ಊದಿಕೊಂಡ ಕಾಲು, ಹೊಟ್ಟೆಯಲ್ಲಿ ನೀರು ; 'ಓಂ'ನ 'ರಾಯ್'ಗೆ ನೆರವಿನ ಹಸ್ತ ಚಾಚಿದ ಶಿವರಾಜ್ ಕುಮಾರ್
ಬದುಕು ಗಡಿಯಾರದ ಮುಳ್ಳಿದ್ದಂತೆ. ಏರುಪೇರು ಸರ್ವೇ ಸಾಮಾನ್ಯ. ಆದರೆ ಕೆಲ ಒಮ್ಮೆ ಬದುಕಿನಲ್ಲಿ ಎದುರಾಗುವ ತಿರುವುಗಳು ಬದುಕಿನ ದಿಕ್ಕನ್ನೇ ಬದಲಿಸಬಹುದು. ದೈಹಿಕವಾಗಿ.. ಮಾನಸಿಕವಾಗಿ.. ಜರ್ಝರಿತಗೊಳಿಸಬಹುದು. ಬದುಕಿನ ಭರವಸೆಯನ್ನು ಕಸಿಯಬಹುದು. ಜೀವನ ದುಸ್ತರ ಎನ್ನಿಸಬಹುದು. ಆದರೆ. ಬದುಕಿನಲ್ಲಿ ಸಕಲವೂ ದೂರವಾದಾಗ ಮಹತ್ವಕಾಂಕ್ಷೆ ಜೊತೆ ಇದ್ದರೆ ಎಂತಹ ಕಷ್ಟವನ್ನಾದರೂ ಎದುರಿಸಿ ಮುಂದೆ ಸಾಗಬಹುದು.
ಸದ್ಯ ಇದೇ ರೀತಿ ಬಂದೆರಗಿದ ಕಷ್ಟವನ್ನು ಎದುರಿಸುತ್ತಾ ಮುಂದೆ ಸಾಗುತ್ತಿರುವ ಕೆಜಿಎಫ್ನ ಚಾಚಾ ಹರೀಶ್ ರಾಯ್, ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಲಿದೆ. ದೇಹದ ತೂಕ ಕಡಿಮೆಯಾಗಿದೆ. ಹೊಟ್ಟೆಯಲ್ಲಿ ನೀರು ತುಂಬಿಕೊಂಡಿದೆ. ಕ್ಯಾನ್ಸರ್ ಹರೀಶ್ ರಾಯ್ ಅವರ ಬದುಕನ್ನೇ ಹಿಂಡಿ ಹಿಪ್ಪೆಯಾಗಿಸಿದೆ.

ಹರೀಶ್ ರಾಯ್ ಅವರಿಗೆ ಈಗ ಆರ್ಥಿಕ ಸಹಾಯ ಬೇಕಿದೆ. ಇವರ ಈ ಕಷ್ಟವನ್ನು ಅರಿತ ಕನ್ನಡ ಚಿತ್ರರಂಗದ ಹಲವರು ಹರೀಶ್ ಅವರನ್ನು ಕಾಪಾಡಲು ಮುಂದಾಗಿದ್ದಾರೆ. ನೆರವಿನ ಹಸ್ತವನ್ನು ಚಾಚಿದ್ದಾರೆ. ಈ ಹಿಂದೆ ಸಹಾಯ ಮಾಡಿದ್ದ ಯಶ್ ಈ ಬಾರಿ ಮತ್ತೊಮ್ಮೆ ಹರೀಶ್ ರಾಯ್ ಅವರ ಪಾಲಿಗೆ ಭರವಸೆಯ ಬೆಳಕಾಗಿದ್ದಾರೆ. ಧ್ರುವಾ ಸರ್ಜಾ ಕೂಡ ದೊಡ್ಡ ಮಟ್ಟದಲ್ಲಿ ಹರೀಶ್ ಅವರಿಗೆ ಸಹಾಯ ಮಾಡಿದ್ದಾರೆ.
ಕೇವಲ ಇವರು ಮಾತ್ರವಲ್ಲ ರಕ್ಷಕ್ ಬುಲೆಟ್ ಸೇರಿ ಕನ್ನಡ ಚಿತ್ರರಂಗದ ಹಲವರು, ಹರೀಶ್ ರಾಯ್ ಅವರಿಗೆ ನೆರವಾಗುತ್ತಿದ್ದು ಇದೀಗ ಕನ್ನಡದ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್, ತಮ್ಮ ""ಓಂ'' ಚಿತ್ರದ ''ರಾಯ್''ನ ಪ್ರಾಣ ಉಳಿಸಲು ಮುಂದಾಗಿದ್ದಾರೆ. ತಮ್ಮ ಕೈಲಾದ ಸಹಾಯವನ್ನು ಕೂಡ ಶಿವಣ್ಣ ಮಾಡಿದ್ದಾರೆ. ಶಿವಣ್ಣ ಮತ್ತು ಗೀತಕ್ಕ ಅವರ ಈ ಸಹಾಯದಿಂದ, ಕನ್ನಡ ಚಿತ್ರರಂಗದಿಂದ ಸಿಕ್ತಿರುವ ಈ ಸ್ಪಂದನೆಯಿಂದ ಹರೀಶ್ ರಾಯ್ ಭಾವುಕರಾಗಿದ್ದಾರೆ. ಯಾಕೆಂದರೆ ಹರೀಶ್ ರಾಯ್ ಈ ಬಾರಿ ಕಷ್ಟ, ಇನ್ನೂ ಸಾಧ್ಯವೇ ಇಲ್ಲ ಎಂದುಕೊಂಡಿದ್ದರು.

ಈ ಕುರಿತು ''ಡೈಲಿ ಮಾಧ್ಯಮ'' ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಹರೀಶ್ ರಾಯ್, ಎಷ್ಟು ಲಕ್ಷ ಬೇಕಾದಿತು..? ಎಲ್ಲಿಂದ ತರೋದು..? ಎಂಬ ಪ್ರಶ್ನೆಗಳು ನನ್ನಲ್ಲಿದ್ದವು ಎಂದು ಹೇಳಿದ್ದಾರೆ. ಅರವತ್ತರಿಂದ ಎಂಬತ್ತು ಲಕ್ಷದವರೆಗೆ ಖರ್ಚಾಗುತ್ತೆ, ಆ ನಂತರ ಒಂದೂವರೆ ವರ್ಷ ಮತ್ತೆ ಮತ್ತೆ ಚಿಕಿತ್ಸೆಗೆ ಹಣ ಬೇಕಾಗುತ್ತೆ ಎಂದು ಹೇಳಿದ್ದಾರೆ. ಈ ಎಲ್ಲಾ ಕಾರಣಗಳಿಂದ ನಾನು ಸಹಾಯ ಕೇಳಲು ಹಿಂದೇಟು ಹಾಕಿದ್ದೆ ಯಾಕೆಂದರೆ ಮುಜುಗರ ಎಂದು ಹೇಳಿರುವ ಹರೀಶ್ ರಾಯ್ ಆ ನಂತರ ಡಾಕ್ಟರ್ ಅವರ ಮಾತು ಮತ್ತು ನನ್ನ ಪತ್ನಿ ಮತ್ತು ಮಕ್ಕಳಿಗಾಗಿ ನಾನು ಸಹಾಯಕ್ಕೆ ಅಂಗಲಾಚಿದೆ ಎಂದು ಹೇಳಿದ್ಧಾರೆ. ಈಗ ಹಲವರು ಸಹಾಯ ಮಾಡಿದ್ದಾರೆ. ಮಾಡುತ್ತಿದ್ದಾರೆ ಎಂದು ಕೂಡ ಹೇಳಿರುವ ಹರೀಶ್ ರಾಯ್ ಮುಂದಿನ ವಾರದಿಂದ ಚಿಕಿತ್ಸೆ ಶುರು ಮಾಡೋಣ ಎಂದು ವೈದ್ಯರು ಹೇಳಿದ್ದಾರೆ ಎಂದು ಹೇಳಿದ್ದಾರೆ.
ಸದ್ಯ ಹರೀಶ್ ರಾಯ್ ಅವರಿಗೆ ಶಿವರಾಜ್ ಕುಮಾರ್ ನೆರವಿನ ಹಸ್ತವನ್ನು ಚಾಚಿದ್ದು, ಹರೀಶ್ ರಾಯ್ ಅವರಿಗೆ ವೈದ್ಯರು 99 % ನಿಮಗೇನು ಆಗುವುದಿಲ್ಲ ಎಂದು ಭರವಸೆಯನ್ನು ನೀಡಿದ್ದಾರೆ. ಮುಂಬರುವ ಕೆಲ ದಿನಗಳಲ್ಲಿ ಚಿಕಿತ್ಸೆ ಶುರು ಮಾಡಲಿದ್ದಾರೆ. ಕೆಜಿಎಫ್ನ ಚಾಚಾ ಮತ್ತು ಓಂನ ರಾಯ್ ಆದಷ್ಟು ಬೇಗ ಗುಣಮುಖರಾಗಲಿ ಮತ್ತೆ ಮರಳಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಲಿ ಎನ್ನುವುದೇ ಎಲ್ಲರ ಆಶಯ ಮತ್ತು ಪ್ರಾರ್ಥನೆ.


Click it and Unblock the Notifications











