ರಿಷಬ್ - ರುಕ್ಮಿಣಿ ರೊಮ್ಯಾಂಟಿಕ್ ಸೀನ್ ಮಾಡಿಸುವಾಗ ಪ್ರಗತಿ ಮೇಡಂ ಬಂದುಬಿಟ್ರು- ಭೂಷಣ್
'ಕಾಂತಾರ- 1' ಚಿತ್ರದಲ್ಲಿ ರಿಷಬ್ ಶೆಟ್ಟಿ ಜೋಡಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಯುವರಾಣಿ ಕನಕವತಿ ಹಾಗೂ ಬುಡಕಟ್ಟು ಜನಾಂಗದ ಬೆರ್ಮೆ ನಡುವೆ ಪ್ರೀತಿ ಪ್ರೇಮ ಪ್ರಣಯದ ಸನ್ನಿವೇಶಗಳು ಚಿತ್ರದಲ್ಲಿದೆ. ರಿಷಬ್- ರುಕ್ಮಿಣಿ ನಡುವಿನ ರೊಮ್ಯಾಂಟಿಕ್ ಸೀನ್ ಚಿತ್ರೀಕರಣದ ವೇಳೆ ನಡೆದ ಘಟನೆಯನ್ನು ಡ್ಯಾನ್ಸ್ ಮಾಸ್ಟರ್ ಭೂಷಣ್ ನೆನಪಿಸಿಕೊಂಡಿದ್ದಾರೆ.
ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಚಿತ್ರಕ್ಕೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಚಿತ್ರ ಅಷ್ಟು ಚೆನ್ನಾಗಿ ಕಾಣಲು ಅವರ ಕೆಲಸ ಕೂಡ ಬಹಳ ಮುಖ್ಯ. ಕಳೆದ 5 ವರ್ಷಗಳಿಂದ ರಿಷಬ್ ಶೆಟ್ಟಿ ಜೊತೆಗೆ 'ಕಾಂತಾರ' ಜರ್ನಿಯಲ್ಲಿ ಪ್ರಗತಿ ಶೆಟ್ಟಿ ಕೂಡ ಇದ್ದಾರೆ. ಪ್ರೀಕ್ವೆಲ್ ಶೂಟಿಂಗ್ ಕುಂದಾಪುರದಲ್ಲಿ ಶುರುವಾಗುತ್ತಿದ್ದಂತೆ ಮಕ್ಕಳ ಸಮೇತ ದಂಪತಿ ಅಲ್ಲಿಗೆ ಶಿಫ್ಟ್ ಆಗಿದ್ದರು.

ಸಾವಿರಾರು ಸಹಕಲಾವಿದರ ಜೊತೆಗೆ ರಿಷಬ್, ರುಕ್ಮಿಣಿ, ಗುಲ್ಶನ್ ದೇವಯ್ಯ ಹೀಗೆ ಪ್ರತಿಯೊಬ್ಬರಿಗೂ ಪ್ರಗತಿ ಶೆಟ್ಟಿ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಚಿತ್ರೀಕರಣದ ಬಹುತೇಕ ಸಮಯದಲ್ಲಿ ಅವರು ಸೆಟ್ನಲ್ಲೇ ಕಳೆದಿದ್ದಾರೆ. ಚಿತ್ರದಲ್ಲಿ ರೊಮ್ಯಾಂಟಿಕ್ ಸಾಂಗ್ ಇಲ್ಲ, ಬದಲಿಗೆ ಸಣ್ಣ ಸಣ್ಣ ಝಲಕ್, ಮಾಂಟೇಜ್ ರೀತಿಯ ಸಾಂಗ್ಸ್ ಇದೆ ಎಂದು ಭೂಷಣ್ ಮಾಸ್ಟರ್ ಹೇಳಿದ್ದಾರೆ.
'ಕಾಂತಾರ' ಚಿತ್ರದ 'ಸಿಂಗಾರ ಸಿರಿಯೇ' ಸಾಂಗ್ ಅನ್ನು ಕೂಡ ಭೂಷಣ್ ಮಾಸ್ಟರ್ ಕಂಪೋಸ್ ಮಾಡಿದ್ದರು. ಬಳಿಕ ಪ್ರೀಕ್ವೆಲ್ ಚಿತ್ರದಲ್ಲಿ ಕೂಡ ಅವಕಾಶ ಸಿಕ್ಕಿತ್ತು. ಕನ್ನಡ ಪಿಕ್ಚರ್ ಯೂಟ್ಯೂಬ್ ಸಂದರ್ಶನದಲ್ಲಿ 'ಕಾಂತಾರ- 1' ಮೇಕಿಂಗ್ ಬಗ್ಗೆ ಭೂಷಣ್ ಮಾಸ್ಟರ್ ಮಾತನಾಡಿದ್ದಾರೆ. ಆ ದಿನ ರೊಮ್ಯಾಂಟಿಕ್ ಸೀನ್ ಚಿತ್ರೀಕರಣದ ವೇಳೆ ಪ್ರಗತಿ ಶೆಟ್ಟಿ ಬಂದು ಏನು ಹೇಳಿದ್ರು ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ.

"ರೊಮ್ಯಾಂಟಿಕ್ ಸೀನ್ ಒಂದಿತ್ತು. ಅದನ್ನು ಶೂಟ್ ಮಾಡುವಾಗ ಪ್ರಗತಿ ಮೇಡಂ ಬಂದುಬಿಟ್ರು. ಮೇಡಂ ಇದ್ದಾರೆ, ಬೇಡ ಅಂತ ನಾವ್ ಅಂದುಕೊಂಡ್ವಿ. ಮಾಸ್ಟರ್ ಬನ್ನಿ ಇಲ್ಲಿ ಅಂತ ಕರೆದ್ರು. ಏನ್ ಹಿಂಗೆಲ್ಲಾ, ಕೊಂಚ ನೋಡ್ಕೊಂಡು ಮಾಡ್ಸಿ ಅಂತಾರೆ ಅಂತ ನಾನು ಅನ್ಕೊಂಡೆ, ಆದ್ರೆ ಅವ್ರು, ಹೇಯ್, ಸಾಕಾಕ್ತಿಲ್ಲ, ಫುಲ್ ರೊಮ್ಯಾನ್ಸ್ ಮಾಡ್ಸಿ ಅಂದ್ರು. ನೀವಿದ್ದರೆ ಹೆಂಗೆ ಮೇಡಂ, ಅಂದೆ, ನಾನು ಬರಲ್ಲ, ನೀವು ಚೆನ್ನಾಗಿ ಮಾಡ್ಸಿ, ಕೆಮೆಸ್ಟ್ರಿ ಚೆನ್ನಾಗಿ ವರ್ಕ್ ಆಗಬೇಕು, ಏನು ಹಿಂಗೆ ಹೇಳಿದ್ರು, ಅಂತ ನಂಗೂ ಅನ್ನಿಸ್ತು" ಎಂದು ಭೂಷಣ್ ನಕ್ಕಿದ್ದಾರೆ.
ರುಕ್ಮಿಣಿ ವಸಂತ್ ಬಹಳ ಚೆನ್ನಾಗಿ ನಟಿಸಿದ್ದಾರೆ. ರಾಣಿಯಾಗಿ ಚೆನ್ನಾಗಿ ಕಂಗೊಳಿಸಿದ್ದಾರೆ. ಟ್ರೈಲರ್ನಲ್ಲಿ ಒಂದೆರಡು ಫ್ರೇಮ್ ಇರಬಹುದು, ಅದರಲ್ಲೇ ವೈರಲ್ ಆಗಿಬಿಟ್ಟಿದ್ದಾರೆ. ಕ್ರೇಜ್ ಶುರುವಾಗಿಬಿಟ್ಟಿದೆ ಎಂದು ಭೂಷಣ್ ಮಾಸ್ಟರ್ ಹೇಳಿದ್ದಾರೆ. ಕನ್ನಡದ ಹಲವು ಹಿಟ್ ಸಾಂಗ್ಗಳಿಗೆ ಅವರು ಡ್ಯಾನ್ಸ್ ಕಂಪೋಸ್ ಮಾಡಿದ್ದಾರೆ. ಇದೀಗ 'ಕಾಂತಾರ- 1' ರೀತಿಯ ದೊಡ್ಡ ಚಿತ್ರಕ್ಕೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಸಣ್ಣ ಬಿಜಿಎಂ ಸೀಕ್ವೆನ್ಸ್ ಶೂಟ್ ಮಾಡುವುದಕ್ಕೆ ನಾಲ್ಕೈದು ದಿನ ತೆಗೆದುಕೊಂಡಿದ್ದೇವೆ ಎಂದು ಚಿತ್ರದ ಬಗ್ಗೆ ಹೇಳಿದ್ದಾರೆ.
ದೊಡ್ಡ ಸಿನಿಮಾ ಇದು. ಅವರು ಮನಸ್ಸು ಮಾಡಿದ್ದರೆ ಗಣೇಶ್ ಆಚಾರ್ಯ ಮಾಸ್ಟರ್ ಅವರನ್ನು ಕರೆಸಬಹುದಿತ್ತು. 'ಬೆಲ್ಬಾಟಂ' ಚಿತ್ರದಲ್ಲಿ ಮೊದಲ ಬಾರಿಗೆ ಅರವಿಂದ್ ಕಶ್ಯಪ್ ಅವರು ನನ್ನನ್ನು ರಿಷಬ್ ಶೆಟ್ಟಿ ಅವರಿಗೆ ಪರಿಚಯಿಸಿದರು. ಮುಂದೆ 'ಕಾಂತಾರ' ಚಿತ್ರದ ಅವಕಾಶ ಸಿಕ್ಕಿತ್ತು. ಬಳಿಕ ಈಗ 'ಚಾಪ್ಟರ್- 1' ಚಿತ್ರ ಮಾಡಿದ್ದೀವಿ ಆದಷ್ಟು ಬೇಗ ಸಿನಿಮಾ ತೆರೆಗೆ ಬರಲಿದೆ ಎಂದು ಭೂಷಣ್ ಮಾಸ್ಟರ್ ಹೇಳಿದ್ದಾರೆ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಈಗಾಗಲೇ 'ಬ್ರಹ್ಮ ಕಳಶ' ಸಾಂಗ್ ಬಂದು ಸೂಪರ್ ಹಿಟ್ ಆಗಿದೆ.


Click it and Unblock the Notifications











