ವಿಷ್ಣುವರ್ಧನ್ ಸ್ಮಾರಕ ಶೀಘ್ರವೇ ಪೂರ್ಣಗೊಳ್ಳಲಿದೆ: ಭಾರತಿ ವಿಷ್ಣುವರ್ಧನ್
ಮುಂದಿನ ವರ್ಷದ ಸೆಪ್ಟೆಂಬರ್ ವೇಳೆಗೆ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ನಟಿ ಭಾರತಿ ವಿಷ್ಣುವರ್ಧನ್ ಹೇಳಿದರು.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದಲೂ ಯಾವ ಕೆಲಸಗಳು ಸಾಗುತ್ತಿಲ್ಲ. ಆದರೆ ಮುಂದಿನ ವರ್ಷ ವಿಷ್ಣು ಸ್ಮಾರಕ ನಿರ್ಮಾಣವಾಗಲಿದ್ದು, ಈಗಾಗಲೇ ಸ್ಮಾರಕದ ಶೇ.60 ಕಾಮಗಾರಿ ಮುಗಿದಿದೆ. ನಿಮ್ಮ ಆಸೆಯಂತೆ ಸ್ಮಾರಕ ನಿರ್ಮಾಣ ಆಗುತ್ತಿದೆ. ಜನರ ಹಾಗೂ ಅಭಿಮಾನಿಗಳ ಆರೋಗ್ಯ ಮುಖ್ಯವಾಗಿದ್ದು, ಕೊರೊನ ನಿಮಿತ್ತ ನಿಮ್ಮ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಹೇಳಿದರು.
ನಟ ಅನಿರುದ್ಧ್ ಮಾತನಾಡಿ, ವಿಷ್ಣು ದಾದಾ ಅವರ ಸ್ಮಾರಕ ಮುಂದಿನ ಸೆಪ್ಟೆಂಬರ್ ಒಳಗೆ ಪೂರ್ಣಗೊಳ್ಳಲಿದೆ. ಈಗಾಗಲೇ ಕಾಮಗಾರಿ ಕೆಲಸ ಪ್ರಾರಂಭವಾಗಿದ್ದು, ಸರ್ಕಾರದಿಂದ ಸಂಪೂರ್ಣ ಬೆಂಬಲ ದೊರೆಯುತ್ತಿದೆ. ಸ್ಮಾರಕದಲ್ಲಿ ವಿಷ್ಣು ದಾದಾ ಅವರ 700ಕ್ಕೂ ಅಧಿಕ ಪೊಟೋ ಬಳಸಿ ಗ್ಯಾಲರಿ ನಿರ್ಮಾಣ. ಇನ್ನೂ ಅನೇಕ ಆಶ್ಚರ್ಯಕರ ವಿಚಾರಗಳು ಇರಲಿವೆ. ಅದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಜೊತೆಗೆ ರಂಗಭೂಮಿ ಶಿಬಿರಗಳು ಸಹ ಇಲ್ಲಿ ನಡೆಯಲಿದ್ದು, ಇಂಡಿಯನ್ ಫಿಲಂ ಟೆಲಿವಿಷನ್ ಇನ್ಸ್ಟಿಟ್ಯೂಟ್ನ ಶಾಖೆಯನ್ನು ಇಲ್ಲಿ ಪ್ರಾರಂಭಿಸುವ ಪ್ರಯತ್ನ ಇದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಆ ಕಾರ್ಯ ನಡೆಯಲಿದ್ದು, ಇದರ ಪ್ರಯತ್ನಗಳು ನಡೆಯುತ್ತಿದೆ ಎಂದರು.

ಅಲ್ಲದೇ ನಾಳೆ ಕರೆ ನೀಡಲಾಗಿರುವ ಕರ್ನಾಟಕ ಬಂದ್ ವಿಚಾರವಾಗಿಯೂ ಮಾತನಾಡಿದ ಅವರು, ಬಂದ್ ಎಲ್ಲದಕ್ಕೂ ಪರಿಹಾರ ಅಲ್ಲ, ಬಂದ್ ನಿಂದ ನಮ್ಮ ಹೋರಾಟ ಎಲ್ಲರಿಗೂ ತಿಳಿಯುತ್ತೆ. ಆದರೆ ಅದರಿಂದ ತುಂಬಾ ಜನರಿಗೆ ನಷ್ಟವಾಗುತ್ತೆ. ಯಾವುದೇ ಹೋರಾಟಕ್ಕೂ ಬಂದ್ ಉತ್ತರವಲ್ಲ. ಬೇರೆ ರೀತಿಯಲ್ಲಿ ಹೋರಾಟ ಮಾಡಬೇಕು ಈ ರೀತಿ ಬಂದ್ ಬೇಡ ಎಂದು ನಟ ಅನಿರುದ್ಧ್ ಹೇಳಿದರು.
ಇನ್ನೂ ಇದಕ್ಕೂ ಮುನ್ನ ಇಂದು ನಟ ದಿ.ವಿಷ್ಣುವರ್ಧನ್ ಅವರ 12ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಮೈಸೂರಿನ ಉದ್ಬುರಿನಲ್ಲಿ ವಿಷ್ಣು ಸಮಾಧಿ ಬಳಿ ವಿಷ್ಣುವರ್ಧನ್ ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿದರು. ನಟಿ ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ್ ಅಪಾರ ಸಂಖ್ಯೆಯ ಅಭಿಮಾನಿಗಳ ಜೊತೆಗೂಡಿ ಪೂಜೆ ಸಲ್ಲಿಸಿದರು. ಇದೇ ವೇಳೆ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ಸಾಮಗ್ರಿಗಳನ್ನ ವಿತರಿಸಲಾಯಿತು.


Click it and Unblock the Notifications











