'ಭೈರತಿ ರಣಗಲ್' ಬಳಿಕ ನರ್ತನ್ ಮುಂದಿನ ಸಿನಿಮಾ ಯಾವ್ದು? ಹೀರೋ ಯಾರು?
ಶಿವರಾಜ್ಕುಮಾರ್ ನಟನೆಯ 'ಭೈರತಿ ರಣಗಲ್' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೀತಿದೆ. ಸೆಕೆಂಡ್ ವೀಕೆಂಡ್ ಕೂಡ ಸಿನಿಮಾ ಭರ್ಜರಿ ಗಳಿಕೆ ಮಾಡಿದೆ. ಈ ವಾರವೇ ತಮಿಳು, ತೆಲುಗಿಗೂ ಡಬ್ ಆಗಿ ತೆರೆಗಪ್ಪಳಿಸಲಿದೆ. ನರ್ತನ್ ಮತ್ತೊಮ್ಮೆ ಗೆದ್ದು ಬೀಗಿದ್ದಾರೆ. ಅದೇ ಕಾರಣಕ್ಕೆ ಅವರ ಮುಂದಿನ ಸಿನಿಮಾ ಬಗ್ಗೆ ಭಾರೀ ಕುತೂಹಲ ಮೂಡಿದೆ.
'ಮಫ್ತಿ' ಬೆನ್ನಲ್ಲೇ ಯಶ್ ನಟನೆಯ ಚಿತ್ರಕ್ಕೆ ನರ್ತನ್ ಆಕ್ಷನ್ ಕಟ್ ಹೇಳಬೇಕಿತ್ತು. ಒಂದಷ್ಟು ದಿನ ಈ ಬಗ್ಗೆ ಚರ್ಚೆ ಕೂಡ ಆಗಿತ್ತು. ಯಶ್19 ಚಿತ್ರಕ್ಕೆ ನರ್ತನ್ ಸಾರಥ್ಯ ವಹಿಸುವುದು ಪಕ್ಕಾ ಎನ್ನಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಕಥೆ ಓಕೆ ಆಗದೇ ಯಶ್ 'ಟಾಕ್ಸಿಕ್' ಚಿತ್ರ ಒಪ್ಪಿಕೊಂಡರು. ಹಾಗಾಗಿ ನರ್ತನ್ ಮತ್ತೆ ಶಿವಣ್ಣನ ಜೊತೆಗೆ 'ಮಫ್ತಿ' ಪ್ರೀಕ್ವೆಲ್ ಪ್ರಾರಂಭಿಸುವಂತಾಯಿತು.

ಇದೀಗ 'ಭೈರತಿ ರಣಗಲ್' ಚಿತ್ರವನ್ನು ಅದ್ಭುತವಾಗಿ ಕಟ್ಟಿಕೊಟ್ಟು ನರ್ತನ್ ತಮ್ಮನ್ನು ತಾವು ಸಾಬೀತು ಮಾಡಿಕೊಂಡಿದ್ದಾರೆ. ಮುಂದಿನ ಸಿನಿಮಾ ಬಗ್ಗೆ ನಿರೀಕ್ಷೆ ಮೂಡುವಂತೆ ಮಾಡಿದ್ದಾರೆ. ಕನ್ನಡದ ಮೊದಲ ಪ್ರೀಕ್ವೆಲ್ ಚಿತ್ರವನ್ನು ಗೆಲ್ಲಿಸಿದ್ದಾರೆ. 'ಮಫ್ತಿ' ರೇಂಜ್ಗೆ ಇಲ್ಲದೇ ಇದ್ದರೂ ಒಂದೊಳ್ಳೆ ಚಿತ್ರವನ್ನು ಪ್ರೇಕ್ಷಕರ ಮುಂದೆ ಇಟ್ಟು ಗಮನ ಸೆಳೆದಿದ್ದಾರೆ. ಅದೇ ಕಾರಣಕ್ಕೆ ನರ್ತನ್ ಮುಂದಿನ ಸಿನಿಮಾ ಯಾವ್ದು? ಹೀರೋ ಯಾರು? ಎನ್ನುವ ಚರ್ಚೆ ಶುರುವಾಗಿದೆ.
ಸ್ಟಾರ್ ನಿರ್ದೇಶಕರು ಸ್ಟಾರ್ ನಟರ ಜೊತೆ ಕೈ ಜೋಡಿಸಿದರೆ ಆ ಸಿನಿಮಾ ಬಗ್ಗೆ ಸಹಜವಾಗಿಯೇ ನಿರೀಕ್ಷೆ ಹುಟ್ಟಿಕೊಳ್ಳುತ್ತದೆ. ಇನ್ನು ನರ್ತನ್ ಬಹಳ ಹಿಂದಿನಿಂದ ತೆಲುಗು ನಟ ರಾಮ್ಚರಣ್ ಜೊತೆ ಸಿನಿಮಾ ಮಾಡಲು ಚರ್ಚಿಸುತ್ತಿದ್ದಾರೆ. ಎರಡ್ಮೂರು ಬಾರಿ ಹೈದರಾಬಾದ್ಗೆ ತೆರಳಿ ಮಾತುಕತೆ ನಡೆಸಿದ್ದರು. ಆದರೆ ರಾಮ್ಚರಣ್ ಬೇರೆ ಬೇರೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಮೆಗಾಪವರ್ ಸ್ಟಾರ್ ನಟನೆಯ 'ಗೇಮ್ ಚೇಂಜರ್' ಸಂಕ್ರಾಂತಿಗೆ ರಿಲೀಸ್ ಆಗುತ್ತಿದೆ. ಬಳಿಕ ಬುಚ್ಚಿಬಾಬು ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಮೈಸೂರಿನಲ್ಲಿ ಈ ಸಿನಿಮಾ ಚಿತ್ರೀಕರಣ ನಡೀತಿದೆ. ಬಳಿಕ ಸುಕುಮಾರ್ ನಿರ್ದೇಶನದ ಚಿತ್ರದಲ್ಲಿ ನಟಿಸಬೇಕಿದೆ. ಹಾಗಾಗಿ ಸದ್ಯಕ್ಕೆ ರಾಮ್ಚರಣ್ ಜೊತೆ ನರ್ತನ್ ಕೆಲಸ ಮಾಡುವುದು ಕಷ್ಟ ಕಷ್ಟ. ಅಂದಹಾಗೆ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನರ್ತನ್ ಮುಂದಿನ ಸಿನಿಮಾ ಮಾಡಲಿದ್ದಾರೆ.
ಹೌದು. ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ ಕೆವಿಎನ್ ಸಂಸ್ಥೆ ನರ್ತನ್ಗೆ ಅಡ್ವಾನ್ಸ್ ಕೊಟ್ಟು ಬುಕ್ ಮಾಡಿದೆ. ರಾಮ್ಚರಣ್ ಚಿತ್ರವನ್ನು ಇದೇ ಸಂಸ್ಥೆ ನಿರ್ಮಾಣ ಮಾಡಬೇಕಿದೆ. ಆದರೆ ಸದ್ಯಕ್ಕೆ ಅದು ಸಾಧ್ಯವಾಗುತ್ತಿಲ್ಲ. ಒಟ್ಟಾರೆ ಕೆವಿಎನ್ ಸಂಸ್ಥೆಗೆ ಮುಂದಿನ ಸಿನಿಮಾ ನಿರ್ದೇಶನ ಮಾಡಬೇಕಿದೆ. ನರ್ತನ್ ನಿರ್ದೇಶನದಲ್ಲಿ ಯುವ ರಾಜ್ಕುಮಾರ್, ಸುದೀಪ್, ಧ್ರುವ ಸರ್ಜಾ ಯಾರಾದರೂ ಒಬ್ಬರೂ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿತ್ತು. ಆದರೆ ಯಾವುದು ಸದ್ಯಕ್ಕೆ ಫೈನಲ್ ಆಗಲಿಲ್ಲ.
ತಮಿಳು ನಟ ಸೂರ್ಯ ಜೊತೆಗೂ ಸಿನಿಮಾ ಮಾಡಲು ನರ್ತನ್ ಮಾತುಕತೆ ನಡೆಸುತ್ತಿದ್ದಾರೆ. ಎಲ್ಲವೂ ಇನ್ನಷ್ಟೇ ಫೈನಲ್ ಆಗಬೇಕಿದೆ. ಸದ್ಯ 'ಭೈರತಿ ರಣಗಲ್' ಸಕ್ಸಸ್ ಸಂಭ್ರಮದಲ್ಲಿ ನಿರ್ದೇಶಕರು ತೇಲುತ್ತಿದ್ದಾರೆ. ತೆಲುಗು, ತಮಿಳಿನಲ್ಲಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು ಆ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲೇ ಹೊಸ ಸಿನಿಮಾ ಘೋಷಣೆ ಮಾಡುವ ಸಾಧ್ಯತೆಯಿದೆ. ಒಟ್ಟಾರೆ ಮಾಸ್ ಆಡಿಯನ್ಸ್ ಪಲ್ಸ್ ಗೊತ್ತಿರುವ ನರ್ತನ್ ಸ್ಟಾರ್ ನಟರ ಕಾಂಬಿನೇಷನ್ನಲ್ಲಿ ಸಿನಿಮಾ ಮಾಡಿದರೆ ಸಹಜವಾಗಿಯೇ ಹೈಪ್ ಶುರುವಾಗುತ್ತದೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ನರ್ತನ್, ನನ್ನ ಮುಂದಿನ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿಸಲಿದೆ. ಆ ಸಂಸ್ಥೆ ಹೀರೊ ಯಾರು ಎಂದು ಹೇಳುತ್ತಾರೋ ಅವರೊಟ್ಟಿಗೆ ಸಿನಿಮಾ ಮಾಡುತ್ತೇನೆ, ಅದು ಸೂರ್ಯನೋ, ರಾಮ್ಚರಣ್ ಅಥವಾ ಕನ್ನಡ ಕಲಾವಿದರು ಆಗಿದ್ದರೂ ಸರಿ ಎಂದು ಪುನರುಚ್ಚರಿಸಿದ್ದಾರೆ. ಎರಡು ವರ್ಷಗಳ ಬಳಿಕ ಶಿವಣ್ಣನ ಜೊತೆ 'ಮಫ್ತಿ'-2 ಚಿತ್ರವನ್ನು ನರ್ತನ್ ಮಾಡಲಿದ್ದಾರೆ.


Click it and Unblock the Notifications











