ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಪೊಲೀಸ್ ಆಯುಕ್ತ
ಕಳೆದ ವರ್ಷ ನಗರದಲ್ಲಿ ನಡೆದ ಅಪರಾಧ ಪ್ರಕರಣಗಳು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಶ್ರಮ ಇತ್ಯಾದಿ ವಿಷಯಗಳ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ನಗರದಲ್ಲಿ ನಡೆದ ಅಪರಾಧ ಪ್ರಕರಣಗಳ ಮಾಹಿತಿ ನೀಡಿದ ಕಮಲ್ ಪಂಥ್, ಬೆಂಗಳೂರು ಪೊಲೀಸರಿಗೆ ಭಾರಿ ಸವಾಲಾಗಿದ್ದ ಪುನೀತ್ ರಾಜ್ಕುಮಾರ್ ಅಂತಿಮ ದರ್ಶನ ಹಾಗೂ ಅಂತ್ಯಸಂಸ್ಕಾರ ಸಂದರ್ಭದ ಬಗ್ಗೆ ಮಾತನಾಡುತ್ತಾ, ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು.
''ಪುನೀತ್ ರಾಜ್ಕುಮಾರ್ ನಿಧನರಾದ ಬಳಿಕ ನಡೆದ ಅಂತಿಮ ದರ್ಶನಕ್ಕೆ ಲಕ್ಷಾಂತರ ಜನ ಬಂದರೂ ಸಹ, ಪುನೀತ್ ಅವರ ಅಭಿಮಾನಿಗಳ ಸಹಕಾರದಿಂದ, ಅಪ್ಪು ಅವರ ಕುಟುಂಬದವರ ಸಹಕಾರದಿಂದ ಎಲ್ಲವೂ ಶಾಂತಿ ಯುತವಾಗಿ ನಡೆಯಿತು. ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ'' ಎಂದರು ಕಮಲ್ ಪಂಥ್.

''ಇಡೀಯ ಬೆಂಗಳೂರು ಜನ ಆ ಎರಡು ಮೂರು ದಿನ ಬಹಳ ಶಾಂತಿಯುತವಾಗಿ ವರ್ತಿಸಿದರು. ಶಾಂತಿಯುತವಾಗಿ ಅಂತಿಮ ದರ್ಶನ ನಡೆಯಿತು ಮತ್ತು ಗೌರವಪೂರ್ವಕವಾಗಿ ಅಂತಿಮ ಸಂಸ್ಕಾರ ನೆರವೇರಲು ಸಾಧ್ಯವಾಯಿತು. ಹಾಗಾಗಿ ನಾನು ಎಲ್ಲರಿಗೂ ವಂದಿಸುತ್ತೇನೆ. ಈ ಕಾರ್ಯದಲ್ಲಿ ಶ್ರಮ ವಹಿಸಿರುವ ಎಲ್ಲ ಸಿಬ್ಬಂದಿವರ್ಗ, ಕೇಂದ್ರ ಕಚೇರಿಯ ಅಧಿಕಾರಿಗಳು ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ'' ಎಂದಿದ್ದಾರೆ ಕಮಲ್ ಪಂಥ್.
ಪುನೀತ್ ರಾಜ್ಕುಮಾರ್ ನಿಧನರಾದ ಬಳಿಕ ಲಕ್ಷಾಂತರ ಜನ ಅವರ ಅಂತಿಮ ದರ್ಶನ ಪಡೆದರು. ಅಂತಿಮ ದರ್ಶನ ಹಾಗೂ ಅಂತ್ಯ ಸಂಸ್ಕಾರ ಪ್ರಕ್ರಿಯೆಗಳು ಸತತ ಮೂರು ದಿನಗಳ ಕಾಲ ನಡೆಯಿತು. ಮೂರು ದಿನಗಳು ಪೊಲೀಸರು ಬೆಂಗಳೂರು ನಗರದಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡಿದರು. ಅಭಿಮಾನಿಗಳು ಸಹ ಬಹಳ ಶಿಸ್ತಿನಿಂದ ವರ್ತಿಸಿ ಪುನೀತ್ಗೆ ಭಾವುಕ ಅಂತಿಮ ವಿದಾಯ ಹೇಳಿದರು.
ಅಂತಿಮ ಸಂಸ್ಕಾರ ಮುಗಿದ ಬಳಿಕ ದೊಡ್ಮನೆ ಕುಟುಂಬದವರು, ಗೃಹ ಸಚಿವರು, ಸಿಎಂ ಬಸವರಾಜ ಬೊಮ್ಮಾಯಿ ಅವರುಗಳು ಪೊಲೀಸರಿಗೆ ಮತ್ತು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದರು. ಅಂತಿಮ ಸಂಸ್ಕಾರ ಮುಗಿದ ಕೆಲ ದಿನಗಳ ಬಳಿಕ ಪೊಲೀಸ್ ಇಲಾಖೆಯಿಂದಲೇ ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸೈಕಲ್ ಜಾಥಾ ಸಹ ನಡೆದಿತ್ತು. ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಭಾಗವಹಿಸಿದ್ದರು.


Click it and Unblock the Notifications











