'ಪುಲಿಕೇಶಿ'ಯಾಗಿ ಸರ್ಜಾ ಕುಟುಂಬದ ಕುಡಿ ಭರತ್
ಅರ್ಜುನ್ ಸರ್ಜಾ ಕುಟುಂಬದ ಮತ್ತೊಂದು ಕುಡಿ ಈ ವಾರ ಸ್ಯಾಂಡಲ್ ವುಡ್ ಗೆ ರಂಗಪ್ರವೇಶ ಮಾಡುತ್ತಿದೆ. ಕಸರತ್ತು ಮಾಡಿ ಮೈಹುರಿಗಟ್ಟಿದ ದೇಹ, ಬಲಿಷ್ಠ ತೋಳುಗಳು, ಎತ್ತರದ ನಿಲುವಿನ ಭರತ್ ಸರ್ಜಾ ಅಭಿನಯ 'ಪುಲಿಕೇಶಿ'ಯಾಗಿ ಈ ವಾರ (ಏ.25) ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಅಳಿಯ ಭರತ್ ಸರ್ಜಾ. ಈಗಾಗಲೆ ಸರ್ಜಾ ಕುಟುಂಬದ ಕುಡಿಗಳಾದ ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಕನ್ನಡ ಬೆಳ್ಳಿತೆರೆ ಮೇಲೆ ತಮ್ಮದೇ ಆದಂತಹ ಛಾಪು ಮೂಡಿಸಿದ್ದಾರೆ. ಈಗ ಆಕ್ಷನ್ ಹೀರೋ ಆಗಿ ಭರತ್ ಸರ್ಜಾ ಎಂಟ್ರಿಕೊಡುತ್ತಿರುವುದು ಸ್ಯಾಂಡಲ್ ವುಡ್ ನಲ್ಲಿ ಕುತೂಹಲ ಮೂಡಿಸಿದೆ. [ಅರ್ಜುನ್ ಸರ್ಜಾ ಹನುಮ ದೇವಾಲಯ ಚಿತ್ರಗಳು]

ಮಂಜುನಾಥ್ ಬಾಬು ನಿರ್ದೇಶಿಸಿರುವ ಪುಲಿಕೇಶಿ ಚಿತ್ರದಲ್ಲಿ ಭರತ್ ಅವರದು ಪಕ್ಕಾ ಮಾಸ್ ರೋಲ್. ಖಡಕ್ ಪೊಲೀಸ್ ಆಫೀಸರ್ ಆಗಿ ಅವರು ಚಿತ್ರದಲ್ಲಿ ಕಾಣಿಸಲಿದ್ದಾರೆ. ಈ ಮೂಲಕ ಅವರು ಆಕ್ಷನ್ ಹೀರೋ ಆಗಿ ಕನ್ನಡಕ್ಕೆ ಪರಿಚಯವಾಗುತ್ತಿದ್ದಾರೆ.
ಈ ಚಿತ್ರವನ್ನು ವೀರೇಶ್ ಹಾಗೂ ಗಿರೀಶ್ ನಿರ್ಮಿಸುತ್ತಿದ್ದು ಚಿತ್ರದ ನಾಯಕಿ 'ಜಿಂಕೆಮರಿ' ರೇಖಾ. ಚಿತ್ರಕ್ಕೆ ರಾಜೇಶ್ ರಾಮನಾಥ್ ಸಂಗೀತ ಹಾಗೂ ಬಿ ಗೌಡ ಛಾಯಾಗ್ರಹಣವಿದೆ. ಭರತ್ ಸರ್ಜಾ ಹಾಗೂ ರೇಖಾ ನಾಯಕ-ನಾಯಕಿಯಾಗಿರುವ ಪುಲಿಕೇಶಿಯಲ್ಲಿ ಪ್ರಮುಖ ಪಾತ್ರಗಳಲ್ಲಿ ದೇವರಾಜ್, ಪದ್ಮಾ ವಾಸಂತಿ, ರಾಜು ತಾಳಿಕೋಟೆ, ಮೋಹನ್, ಜಿ ಸುರೇಶ್ ಮುಂತಾದವರು ನಟಿಸಿದ್ದಾರೆ.
ಒಟ್ಟಿನಲ್ಲಿ ನೆರೆಭಾಷೆ ತಮಿಳಿನಲ್ಲಿ ಮಿಂಚಿರುವ ಕನ್ನಡಿಗ ಅರ್ಜುನ್ ಸರ್ಜಾ, ತಮ್ಮ ಸಹೋದರಿಯ ಮೂರೂ ಮಕ್ಕಳಾದ ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಹಾಗೂ ಭರತ್ ಸರ್ಜಾರನ್ನು ಕನ್ನಡದ ಮೂಲಕವೇ ಪರಿಚಯಿಸಿ ಗಮನಸೆಳೆದಿದ್ದಾರೆ. 'ನೋ ಎಕ್ಸ್ ಕ್ಯೂಸ್' ಎಂಬುದು ಚಿತ್ರದ ಅಡಿಬರಹ. (ಏಜೆನ್ಸೀಸ್)


Click it and Unblock the Notifications











