ಕ್ಷಮೆ ಕೇಳಿದ್ರು ಪ್ರಯೋಜನವಾಗಲಿಲ್ಲ; ಮಾವನ ಊರಲ್ಲಿ ರಣ್ವೀರ್ಗೆ ಎದುರಾಯ್ತು ಸಂಕಷ್ಟ
ಬಾಲಿವುಡ್ ನಟ ರಣ್ವೀರ್ ಸಿಂಗ್ ಕೆಲವೊಮ್ಮೆ ನಾಲಿಗೆ ಹರಿಬಿಟ್ಟು ವಿವಾದಕ್ಕೆ ಸಿಲುಕುತ್ತಿದ್ದಾರೆ. ಇತ್ತೀವೆಗೆ ಕರಾವಳಿಯ ದೈವಗಳ ಬಗ್ಗೆ ವೇದಿಕೆಯಲ್ಲಿ ತಪ್ಪಾಗಿ ಮಾತನಾಡಿ ದೈವಗಳನ್ನು ಅನುಕರಣೆ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ತಮ್ಮ ತಪ್ಪಿಗೆ ಕ್ಷಮೆ ಕೇಳಿದ್ದರೂ ರಣ್ವೀರ್ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲಾಗಿದೆ.
ರಣ್ವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾ ಬಿಡುಗಡಗೆ ಸಜ್ಜಾಗಿದೆ. ಇಂತಹ ಸಮಯದಲ್ಲೇ ವಿವಾದ ಮತ್ತಷ್ಟು ಕಾವೇರುತ್ತಿದೆ. ಗೋವಾ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ರಣ್ವೀರ್ ಸಿಂಗ್ ಹಾಗೂ ರಿಷಬ್ ಶೆಟ್ಟಿ ಭಾಗಿ ಆಗಿದ್ದರು. 'ಕಾಂತಾರ-1' ಸಿನಿಮಾ ಚಿತ್ರಮಂದಿರದಲ್ಲಿ ನೋಡ್ದೆ. ಅದ್ಭುತ ಸಿನಿಮಾ, ನಿಮ್ಮ ನಟನೆ ಸೂಪರ್ ಎಂದು ರಿಷಬ್ ಶೆಟ್ಟಿಯನ್ನು ಅಭಿನಂದಿಸುವ ಪ್ರಯತ್ನ ಮಾಡಿದ್ದರು.

ವೇದಿಕೆ ಮುಂಭಾಗದಲ್ಲಿ ಕೂತಿದ್ದ ರಿಷಬ್ ಶೆಟ್ಟಿ ಎದುರು ದೈವ ಆವಾಹನೆಯಾದಾಗ ನಿಮ್ಮ ನಟನೆ ಅದ್ಭುತ ಎಂದು ಕಣ್ಣು ಗುಡ್ಡೆ ತಿರುಗಿಸಿ, ನಾಲಿಗೆ ಹೊರಚಾಚಿ ಅನುಕರಣೆ ಮಾಡಿ ತೋರಿಸಿದ್ದರು. ಇನ್ನು ಚಾವುಂಡಿ ದೈವವನ್ನು 'ದೆವ್ವ' ಎಂದಿದ್ದರು. ಬಳಿಕ ವೇದಿಕೆಯಿಂದ ಕೆಳಗೆ ಬಂದು ರಿಷಬ್ ಶೆಟ್ಟಿ ಎದುರು ಮತ್ತೆ ಅನುಕರಣೆ ಮಾಡಿ ತೋರಿಸಿದ್ದರು. ಆ ರೀತಿ ಮಾಡಬೇಡಿ ಎಂದು ರಿಷಬ್ ಅಲ್ಲೇ ತಾಕೀತು ಮಾಡಿದ್ದರು.
ರಣ್ವೀರ್ ಸಿಂಗ್ ದೈವಗಳನ್ನು ಅವಮಾನಿಸಿದ್ದು ಭಕ್ತರು ಹಾಗೂ ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಆತ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದರು. ಎರಡು ದಿನಗಳ ಹಿಂದೆ ಹಿಂದು ಜನಜಾಗೃತಿ ಸಮಿತಿ (ಎಚ್ಜೆಎಸ್) ರಣ್ವೀರ್ ಸಿಂಗ್ ವಿರುದ್ಧ ಗೋವಾದ ಪಣಜಿಯಲ್ಲಿ ದೂರು ದಾಖಲಿಸಿದ್ದರು. ಮಂಗಳೂರಿನ ಕದ್ರಿ ಮಂಜುನಾಥನ ಸನ್ನಿಧಿಗೆ ಬಂದು ಕ್ಷಮೆ ಕೇಳಬೇಕು ಎಂದು ತುಳುನಾಡ ದೈವಾರಾದನೆ ರಕ್ಷಣಾ ಚಾವಡಿ ಸಂಚಾಲಕ ಕಮಲಾಕ್ಷ ಗಂಧಕಾಡು ಆಗ್ರಹಿಸಿದ್ದಾರೆ.

ದೈವವನ್ನು ದೆವ್ವ ಎಂದು ಕರೆದು ರಣ್ವೀರ್ ಸಿಂಗ್ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಬೆಂಗಳೂರಿನಲ್ಲಿ ಈಗ ದೂರು ದಾಖಲಾಗಿದೆ. ವಕೀಲ ಪ್ರಶಾಂತ್ ಮೇತಲ್ ಎಂಬುವವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ರಣವೀರ್ ಸಿಂಗ್ ವಿರುದ್ಧ ದೂರು ನೀಡಿ ಎಫ್ಐಆರ್ ದಾಖಲಿಸುವಂತೆ ಆಗ್ರಹಿಸಿದ್ದಾರೆ. ಬೆಂಗಳೂರು ಮೂಲದ ನಟಿ ದೀಪಿಕಾ ಪಡುಕೋಣೆ ಅವರನ್ನು ರಣ್ವೀರ್ ಸಿಂಗ್ ಮದುವೆ ಆಗಿರುವುದು ಗೊತ್ತೇಯಿದೆ.
"ಈಗಾಗಲೇ ರಣ್ವೀರ್ ಸಿಂಗ್ ಕ್ಷಮೆ ಕೇಳಿದ್ದಾರೆ, ಆದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ರಣ್ವೀರ್ ಸಿಂಗ್ ದಂಡನಾರ್ಹ ಅಪರಾಧ ಮಾಡಿದ್ದಾರೆ. ಅವರಿಗೆ ಕಾನೂನು ರೀತಿ ಶಿಕ್ಷೆ ಆಗಬೇಕು" ಎಂದು ಬೆಂಗಳೂರಿನಲ್ಲಿ ದೂರು ನೀಡಿರುವ ವಕೀಲ ಪ್ರಶಾಂತ್ ಮೇತಲ್ ವಾದಿಸಿದ್ದಾರೆ. ಈ ವಾರ ರಣ್ವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾ ಬಿಡುಗಡೆ ಆಗ್ತಿದ್ದು ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲೇ ಕ್ಷಮೆ ಕೇಳಿ ತಪ್ಪಿಸಿಕೊಳ್ಳಲು ರಣ್ವೀರ್ ಪ್ರಯತ್ನಿಸಿದ್ದಾರೆ ಎಂದು ಕೆಲವರು ಭಾವಿಸಿದ್ದಾರೆ.
ಆದಿತ್ಯಾ ಧರ್ ನಿರ್ದೇಶನದ 'ಧುರಂಧರ್' ಚಿತ್ರದಲ್ಲಿ ರಣ್ವೀರ್ ಜೊತೆ ಸಂಜಯ್ ದತ್, ಅಕ್ಷಯ್ ಖನ್ನಾ, ಮಾಧವನ್, ಅರ್ಜುನ್ ರಾಮ್ಪಾಲ್ ನಟಿಸಿದ್ದಾರೆ. ಆದಿತ್ಯ ಧರ್, ಲೋಕೇಶ್ ಧರ್ ಹಾಗೂ ಜ್ಯೋತಿ ದೇಶಪಾಂಡೆ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇದೊಂದು ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು ಈಗಾಗಲೇ ಟೀಸರ್, ಟ್ರೈಲರ್, ಸಾಂಗ್ಸ್ ಬಂದು ಹಿಟ್ ಆಗಿದೆ. ವಿಶ್ವದಾದ್ಯಂತ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.
ವಿವಾದದ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ರಣ್ವೀರ್ ಸಿಂಗ್ ಪೋಸ್ಟ್ ಮಾಡಿದ್ದರು. "ಚಿತ್ರದಲ್ಲಿನ ರಿಷಬ್ ಅವರ ಅದ್ಭುತ ಅಭಿನಯ ಎತ್ತಿ ತೋರಿಸುವುದು ನನ್ನ ಉದ್ದೇಶವಾಗಿತ್ತು. ಒಬ್ಬ ನಟನಾಗಿ ಆ ದೃಶ್ಯವನ್ನು ಮಾಡಲು ಎಷ್ಟು ಶ್ರಮ ವಹಿಸಬೇಕು ಎಂಬುದು ನನಗೆ ತಿಳಿದಿದೆ. ಹೀಗಾಗಿ ಅವರ ಬಗ್ಗೆ ನನಗೆ ಮೆಚ್ಚುಗೆ ಇದೆ. ನಮ್ಮ ದೇಶದ ಪ್ರತಿಯೊಂದು ಸಂಸ್ಕೃತಿ.. ಸಂಪ್ರದಾಯ ಮತ್ತು ನಂಬಿಕೆಯನ್ನು ನಾನು ಯಾವಾಗಲೂ ಆಳವಾಗಿ ಗೌರವಿಸುತ್ತೇನೆ. ನನ್ನಿಂದ ಯಾರದ್ದಾದರೂ ಭಾವನೆಗಳಿಗೆ ಧಕ್ಕೆಯುಂಟಾಗಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ" ಎಂದು ರಣವೀರ್ ಸಿಂಗ್ ಬರೆದುಕೊಂಡಿದ್ದರು.


Click it and Unblock the Notifications











