ಬಳ್ಳಾರಿ ಜೈಲಿನಲ್ಲಿ 'ಕಾಟೇರ'ನ ಕಷ್ಟಕ್ಕೆ ರಿಲೀಫ್; ದಾಸನ ಸೆಲ್ಗೆ ಈಗ ವಿಶೇಷ ವ್ಯವಸ್ಥೆ
ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿ 5 ದಿನ ಕಳೆದಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ದರ್ಶನ್ ಕಳೆದೆರಡು ತಿಂಗಳಿಂದ ಜೈಲಿನಲ್ಲಿದ್ದಾರೆ. ಸದ್ಯ ಬಳ್ಳಾರಿ ಜೈಲಿನಲ್ಲಿ ಪೊಲೀಸರು ಬಿಗಿ ಭದ್ರತೆ ನಡುವೆ ಯಾವುದೇ ವಿಶೇಷ ಸೌಲಭ್ಯ ಇಲ್ಲದೇ ಸಾಮಾನ್ಯ ಕೈದಿಗಳಂತೆ ದರ್ಶನ್ ಕಾಲ ಕಳೆಯುವಂತಾಗಿದೆ.
ಬಳ್ಳಾರಿ ಜೈಲಿಗೆ ಸ್ಥಳಾಂತರಗೊಳ್ಳುತ್ತಿದ್ದಂತೆ ನಟ ದರ್ಶನ್ಗೆ ಇಂಡಿಯನ್ ಟಾಯ್ಲೆಟ್ ಸಮಸ್ಯೆ ಆಗಿ ಪರಿಣಮಿಸಿತ್ತು. ವೆಸ್ಟರ್ನ್ ಟಾಯ್ಲೆಟ್ ಸೌಲಭ್ಯ ಇಲ್ಲದೇ ಇಂಡಿಯನ್ ಟಾಯ್ಲೆಟ್ನಲ್ಲಿ ಕೂರಲು ಸಮಸ್ಯೆ ಆಗುತ್ತಿದೆ. ಕೊನೆ ಪಕ್ಷ ಸರ್ಜಿಕಲ್ ಚೇರ್ ಆದರೂ ಕೊಡಿ ಎಂದು ಮನವಿ ಮಾಡಿದ್ದರು. ಆರೋಗ್ಯ ಸಮಸ್ಯೆಯಿಂದ ಇಂಡಿಯನ್ ಟಾಯ್ಲೆಟ್ನಲ್ಲಿ ಕೂರಲು ಸಾಧ್ಯವಾಗುತ್ತಿಲ್ಲ ಎಂದಿದ್ದರು. ಇದೀಗ ವೈದ್ಯರ ವರದಿ ಬಳಿಕ ಸರ್ಜಿಕಲ್ ಚೇರ್ಗೆ ಅನುಮತಿ ಸಿಕ್ಕಿದೆ.

ಬೆನ್ನು ಹುರಿ ಸಮಸ್ಯೆಯಿಂದ ಇಂಡಿಯನ್ ಟಾಯ್ಲೆಟ್ನಲ್ಲಿ ಶೌಚಕ್ಕೆ ತೆರಳಲು ಸಮಸ್ಯೆ ಆಗುತ್ತಿದೆ ಎಂದು ದರ್ಶನ್ ಕೇಳಿದ್ದರು. ಹಾಗಾಗಿ ದರ್ಶನ್ ಆರೋಗ್ಯದ ಬಗ್ಗೆ ಕುಟುಂಬಸ್ಥರು ನೀಡಿದ ವರದಿ ಹಾಗೂ ವೈದ್ಯರು ತಪಾಸಣೆ ಬಳಿಕ ನೀಡಿದ ವರದಿ ಆಧರಿಸಿ ಇದೀಗ ಸರ್ಜಿಕಲ್ ಚೇರ್ ಕೊಡಲು ಅನುಮತಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈಗಾಗಲೇ ಇದಕ್ಕೆ ಸಿದ್ಧತೆ ನಡೆಸಿದೆ. ಟಾಯ್ಲೆಟ್ ಸಮಸ್ಯೆಯಿಂದ ದರ್ಶನ್ ಊಟ ಮಾಡುವುದನ್ನು ಕಮ್ಮಿ ಮಾಡಿದ್ದಾರೆ ಎಂದು ಡಿಐಜಿ ಪಿ.ಟಿ. ಶೇಷ ಮಾಹಿತಿ ನೀಡಿದ್ದರು.
ಬಳ್ಳಾರಿ ಜೈಲಿನ ಹೈಸೆಕ್ಯೂರಿಟಿ ಸೆಲ್ಗಳ ಒಂದು ಭಾಗದಲ್ಲಿ ಒಟ್ಟು 15 ಸೆಲ್ಗಳಿವೆ. ಅದರಲ್ಲಿ ಕೇವಲ 4 ಜನ ಕೈದಿಗಳು ಮಾತ್ರ ಇದದ್ದಾರೆ. ಇದೇ ಸಾಲಿನ ಕೊನೆ ಸೆಲ್ನಲ್ಲಿ ವಿಚಾರಣಾಧೀನ ಕೈದಿ ದರ್ಶನ್ ಅವರನ್ನು ಇರಿಸಲಾಗಿದೆ. 24 ಗಂಟೆಗಳ ಕಾಲ ಸಿಬ್ಬಂದಿ ದರ್ಶನ್ ಅವರ ಸೆಲ್ ಅನ್ನು ಮಾನಿಟರ್ ಮಾಡುತ್ತಿದ್ದಾರೆ. 360 ಡಿಗ್ರಿ ಕ್ಯಾಮೆರಾಗಳನ್ನು ಕೂಡ ಅಳವಡಿಸಲಾಗಿದೆ.

ಪರಪ್ಪನ ಅಗ್ರಹಾರ ಜೈಲಿಗೆ ಸಾಕಷ್ಟು ಜನ ತಾರೆಯರು ಭೇಟಿ ನೀಡಿ ದರ್ಶನ್ ಅವರ ಜೊತೆ ಮಾತನಾಡಿ ಬಂದಿದ್ದರು. ಆದರೆ ಬಳ್ಳಾರಿ ಜೈಲಿನಲ್ಲಿ ರಕ್ತ ಸಂಬಂಧಿಗಳು ಹಾಗೂ ವಕೀಲರಿಗೆ ಮಾತ್ರ ಭೇಟಿ ಅವಕಾಶ ನೀಡಲಾಗಿದೆ. ಶನಿವಾರ ಪತ್ನಿ ವಿಜಯಲಕ್ಷ್ಮಿ ಹೋಗಿ ದರ್ಶನ್ ಭೇಟಿ ಮಾಡಿ ಬಂದಿದ್ದರು. ಇನ್ನು ಸರಿಯಾಗಿ ನಿದ್ದೆ ಊಟ ಇಲ್ಲದೇ ದರ್ಶನ್ ಸೊರಗಿರುವುದು ಗೊತ್ತಾಗುತ್ತಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಒಟ್ಟು 17 ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಜೂನ್ 22 ರಂದು ವಿಚಾರಣಾಧೀನ ಕೈದಿಗಳಾಗಿ ಎಲ್ಲರನ್ನೂ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಬಳಿಕ ನಾಲ್ವರನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಿದ್ದರು. ಆದರೆ ಜೈಲಿನಲ್ಲಿ ದರ್ಶನ್ ರಾಜಾತಿಥ್ಯದ ಫೋಟೊ, ವೀಡಿಯೋ ವೈರಲ್ ಆಗಿ ಭಾರೀ ಚರ್ಚೆ ಆಗಿತ್ತು. ಜೈಲು ವ್ಯವಸ್ಥೆ ಬಗ್ಗೆಯೇ ಟೀಕೆ ವ್ಯಕ್ತವಾಗಿತ್ತು. ಬಳಿಕ ಆರೋಪಿಗಳನ್ನು ಇತರೆ ಜೈಲುಗಳಿಗೆ ಶಿಫ್ಟ್ ಮಾಡುವ ತೀರ್ಮಾನಕ್ಕೆ ಬರಲಾಗಿತ್ತು.
ಜೈಲಿನಲ್ಲಿ ರಾಜಾತಿಥ್ಯ ಸಂಬಂಧ 3 ಎಫ್ಐಆರ್ ಸಹ ದಾಖಲಾಗಿದೆ. ಎರಡರಲ್ಲಿ ದರ್ಶನ್ ಎ1 ಆಗಿದ್ದಾರೆ. ಇನ್ನು ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ದಾರೆ. ಆಕೆ ಜಾಮೀನು ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಸದ್ಯಕ್ಕೆ ಜಾಮೀನು ಸಿಗಲಿಲ್ಲ.


Click it and Unblock the Notifications











