ಆಗಸ್ಟ್ನಲ್ಲಿ ಬರುತ್ತಾರೆ.. ಭಾವ ಭಾಮೈದರು
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಪ್ರಕಾಶ್ ರೈ ಅಭಿನಯದ ಅದ್ಧೂರಿ ಚಿತ್ರ ಭಾವ ಭಾಮೈದ ಆಗಸ್ಟ್ ತಿಂಗಳಲ್ಲಿ ತೆರೆ ಕಾಣಲಿದೆ. ರಾಮು ಎಂಟರ್ ಪ್ರೆೃಸಸ್ ಲಾಂಛನದಲ್ಲಿ ರಾಮು ನಿರ್ಮಿಸುತ್ತಿರುವ ಚಿತ್ರಕ್ಕೆ ಅರ್ಜುನ್ ಸರ್ಜಾ ಅವರ ಸೋದರ ಕಿಶೋರ್ ಸರ್ಜಾ ನಿರ್ದೇಶನ ಇದೆ.
ಹಂಸಲೇಖರ ಸಾಹಿತ್ಯ, ಸಾಹುಲ್ ಸಾಹಸ, ರಿಚರ್ಡ್ ಲೂಯಿಸ್ ಸಂಭಾಷಣೆ, ಅಶೋಕ್ ಕಶ್ಯಪ್ ಛಾಯಾಗ್ರಹಣ ಇದೆ. ಮನೋಜ್ ಕುಮಾರ್ ಕಥೆ ಒದಗಿಸಿದ್ದಾರೆ. ಉಳಿದ ತಾರಾಗಣದ್ಲಿ ರಂಭಾ, ಜಯಂತಿ, ವಿನಯ ಪ್ರಸಾದ್, ರಕ್ಷ, ಲೋಕನಾಥ್, ಸಾಧುಕೋಕಿಲ, ಶೋಭರಾಜ್, ಲಕ್ಷ್ಮಣ್, ಕರಿಬಸವಯ್ಯ, ಬಿರಾದಾರ್ ಮೊದಲಾದವರಿದ್ದಾರೆ.
ಬರಲಿದ್ದಾರೆ ಮೂವರು : ಆಗಸ್ಟ್ನಲ್ಲಿ ಭಾವ ಭಾಮೈದ ತೆರೆಕಾಣಲಿದ್ದರೆ, ಜುಲೈನಲ್ಲಿ ನಾಲ್ಕು ಚಿತ್ರಗಳು ತೆರೆಕಾಣಲು ಹವಣಿಸುತ್ತಿವೆ. ಈ ಪೈಕಿ ಹುಚ್ಚನ ರಂಗ ಪ್ರವೇಶ ಆಗಿದೆ. ಜೇನುಗೂಡು ದುಂಬಿಗಳು, ಕುಳ್ಳರ ಲೋಕದ ಚಿಣ್ಣರು, ಕಾನೂನು ಕಲಿಗಳು ತೆರೆಗೆ ಬರಲು ತವಕಿಸುತ್ತಿದ್ದಾರೆ.
ಜೇನುಗೂಡು : ಕೆ. ಮಂಜು ನಿರ್ಮಿಸಿ ಎಸ್. ಉಮೇಶ್ ನಿರ್ದೇಶಿಸಿರುವ ಅವಿಭಕ್ತ ಕುಟುಂಬದ ನೈಜ ಸನ್ನಿವೇಶಗಳನ್ನು ಒಳಗೊಂಡ ಚಿತ್ರ ಜೇನುಗೂಡು ಜುಲೈ ತಿಂಗಳಲ್ಲಿ ತೆರೆಕಾಣಲು ಸಜ್ಜಾಗಿದೆ. ದೇವರಾಜ್, ಸಿತಾರಾ, ಕುಮಾರ ಗೋವಿಂದು, ಶ್ರುತಿ, ಮೋಹನ್, ರೀತುಸಿಂಗ್, ಉಮಾಶ್ರೀ, ಕರಿಬಸವಯ್ಯ, ಬ್ಯಾಂಕ್ ಜನಾರ್ದನ್ ಚಿತ್ರದ ತಾರಾಬಳಗದಲ್ಲಿದ್ದಾರೆ.
ಕುಳ್ಳರ ಲೋಕ : ವಾಸುದೇವ ಶಾನುಭೋಗ್, ಈಶಣ್ಣ, ರಾಜಣ್ಣ ಜತೆಯಾಗಿ ನಿರ್ಮಿಸುತ್ತಿರುವ ಕುಳ್ಳರ ಲೋಕ ಚಿತ್ರೀಕರಣ ಮುಗಿಸಿ, ರಜತ ಪರದೆಯ ಮೇಲೆ ರಾರಾಜಿಸಲು ಸಜ್ಜಾಗಿದೆ. ಶರಣ್ ದಾವಣಗೆರೆ ನಿರ್ದೇಶಿಸಿರುವ ಈ ಚಿತ್ರದಲ್ಲಿ 400 ಕ್ಕೂ ಹೆಚ್ಚು ಮಂದಿ ಕುಳ್ಳರು ಅಭಿನಯಿಸಿದ್ದಾರೆ. ವಿನೋದ್ ಆಳ್ವ, ನಿಹಾರಿಕಾ, ರಾಮಕೃಷ್ಣ, ದಿಲೀಪ್, ಹಳ್ಳಿಮೇಸ್ಟ್ರು ಚಿತ್ರದ ಕಪ್ಪೇರಾಯ ಮೊದಲಾದವರು ಇತರ ತಾರಾಗಣದಲ್ಲಿದ್ದಾರೆ. ಚಿತ್ರ ಪನೋರಮಕ್ಕಾಗಿ ತೆರಳಿದೆಯಂತೆ. ಕೊಂಚ ಕಾದು, ಜುಲೈ ತಿಂಗಳಿನಲ್ಲೇ ಚಿತ್ರವನ್ನು ಬಿಡುಗಡೆ ಮಾಡುವ ಇರಾದೆ ನಿರ್ಮಾಪಕರದು.
ಕಾನೂನು : ಹುಲಿಯಾ ಗೋವಿಂದು ನಿರ್ಮಿಸಿ, ಜೆ.ಜೆ. ಕೃಷ್ಣ ನಿರ್ದೇಶಿಸಿರುವ ಸಾಹಸ ಪ್ರಧಾನ ಹಾಗೂ ಸೆಂಟಿಮೆಂಟ್ ಮಿಶ್ರಿತ ಕಾನೂನು ಜುಲೈ ಎರಡನೇ ವಾರ ಇಲ್ಲವೆ ಮೂರನೇ ವಾರ ತೆರೆಕಾಣಲಿದೆ. ಬೆಂಕಿ - ಬಿರುಗಾಳಿ - ಬಿರುಮಳೆ ಒಟ್ಟಾರೆ ಚಂಡಮಾರುತದಂತ ಸ್ವಭಾವವುಳ್ಳ ದೇವರಾಜ್, ಚರಣ್ರಾಜ್, ಬಿ.ಕೆ. ಪಾಟೀಲ್ ಎಂಬ ಮೂವರು ನಾಯಕರೂ ನ್ಯಾಯದೇವತೆಯ ಸುಪುತ್ರರಾಗಲು ಬಯಸುತ್ತಾರೆ. ಹೆತ್ತ ತಾಯಿಯ ಪ್ರೀತಿಯ ಪುತ್ರರು, ನ್ಯಾಯದೇವತೆಯ ಸುಪುತ್ರರಾಗಿ, ಯಶಸ್ವಿಯಾಗಿದ್ದು ಹೇಗೆ ಎಂದು ಚಿತ್ರನೋಡಿ ತಿಳಿಯಬೇಕು.


Click it and Unblock the Notifications