Don't Miss!
- News ದೇಶದ ಪ್ರಮುಖ 4 ಶಕ್ತಿಗಳ ಪರವಾಗಿ ಬಿಜೆಪಿ- ಡಾ.ಸಿ.ಎನ್ ಅಶ್ವತ್ಥ್ ನಾರಾಯಣ್
- Automobiles ಪೆಟ್ರೋಲ್ ಎಂಜಿನ್ಗಳಲ್ಲಿ ಮಾತ್ರ ಬರಲಿದೆ ರೆನಾಲ್ಟ್ನ ಬ್ರಹ್ಮಾಸ್ತ್ರ ಡಸ್ಟರ್
- Sports KKR vs RR IPL 2024: ಟೇಬಲ್ ಟಾಪರ್ ಸ್ಥಾನಕ್ಕಾಗಿ ಹಣಾಹಣಿ; ಟಾಸ್ ವರದಿ, ಆಡುವ 11ರ ಬಳಗ
- Lifestyle ಸೌದಿಯಲ್ಲಿ ಮಳೆ, ಪ್ರವಾಹ...ಮರುಭೂಮಿ ಮರೆಯಾಗಿ ನಳನಳಿಸುವ ಹಸಿರು...! ಇದು ಹೇಗೆ ಸಾಧ್ಯ ಗೊತ್ತಾ?
- Finance ಇಸ್ರೇಲ್-ಇರಾನ್ ಯುದ್ಧದ ಪರಿಣಾಮ ಷೇರು ಪೇಟೆಯಲ್ಲಿ ಭಾರಿ ನಷ್ಟ
- Technology YouTube: ಯೂಟ್ಯೂಬ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್! ಆಡ್ ಬ್ಲಾಕರ್ ವಿರುದ್ಧ ಸಮರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇನ್ನೋವೇಟಿವ್ ಫಿಲಂ ಸಿಟಿ ಮಾರಾಟ, ಹೆಸರು ಬದಲು
ಕನ್ನಡ ಸೇರಿದಂತೆ ಹಲವು ಭಾಷೆಗಳ ನೂರಾರು ಸಿನಿಮಾ, ಧಾರಾವಾಹಿಗಳನ್ನು ಚಿತ್ರೀಕರಿಸಿರುವ ಇನ್ನೋವೇಟಿವ್ ಫಿಲಂ ಸಿಟಿಯನ್ನು ಮಾರಾಟ ಮಾಡಲಾಗಿದೆ.
ಶರವಣ ಪ್ರಸಾದ್ ಎಂಬುವರು 2008 ರಲ್ಲಿ ಇನ್ನೋವೇಟಿವ್ ಫಿಲಂ ಸಿಟಿಯನ್ನು ಆರಂಭಿಸಿದ್ದರು. ಆಗಿನಿಂದಲೂ ಹಲವು ಸಿನಿಮಾ, ಧಾರಾವಾಹಿಗಳು ಅಲ್ಲಿ ಚಿತ್ರೀಕರಣಗೊಂಡಿದ್ದವು. ಹಲವಾರು ಪ್ರವಾಸಿಗರು ಭೇಟಿ ನೀಡಿದ್ದರು. ಹಲವು ಕಾರ್ಪೊರೇಟ್ ಕಾರ್ಯಕ್ರಮಗಳು ಫಿಲಂ ಸಿಟಿಯಲ್ಲಿ ನಡೆದಿದ್ದವು. ಇದೀಗ ಫಿಲಂ ಸಿಟಿಯನ್ನು ಮಾರಾಟ ಮಾಡಲಾಗಿದೆ.
ಚೆನ್ನೈನ ಜನಪ್ರಿಯ ನಿರ್ಮಾಪಕ, ನಟ, ವೇಲ್ಸ್ ಗ್ರೂಪ್ ಮಾಲೀಕ ಐಸಿರಿ ಕೆ ಗಣೇಶ್, ಇನ್ನೋವೇಟಿವ್ ಫಿಲಂ ಸಿಟಿಯನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದ್ದಾರೆ. ಫಿಲಂ ಸಿಟಿಯನ್ನು ಖರೀದಿಸಿದ ಕೂಡಲೆ ಹೆಸರು ಬದಲಾವಣೆ ಮಾಡಲಾಗಿದ್ದು, ಇನ್ನು ಮುಂದೆ ಇದನ್ನು 'ವೇಲ್ಸ್ ಇನ್ನೋವೇಟಿವ್ ಫಿಲಂ ಸಿಟಿ' ಎಂದು ಕರೆಯಲಾಗುತ್ತದೆ.
ಪತ್ರಿಗೋಷ್ಠಿ ನಡೆಸಿದ ಇನ್ನೋವೇಟಿವ್ ಫಿಲಂ ಸಿಟಿಯ ವ್ಯವಸ್ಥಾಪಕ ಬಶೀರ್ ಈ ವಿಷಯ ಹಂಚಿಕೊಂಡಿದ್ದು, ''ಕರ್ನಾಟಕದ ಮೇಲೆ ಅಪಾರ ಗೌರವವುಳ್ಳ ಗಣೇಶ್ ಅವರು ಇನ್ನೋವೇಟಿವ್ ಫಿಲಂ ಸಿಟಿಯನ್ನು ಖರೀದಿಸಿದ್ದಾರೆ. ಇದು ಮಾತ್ರವೇ ಅಲ್ಲದೆ ರಾಜ್ಯದಲ್ಲಿ ಕೆಲವು ಶಿಕ್ಷಣ ಸಂಸ್ಥೆಗಳನ್ನು ಗುಣಮಟ್ಟದ ಶಿಕ್ಷಣ ನೀಡುವ ಇರಾದೆಯೂ ಅವರಿಗೆ ಇದೆ. ವೇಲ್ಸ್ ರವೀಂದ್ರ ಭಾರತಿ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಅವರು ಸ್ಥಾಪಿಸಲಿದ್ದಾರೆ'' ಎಂದಿದ್ದಾರೆ ಬಶೀರ್.
ಇನ್ನೋವೇಟಿವ್ ಫಿಲಂ ಸಿಟಿಯನ್ನು ಖರೀದಿಸಿರುವ ಐಸಿರಿ ಗಣೇಶ್, ಫಿಲಂ ಸಿಟಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಿದ್ದಾರೆ. ಮೈ ಮೂವಿ ಬಜಾರ್, ಶ್ರೇಯಸ್ ಮೀಡಿಯಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಪುನರ್ನಿರ್ಮಾಣ ಕಾಮಗಾರಿ ನಡೆಯಲಿದೆ.
ಫೆಬ್ರವರಿ ವರೆಗೆ ಸಾರ್ವಜನಿಕರಿಗೆ ನಿಷೇಧ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೈ ಮೂವಿ ಬಜಾರ್ನ ಶಶಾಂಕ್, ''ಗಣೇಶ್ ಅವರು ತಮಿಳಿನಲ್ಲಿ 20 ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಸದ್ಯಕ್ಕೆ ಇನ್ನೋವೇಟಿವ್ ಫಿಲಂ ಸಿಟಿಯನ್ನು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸಲು ತೊಡಗಿದ್ದಾರೆ. ಫೆಬ್ರವರಿ ವರೆಗೆ ಫಿಲಂ ಸಿಟಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಆ ನಂತರ ಹೊಸ ಮಾದರಿಯ ಫಿಲಂ ಸಿಟಿಯನ್ನು ಸಾರ್ವಜನಿಕರು ನೋಡಬಹುದಾಗಿದೆ'' ಎಂದರು.
ಹಲವು ಹೊಸ ಸೆಟ್ಗಳನ್ನು ನಿರ್ಮಿಸಲಾಗುತ್ತಿದೆ
''ಫಿಲಂ ಸಿಟಿಯಲ್ಲಿ ಹಲವು ಹೊಸ ಸೆಟ್ಗಳ ನಿರ್ಮಾಣ ಮಾಡಲಾಗುತ್ತಿದೆ. ರೈಲ್ವೆ ನಿಲ್ದಾಣ, ಪೊಲೀಸ್ ಠಾಣೆ, ಕ್ಲಬ್ಬು ಇನ್ನೂ ಹಲವು ಸೆಟ್ಗಳ ನಿರ್ಮಾಣ ಆಗಲಿದೆ. ಕನ್ನಡ ಚಿತ್ರಗಳು ಬೇರೆ ರಾಜ್ಯಕ್ಕೆ ತೆರಳದೆ ಇಲ್ಲಿಯೇ ಚಿತ್ರೀಕರಣ ಮಾಡಲು ಸಕಲ ಸೌಲಭ್ಯಗಳನ್ನೂ ಒದಗಿಸಲಾಗುತ್ತದೆ. ಸಿನಿಮಾಗಳ ಮುಹೂರ್ತ ಸಮಾರಂಭಗಳಿಗೆ ಉಚಿತವಾಗಿ ಸ್ಥಳಾವಕಾಶ ನೀಡಲಾಗುತ್ತದೆ. ನಮ್ಮ ಸಂಸ್ಥೆಯು ಸಹ ಪಾಲುದಾರನಾಗಿ ಕೆಲಸ ಮಾಡುತ್ತಿದ್ದು, ಮೈ ಮೂವಿ ಬಜಾರ್ ಹೆಸರಿನ ಅಪ್ಲಿಕೇಶನ್ ಅನ್ನು ಸಹ ಬಿಡುಗಡೆ ಮಾಡಲಿದ್ದು, ಇದರಿಂದ ಸಿನಿಮಾ ಚಿತ್ರೀಕರಣಕ್ಕೆ ಸೆಟ್, ಯುನಿಟ್ ಬುಕ್ ಮಾಡುವುದು, ಪರವಾನಗಿ ಇನ್ನಿತರೆ ಕಾರ್ಯಗಳು ನಿರ್ಮಾಪಕರಿಗೆ ಸುಲಭವಾಗಿ ಆಗಲಿದೆ'' ಎಂದಿದ್ದಾರೆ.
50 ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ ಫಿಲಂ ಸಿಟಿ
ಇನ್ನೋವೇಟಿವ್ ಫಿಲಂ ಸಿಟಿಯು ಬಿದಡಿ ಬಳಿ ಇದ್ದು ಒಟ್ಟು 50 ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ. ಬಿಗ್ಬಾಸ್ ಸೇರಿದಂತೆ ಹಲವು ರಿಯಾಲಿಟಿ ಶೋಗಳು ಫಿಲಂ ಸಿಟಿಯಲ್ಲಿ ಚಿತ್ರೀಕರಣಗೊಳ್ಳುತ್ತಾ ಬಂದಿವೆ. ಇತ್ತೀಚೆಗೆ ಆರಂಭವಾದ ತೆಲುಗು-ತಮಿಳು ಮಾಸ್ಟರ್ ಶೆಫ್ ಕಾರ್ಯಕ್ರಮಗಳು ಸಹ ಇದೇ ಫಿಲಂ ಸಿಟಿಯಲ್ಲಿ ಚಿತ್ರೀಕರಣಗೊಳ್ಳುತ್ತಿವೆ. ಫಿಲಂ ಸಿಟಿಯ ಮಾಲೀಕರಾಗಿದ್ದ ಶರವಣ ಪ್ರಸಾದ್ ಅವರು 2012 ರಲ್ಲಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಪಟ್ಟಿದ್ದರು. ಕೋಟ್ಯಂತರ ರುಪಾಯಿ ಹಣವನ್ನು ಸಾರ್ವಜನಿಕರಿಗೆ ವಂಚಿಸಿದ್ದಾರೆ ಎಂಬ ಆರೋಪದಲ್ಲಿ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಆಗಿನಿಂದಲೂ ಫಿಲಂ ಸಿಟಿ ಮಾರಾಟದ ಬಗ್ಗೆ ಗಾಳಿ ಸುದ್ದಿಗಳು ಹರಿದಾಡುತ್ತಿದ್ದವು, ಇದೀಗ ಖಾತ್ರಿಯಾಗಿದೆ.
ಫಿಲಂ ಸಿಟಿ ನಿರ್ಮಿಸುತ್ತಿದ್ದಾರೆ ಉಮಾಪತಿ ಶ್ರೀನಿವಾಸ್ ಗೌಡ
'ರಾಬರ್ಟ್', 'ಹೆಬ್ಬುಲಿ' ಸಿನಿಮಾದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಸಹ ಹೊಸದೊಂದು ಫಿಲಂ ಸಿಟಿ ನಿರ್ಮಾಣ ಮಾಡುತ್ತಿದ್ದಾರೆ. ಭೂಮಿಗೆ ಕೋಟ್ಯಂತರ ಬೆಲೆ ಇರುವ ಕನಕಪುರ-ಬೆಂಗಳೂರು ರಸ್ತೆಯ ಬಳಿ 25 ಎಕರೆ ಪ್ರದೇಶದಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡುತ್ತಿದ್ದಾರೆ. ಭೂಮಿ ಪೂಜೆ ನೆರವೇರಿಸಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಸಕಲ ಸೌಲಭ್ಯ ಹೊಂದಿರುವ, ವಿದೇಶಿ ತಂತ್ರಜ್ಞಾನವನ್ನು ಹೊಂದಿರುವ ಸ್ಟುಡಿಯೋಗಳನ್ನು ಸಹ ಈ ಫಿಲಂ ಸಿಟಿ ಒಳಗೊಂಡಿರಲಿದೆ.