'ಪ್ರಕೃತಿ' ಸಿನಿಮಾ ಜೊತೆ ಬೆಳ್ಳಿ ಸಿನಿಮಾ-ಬೆಳ್ಳಿ ಮಾತು
ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರತಿ ಶನಿವಾರ ನಡೆಸುವ 'ಬೆಳ್ಳಿ ಸಿನಿಮಾ-ಬೆಳ್ಳಿ ಮಾತು' ಕಾರ್ಯಕ್ರಮದಲ್ಲಿ ಈ ಶನಿವಾರ 'ಪ್ರಕೃತಿ' ಚಲನಚಿತ್ರ ಪ್ರದರ್ಶನಗೊಳ್ಳಲಿದ್ದು, ಚಿತ್ರದ ನಿರ್ದೇಶಕ ಪಂಚಾಕ್ಷರಿ ಅವರು 'ಬೆಳ್ಳಿಮಾತು' ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕನ್ನಡ ಪ್ರಶಸ್ತಿ ಪುರಸ್ಕೃತ ಹಾಗೂ ಸದಭಿರುಚಿಯ ಕನ್ನಡ ಚಿತ್ರಗಳನ್ನು ವಾರಕ್ಕೊಮ್ಮೆ ಅಂದರೆ ಪ್ರತಿ ಶನಿವಾರ ಪ್ರದರ್ಶಿಸಿ ಆ ಚಿತ್ರಕ್ಕೆ ಸಂಬಂಧಿಸಿದ ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಹಾಗೂ ತಂತ್ರಜ್ಞರೊಡನೆ ಸಂವಾದ ನಡೆಸಲು ಅವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.[ಮೈಸೂರು: 'ಬೆಳ್ಳಿ ಸಿನಿಮಾ- ಬೆಳ್ಳಿ ಮಾತು' ಟಿ.ಎಸ್ ನಾಗಾಭರಣ ಅತಿಥಿ]

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಪ್ರತಿ ವರ್ಷ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವವನ್ನು ಆಯೋಜಿಸುತ್ತಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಪ್ರತಿ ವಾರವು ಚಿತ್ರ ಪ್ರೇಮಿಗಳನ್ನು ಒಂದೆಡೆ ಕಲೆಹಾಕಿ ಪ್ರಬುದ್ಧ ಚಲನಚಿತ್ರ ಪ್ರೇಕ್ಷಕ ಹಾಗೂ ನಿರ್ಮಾಪಕರ ಹಂದರವನ್ನು ಕಟ್ಟುವುದು 'ಬೆಳ್ಳಿ ಸಿನಿಮಾ-ಬೆಳ್ಳಿ ಮಾತು' ಕಾರ್ಯಕ್ರಮದ ಉದ್ದೇಶ.
'ಬೆಳ್ಳಿ ಸಿನಿಮಾ-ಬೆಳ್ಳಿ ಮಾತು' ಈ ವಾರದ ಕಾರ್ಯಕ್ರಮ ಬೆಂಗಳೂರು ಮಿಲ್ಲರ್ಸ್ ರಸ್ತೆಯ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಆಗಸ್ಟ್ 8 ರಂದು ಸಂಜೆ 4 ಗಂಟೆಗೆ ನಡೆಯಲಿದೆ.['ಬೆಳ್ಳಿ ಸಿನೆಮಾ-ಬೆಳ್ಳಿ ಮಾತು' ಸಿನಿ ರಸಿಕರೊಡನೆ ಸಂವಾದ]
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರು ವಹಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಹಿರಿಯ ವಿದ್ವಾಂಸ ಸಿ.ಎನ್.ರಾಮಚಂದ್ರನ್ ಹಾಗೂ ಶ್ರೀಮತಿ ಯೆಸ್ತಾರ್ ಅನಂತಮೂರ್ತಿ ಪಾಲ್ಗೊಳ್ಳಲಿದ್ದಾರೆ ಎಂದು ಅಕಾಡೆಮಿ ಸಬ್ ರಿಜಿಸ್ಟ್ರಾರ್ ಹೆಚ್.ಬಿ.ದಿನೇಶ್ ತಿಳಿಸಿದ್ದಾರೆ.


Click it and Unblock the Notifications











