'ಅಭಿನಯ ಚಕ್ರವರ್ತಿ' ಸುದೀಪ್ ಹುಟ್ಟುಹಬ್ಬಕ್ಕೆ ವಿಶೇಷ ಗಿಫ್ಟ್
ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಅಭಿನಯ ಚಕ್ರವರ್ತಿ ಸುದೀಪ್ ಅವರ ಬಯೋಗ್ರಫಿ ಆಡಿಯೋ ಮತ್ತು ಇ-ಬುಕ್ ಆಗಿ ಅವರ ಹುಟ್ಟು ಹಬ್ಬದಂದು ಬಿಡುಗಡೆ ಆಗುತ್ತಿದೆ.
ಕನ್ನಡದ ಖ್ಯಾತ ಸಿನಿ ಪತ್ರಕರ್ತ ಡಾ ಶರಣು ಹುಲ್ಲೂರು ಬರೆದ "ಕನ್ನಡ ಮಾಣಿಕ್ಯ ಕಿಚ್ಚ" ಹೆಸರಿನ ಪುಸ್ತಕ ಕಳೆದ ವರ್ಷ ಸುದೀಪ್ ಹುಟ್ಟುಹಬ್ಬದ ದಿನ (ಸೆಪ್ಟೆಂಬರ್ 2, 2020) ಬಿಡುಗಡೆಯಾಗಿ ದಾಖಲೆ ರೀತಿಯಲ್ಲಿ ಮಾರಾಟ ಆಗಿತ್ತು. ಈ ಪುಸ್ತಕವೇ ಇಂದು ಮೈ ಲ್ಯಾಂಗ್ ಆಪ್ ಮೂಲಕ ಆಡಿಯೋ ಬಯೋಗ್ರಫಿ ಮತ್ತು ಇ ಬುಕ್ ರೂಪದಲ್ಲಿ ಹೊರ ಬರುತ್ತಿದೆ.
ಬಿಗ್ ಬಾಸ್ ಖ್ಯಾತಿಯ ನಟ ಚಂದನ್ ಆಚಾರ್ಯ ಈ ಪುಸ್ತಕಕ್ಕೆ ಧ್ವನಿ ನೀಡಿದ್ದು, ಸುದೀಪ್ ಅವರ ಬದುಕಿನ ಅನೇಕ ಘಟನೆಗಳನ್ನು ಮನಸೆಳೆಯುವಂತೆ ಓದಿದ್ದಾರೆ. ಈ ಬಾರಿಯ ಸುದೀಪ್ ಅವರ ಹುಟ್ಟು ಹಬ್ಬಕ್ಕೆ ಈ ಎರಡು ಉಡುಗೊರೆಯನ್ನು ನೀಡುತ್ತಿದೆ ಮೈ ಲ್ಯಾಂಗ್ ಆಪ್.

ಬೆಂಗಳೂರಿನ ಕಾಯಕ ಪ್ರಕಾಶನ ಹೊರತಂದ ಈ ಕೃತಿಯು ಬಿಡುಗಡೆಯಾದ ಎರಡನೇ ದಿನಕ್ಕೆ ಮರುಮುದ್ರಣಗೊಂಡಿತ್ತು.
ಆಡಿಯೋ ಮತ್ತು ಇ ಪುಸ್ತಕಕ್ಕಾಗಿ www.mylang.in ಇಲ್ಲಿಗೆ ಭೇಟಿ ಕೊಡಬಹುದು.
ಪುಸ್ತಕದ ವಿಶೇಷತೆ
ಶರಣು ಹುಲ್ಲೂರು ರಚಿಸಿರುವ ಈ ಪುಸ್ತಕದಲ್ಲಿ ಸುದೀಪ್ ಅವರ ಬಗ್ಗೆ ಗೊತ್ತಿಲ್ಲದ ಹಲವು ವಿಚಾರಗಳು ಹಾಗೂ ಇದಕ್ಕೂ ಮುಂಚೆ ಯಾರೂ ನೋಡಿರದ ಹಲವು ಅಪರೂಪದ ಫೋಟೋಗಳಿವೆ. ಸುದೀಪ್ ಅವರ ಸಿನಿಮಾ ಜರ್ನಿ, ಅವರ ಏಳು-ಬೀಳು ಮತ್ತು ವೈಯಕ್ತಿಕ ಜೀವನದ ಸಂಗತಿಗಳನ್ನು ಸಹ ಪುಸ್ತಕ ಒಳಗೊಂಡಿದೆ.

ಅಂದ್ಹಾಗೆ, ಈ ಪುಸ್ತಕವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಲೋಕಾರ್ಪಣೆ ಮಾಡಿದ್ದರು. ಕನ್ನಡ ಮಾಣಿಕ್ಯ ಕಿಚ್ಚ ಪುಸ್ತಕ ಬಿಡುಗಡೆ ಮಾಡಿದ ಅಪ್ಪು ''ಸುದೀಪ್ ಅವರ ಕುರಿತು ಸಾಕಷ್ಟು ಮಾಹಿತಿ ಇದರಲ್ಲಿದೆ, ಅವರ ಬಾಲ್ಯದ ಫೋಟೋಗಳು, ಸಿನಿಮಾಗಳ ಬಗ್ಗೆ ಮಾಹಿತಿ, ಅವರ ತಂದೆಯ ಬಗ್ಗೆ ವಿವರ ಇದೆ. ಈ ಪುಸ್ತಕ ಅವರ ಅಭಿಮಾನಿಗಳಿಗೆ ಹಾಗೂ ಸಿನಿ ಅಭಿಮಾನಿಗಳಿಗೆ ಖುಷಿ ಕೊಡುತ್ತೆ. ಒಳ್ಳೆಯದಾಗಲಿ...'' ಎಂದು ಶುಭ ಕೋರಿದ್ದರು.

ಅಂಬರೀಶ್ ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ ಲಭಿಸಿತ್ತು
ಶರಣು ಹುಲ್ಲೂರು ಅವರು ಈ ಹಿಂದೆ ರೆಬೆಲ್ ಸ್ಟಾರ್ ಅಂಬರೀಶ್ ಅವರ ಬಯೋಗ್ರಫಿ ಬರೆದಿದ್ದರು. ಅಂಬಿ ನಿಧನದ ನಂತರ ಈ ಪುಸ್ತಕ ಲೋಕಾರ್ಪಣೆಗೊಂಡಿತ್ತು. ನಟಿ ಸುಮಲತಾ, ದರ್ಶನ್ ಹಾಗೂ ಯಶ್ ಈ ಪುಸ್ತಕ ಬಿಡುಗಡೆಗೊಳಿಸಿದ್ದರು. ಎರಡು ಬಾರಿ ಮುದ್ರಣವಾಗಿದ್ದ ಈ ಪುಸ್ತಕ 2000 ಪ್ರಿಂಟ್ ಆಗಿದೆ. ಅಂದ್ಹಾಗೆ, ಈ ಪುಸ್ತಕಕ್ಕೆ ಅಪಾರ ಜನಮನ್ನಣೆ ಸಿಕ್ಕಿತು. ಅಲ್ಲದೇ ಕರ್ನಾಟಕ ಸರಕಾರ ನೀಡುವ ಚಲನಚಿತ್ರ ಸಾಹಿತ್ಯ ರಾಜ್ಯ ಪ್ರಶಸ್ತಿ ಕೂಡ 2018ರಲ್ಲಿ ಬಂದಿದೆ.

ಇನ್ನು ದಿವಂಗತ ನಟ ಸಂಚಾರಿ ವಿಜಯ್ ಬಗ್ಗೆಯೂ ಶರಣು ಹುಲ್ಲೂರು ಪುಸ್ತಕ ಬರೆದು ಬಿಡುಗಡೆ ಮಾಡಿದರು. 'ಅನಂತವಾಗಿರು' ಎಂಬ ಹೆಸರಿನಲ್ಲಿ ಜುಲೈ 18ಕ್ಕೆ ಈ ಪುಸ್ತಕ ಮಾರುಕಟ್ಟೆಗೆ ಬಂದಿದೆ.
ಹಲವು ವರ್ಷಗಳಿಂದ ಪತ್ರಿಕೋದ್ಯಮದಲ್ಲಿರುವ ಶರಣು ಹುಲ್ಲೂರು ಹಲವು ಪುಸ್ತಕಗಳನ್ನು ಬರೆದಿದ್ದಾರೆ. ರೆಬೆಲ್ ಸ್ಟಾರ್ ಕುರಿತು 'ಅಂಬರೀಶ್' ಎಂಬ ಪುಸ್ತಕ ಬರೆದಿದ್ದರು. 'ಕೊರೋನಾ' ಹೆಸರಿನಲ್ಲು ಸಹ ಪುಸ್ತಕ ಬರೆದಿದ್ದರು. 'ಬದುಕು ಹ್ಯಾಕ್ ಆಗಿದೆ', 'ಸಿನಿ ಸಾಂಗತ್ಯ', 'ಜುಗಲ್ ಬಂದಿ ಕವಿತೆಗಳು' ಎಂಬ ಪುಸ್ತಕಗಳನ್ನು ಸಹ ಹುಲ್ಲೂರು ರಚಿಸಿದ್ದಾರೆ. ಕೊರೊನಾ ವೈರಸ್ ಭೀತಿ ಹಿನ್ನೆಲೆ ಈ ವರ್ಷ ಸುದೀಪ್ ಹುಟ್ಟುಹಬ್ಬ ಆಚರಿಸುವುದು ಬೇಡ ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.


Click it and Unblock the Notifications











