ಮತದಾನಕ್ಕೆ ಮೊದಲೇ ಪ್ರಶಸ್ತಿ ರಾಜಕೀಯ
ಈ ಚಿತ್ರಕ್ಕೆ ಕನಿಷ್ಠ ವೆಂದರೂ ಆರು ಪ್ರಶಸ್ತಿಗಳು ಸಿಗೋದು ಗ್ಯಾರಂಟಿ.ಅವಿನಾಶ್ ಅವರಿಗೆ ವೃತ್ತಿ ಬದುಕಿನಲ್ಲೇ ಇಂತಾ ಪಾತ್ರ ಸಿಕ್ಕಿಲ್ಲ.
ಪುಟ್ಟಣ್ಣ ಕಣಗಾಲ್ ನಂತರ ಯಾರು ಅನ್ನುವ ಪ್ರಶ್ನೆಗೆ ಈ ಚಿತ್ರದಲ್ಲಿ ಉತ್ತರ ಸಿಕ್ಕಿದೆ. ಅವರೇ ಟಿ.ಎನ್. ಸೀತಾರಾಂ.
ದೇವರಾಜ್ ಅವರು ತಾವು ಹಿಂದೆ ಮಾಡಿದ ಪಾತ್ರಗಳನ್ನೆಲ್ಲಾ ಮರೆತು ಬಿಡಬೇಕು. ಅಂಥಾ ಪಾತ್ರವೊಂದು ಈ ಚಿತ್ರದಲ್ಲಿ ಅವರಿಗೆ ಸಿಕ್ಕಿದೆ. ಎಲ್ಲಾ ಕಲಾವಿದರಿಗೂ ಅವರಿಗೆ ಯೋಗ್ಯತೆಗೆ ತಕ್ಕಂತೆ ಪಾತ್ರ ಹಂಚಿಕೆಯಾಗಿರುವುದು ಇದೊಂದು ಚಿತ್ರದಲ್ಲಿ ಮಾತ್ರ.
ಇವಿಷ್ಟೂ ನಿರ್ಮಾಣ ಸಲಹೆಗಾರ ವಿಠಲಮೂರ್ತಿ, ನಟ ಸುಂದರ್ರಾಜ್ ಹಾಗೂ ಇನ್ನಿತರರು ಅನ್ನೋದು ವಿಶೇಷ.
ಮತದಾನ ಇನ್ನೂ ಬಿಡುಗಡೆ ಆಗಿಲ್ಲ. ಮುಂದಿನ ತಿಂಗಳು ಆಗುವ ನಿರೀಕ್ಷೆ ಇದೆ. ಆ ಹೊತ್ತಿಗೆ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಬೇಕು ಅನ್ನೋದು ಚಿತ್ರ ತಂಡಕ್ಕೆ ಗೊತ್ತಿದೆ. ಅದಕ್ಕಾಗಿಯೇ ಈಗಿನಿಂದಲೇ ಪ್ರಚಾರ ಕಾರ್ಯ ಆರಂಭ.
ರಾಷ್ಟ್ರ ಪ್ರಶಸ್ತಿಗೆ ಮತದಾನ ಸೇರಿದಂತೆ ಕನ್ನಡದಿಂದ ನಾಲ್ಕು ಚಿತ್ರಗಳು ಪೈಪೋಟಿ ನಡೆಸುತ್ತಿವೆ. ಮುನ್ನುಡಿ, ಮುಸ್ಸಂಜೆ ಮತ್ತು ದೇವೀರಿ. ನಾಲ್ಕು ಚಿತ್ರಗಳ ವಸ್ತುಗಳೂ ವಿಭಿನ್ನ. ಮತದಾನದಲ್ಲಿ ರಾಜಕೀಯ ಸ್ತಿತ್ಯಂತರದಲ್ಲಿ ಮೌಲ್ಯಗಳ ಕುಸಿತದ ಚಿತ್ರಣವಿದ್ದರೆ, ದೇವೀರಿ ಕೊಳಚೆ ಪ್ರದೇಶದ ಬದುಕಿನ ನಾನಾ ಮುಖಗಳನ್ನು ಅನಾವರಣಗೊಳಿಸುತ್ತದೆ. ಮುಸ್ಸಂಜೆ ಚಿತ್ದ್ದು ವೃದ್ಧಾಪ್ಯದ ನೋವು ನಲಿವುಗಳ ಕತೆ. ಮುನ್ನುಡಿ ಚಿತ್ರದ ಬಡ ಮುಸ್ಲಿಂ ಹೆಣ್ಮಕ್ಕಳ ಯಾತನೆಯನ್ನು ಚಿತ್ರಿಸುತ್ತದೆ.
ಈ ನಾಲ್ಕು ಚಿತ್ರಗಳ ಪೈಕಿ ಲಾಬಿ ದೃಷ್ಟಿಯಿಂದ ಮುಂದಿರುವ ಚಿತ್ರವೆಂದರೆ ಮತದಾನ. ಈ ಚಿತ್ರದಲ್ಲಿ ಸರ್ವಪಕ್ಷಗಳ ಸಮ್ಮೇಳನವೇ ಇದೆ. ಅನಂತನಾಗ್, ಮುಖ್ಯಮಂತ್ರಿ ಚಂದ್ರು, ಸುಂದರ್ರಾಜ್, ದೇವರಾಜ್ ಮೊದಲಾದ ರಾಜಕಾರಣಿ ಕಂ ನಟರಿದ್ದಾರೆ. ನಿರ್ದೇಶಕ ಸೀತಾರಾಂ ಕೂಡ ರಾಜಕಾರಣಿಯೇ. ಜೊತೆಗೆ ವಿಠಲಮೂರ್ತಿಯವರ ಪೊಲೀಟಿಕಲ್ ಕನೆಕ್ಷನ್ ಕೂಡಾ ನೆರವಾಗುವ ಸೂಚನೆಗಳಿವೆ.


Click it and Unblock the Notifications