ಚಿತ್ರಮಂದಿರ ತೆರೆದರೂ ದೊಡ್ಡ ಬಜೆಟ್ ಚಿತ್ರಗಳು ಬಿಡುಗಡೆ ಆಗಲ್ಲ, ಕಾರಣ ಇಲ್ಲಿದೆ!
ಅಕ್ಟೋಬರ್ 15 ರಿಂದ ಚಿತ್ರಮಂದಿರ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಶೇಕಡಾ 50ರಷ್ಟು ಸಿಬ್ಬಂದಿ ಹಾಗು ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡಬೇಕು ಎಂದು ಸೂಚಿಸಿದೆ. ಬಹುಶಃ ಸ್ಟಾರ್ಸ್ ಚಿತ್ರಗಳು ಸದ್ಯದಲ್ಲೇ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆ ಚಿತ್ರಪ್ರೇಮಿಗಳನ್ನು ಕಾಡುತ್ತಿದೆ.
ಆದ್ರೆ, ದೊಡ್ಡ ಬಜೆಟ್ ಚಿತ್ರಗಳು ಅಥವಾ ಸ್ಟಾರ್ ನಟರ ಚಿತ್ರಗಳು ಸದ್ಯಕ್ಕೆ ಚಿತ್ರಮಂದಿರಕ್ಕೆ ಬರಲ್ಲ. ರಾಬರ್ಟ್, ಕೋಟಿಗೊಬ್ಬ-3, ಸಲಗ, ಯುವರತ್ನ, ಕೆಜಿಎಫ್ ಚಿತ್ರಗಳಿಗೆ ಇದು ಅನುಕೂಲಕರವಾಗಿಲ್ಲ ಎಂದು ನಿರ್ಮಾಪಕ ಕೆಪಿ ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ. ಹಾಗಾದ್ರೆ, ಮುಂದೇನು?

ದೊಡ್ಡ ಬಜೆಟ್ ಚಿತ್ರಗಳಿಗೆ ನಷ್ಟ
''ಚಿತ್ರಮಂದಿರ ತೆರೆಯಲು ಸರ್ಕಾರದಿಂದ ಅನುಮತಿ ಏನೋ ಸಿಕ್ಕಿದೆ. ಆದರೆ, ಅರ್ಧ ಪ್ರೇಕ್ಷಕರಿಗೆ ಮಾತ್ರ ಅವಕಾಶ ಇದೆ. ಇದು ನಮಗೆ ಅಸಮಾಧಾನ ತಂದಿದೆ. ಅರ್ಧ ಪ್ರೇಕ್ಷಕರನ್ನು ನಂಬಿಕೊಂಡು ಸಿನಿಮಾ ಬಿಡುಗಡೆ ಮಾಡಿದ್ರೆ ದೊಡ್ಡ ಬಜೆಟ್ ಚಿತ್ರಗಳಿಗೆ ನಷ್ಟವಾಗುತ್ತೆ'' ಎಂದು ಸಲಗ ನಿರ್ಮಾಪಕ ಕೆಪಿ ಶ್ರೀಕಾಂತ್ ಮೈಸೂರಿನಲ್ಲಿ ಹೇಳಿದ್ದಾರೆ.

'ಸಲಗ' ರಿಲೀಸ್ ಆಗಲ್ಲ
'ಪೂರ್ಣ ಪ್ರಮಾಣದಲ್ಲಿ ಥಿಯೇಟರ್ ಓಪನ್ ಆಗುವವರೆಗೂ ಸಲಗ ಸಿನಿಮಾ ರಿಲೀಸ್ ಆಗಲ್ಲ' ಎಂದು ನಿರ್ಮಾಪಕ ಕೆಪಿ ಶ್ರೀಕಾಂತ್ ಸ್ಪಷ್ಟಪಡಿಸಿದ್ದಾರೆ. ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ಚಿತ್ರ ಸಲಗ. ಈಗಾಗಲೇ ಶೂಟಿಂಗ್ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿದೆ. ಧನಂಜಯ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ಮಾಪಕರ ಸಭೆ ಮಾಡಲಿದ್ದೇವೆ
''ಈ ಕುರಿತು ಚರ್ಚೆ ಮಾಡಲು ಆಕ್ಟಿವ್ ಪ್ರೊಡ್ಯೂಸರ್ ಟೀಂನಿಂದ ಸೋಮವಾರ ಸಭೆ ಕರೆಯಲಾಗಿದೆ. ಸಭೆಯಲ್ಲಿ ರಾಬರ್ಟ್, ಕೋಟಿಗೊಬ್ಬ, ಕೆಜಿಎಫ್, ಯುವರತ್ನ, ಸಲಗ ಚಿತ್ರದ ನಿರ್ಮಾಪಕರು ಭಾಗಿಯಾಗಲಿದ್ದಾರೆ. ಎಲ್ಲರು ಒಟ್ಟಾಗಿ ಕುಳಿತು ನಿರ್ಧಾರ ಮಾಡಲಾಗುತ್ತದೆ. ಯಾವ ಚಿತ್ರ ಬಿಡುಗಡೆ ಮಾಡಬೇಕು ಎನ್ನುವ ಬಗ್ಗೆಯೂ ನಿರ್ಧಾರ ಮಾಡುತ್ತೇವೆ'' ಶ್ರೀಕಾಂತ್ ಮಾಹಿತಿ ನೀಡಿದ್ದಾರೆ.
Recommended Video

ಬಿಗ್ ಬಜೆಟ್ ಚಿತ್ರಕ್ಕೆ ಓಟಿಟಿ ಸರಿ ಹೊಂದುವುದಿಲ್ಲ
ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವುದಕ್ಕಿಂತ ಓಟಿಟಿ ವೇದಿಕೆ ಉತ್ತಮ ಎಂಬ ಅಭಿಪ್ರಾಯವೂ ಇದೆ. ಆದ್ರೆ, ದೊಡ್ಡ ಬಜೆಟ್ ಚಿತ್ರಗಳಿಗೆ ಓಟಿಟಿ ಸರಿ ಹೊಂದುವುದಿಲ್ಲ ಎಂಬ ಮಾತನ್ನು ಶ್ರೀಕಾಂತ್ ಹೇಳಿದ್ದಾರೆ. ಹಾಗಾಗಿ, ಪೂರ್ಣ ಪ್ರಮಾಣದಲ್ಲಿ ಚಿತ್ರಮಂದಿರ ತೆರೆಯುವವರೆಗೂ ಸ್ಟಾರ್ಸ್ ಸಿನಿಮಾ ನಿರೀಕ್ಷೆ ಮಾಡುವಂತಿಲ್ಲ.


Click it and Unblock the Notifications











