Exclusive: ರೋಣಪುರಕ್ಕೆ ಗಣ ಬರೋಕ್ಕೆ ಮುನ್ನ ಏನೇನಾಯ್ತು? 'ಭೈರತಿ ರಣಗಲ್' ಹಿಂದಿನ ಕಥೆಗೆ ಇಂದು ಮುನ್ನಡಿ
ಕನ್ನಡ ಚಿತ್ರರಸಿಕರು ಬಹಳ ದಿನಗಳಿಂದ ಕಾಯುತ್ತಿದ್ದ ಆ ಬ್ರೇಕಿಂಗ್ ನ್ಯೂಸ್ ಇಂದ ಸಿಗುತ್ತಿದೆ. ಇನ್ನು ಕೆಲವೇ ನಿಮಿಷಗಳಲ್ಲಿ 'ಭೈರತಿ ರಣಗಲ್' ಪ್ರೀಕ್ವೆಲ್ ಅನೌನ್ಸ್ ಆಗಲಿದೆ. ಗೀತಾ ಪಿಕ್ಚರ್ಸ್ ಬ್ಯಾನರ್ನಲ್ಲಿ ಈ ಸಿನಿಮಾ ಸೆಟ್ಟೇರುತ್ತಿರುವುದು ಮತ್ತೊಂದು ವಿಶೇಷ.
5 ವರ್ಷಗಳ ಹಿಂದೆ ತೆರೆಕಂಡಿದ್ದ 'ಮಫ್ತಿ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ನರ್ತನ್ ನಿರ್ದೇಶನದಲ್ಲಿ ಶಿವಣ್ಣ- ಶ್ರೀಮುರಳಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಗೆದ್ದಿದ್ದರು. ಇಂಟರ್ವಲ್ ನಂತರ ಭೈರತಿ ರಣಗಲ್ ಆಗಿ ದರ್ಶನ ಕೊಟ್ಟಿದ್ದ ಶಿವಣ್ಣ ಅಭಿಮಾನಿಗಳ ಮೈ ಜುಮ್ ಎನ್ನುವಂತೆ ಮಾಡಿದ್ದರು. ಆಕ್ಷನ್ ಎಂಟರ್ಟೈನರ್ ಸಿನಿಮಾ ಸಖತ್ ಕಿಕ್ ಕೊಟ್ಟಿತ್ತು. ನೋಡಲು ಬಹಳ ಕ್ರೂರಿಯಂತೆ ಕಂಡರೂ ಅಂತರಾಳದಲ್ಲಿ ಕಷ್ಟಕ್ಕೆ ಕರಗುವ, ನೋವಿನ ಮಿಡಿಯುವ ಬೈರತಿ ರಣಗಲ್ ಪಾತ್ರ ಪೋಷಣೆ ಸೊಗಸಾಗಿತ್ತು. ಇನ್ನು ಶಿವಣ್ಣ ಬ್ಲ್ಯಾಕ್ ಅಂಡ್ ಬ್ಲ್ಯಾಕ್ ಕಾಸ್ಟ್ಯೂಮ್ನಲ್ಲಿ ಕಣ್ಣುಗಳಲ್ಲೇ ನಟಿಸಿ ಗೆದ್ದಿದ್ದರು.
ಬೈರತಿ ರಣಗಲ್ ಪಾತ್ರವನ್ನಿಟ್ಟುಕೊಂಡು ಕಥೆಯನ್ನು ಮುಂದುವರೆಸಿ ಮತ್ತೊಂದು ಸಿನಿಮಾ ಮಾಡುವ ಲೆಕ್ಕಾಚಾರ 5 ವರ್ಷಗಳ ಹಿಂದೆಯೇ ನಡೆದಿತ್ತು. ಆದರೆ ಕಾರಣಾಂತರಗಳಿಂದ ತಡವಾಯಿತು. ಸಿನಿಮಾ ಬಗ್ಗೆ ನಿರ್ದೇಶಕ ನರ್ತನ್ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ.

'ಭೈರತಿ ರಣಗಲ್' ಪ್ರೀಕ್ವೆಲ್ ಫಿಕ್ಸ್
ಶಿವರಾತ್ರಿ ಹಬ್ಬದ ಸಂಭ್ರಮದಲ್ಲೇ 'ಭೈರತಿ ರಣಗಲ್' ಪ್ರೀಕ್ವೆಲ್ ಅನೌನ್ಸ್ ಆಗುತ್ತಿದೆ. ಇತ್ತೀಚೆಗಷ್ಟೆ ತೆಲುಗು ಸಂದರ್ಶನವೊಂದರಲ್ಲಿ ಈ ಚಿತ್ರದ ಬಗ್ಗೆ ಶಿವಣ್ಣ ಮಾತನಾಡಿದ್ದರು. ಮತ್ತೆ ಶಿವಣ್ಣ- ನರ್ತನ್ ಕಾಂಬಿನೇಷನ್ನಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ಇನ್ನು ಕೆಲವೇ ನಿಮಿಷಗಳಲ್ಲಿ ಸಿನಿಮಾ ಅಧಿಕೃತವಾಗಿ ಘೋಷಣೆ ಆಗಲಿದೆ. ರೋಣಪುರಕ್ಕೆ ಪೊಲೀಸ್ ಆಫೀಸರ್ ಗಣ ಎಂಟ್ರಿ ಕೊಡುವುದಕ್ಕೂ ಮುನ್ನ ಏನಾಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ಕಟ್ಟಿಕೊಡಲಾಗುತ್ತಿದೆ.

ಭೈರತಿ ರಣಗಲ್ ರಾಕ್ಷಸನಂತಾಗಿದ್ದೇಕೆ?
ಕನ್ನಡ ಚಿತ್ರರಂಗದಲ್ಲಿ ಈಗ ಪ್ರೀಕ್ವೆಲ್ ಸಿನಿಮಾಗಳ ಟ್ರೆಂಡ್ ಶುರುವಾಗಿದೆ. ರಿಷಬ್ ಶೆಟ್ಟಿ 'ಕಾಂತಾರ' ಚಿತ್ರದ ಹಿಂದಿನ ಕಥೆಯನ್ನು ಹೇಳಲು ಹೊರಟಿದ್ದಾರೆ. ಅದೇ ರೀತಿ ಇದು ಕೂಡ 'ಮಫ್ತಿ' ಸೀಕ್ವೆಲ್ ಅಲ್ಲ. ಬದಲಿಗೆ ಪ್ರೀಕ್ವೆಲ್. ಶಿವಣ್ಣ 'ಮಫ್ತಿ' ಚಿತ್ರದಲ್ಲಿ ಒಳ್ಳೆ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಎದುರಾಳಿಗಳ ಪಾಲಿಗೆ ನರ ರೂಪದ ರಾಕ್ಷಸನಾಗಿದ್ದಾರೆ. ಅಷ್ಟಕ್ಕೂ ಬೈರತಿ ರಣಗಲ್ ಇಷ್ಟೊಂದು ಕ್ರೂರಿ ಆಗಲು ಕಾರಣ ಏನು? ಆತ ಅಷ್ಟು ದೊಡ್ಡ ಮಾಫಿಯಾ ಡಾನ್ ಆಗಿದ್ದು ಯಾಕೆ? ಎನ್ನುವ ಕಥೆಯನ್ನು ಈ ಬಾರಿ ಹೇಳಲು ನರ್ತನ್ ಮುಂದಾಗಿದ್ದಾರೆ.

ಶೀಘ್ರದಲ್ಲೇ ಸಿನಿಮಾ ಮುಹೂರ್ತ
3 ವರ್ಷಗಳ ಹಿಂದೆಯೇ ನರ್ತನ್ ಈ ಸಿನಿಮಾ ಕಥೆ ಸಿದ್ದಪಡಿಸಿದ್ದರು. ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸಿನಿಮಾ ತಡವಾಯಿತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇದೇ ಶಿವಣ್ಣ 125ನೇ ಸಿನಿಮಾ ಆಗಬೇಕಿತ್ತು. ತಮ್ಮ ಬ್ಯಾನರ್ನ ಮೊದಲ ಚಿತ್ರ ಇದೇ ಆಗಬೇಕು ಎಂದು ಶಿವಣ್ಣ ಅಂದುಕೊಂಡಿದ್ದರು. ಭೈರತಿ ರಣಗಲ್ ಟೈಟಲ್ ಕೂಡ ರಿಜಿಸ್ಟರ್ ಮಾಡಿಸಿದ್ದರು. ಈಗ ಆ ಸಿನಿಮಾ ಚಿತ್ರೀಕರಣಕ್ಕೆ ಕಾಲ ಕೂಡ ಬಂದಿದೆ. ಇನ್ನೆರಡು ತಿಂಗಳಲ್ಲಿ ಸಿನಿಮಾ ಶುರು ಮಾಡುವುದಾಗಿ ನರ್ತನ್ ಹೇಳಿದ್ದಾರೆ.

'ಗೀತಾ ಪಿಕ್ಚರ್ಸ್' ಸಂಸ್ಥೆಯ 2ನೇ ಚಿತ್ರ
ಸದ್ಯ ಶಿವಣ್ಣ 'ಕರಟಕ ದಮನಕ' ಹಾಗೂ ಘೋಸ್ಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ಮೂರ್ನಾಲ್ಕು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ತಮ್ಮದೇ ಬ್ಯಾನರ್ನಲ್ಲಿ ನಿರ್ಮಿಸಿದ 'ವೇದ' ಡಿಸೆಂಬರ್ 23ಕ್ಕೆ ತೆರೆಗಪ್ಪಳಿಸಿ ಸೂಪರ್ ಹಿಟ್ ಲಿಸ್ಟ್ ಸೇರಿಕೊಂಡಿದೆ. 'ವೇದ' ಸಕ್ಸಸ್ ಬೆನ್ನಲ್ಲೇ ಗೀತಾ ಪಿಕ್ಚರ್ಸ್ ಬ್ಯಾನರ್ನ 2ನೇ ಸಿನಿಮಾ ಶುರುವಾಗುತ್ತಿದೆ. ಭೈರತಿ ರಣಗಲ್ ಟೈಟಲ್ನಲ್ಲಿ ಸಿನಿಮಾ ಶುರುವಾಗುವ ಸಾಧ್ಯತೆಯಿದೆ. ಕೆಲವೇ ನಿಮಿಷಗಳಲ್ಲಿ ಇದಕ್ಕೆ ಉತ್ತರ ಸಿಗಲಿದೆ.


Click it and Unblock the Notifications











