ವಿಷ್ಣುವರ್ಧನ್ಗೆ 'ಕರ್ನಾಟಕ ರತ್ನ' ಫಿಕ್ಸ್; ವೇದಿಕೆ ಮೇಲೆ ಸುಳಿವು ನೀಡಿದ ಸಿಎಂ ಬೊಮ್ಮಾಯಿ!
ಇಂದು ( ಜನವರಿ 29 ) ಮೈಸೂರಿನಲ್ಲಿ ವಿಷ್ಣುವರ್ಧನ್ ಅಭಿಮಾನಿಗಳ ಬಹು ವರ್ಷಗಳ ಬೇಡಿಕೆ ಈಡೇರಿದೆ. ಹಲವು ವರ್ಷಗಳಿಂದ ಕಾಡುತ್ತಿದ್ದ ಕೊರತೆ ನಿವಾರಣೆಯಾಗಿದೆ. ವಿಷ್ಣುವರ್ಧನ್ ನಿಧನ ಹೊಂದಿ ವರ್ಷಗಳು ಉರುಳಿದರೂ ಇನ್ನೂ ಸಹ ಒಂದು ಸ್ಮಾರಕವನ್ನು ಸರ್ಕಾರ ನಿರ್ಮಿಸಿಲ್ಲ ಎಂಬ ಅಭಿಮಾನಿಗಳ ಬೇಸರ ಅಂತ್ಯಗೊಂಡಿದೆ. ಮೈಸೂರಿನ ಎಚ್ ಡಿ ಕೋಟೆ ರಸ್ತೆಯಲ್ಲಿರುವ ಹಾಲಾಳು ಎಂಬ ಗ್ರಾಮದಲ್ಲಿ ವಿಷ್ಣುವರ್ಧನ್ ಸ್ಮಾರಕವನ್ನು ರಾಜ್ಯ ಸರ್ಕಾರ ನಿರ್ಮಿಸಿ ಲೋಕಾರ್ಪಣೆ ಮಾಡಿದೆ.
ಹನ್ನೊಂದು ಕೋಟಿ ವೆಚ್ಚದಲ್ಲಿ ಸುಮಾರು ಎರಡೂವರೆ ಎಕರೆ ಜಾಗದಲ್ಲಿ ಈ ಸ್ಮಾರಕ ನಿರ್ಮಾಣವಾಗಿದ್ದು, ಈ ಸ್ಮಾರಕದೊಳಗೆ ವಿಷ್ಣುವರ್ಧನ್ ಅವರ 6000 ಫೊಟೊಗಳುಳ್ಳ ಗ್ಯಾಲರಿ ಇದೆ, ಗೋಡೆಗಳ ಮೇಲೆ ವಿಷ್ಣುವರ್ಧನ್ ಅವರ ಫೇಮಸ್ ಡೈಲಾಗ್ಗಳನ್ನು ಮುದ್ರಿಸಲಾಗಿದೆ, ಆಡಿಟೊರಿಯಮ್ ಕೂಡ ಇದೆ. ಜತೆಗೆ ಸ್ಮಾರಕದ ಮಧ್ಯದಲ್ಲಿ ವಿಷ್ಣುವರ್ಧನ್ ಬಳಸುತ್ತಿದ್ದ ಬಳೆಯನ್ನೂ ಸಹ ದೊಡ್ಡದಾಗಿ ನಿಲ್ಲಿಸಲಾಗಿದ್ದು, ಆಕರ್ಷಣೀಯವಾಗಿದೆ.
ಹೀಗೆ ಜನರ ಗಮನವನ್ನು ಸೆಳೆಯುತ್ತಿರುವ ಭವ್ಯ ಸ್ಮಾರಕದ ಉದ್ಘಾಟನೆಯನ್ನು ಇಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ, ಸುಮಲತಾ ಅಂಬರೀಶ್ ಸೇರಿದಂತೆ ವಿಷ್ಣುವರ್ಧನ್ ಅವರ ಕುಟುಂಬಸ್ಥರು ಭಾಗವಹಿಸಿದ್ದರು. ಇನ್ನು ಈ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ಅವರು ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ನೀಡುವ ಕುರಿತೂ ಸಹ ಮಾತನಾಡಿರುವುದು ಸದ್ಯ ವಿಷ್ಣುವರ್ಧನ್ ಅಭಿಮಾನಿಗಳಿಗೆ ಸಂತಸದ ಸುದ್ದಿಯಾಗಿದೆ.

ಕಾರ್ಯಕ್ರಮದಲ್ಲಿ ಕೇಳಿಬಂದ ಕರ್ನಾಟಕ ರತ್ನ ಕೂಗು!
ವಿಷ್ಣುವರ್ಧನ್ ಅವರಿಗೆ ಸಹ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಬೇಕು ಎಂಬ ಕೂಗು ಈ ಹಿಂದಿನಿಂದಲೂ ಇದೆ. ವಿಷ್ಣುವರ್ಧನ್ ಸಹ ಸಾಕಷ್ಟು ಕೊಡುಗೆ ನೀಡಿದ, ಕನ್ನಡ ಚಿತ್ರರಂಗಕ್ಕಾಗಿ, ಕನ್ನಡಕ್ಕಾಗಿ ದುಡಿದ ನಟ, ಅಂತಹ ನಟ ಕರ್ನಾಟಕ ರತ್ನ ಪ್ರಶಸ್ತಿಗೆ ಅರ್ಹ ಎಂದು ಅಭಿಮಾನಿಗಳು ಸಾಕಷ್ಟು ಬಾರಿ ಕರ್ನಾಟಕ ರತ್ನ ನೀಡುವಂತೆ ಒತ್ತಾಯಿಸಿದ್ದರು. ಈ ಕೂಗು ಇದೀಗ ಸ್ಮಾರಕ ಉದ್ಘಾಟನಾ ಕಾರ್ಯಕ್ರಮದಲ್ಲೂ ಸಹ ಕೇಳಿಬಂದಿದೆ. ಸಿಎಂ ಬಸವರಾಜ ಬೊಮ್ಮಾಯಿಯವರು ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ವಿಷ್ಣುವರ್ಧನ್ ಅಭಿಮಾನಿಗಳು "ಮಾನ್ಯ ಮುಖ್ಯಮಂತ್ರಿಗಳೇ.. ಡಾ. ವಿಷ್ಣುವರ್ಧನ್ ಅವರು ಕರ್ನಾಟಕ ರತ್ನ ಅಲ್ಲವೇ?" ಎಂಬ ಬರಹವಿದ್ದ ಬೋರ್ಡ್, ಹಾಳೆ ಹಿಡಿದು ಪ್ರದರ್ಶಿಸಿದ್ದರು.

ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಸಿಎಂ
ಇನ್ನು ಅಭಿಮಾನಿಗಳು ಬೋರ್ಡ್ ಹಾಗೂ ಹಾಳೆಗಳ ಮೇಲೆ ವಿಷ್ಣುವರ್ಧನ್ ಅವರು ಕರ್ನಾಟಕ ರತ್ನ ಅಲ್ಲವೇ ಎಂದು ಬರೆದುಕೊಂಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ "ನೀವು ಬೋರ್ಡ್ಗಳ ಮೂಲಕ ಇಟ್ಟಿರುವ ಬೇಡಿಕೆ ಬಗ್ಗೆ ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ" ಎಂದು ಹೇಳಿಕೆ ನೀಡಿದರು. ಈ ಮೂಲಕ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ನೀಡುವುದು ಖಚಿತ ಎಂಬುದನ್ನು ಸಿಎಂ ಬೊಮ್ಮಾಯಿ ಪರೋಕ್ಷವಾಗಿ ತಿಳಿಸಿದ್ದಾರೆ.

ಕರ್ನಾಟಕ ರತ್ನ ಪ್ರಶಸ್ತಿ ಪಡೆದುಕೊಂಡವರ ಪಟ್ಟಿ
ಇಲ್ಲಿಯವರೆಗೂ ರಾಜ್ಯದ ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಂತಹ ಸಾಧಕರ ಪಟ್ಟಿ ಈ ಕೆಳಕಂಡಂತಿದೆ..
1. ಕುವೆಂಪು - 1992 - ಸಾಹಿತ್ಯ
2. ರಾಜ್ಕುಮಾರ್ - 1992 - ಚಲನಚಿತ್ರ
3. ಎಸ್. ನಿಜಲಿಂಗಪ್ಪ - 1999 - ರಾಜಕೀಯ
4. ಸಿ.ಎನ್. ಆರ್. ರಾವ್ - 2000 - ವಿಜ್ಞಾನ
5. ದೇವಿ ಪ್ರಸಾದ್ ಶೆಟ್ಟಿ - 2001 - ವೈದ್ಯಕೀಯ
6. ಭೀಮಸೇನ ಜೋಷಿ - 2005 - ಸಂಗೀತ
7. ಶ್ರೀ ಶಿವಕುಮಾರ ಸ್ವಾಮಿಗಳು - 2007 - ಸಾಮಾಜಿಕ ಸೇವೆ
8. ದೇ ಜವರೇ ಗೌಡ - 2008 - ಸಾಹಿತ್ಯ
9. ಡಿ. ವಿರೇಂದ್ರ ಹೆಗ್ಗಡೆ - 2009 - ಸಾಮಾಜಿಕ ಸೇವೆ
10. ಪುನೀತ್ ರಾಜ್ಕುಮಾರ್ - 2022 - ಸಾಮಾಜಿಕ ಸೇವೆ ಹಾಗೂ ಚಲನಚಿತ್ರ


Click it and Unblock the Notifications











