KGF 2: 'ಕೆಜಿಎಫ್', 'ಬಾಹುಬಲಿ', 'ಪುಷ್ಪ' ಯಶಸ್ಸಿನ ಹಿಂದಿರೋದು 'ಅಮ್ಮ'!
ಸದ್ಯ 'ಕೆಜಿಎಫ್ 2' ಚಿತ್ರದ ರಿಲೀಸ್ ಹತ್ತಿರ ಆಗಿದೆ. ಈಗ ಚಿತ್ರದ ಎರಡನೇ ಹಾಡು ರಿಲೀಸ್ ಆಗಿದೆ. ಈ ಹಾಡು ಅಮ್ಮನ ಕುರಿತಾದ ಹಾಡು ಆಗಿದೆ. ರಾಕಿ ಭಾಯ್ ತಾಯಿ ಮಗನಿಗೆ ಹೇಳಿದ ಕಿವಿ ಮಾತುಗಳನ್ನು ಹಾಡಿನಲ್ಲಿ ಕಟ್ಟಿಕೊಡಲಾಗಿದೆ. ಇದು ಈ ಹಿಂದೆ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ಚಿತ್ರಗಳನ್ನು ನೆನಪಿಸುತ್ತಿದೆ. ಹೌದು 'ಬಾಹುಬಲಿ', 'ಪುಷ್ಪ' ಮತ್ತು 'ಕೆಜಿಎಫ್ ಚಾಪ್ಟರ್ 1' ಚಿತ್ರಗಳನ್ನು ಈ ಹಾಡು ನೆನಪಿಸುತ್ತದೆ.
ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಇತಿಹಾಸ ಹುಟ್ಟು ಹಾಕಿದ ಚಿತ್ರಗಳಲ್ಲಿ ಪ್ರಮುಖವಾಗಿ ಈಗ ಕಣ್ಣ ಮುಂದೆ ಬರುವ 3 ಚಿತ್ರಗಳು ಅಂದರೆ ಅದು 'ಬಾಹುಬಲಿ', 'ಕೆಜಿಎಫ್' ಮತ್ತು 'ಪುಷ್ಪ' ಚಿತ್ರ. ಈ ಸಾಲಿನಲ್ಲಿ RRR ಕೂಡ ಇದೆ. ಆದರೆ ಚಿತ್ರ ಇತ್ತೀಚೆಗೆ ರಿಲೀಸ್ ಆಗಿದ್ದು ಜೊತೆಗೆ ದಾಖಲೆಯನ್ನು ಇನ್ನು ಮುಂದುವರೆಸಿದೆ. ಹಾಗಾಗಿ RRR ಬಿಟ್ಟು ನೋಡುವುದಾದರೆ ಈ ಮೂರು ಚಿತ್ರಗಳು ಮಾತ್ರವೇ ಮುನ್ನೆಲೆಯಲ್ಲಿ ನಿಲ್ಲುತ್ತವೆ.
ಈ ಮೂರು ಚಿತ್ರಗಳನ್ನು ನೀವು ನೋಡಿದ್ದರೆ ನಿಮಗೆ ಚಿತ್ರದ ಮುಖ್ಯ ತಿರುಳು ಏನು ಎನ್ನುವುದು ಗೊತ್ತಾಗುತ್ತದೆ. ಪ್ರಭಾಸ್ ಅಭಿನಯದ 'ಬಾಹುಬಲಿ', ಯಶ್ ಅಭಿನಯದ 'ಕೆಜಿಎಫ್', ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಚಿತ್ರಗಳ ಕತೆಯಲ್ಲಿ ಮುಖ್ಯವಾಗಿ ಇರುವುದು ಅಮ್ಮ ಎನ್ನುವ ಬೆಲೆ ಕಟ್ಟಲಾಗದ ಅಮೂಲ್ಯ ರತ್ನ.. ಈ ಬಗ್ಗೆ ಸ್ವಾರಸ್ಯಕರ ವಿಷಯವನ್ನು ಮುಂದೆ ಓದಿ...
Recommended Video


'ಬಾಹುಬಲಿ' ಹೋರಾಟ ಅಮ್ಮನಿಗಾಗಿ!
'ಬಾಹುಬಲಿ'ಯ ಎರಡೂ ಭಾಗಗಳಲ್ಲಿ ತಾಯಿ ಸೆಂಟಿಮೆಂಟ್ ಇದೆ. ಮೊದಲ ಭಾಗ ಶುರುವಾಗುವುದೇ ತಾಯಿಯ ಪ್ರೀತಿಯನ್ನು ತೋರಿಸುವ ಮೂಲಕ. ಶಿವನಾಗಿ ಬೆಳೆದ ಮಹೇಂದ್ರ ಬಾಹುಬಲಿಯನ್ನು ಸಾಕು ತಾಯಿ ಎಷ್ಟು ಪ್ರೀತಿ ಮಾಡುತ್ತಾಳೆ ಎನ್ನುವ ಬಗ್ಗೆ ಆರಂಭದಲ್ಲಿ ತೋರಿಸಲಾಗಿದೆ. ನಂತರ 'ಬಾಹುಬಲಿ' ಅಮ್ಮ ಶಿವಗಾಮಿಗಾಗಿ ಹೇಗೆ ತನ್ನನ್ನು ತಾನು ಬಲಿ ಕೊಡುತ್ತಾನೆ ಎನ್ನುವ ಅನಾವರಣ. ಇನ್ನು 'ಬಾಹುಬಲಿ 2' ಚಿತ್ರದಲ್ಲಿ ಮಹೇಂದ್ರ ಬಾಹುಬಲಿ ತಾಯಿ ದೇವ ಸೇನಾಗಾಗಿ ಬಲ್ಲಾಳ ದೇವನ ವಿರುದ್ಧ ಸಮರ ಸಾರುತ್ತಾನೆ. ಒಂದು ದಿನ ಮಗ ಬಂದೇ ಬರುತ್ತಾನೆ ಎನ್ನುವ ತಾಯಿಯ ನಂಬಿಯನ್ನು ಮಹೇಂದ್ರ ಬಾಹುಬಲಿ ಉಳಿಸಿಕೊಳ್ಳುತ್ತಾನೆ.

ಅಮ್ಮನಿಗೆ ಕೊಟ್ಟ ಭಾಷೆ ಉಳಿಸಲು ರಾಕಿ ಪಣ!
'ಬಾಹುಬಲಿ' ನಂತ್ರ ಬಂದ ಕನ್ನಡದ ಪ್ಯಾನ್ ಇಂಡಿಯಾ ಚಿತ್ರ 'ಕೆಜಿಎಫ್'. ಈ ಚಿತ್ರದಲ್ಲೂ ಕೂಡ ಅಮ್ಮನ ಸೆಂಟಿಮೆಂಟ್ ಚಿತ್ರದ ಮುಖ್ಯ ತಿರುಳಾಗಿದೆ. ರಾಕಿ ಭಾಯ್ ದೊಡ್ಡ ಸಾಮ್ರಾಜ್ಯ ಕಟ್ಟಬೇಕು ಎಂದು ಪಣ ತೊಟ್ಟು ಮುಂಬೈಗೆ ಕಾಲಿಡುವುದೇ, ಅಮ್ಮನಿಗೆ ಕೊಟ್ಟ ಭಾಷೆಯಿಂದ. "ನೀನೂ ಹೇಗೆ ಬದುಕುತ್ತೀಯೋ ಗೊತ್ತಿಲ್ಲ. ಆದರೆ ಸಾಯೋವಾಗ ಅತಿ ಪ್ರಭಲನಾಗಿ, ದೊಡ್ಡ ಶ್ರೀಮಂತನಾಗಿ ಸಾಯಬೇಕು" ಎಂದು ಮಗನ ಬಳಿ ತಾಯಿ ಭಾಷೆ ತೆಗೆದುಕೊಳ್ಳುತ್ತಾರೆ. ಅಂತೆಯೇ ರಾಕಿ ಭಾಯ್ ತನ್ನ ಗುರಿಯನ್ನು ಸಾಧಿಸಲು ಪಣ ತೊಡುತ್ತಾನೆ.

ಅಮ್ಮನ ಹೆಸರಿಗಾಗಿ ಕಾಳಗ ಮಾಡುವ 'ಪುಷ್ಪ'ರಾಜ್!
ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಚಿತ್ರ ಕೂಡ ಅಮ್ಮನ ಭಾವನೆಗಳ ಮೇಲೆ ನಿಂತಿದೆ. ನಾಯಕ ಪುಷ್ಪ ರಾಜ್ ದೊಡ್ಡ ಮಟ್ಟಕ್ಕೆ ಬೆಳೆಯುವ ನಿರ್ಧಾರಕ್ಕೆ ಬಂದಿದ್ದೇ ತನ್ನ ತಾಯಿಗೆ ಆಗುವ ಅವಮಾನದಿಂದ. ಮನೆತನದ ಹೆಸರನ್ನು ಉಪಯೋಗಿಸಲು ಸೋದರರು ಬಿಡದೆ ತಾಯಿಗೆ ಅವಮಾನ ಮಾಡುತ್ತಾರೆ. ಆಗ ಪುಷ್ಪ ರಾಜ್ಗೆ ಚಿಕ್ಕ ವಯಸ್ಸಿನಲ್ಲೇ ದೊಡ್ಡ ವ್ಯಕ್ತಿಯಾಗಿ ಬೆಳೆಯ ಬೇಕು ಎಂದು ಅನಿಸುತ್ತದೆ.

ಅಮ್ಮನ ಆಸರೆ 'ಕೆಜಿಎಫ್ 2' ಹಿಟ್ ಪಕ್ಕಾ?
ಇನ್ನು 'ಕೆಜಿಎಫ್ 2' ಚಿತ್ರದಲ್ಲೂ ಕೂಡ ತಾಯಿ ಸೆಂಟಿಮೆಂಟ್ ಮುಂದುವರೆಸಲಾಗಿದೆ. ಸದ್ಯ ಚಿತ್ರದಲ್ಲಿನ ಅಮ್ಮನ ಸೆಂಟಿಮೆಂಟ್ ಇರುವ ಹಾಡನ್ನು ರಿಲೀಸ್ ಮಾಡಿದೆ ಚಿತ್ರತಂಡ. ಈ ಹಾಡು ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಸಾಕಷ್ಟು ಜನರ ಫೇವರೆಟ್ ಆಗಿದೆ. ಅಮ್ಮನ ಸ್ಪೂರ್ತಿಯ ಕಥೆಯ ಇರುವುದರಿಂದ 'ಕೆಜಿಎಫ್ 2' ಚಿತ್ರ ಸೂಪರ್ ಹಿಟ್ ಎನಿಸಿಕೊಳ್ಳಲು ಇದು ಪ್ರಮುಖ ಅಂಶ ಆಗಬಹುದು.


Click it and Unblock the Notifications











