ಬ್ರಾಹ್ಮಣ ಸಮುದಾಯ vs ಚೇತನ್: ಬಸವನಗುಡಿ ಪೊಲೀಸರಿಂದ ನಟನಿಗೆ ನೋಟಿಸ್
ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ನಟ-ಸಾಮಾಜಿಕ ಹೋರಾಟಗಾರ ಚೇತನ್ ವಿರುದ್ಧ ಎರಡು ಪ್ರತ್ಯೇಕ ದೂರು ದಾಖಲಾಗಿತ್ತು. ಈ ದೂರಿಗೆ ಸಂಬಂಧಿಸಿದಂತೆ ಬಸವನಗುಡಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನಟ ಚೇತನ್ಗೆ ನೋಟಿಸ್ ನೀಡಿದ್ದಾರೆ.
Recommended Video
ಈ ವಿಚಾರವನ್ನು ಖುದ್ದು ಚೇತನ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ''ಬಸವನಗುಡಿ ಪೊಲೀಸ್ ಠಾಣೆಯಿಂದ ನನಗೆ ನೋಟಿಸ್ ಬಂದಿದೆ. ಬ್ರಾಹ್ಮಣ ಸಮುದಾಯ ವಿರುದ್ಧ ಪೋಸ್ಟ್ ಹಾಕಿರುವ ವಿಚಾರವಾಗಿ ಸ್ಪಷ್ಟನೆ ನೀಡುವಂತೆ ತಿಳಿಸಲಾಗಿದೆ. ಬುಧವಾರ ಬೆಳಗ್ಗೆ ಪೊಲೀಸ್ ಠಾಣೆಗೆ ಹೋಗಲಿದ್ದೇನೆ,'' ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.
''ಸಂವಿಧಾನ ಮೌಲ್ಯಗಳ ಅನುಗುಣವಾಗಿ ಅಸಮಾನತೆ ಮತ್ತು ನ್ಯಾಯಕ್ಕಾಗಿ ನಮ್ಮ ಹೋರಾಟ ಸದಾ ಮುಂದುವರಿಯುತ್ತದೆ'' ಎಂದು ಹೇಳಿದ್ದಾರೆ.

ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ವಿರುದ್ದ ನಟ ಚೇತನ್ ಫೇಸ್ಬುಕ್, ಟ್ವಿಟ್ಟರ್ ಹಾಗೂ ಯೂಟ್ಯೂಬ್ನಲ್ಲಿ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ವಿಪ್ರ ಯುವ ವೇದಿಕೆಯ ಅಧ್ಯಕ್ಷ ಪವನ್ ಕುಮಾರ್ ಎಂಬುವವರು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪವನ್ ಕುಮಾರ್ ದೂರಿನ ಹಿನ್ನೆಲೆ ಬಸವನಗುಡಿ ಪೊಲೀಸರು ಐಪಿಸಿ ಸೆಕ್ಷನ್ 153ಬಿ, 295ಎ ಅಡಿ ಎಫ್ಐಆರ್ ಸಹ ದಾಖಲಿಸಿ ತನಿಖೆ ಮಾಡಲು ನಿರ್ಧರಿಸಿದ್ದರು. ಈ ಹಿನ್ನೆಲೆ ಚೇತನ್ ಪೋಸ್ಟ್ ಮಾಡಿರುವ ವಿಡಿಯೋ ಮತ್ತು ಪೋಸ್ಟ್ಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ ಎಂದು ಪೊಲೀಸರು ಸೂಚಿಸಿದ್ದಾರೆ.

ಈ ಸಂಬಂಧ ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಅವರು ಹಲಸೂರು ಪೊಲೀಸ್ ಠಾಣೆಯಲ್ಲಿ ಚೇತನ್ ವಿರುದ್ಧ ದೂರು ದಾಖಲಿಸಿದ್ದರು. ''ಚೇತನ್ ಬ್ರಾಹ್ಮಣಿಕೆ ಹಾಗೂ ಬ್ರಾಹ್ಮಣತ್ವ ಭಯೋತ್ವಾದಕತ್ವ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ. ಇದರಿಂದ ಬ್ರಾಹ್ಮಣ ಸಮುದಾಯಕ್ಕೆ ತುಂಬಾ ನೋವಾಗಿದೆ. ಬ್ರಾಹ್ಮಣ ಸಮುದಾಯದ ಬಳಿ ಬೇಷರತ್ ಕ್ಷಮೆ ಕೇಳಬೇಕು,'' ಎಂದು ಆಗ್ರಹಿಸಿದ್ದರು.
ಉಪೇಂದ್ರ ವಿರುದ್ಧ ಚೇತನ್ ಖಂಡನೆ
ಕೋವಿಡ್ನಿಂದ ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಿದ್ದ ಉಪೇಂದ್ರ, ಅರ್ಚಕರು, ಪುರೋಹಿತರು ಹಾಗೂ ಅಡುಗೆ ಕೆಲಸ ಮಾಡುವವರನ್ನು ಗುರುತಿಸಿ ದಿನಸಿ ಕಿಟ್ ವಿತರಿಸಿದರು. ನಿರ್ದಿಷ್ಟವಾಗಿ ಒಂದು ಸಮುದಾಯಕ್ಕೆ ನೆರವು ನೀಡುತ್ತಿರುವ ಉಪೇಂದ್ರ ತಮ್ಮ ಜಾತಿ ಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದರು. ಇಲ್ಲಿಂದ ಚೇತನ್ ಮತ್ತು ಬ್ರಾಹ್ಮಣ ಸಮುದಾಯದ ನಡುವೆ ಜಾತಿ ವಿವಾದ ಹುಟ್ಟಿಕೊಂಡಿದೆ.


Click it and Unblock the Notifications











