸುಂದರರಾಜ್ ಅರಸು, ವೆಂಕಟರಾಜು, ಹಂಸ ನಟಿಸಿದ್ದಾರೆ. ಸುರೇಶ್ ಅರಸು ಸಂಕಲನ, ನಾಗರಾಜ್ ಆದವಾನಿ ಛಾಯಾಗ್ರಹಣ ಹಾಗಗೂ ಶಮಿತ ಮಲ್ನಾಡ್ ಸಂಗೀತ 'ಚಿಣ್ಣರ ಚಂದ್ರ' ಚಿತ್ರಕ್ಕಿದೆ.
ಬರಗೂರು ರಾಮಚಂದ್ರಪ್ಪನವರ ಮೊಮ್ಮಗ ಆಕಾಂಕ್ಷ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾನೆ. 'ಚಿಣ್ಣರ ಚಂದ್ರ' ಚಿತ್ರಕ್ಕೆ ಬರಗೂರು ಚಿತ್ರಕತೆ, ಸಂಭಾಷಣೆ ಹಾಗೂ ಗೀತರಚನೆ ಮಾಡಿದ್ದಾರೆ. ಒಂದು ಊರಿಗೆ ಟೂರಿಂಗ್ ಟಾಕೀಸ್ ಬಂದು ಸಿನಿಮಾಗಳಿಂದ ಜನಪದ ಕತೆಗಳಿಗೆ ಕುತ್ತು ಬರುತ್ತದೆ ಎಂದುಕೊಂಡಾಗ ಅಡಗೂಲಜ್ಜಿ ಸಿನಿಮಾ ಕತೆಗಳನ್ನು ಜಾನಪದ ಕತೆಗಳನ್ನಾಗಿ ಊರಿನ ಮಕ್ಕಳು ಹಾಗೂ ಹಿರಿಯರಿಗೆ ಹೇಳುತ್ತಾಳೆ. ಈ ಮೂಲಕ ಜಾನಪದಕ್ಕೆ ಕೊನೆಯಿಲ್ಲ ಎಂದು ಸಾರುವ ಪ್ರಯತ್ನ ಮಾಡಲಾಗಿದೆ.
ಶೀಘ್ರದಲ್ಲೇ 'ಚಿಣ್ಣರ ಚಂದ್ರ' ಚಿತ್ರವನ್ನು ರಿಲೀಸ್ ಮಾಡಿ ರಾಜ್ಯದಾದ್ಯಂತ ಶಾಲಾ ಮಕ್ಕಳಿಗೆ ಚಿತ್ರವನ್ನು ಪ್ರದರ್ಶಿಸಲು ತೀರ್ಮಾನಿಸಲಾಗಿದೆ. ಕೊನೆಯದಾಗಿ 'ಅಮೃತಮತಿ' ಚಿತ್ರವನ್ನು ಬರಗೂರು ರಾಮಚಂದ್ರಪ್ಪ ನಿರ್ದೇಶನ ಮಾಡಿದ್ದರು. ಆ ಚಿತ್ರ ಕೂಡ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು.
'ಚಿಣ್ಣರ ಚಂದ್ರ' ಚಿತ್ರದ ಲೀಡ್ ರೋಲ್ನಲ್ಲಿ ನಟಿಸಿರುವ ಆಕಾಂಕ್ಷ್ ಈ ಹಿಂದೆ ತಾತನ 'ತಾಯಿ ಕಸ್ತೂರ್ ಗಾಂಧಿ' ಹಾಗೂ 'ಬಯಲಾಟದ ಭೀಮಣ್ಣ' ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದ.


Click it and Unblock the Notifications











