'ಕೆಜಿಎಫ್' ಚಿತ್ರಕ್ಕೆ ಸಲಾಂ ಹೇಳಿದ ಬೆಂಗಳೂರು ಪೊಲೀಸ್
Recommended Video

ಯಶ್ ಕೆಜಿಎಫ್ ಚಿತ್ರಕ್ಕೆ ಎಲ್ಲೆಡೆ ಪ್ರಶಂಸೆ ಸಿಕ್ಕಿದೆ. ಐದು ಭಾಷೆಗಳಲ್ಲಿ ತೆರೆಕಂಡಿದ್ದರಿಂದ ಎಲ್ಲಾ ಭಾಷೆಯ ಪ್ರೇಕ್ಷಕರು ಕೆಜಿಎಫ್ ಚಿತ್ರವನ್ನ ಅಪ್ಪಿಕೊಂಡಿದ್ದಾರೆ.
ಇದೀಗ, ಕೆಜಿಎಫ್ ಚಿತ್ರಕ್ಕೆ ಬೆಂಗಳೂರು ಪೊಲೀಸರು ಸಲಾಂ ಹೇಳಿದ್ದಾರೆ. ಸಿನಿಮಾ ಮೇಕಿಂಗ್, ಅದನ್ನ ಪ್ರಸ್ತುತಪಡಿಸಿರುವ ರೀತಿಯ ಬಗ್ಗೆ ಪ್ರೇಕ್ಷಕರ ಚಪ್ಪಾಳೆ ಹೊಡೆಯುತ್ತಿದ್ದಾರೆ. ಇದನ್ನ ಕಂಡ ಬೆಂಗಳೂರು ಪೊಲೀಸ್ ಟ್ವಿಟ್ಟರ್ ಖಾತೆಯಲ್ಲಿ ಕೆಜಿಎಫ್ ತಂಡಕ್ಕೆ ಅಭಿನಂದನೆಗಳನ್ನ ತಿಳಿಸಿದ್ದಾರೆ.
'ನಮ್ಮ ಭಾಷೆಯ ಸಿನಿಮಾವೊಂದು ಕನ್ನಡದ ಗಡಿ ದಾಟಿ ಜಗತ್ತಿನೆಲ್ಲೆಡೆ ಜನಮನ್ನಣೆ ಪಡೆಯುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆ. ಕನ್ನಡ ಚಿತ್ರ ಜಗತ್ತಿನ ತಾಂತ್ರಿಕತೆಯ ತಾಕತ್ತನ್ನು ಜಗತ್ತಿಗೆ ತೋರಿಸಿದ #KGF ತಂಡಕ್ಕೆ ಅಭಿನಂದನೆಗಳು. #ನಮ್ಮಭಾಷೆ #ನಮ್ಮಹೆಮ್ಮೆ'.
ಬೆಂಗಳೂರು ಪೊಲೀಸ್ ಮಾತ್ರವಲ್ಲದೇ, ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಕೂಡ ಕೆಜಿಎಫ್ ಚಿತ್ರವನ್ನ ಶ್ಲಾಘಿಸಿದ್ದಾರೆ. ''ಕನ್ನಡದ ಸಿನೆಮಾವೊಂದು ಕರ್ನಾಟಕವನ್ನು ದಾಟಿ ದೇಶದುದ್ದಗಲಕ್ಕೂ ಹಾಗೂ ವಿದೇಶದಲ್ಲೂ ಜನಮನವನ್ನು ಗೆಲ್ಲುತ್ತಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ವಿಚಾರ. ನಮ್ಮ ಕನ್ನಡ ಚಿತ್ರರಂಗ ಬೇರಾರಿಗೂ ಕಮ್ಮಿಯಿಲ್ಲ ಎಂದು ಅವುಗಳ ಯಶಸ್ಸಿನ ಮೂಲಕವೇ ಸಾರುವ ಸಮಯ ಬಂದಿದೆ. #KGF ತಂಡಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು'' ಎಂದು ಟ್ವೀಟ್ ಮಾಡಿದ್ದಾರೆ.

ಸಾಮಾನ್ಯವಾಗಿ ಸಿನಿಮಾಗಳನ್ನ ರಾಜಕಾರಣಿಗಳು ಹಾಗೂ ಸರ್ಕಾರಿ ಅಧಿಕಾರಿ ನೋಡುವುದು ಕಡಿಮೆ. ನೋಡಿದ್ರು ಈ ರೀತಿ ಶುಭಕೋರುವುದು, ಅಭಿಪ್ರಾಯ ವ್ಯಕ್ತಪಡಿಸುವುದು ಅಪರೂಪ. ಆದ್ರೆ, ಕೆಜಿಎಫ್ ಚಿತ್ರದ ಯಶಸ್ಸಿಗೆ ಪೊಲೀಸ್ ಇಲಾಖೆ ಮತ್ತು ಗೃಹ ಸಚಿವರು ಶುಭಾಶಯ ತಿಳಿಸಿರುವುದು ನಿಜಕ್ಕೂ ವಿಶೇಷವೇ ಸರಿ.


Click it and Unblock the Notifications











