'ಡಯಾನ ಹೌಸ್' ನಂತರ 'ಕಿಷ್ಕಿಂಧೆ' ಆರಂಭಿಸಿದ ಭರತ್ ನಂದಾ
ಕಳೆದ ವರ್ಷ 'ಡಯಾನ ಹೌಸ್' ಎಂಬ ಹಾರರ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಗಮನ ಸೆಳೆದಿದ್ದ ನಿರ್ದೇಶಕ ಭರತ್ ನಂದಾ ಈಗ ಮತ್ತೊಂದು ವಿಭಿನ್ನ ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ.
ಮೊದಲ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಆದ್ರೆ, ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿಕೊಳ್ಳುವಲ್ಲಿ ಯಶಸ್ಸು ಕಂಡಿತ್ತು. ಅದೇ ವಿಶ್ವಾಸದಿಂದ ಹೊಸ ಚಿತ್ರವನ್ನ ಆರಂಭಿಸಿದ್ದಾರೆ. ಈ ಚಿತ್ರದ ಹೆಸರು 'ಕಿಷ್ಕಿಂಧೆ'.
ಇತ್ತೀಚಿಗಷ್ಟೆ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನ್ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅನಾವರಣಗೊಳಿಸಿ, ಚಿತ್ರತಂಡಕ್ಕೆ ಶುಭಕೋರಿದ್ದರು. 'ನನಗೆ ಆಂಜನೇಯನ ಸಿನಿಮಾಗಳು ಅಂದ್ರೆ ತುಂಬಾ ಇಷ್ಟ. ಇದು ಕೂಡ ಅದೇ ಹೆಸರಿನ ಸಿನಿಮಾ. ಒಳ್ಳೆಯದಾಗಲಿ, ಬೇಗ ತೆರೆಮೇಲೆ ಬರಲಿ' ಎಂದು ಶಿವಣ್ಣ ಸಂತಸ ವ್ಯಕ್ತಪಡಿಸಿದರು.

ಅಂದ್ಹಾಗೆ, 'ಕಿಷ್ಕಿಂಧೆ' ಐವರು ಸ್ನೇಹಿತರ ನಡುವೆ ನಡೆಯುವ ಕಥೆಯಾಗಿದೆ. ಐವರು ಮಾಡುವ ಕಪಿಚೇಷ್ಟೆಗಳ ಸುತ್ತಾ ಚಿತ್ರಕಥೆಯನ್ನ ಮಾಡಲಾಗಿದ್ದು, ತುಂಬಾ ಮನರಂಜನೆಯಿಂದ ಕೂಡಿದೆಯಂತೆ.
ಮಾರುತಿ ಮೂವಿ ಮೇಕರ್ಸ್ ಬ್ಯಾನರ್ ನಲ್ಲಿ ಸೋಮಶೇಖರ್ ಎಂಬುವವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಸಹ ನಿರ್ಮಾಪಕರಾಗಿ ಕೃಷ್ಣ ಕೆಲಸ ಮಾಡಲಿದ್ದಾರೆ. ಇನ್ನುಳಿದಂತೆ ಚಿತ್ರದ ಕಲಾವಿದರು ಹಾಗೂ ಚಿತ್ರೀಕರಣಕ್ಕೆ ಸಂಬಂಧಪಟ್ಟಂತೆ ಮಾಹಿತಿಯನ್ನ ಸದ್ಯದಲ್ಲೇ ಬಹಿರಂಗಪಡಿಸಲಿದ್ದಾರಂತೆ.


Click it and Unblock the Notifications











