ಪುನೀತ್ ಬಗ್ಗೆ ಅವಹೇಳನಕಾರಿ ಹೇಳಿಕೆ. ಆರೋಪಿಗಳನ್ನು ಬಂಧಿಸಿ ಕ್ರಮಕ್ಕೆ ಮುಂದಾದ ಪೋಲೀಸರು
ನಟ ಪುನೀತ್ ರಾಜ್ಕುಮಾರ್ ನಮ್ಮನ್ನೆಲ್ಲ ಅಗಲಿದ್ದಾರೆ. ಅವರನ್ನು ಕಳೆದುಕೊಂಡಿರೋ ನೋವು ಇನ್ನೂ ಹಾಗೇ ಇದೆ. ಅದೆಷ್ಟೋ ಅಭಿಮಾನಿಗಳು ಇನ್ನು ಈ ಸತ್ಯವನ್ನು ಅರಗಿಸಿಕೊಳ್ಳಲಾಗದೇ ಪರದಾಡುತ್ತಿದ್ದಾರೆ. ಇಂತ ವಿಶಾಲ ಮನಸ್ಥಿತಿಯ ಒಬ್ಬ ನಟ, ಸರಳತೆಯಲ್ಲಿ ಸರಳವಾಗಿದ್ದ ವ್ಯಕ್ತಿತ್ವದ ನಟ ಪುನೀತ್ ಬಗ್ಗೆ ಯಾರೂ ಕೂಡ ಒಂದು ಮಾತು ಕೆಟ್ಟದ್ದನ್ನು ಬಯಸಿರಲಿಲ್ಲ. ಬದುಕಿದ್ದಾಗ ಎಲ್ಲರಿಗೂ ಒಳ್ಳೆದು ಮಾಡಿದ್ದ ಪುನೀತ್, ಅದೆಷ್ಟೋ ಅನಾಥ ಮಕ್ಕಳಿಗೂ ನೆರವಾಗಿದ್ದಾರೆ. ಇಂತಹ ಒಬ್ಬ ನಟನ ಬಗ್ಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಅವಾಚ್ಯ ಶಬ್ಧದಿಂದ ನಿಂದಿಸಿದ್ದರು. ಈ ಬಗ್ಗೆ ಫಿಲ್ಮಿಬೀಟ್ ಕೂಡ ವರದಿ ಮಾಡಿತ್ತು. ಇದೀಗ ಕಿಡಿಗೇಡಿಗಳನ್ನು ಬಂಧಿಸಲಾಗಿದ್ದು ಈ ವಿಚಾರವನ್ನು ಕಮಿಷನರ್ ಕಮಲ್ ಪಂತ್ ಟ್ವಿಟ್ಟರ್ನಲ್ಲಿ ಮಾಹಿತಿ ತಿಳಿಸಿದ್ದಾರೆ.
ಪುನೀತ್ ನಿಧನದ ಬಳಿಕ ರಾಜ್ಯದಲ್ಲಿ ಎರೆಡು ದಿನ ಮದ್ಯ ನಿಷೇಧ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಉತ್ತರ ಭಾರತದ ಕೆಲವರಿಗೆ ಇದು ಕಿರಿಕಿರಿ ಉಂಟಾಗಿತ್ತು. ಹೀಗಾಗಿ ರಿತ್ವಕ್ಸ್ ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪುನೀತ್ ಬಗ್ಗೆ ಅಶ್ಲೀಲ ಪೋಸ್ಟ್ಗಳನ್ನು ಹರಿಬಿಡಲು ಆರಂಭ ಮಾಡಲಾಗಿತ್ತು. ಇದಕ್ಕೆ ತೀವ್ರ ವಿರೋಧ ಕೂಡ ವ್ಯಕ್ತವಾಗುತ್ತಿತ್ತು. ಇದರ ಬೆನ್ನಲ್ಲೆ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಲು ಆರಂಭಿಸಿದೆ. ಕೂಡಲೇ ಎಚ್ಚೆತ್ತುಕೊಂಡ ಬೆಂಗಳೂರು ಸಿಟಿ ಪೋಲಿಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಬಗ್ಗೆ ಟ್ವೀಟ್ ಮಾಡಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಪುನೀತ್ ನಿಧನದ ಹಿನ್ನೆಲೆ ಮದ್ಯ ಮಾರಾಟ ನಿಷೇಧದ ನಡುವೆಯೂ ರಿತ್ವಿಕ್ಸ್ ಹೆಸರಿನ ವ್ಯಕ್ತಿಗೆ ಮದ್ಯ ದೊರಕಿತ್ತು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದ ಕಿಡಿಗೇಡಿ, ಪುನೀತ್ ಬಗ್ಗೆಯೂ ಆಶ್ಲೀಲ ಪದ ಬಳಕೆ ಮಾಡಿದ್ದ. ಬಿಯರ್ ಬಾಟಲಿಯ ಚಿತ್ರ ಹಂಚಿಕೊಂಡು ರಾಜ್ಕುಮಾರ್ ಸಹ ನಮ್ಮನ್ನು ತಡೆಯಲು ಸಾಧ್ಯವಿಲ್ಲ, ಆತನನ್ನು ನೆನಪಿಟ್ಟುಕೊಳ್ಳಿ, ಮರೆಯಬೇಡಿ. ಯಾಕೆಂದರೆ ಇದನ್ನು ಕುಡಿದ ಬಳಿಕ ಅವನ ಸಮಾಧಿ ಮೇಲೆ ನಾವು ಮೂ** ಮಾಡಲಿದ್ದೇವೆ ಎಂದು ಆತ ಬರೆದುಕೊಂಡಿದ್ದ.

ಕಿಡಿಗೇಡಿಯ ಈ ಪೋಸ್ಟ್ಗೆ ಸಾಕಷ್ಟು ಮಂದಿ ತೀವ್ರ ವಿರೋಧ ಹೊರಹಾಕಿದ್ದಾರೆ. ಸ್ವತಃ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಕೂಡ ಈ ಪೋಸ್ಟ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ಕೇವಲ ಆಲ್ಕೋಹಾಲ್ಗಾಗಿ ಪುನೀತ್ ಬಗ್ಗೆ ಇಂಥ ವರ್ತನೆಯೇ, ಜನರಲ್ಲಿ ಮನುಷ್ಯತ್ವ ಉಳಿದಿಲ್ಲವ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದೆಲ್ಲದರ ಬೆನ್ನಲ್ಲೆ ಆರೋಪಿಯ ಬಂಧನ ಆಗಿದ್ದು ಸಮಾಧಾನ ತಂದಿದೆ. ಬಂಧಿಸಿರುವ ವ್ಯಕ್ತಿಗೆ ತಕ್ಕ ಪಾಠ ಕಲಿಸಬೇಕು. ಇನ್ನು ಮುಂದೆ ಇಂತಹ ಕೆಲಸಕ್ಕೆ ಯಾರು ಕೈ ಹಾಕಲು ಮನಸ್ಸು ಮಾಡಬಾರದು ಹಾಗೇ ಶಿಕ್ಷೆ ನೀಡಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯಗಳು ಬರುತ್ತಿವೆ.
ಪುನೀತ್ ಸಾವಿನ ಬಗ್ಗೆ ಇನ್ನೂ ಅರಗಿಸಿಕೊಳ್ಳಲಾಗದೇ ನೋವಿನಲ್ಲಿರುವ ಸಾಕಷ್ಟು ಅಭಿಮಾನಿಗಳು ಮತ್ತು ಕುಟುಂಬ ಸದಸ್ಯರಿಗೆ ಕಿಡಿಗೇಡಿಗಳ ಇಂತಹ ಕೃತ್ಯ ತೀವ್ರ ನೋವು ತರಿಸಿದೆ. ತಮ್ಮ ನೆಚ್ಚಿನ ನಟನ ಬಗ್ಗೆ, ಆದರ್ಶ ವ್ಯಕ್ತಿಯ ಬಗ್ಗೆ ಕನ್ನಡಿಗರು ಯಾರು ಹೀಗೆ ಮಾಡಲು ಸಾಧ್ಯವಿಲ್ಲ. ಎಲ್ಲಿಂದಲೋ ಇಲ್ಲಿಗೆ ಬಂದು ಇಲ್ಲಿನ ಸಂಸ್ಕೃತಿ ಮತ್ತು ವ್ಯಕ್ತಿಗಳಿಗೆ ಅಗೌರವ ತೋರುವುದು ಎಷ್ಟು ಸರಿ ಎಂದು ಅಭಿಪ್ರಾಯ ಹೊರಹಾಕುತ್ತಿದ್ದಾರೆ.
ಪುನೀತ್ ನಿಧನ ಬಳಿಕ ಕಿಚ್ಚ ಸುದೀಪ್ ಸೇರಿದಂತೆ ಹಲವು ಕಲಾವಿದರು ಅವರ ನಿಧನಕ್ಕೆ ಕಂಬನಿ ಮಿಡಿದ್ದಾರೆ.
ಪುನೀತ್ ಜೊತೆ ಕಳೆದ ಒಂದಷ್ಟು ಕ್ಷಣಗಳನ್ನು ಈಗಲೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ನಟಿ ರಮ್ಯ ತನ್ನ ಸ್ನೇಹಿತ ಅಪ್ಪುವನ್ನು ಕಳೆದುಕೊಂಡು ಇನ್ನು ಭಾರವಾದ ಮನಸ್ಸಿನಲ್ಲೇ ಇದ್ದೇನೆ. ನಿಮ್ಮ ನೆನಪು ಸದಾ ನನ್ನೊಂದಿಗೆ ಇರಲಿದೆ ಎಂದಿದ್ದಾರೆ. ಕಿಚ್ಚ ಸುದೀಪ್ ಕೂಡ ಗೆಳೆಯನನ್ನು ನೆನೆಸಿಕೊಂಡು ಟ್ವಿಟ್ಟರ್ನಲ್ಲಿ ಪುನೀತ್ ಫೋಟೊವನ್ನೆ ತನ್ನ ವಾಲ್ಗೆ ಹಾಕಿಕೊಂಡಿದ್ದಾರೆ. ಹಾಗೇ ಪ್ರೀತಿಯ ಗೆಳೆಯನಿಗೆ ಭಾವನಾತ್ಮಕ ಪತ್ರ ಕೂಡ ಬರೆದಿದ್ದಾರೆ. ಸಹೋದರ ರಾಘವೇಂದ್ರ ರಾಜ್ಕುಮಾರ್ ಕೂಡ ಪುನೀತ್ ಬಳಿ ತೆಗೆಸಿಕೊಂಡ ಕೊನೆಯ ಸೆಲ್ಫಿಯನ್ನು ಹಾಕಿ ಈ ಬಗ್ಗೆ ಬರೆದುಕೊಂಡಿದ್ದಾರೆ.
ಹೀಗೆ ಪುನೀತ್ ಸಾವನಪ್ಪಿ ಐದು ದಿನಗಳಾಗಿವೆ. ಈಗಲೂ ಇದನ್ನು ಅಷ್ಟು ಸುಲಭವಾಗಿ ಯಾರಿಗೂ ಅರಗಿಸಿಕೊಳ್ಳಲಾಗದೆ ದುಖಃವನ್ನು ಹೊರಹಾಕುತ್ತಿದ್ದಾರೆ. ಕುಟುಂಬ ಸದಸ್ಯರು ಕೂಡ ದುಖಃದ ಮಡುವಿನಲ್ಲಿ ದಿನ ದೂಡುತ್ತಿದ್ದಾರೆ.


Click it and Unblock the Notifications










