ಕೊಹ್ಲಿಯನ್ನು ಟೀಕಿಸುವ ಮೊದಲು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಿ ; ಸುಮಲತಾ ಅಂಬರೀಶ್ ಕಿಡಿ !
18 ವರ್ಷದ ನಂತರ ಕನ್ನಡಿಗರ ಕನಸು ನನಸಾಗಿತ್ತು. ಇದೇ ಮೊದಲ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಮುಡಿಗೇರಿಸಿಕೊಂಡಿತ್ತು. ಆದರೆ. ದುರ್ದೈವ ಸಂಭ್ರಮ 24 ಗಂಟೆ ಕೂಡ ಉಳಿಯಲಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಲ್ಲಿ ಹನ್ನೊಂದು ಜನ ಸಾವನ್ನಪ್ಪಿದರು. ಆ ನಂತರ ಶುರುವಾಗಿದ್ದು ರಾಜಕೀಯ. ನಮ್ಮದೇನು ತಪ್ಪಿಲ್ಲ ತಪ್ಪೆಲ್ಲ ಪೊಲೀಸರದ್ದೇ..
ಎಂದು ಹೇಳಿ ಸರ್ಕಾರ ಕೈ ತೊಳೆದುಕೊಂಡಿತು. ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಸೇರಿ ಹಲವು ಪೊಲೀಸ್ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಅಮಾನತ್ತು ಮಾಡಲಾಯ್ತು. ಇದರ ನಡುವೆ ಪೂರ್ವ ತಯಾರಿ ಇಲ್ಲದೇ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇ ಈ ಅನಾಹುತಕ್ಕೆ ಕಾರಣ ಎಂದು ವಿರೋಧ ಪಕ್ಷಗಳು ದೂರಿದ್ದವು.

ಇನ್ನೂ ಇದೆಲ್ಲದರ ನಡುವೆ ಕೆಲವರು ಈ ಘೋರ ದುರಂತಕ್ಕೆ ವಿರಾಟ್ ಕೊಹ್ಲಿ ಕಾರಣ ಎಂದು ಕಿಡಿ ಕಾರಲು ಶುರು ಮಾಡಿದರು. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುವುದಲ್ಲದೇ ಕೊಹ್ಲಿಯನ್ನು ಕೂಡಲೇ ಬಂಧಿಸಬೇಕೆಂದು ಅಭಿಯಾನವನ್ನು ಮಾಡಿದರು. ಈಗ ಕೊಹ್ಲಿ ವಿರುದ್ಧ ಮಾತನಾಡುತ್ತಿರುವವರ ವಿರುದ್ಧ ಮಾಜಿ ಸಂಸದೆ ಸುಮಲತಾ ಅಂಬರೀಶ್ ಕೆಂಡ ಕಾರಿದ್ದಾರೆ. ತಮಿಳು ಮತ್ತು ತೆಲುಗು ಚಿತ್ರರಂಗದ ಛಾಯಾಗ್ರಾಹಕ ಶಕ್ತಿ ಸರವಣನ್ ಅವರ ಬರಹವನ್ನು ಹಂಚಿಕೊಂಡು ಕೊಹ್ಲಿ ವಿರುದ್ಧ ಕತ್ತಿ ಮಸೆಯುತ್ತಿರುವವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸುಮಲತಾ ಅಂಬರೀಶ್ ಹೇಳಿದ್ದೇನು
ಒಂದು ದುರಂತವನ್ನು ಉಪಯೋಗಿಸಿಕೊಂಡು ವಿರಾಟ್ ಕೊಹ್ಲಿ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕುತ್ತಿರುವ ಎಲ್ಲಾ ಮೂರ್ಖರು ಸಾಧ್ಯವಾದರೆ ಸಾಮಾನ್ಯ ಜ್ಞಾನವನ್ನು ಉಪಯೋಗಿಸಿ ಎಂದು ಹೇಳಿದ್ದಾರೆ. ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಿ ಎಂದು ಹೇಳಿದ್ದಾರೆ.
ಈ ಕುರಿತು ಬರೆದುಕೊಂಡಿರುವ ಸುಮಲತಾ ಸಾರ್ವಜನಿಕ ಸುರಕ್ಷತೆಯ ಏಕೈಕ ಜವಾಬ್ದಾರಿ ರಾಜ್ಯ ಸರ್ಕಾರ ಮತ್ತು ಆಡಳಿತದ ಮೇಲಿದೆ. ಪರಿಸ್ಥಿತಿ ನಿಭಾಯಿಸುವಲ್ಲಿ ಅವರು ವಿಫಲರಾಗಿದ್ದಾರೆ. ಈ ದುರಂತಕ್ಕೆ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದಿರುವ ಸುಮಲತಾ ಇಲ್ಲಿ ಅಪರಾಧವನ್ನು ಮರೆಮಾಚುವ ಪ್ರಯತ್ನದಲ್ಲಿ ಬೇರೆಯವರನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದಾಗಿಯೇ 11 ಅಮಾಯಕರ ಜೀವಗಳು ಬಲಿಯಾಗಿವೆ. ಮೃತರಿಗೆ ನ್ಯಾಯ ಸಿಗಬೇಕಾದರೆ, ತಪ್ಪಿತಸ್ಥರನ್ನು ವಿಚಾರಣೆಗೆ ಒಳಪಡಿಸಬೇಕು. ಇದಕ್ಕಾಗಿ ಕಠಿಣ ಶಿಕ್ಷೆ ವಿಧಿಸಬೇಕು ಎಂದಿರುವ ಸುಮಲತಾ ಅಂಬರೀಶ್ ಸಂಪೂರ್ಣ ಆರೋಪ ಒಂದು ತಂಡ ಅಥವಾ ಆಟಗಾರರ ಮೇಲೆ ಹೊರಿಸುವುದು ನಿಮ್ಮ ಅಜ್ಞಾನ ಮತ್ತು ಸಣ್ಣತನವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಸುಮಲತಾ ಹಂಚಿಕೊಂಡ ಶಕ್ತಿ ಸರವಣನ್ ಬರಹದಲ್ಲಿ ಏನಿದೆ ?
ವಿರಾಟ್ ಕೊಹ್ಲಿ ವಿರುದ್ಧ ಅಭಿಯಾನ ನಡೆಯುತ್ತಿರುವುದು ಸರಿಯಲ್ಲ ಎಂದು ಶಕ್ತಿ ಸರವಣನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ದುರಂತ ಕಾಲ್ತುಳಿತ ಘಟನೆಗೆ ವಿರಾಟ್ ಕೊಹ್ಲಿಯನ್ನು ಹೊಣೆಗಾರನನ್ನಾಗಿಸಿ, ದ್ವೇಷ ಹರಡುತ್ತಿರುವುದನ್ನು ನೋಡಿ ನನಗೆ ಬೇಸರವಾಗಿದೆ ಎಂದಿರುವ ಶಕ್ತಿ ಸರವಣನ್, ವಿರಾಟ್ ಕೊಹ್ಲಿ ಜನಸಮೂಹಕ್ಕೆ ಕರೆಯನ್ನು ನೀಡಲಿಲ್ಲ. ಅಲ್ಲಿನ ವ್ಯವಸ್ಥೆ ನಿಯಂತ್ರಿಸಲಿಲ್ಲ . ಅವರಿಗೆ ಯಾವುದೇ ಹಾನಿ ಸಂಭವಿಸುವ ಉದ್ದೇಶ ಇರಲಿಲ್ಲ ಎಂದಿದ್ದಾರೆ.
ವರ್ಷದ ಪರ ಇರುವ ಅಭಿಮಾನಿಗಳ ಸಂಭ್ರಮ ನೋಡಲು ಕೊಹ್ಲಿ ಅಲ್ಲಿ ಹೋಗಿದ್ದರು ಆದರೆ ಈಗ ಕೊಹ್ಲಿಯನ್ನೇ ದೂಷಿಸಲಾಗುತ್ತೆ ಎಂದಿರುವ ಶಕ್ತಿ ಸರವಣನ್ ಅದು ವ್ಯವಸ್ಥೆಯ ವೈಫಲ್ಯ. ಜನಸಂದಣಿ ನಿರ್ವಹಣೆ ವೈಫಲ್ಯ, ಅಸಮರ್ಪಕ ಸುರಕ್ಷತಾ ಯೋಜನೆ ಮತ್ತು ಅಧಿಕಾರಿಗಳಿಂದ ನಿರೀಕ್ಷೆಯ ಕೊರತೆ ಇತ್ತು. ಈ ಹೊತ್ತಲ್ಲಿ, ರಾಷ್ಟ್ರಕ್ಕೆ ಹೆಮ್ಮೆ ಮತ್ತು ಸ್ಫೂರ್ತಿ ನೀಡಿದ ವ್ಯಕ್ತಿಯ ಕಡೆಗೆ ಬೆರಳು ತೋರಿಸುವುದು ಅನ್ಯಾಯ ಎಂದು ಹೇಳಿದ್ದಾರೆ.
ತನ್ನ ಅಭಿಮಾನಿಗಳಿಗೆ ಮಾತ್ರ ಪ್ರತಿಫಲ ನೀಡಲು ಬಯಸುವ ಆಟಗಾರನನ್ನು ಟಾರ್ಗೆಟ್ ಮಾಡಬಾರದು. ಇದು ಆತ್ಮಾವಲೋಕನಕ್ಕೆ ಸಮಯ, ಆರೋಪಕ್ಕಲ್ಲ. ನಾವು ಉತ್ತಮರಾಗೋಣ. ಮನುಷ್ಯರಾಗೋಣ ಎಂದು ಸಿನಿಮಾಟೋಗ್ರಾಫರ್ ಶಕ್ತಿ ಸರವಣನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.


Click it and Unblock the Notifications











