'ಕಾಂತಾರ' ಚಿತ್ರದಲ್ಲಿ ಭೂತಕೋಲದ ಬಗ್ಗೆ ಸುಳ್ಳು ಹೇಳಲಾಗಿದೆ, ಸತ್ಯಾಂಶ ತೋರಿಸಿ ಎಂದ ನಟ ಚೇತನ್!

ಕಾಂತಾರ ಸದ್ಯ ಕರ್ನಾಟಕ ಮಾತ್ರವಲ್ಲದೆ ದೇಶವ್ಯಾಪಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಮೊದಲಿಗೆ ಕನ್ನಡದಲ್ಲಿ ಮಾತ್ರ ಬಿಡುಗಡೆಗೊಂಡಿದ್ದ ಕಾಂತಾರ ಚಿತ್ರವನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಎಂಬ ಕೂಗು ಪ್ರೇಕ್ಷಕ ವಲಯದಿಂದ ದೊಡ್ಡ ಮಟ್ಟದಲ್ಲಿ ಕೇಳಿ ಬಂದಿತ್ತು.
ಇನ್ನು ಚಿತ್ರದಲ್ಲಿ ನಿರ್ದೇಶಕ ರಿಷಬ್ ಶೆಟ್ಟಿ ಕರ್ನಾಟಕದ ಕರಾವಳಿ ಭಾಗದ ಜನರ ಆಚರಣೆಯಾದ ಭೂತಕೋಲ ಹಾಗೂ ದೈವದ ಅಂಶಗಳಿಗೆ ದೊಡ್ಡ ಪ್ರಾಮುಖ್ಯತೆಯನ್ನು ನೀಡಿದ್ದರು. ಈ ವಿಷಯವನ್ನು ಕೇವಲ ಕರ್ನಾಟಕದ ಜನರು ಮಾತ್ರವಲ್ಲದೆ ಇಡೀ ದೇಶದ ಸಿನಿಪ್ರೇಕ್ಷಕರು ಮುಕ್ತ ಮನಸ್ಸಿನಿಂದ ಸ್ವೀಕರಿಸಿದ್ದರು.
ಹಲವು ತೆಲುಗು ಹಾಗೂ ಹಿಂದಿ ಪ್ರೇಕ್ಷಕರು ಚಿತ್ರ ಹಿಂದೂ ಸಂಸ್ಕೃತಿಯನ್ನು ಅಚ್ಚುಕಟ್ಟಾಗಿ ತೋರಿಸಿದೆ, ಹಿಂದೂ ದೈವದ ಮಹತ್ವವನ್ನು ತೆರೆಮೇಲೆ ನಿರ್ದೇಶಕರು ತುಂಬಾ ಚೆನ್ನಾಗಿ ತೋರಿಸಿದ್ದಾರೆ ಎಂದೆಲ್ಲಾ ವಿಮರ್ಶೆಯನ್ನು ನೀಡಿದ್ದರು. ರಿಷಬ್ ಶೆಟ್ಟಿ ಕೂಡ ನನ್ನ ಧರ್ಮದ ದೈವದ ಬಗ್ಗೆ ಚಿತ್ರ ಮಾಡಲು ನನಗೆ ಹೆಮ್ಮೆಯಿದೆ ಹಾಗೂ ಅದನ್ನು ನಾನು ಆರಾಧಿಸುತ್ತೇನೆ ಎಂದು ಘಂಟಾಘೋಷವಾಗಿ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಹೇಳಿದ್ದರು. ಹೀಗೆ ಜನರ ಮೆಚ್ಚುಗೆಗೆ ಪಾತ್ರವಾಗಿರುವ ಕಾಂತಾರ ಚಿತ್ರದ ಕುರಿತು ಇದೀಗ ಚಂದನವನದ ನಟ ಚೇತನ್ ಅಹಿಂಸಾ ತಮ್ಮ ಪಾಲಿನ ವಿಮರ್ಶೆ ನೀಡಿದ್ದಾರೆ.

ಮೊದಲಿಗೆ ಚಿತ್ರದ ಯಶಸ್ಸನ್ನು ಹೊಗಳಿದ ಚೇತನ್
ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಕಾಂತಾರ ಚಿತ್ರದ ಕುರಿತು ಬರೆದುಕೊಂಡಿರುವ ಚೇತನ್ ಅಹಿಂಸಾ ಮೊದಲಿಗೆ ಕಾಂತಾರ ಚಿತ್ರ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಮುಂದಿನ ಸಾಲುಗಳಲ್ಲಿ ಅವರು ಕಾಂತಾರ ಚಿತ್ರದ ವಿರುದ್ಧವಾಗಿ ಬರೆದುಕೊಂಡು ತಮ್ಮ ಬೇಸರವನ್ನು ಹೊರಹಾಕಿದ್ದಾರೆ.

ಚಿತ್ರದಲ್ಲಿ ಭೂತಕೋಲದ ಕುರಿತು ಸುಳ್ಳು ಹೇಳಿದ್ದಾರೆ
ಕಾಂತಾರ ಚಿತ್ರದ ಬಹು ಮುಖ್ಯ ಅಂಶವಾದ ಭೂತಕೋಲದ ಕುರಿತು ಬರೆದುಕೊಂಡಿರುವ ಚೇತನ್ ಅಹಿಂಸಾ ರಿಷಬ್ ಶೆಟ್ಟಿ ಅವರು ಚಿತ್ರದಲ್ಲಿ ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರಿದ್ದು ಎಂದು ಹೇಳಿದ್ದಾರೆ, ಆದರೆ ಇದು ನಿಜವಲ್ಲ ಎಂದಿದ್ದಾರೆ. ಇನ್ನೂ ಮುಂದುವರಿದು ಬರೆದುಕೊಂಡಿರುವ ಚೇತನ್ ಅಹಿಂಸಾ ಪಂಬದ / ನಲಿಕೆ / ಪರವರ ಬಹುಜನ ಸಂಪ್ರದಾಯಗಳು ವೈದಿಕ ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕೂ ಮೊದಲೇ ಇದ್ದವು, ಹೀಗಾಗಿ ಅವು ಹಿಂದೂ ಧರ್ಮಕ್ಕೆ ಸೇರುವುದಿಲ್ಲ ಅವು ಹಿಂದೂ ಧರ್ಮಕ್ಕೂ ಮುನ್ನ ಇದ್ದ ಮೂಲನಿವಾಸಿಗಳ ಆಚರಣೆ ಎಂಬರ್ಥದಲ್ಲಿ ಚೇತನ್ ಅಹಿಂಸಾ ತಿಳಿಸಿದ್ದಾರೆ.

ಸತ್ಯಾಂಶವನ್ನೇ ತೋರಿಸಿ
ಹೀಗೆ ಭೂತಕೋಲ ಹಿಂದೂ ಧರ್ಮಕ್ಕೆ ಸೇರಿದ್ದಲ್ಲ ಅದು ಹಿಂದೂ ಧರ್ಮಕ್ಕಿಂತ ಮುಂಚೆಯಿಂದಲೂ ಜಾರಿಯಲ್ಲಿರುವ ಆಚರಣೆ ಎಂದಿರುವ ಚೇತನ್ ಅಹಿಂಸಾ ಮೂಲನಿವಾಸಿಗಳ ಆಚರಣೆಯನ್ನು ಪರದೆಯ ಮೇಲಾಗಲಿ ಅಥವಾ ಹೊರಗಡೆಯಾಗಲಿ ಸತ್ಯ ಸಂಗತಿಗಳೊಂದಿಗೆ ತೋರಿಸಿ ಎಂದು ಬರೆದುಕೊಂಡಿದ್ದಾರೆ.

ಚೇತನ್ ಪೋಸ್ಟ್ ಕುರಿತು ವ್ಯಕ್ತವಾಯ್ತು ಮಿಶ್ರ ಪ್ರತಿಕ್ರಿಯೆ
ಹೀಗೆ ಭೂತಕೋಲ ಮೂಲನಿವಾಸಿಗಳ ಆಚರಣೆ ಅದು ಹಿಂದೂ ಧರ್ಮಕ್ಕೆ ಸೇರುವುದಿಲ್ಲ ಎಂದಿರುವ ಚೇತನ್ ಅಹಿಂಸಾ ಅವರ ಹೇಳಿಕೆ ಕುರಿತು ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ನೀವು ಹೇಳುತ್ತಿರುವುದು ಸತ್ಯ ಭೂತಕೋಲ ಹಿಂದೂ ಧರ್ಮಕ್ಕೂ ಮುನ್ನ ಇದ್ದ ಆಚರಣೆ ಎಂದಿದ್ದರೆ, ಇನ್ನೂ ಕೆಲವರು ನೀವೇಕೆ ಚಿತ್ರವೊಂದನ್ನು ಮಾಡಿ ಮೂಲನಿವಾಸಿಗಳ ಆಚರಣೆ ಎಂದರೇನು, ಅದು ಹೇಗಿತ್ತು ಎಂಬುದನ್ನು ಜನಕ್ಕೆ ತಿಳಿಸಬಾರದು ಎಂದು ಚೇತನ್ ಅಹಿಂಸಾ ಅವರ ಕಾಲೆಳೆದಿದ್ದಾರೆ.


Click it and Unblock the Notifications











