ಅಂತೂ ಇಂತು ಬಿಗ್ ಬಾಸ್ ಬಳಿಕ ದಿವ್ಯಾಗೆ ಸಿಕ್ತು ಮೊದಲ ಸಿನಿಮಾ!
ಕಿರುತೆರೆಯ ಬಹುದೊಡ್ಡ ಕಾರ್ಯಕ್ರಮ ಬಿಗ್ ಬಾಸ್. ಬಿಗ್ ಬಾಸ್ನಲ್ಲಿ ಭಾಗವಹಿಸಿದ ಹಲವರು ಅಲ್ಲಿಂದ ಹೊರ ಬಂದ ಮೇಲೆ ಸಾಕಷ್ಟು ಕೀರ್ತಿ ಪಡೆದಿರುತ್ತಾರೆ. ಎಷ್ಟೋ ಮಂದಿ ರಾತ್ರೋ ರಾತ್ರಿ ಸ್ಟಾರ್ಗಳ ರೀತಿಯಲ್ಲಿ ಮಿಂಚಿ ಬಿಡುತ್ತಾರೆ. ಆದರೆ ಅದೃಷ್ಟ ಎಲ್ಲರ ಕೈ ಹಿಡಿಯುವುದಿಲ್ಲ. ಬಿಗ್ ಬಾಸ್ ಮನೆಗೆ ಹೋಗುವ ಅಷ್ಟೂ ಸ್ಪರ್ಧಿಗಳಲ್ಲಿ ಕೆಲವರಿಗೆ ಅದೃಷ್ಟ ತಾನಾಗೆ ಹುಡುಕಿಕೊಂಡು ಬರುತ್ತೆ.
ಈಗ ನಟಿ ದಿವ್ಯಾ ಉರುಡುಗ ಅವರಿಗೆ ಅದೃಷ್ಟ ಹುಡುಕಿ ಬಂದಿದೆ. ಬಿಗ್ ಬಾಸ್ ಮುಗಿದು ಒಂದು ವರ್ಷ ಕಳೆಯುತ್ತ ಬಂದಿದೆ. ಈಗ ದಿವ್ಯಾ ಉರುಡುಗ ಅವರಿಗೆ ಬಿಗ್ ಬಾಸ್ ಬಳಿಕ ಮೊದಲ ಸಿನಿಮಾ ಸಿಕ್ಕಿದೆ. ಈ ಸುದ್ದಿಯನ್ನು ಚಿತ್ರ ತಂಡ ಹಂಚಿಕೊಂಡಿದೆ.
ಈ ಹಿಂದೆ ದಿವ್ಯಾ ಅವರು ನಟಿಸಿದ್ದ 'ಗಿರ್ಕಿ' ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಬಿಗ್ ಬಾಸ್ ಬಳಿಕ ದಿವ್ಯಾ ಉರುಡುಗ ಅವರಿಗೆ ಬೇಡಿಕೆ ಹೆಚ್ಚಾಗಬಹುದು, ಅವರು ಅಲ್ಲಿಂದ ಬಂದ ಕೂಡಲೇ ತಮ್ಮ ಮೊದಲ ಸಿನಿಮಾವನ್ನು ಪ್ರಕಟಿಸಿ ಬಿಡುತ್ತಾರೆ ಎನ್ನುವ ನಿರೀಕ್ಷೆಗಳು ಅವರ ಅಭಿಮಾನಿಗಳಲ್ಲಿ ಇದ್ದವು. ಆದರೆ ಈಗ ದಿವ್ಯಾ ಅವರ ಮೊದಲ ಚಿತ್ರ ಪ್ರಕಟವಾಗಿದೆ.

'ಪದವಿ ಪೂರ್ವ' ಚಿತ್ರದಲ್ಲಿ ದಿವ್ಯಾ ಉರುಡುಗ!
ಬಿಗ್ ಬಾಸ್ ಮನೆ ಹೊಕ್ಕಿ ಕಿರುತೆಯಲ್ಲಿ ಸದ್ದು ಮಾಡಿದ ನಟಿ ದಿವ್ಯಾ ಉರುಡುಗ ಬಿಗ್ ಬಾಸ್ನ ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಅಲ್ಲಿಂದ ಬಂದ ಬಳಿಕ ದಿವ್ಯಾ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಕಿರುತೆರೆಯ ದೊಡ್ಡ ಮನೆಯಿಂದ ಹೊರ ಬಂದ ಬಳಿಕ ಈಗ ದಿವ್ಯಾ ಉರುಡುಗ ಅವರು 'ಪದವಿ ಪೂರ್ವ' ಚಿತ್ರದಲ್ಲಿ ಅಭಿನಯಿಸುತ್ತಾ ಇದ್ದಾರೆ. ದಿವ್ಯಾ ಉರುಡುಗ ಪಾತ್ರದ ಬಗ್ಗೆ ಚಿತ್ರದ ನಿರ್ದೇಶಕ ಹರಿಪ್ರಸಾದ್ ಜಯಣ್ಣ ಫಿಲ್ಮಿಬೀಟ್ ಜೊತೆಗೆ ಮಾತನಾಡಿದ್ದಾರೆ.

ಅತಿಥಿ ಪಾತ್ರದಲ್ಲಿ ದಿವ್ಯಾ ಉರುಡುಗ!
ಕನ್ನಡದಲ್ಲಿ ಬರುತ್ತಿರುವ ಪದವಿ ಪೂರ್ವ ಚಿತ್ರಕ್ಕೆ ಈಗಾಗಲೇ ನಾಯಕ ನಾಯಕಿ ಅಂತಿಮ ಆಗಿದ್ದಾರೆ. ಜೊತೆಗೆ ಚಿತ್ರದ ಶೂಟಿಂಗ್ ಕೂಡ ಶುರುವಾಗಿದೆ. ಆದರೀಗ ದಿವ್ಯಾ ಎಂಟ್ರಿ ಇಂದ ಈ ಚಿತ್ರದ ನಾಯಕಿ ಏನಾದ್ರು ಬದಲಾದರಾ? ಎನ್ನುವ ಪ್ರಶ್ನೆ ಮೂಡುವುದು ಸಹಜ. ಆದರೆ ಚಿತ್ರದ ನಾಯಕಿ ಬದಲಾಗಿಲ್ಲ. ದಿವ್ಯಾ ಉರುಡುಗ ಚಿತ್ರದ ಅತಿ ಮುಖ್ಯವಾದ ಪಾತ್ರ ಒಂದರಲ್ಲಿ ನಟಿಸುತ್ತಿದ್ದಾರೆ.

ಅಂತ್ಯಗೊಳ್ಳುವುದು ದಿವ್ಯಾ ಅವರ ಪಾತ್ರದಿಂದಲೇ
"ದಿವ್ಯಾ ಅವರ ಪಾತ್ರ ಇಡೀ ಚಿತ್ರಕ್ಕೆ ಬೈಂಡಿಂಗ್ ಮಾದರಿ ಇರಲಿದೆ. ಚಿತ್ರದ ಆರಂಭ ಆಗುವುದು ಮತ್ತು ಅಂತ್ಯಗೊಳ್ಳುವುದು ದಿವ್ಯಾ ಅವರ ಪಾತ್ರದಿಂದಲೇ. ಈ ಪಾತ್ರ ಚಿತ್ರಕ್ಕೆ ಅತಿ ಮುಖ್ಯ. ಹಾಗಾಗಿ ದಿವ್ಯಾ ಅವರು ಈ ಪಾತ್ರಕ್ಕೆ ಸರಿ ಹೊಂದುತ್ತಾರೆ ಎಂದೆನಿಸಿತು. ಅವರ ಪಾತ್ರ ಎಲ್ಲರಿಗೂ ಇರುವ ಕನಸುಗಳು, ಸಾರ್ಥಕತೆಯ ಬದುಕಿನ ಬಗ್ಗೆ ಹೇಳುತ್ತದೆ" ಎಂದು ಹೇಳಿದ್ದಾರೆ ನಿರ್ದೇಶಕ ಹರಿಪ್ರಸಾದ್ ಜಯಣ್ಣ.

'ಪದವಿ ಪೂರ್ವ' ಒಂದು ನವಿರಾದ ಪ್ರೇಮ ಕಥೆ!
'ಪದವಿ ಪೂರ್ವ' ಚಿತ್ರದಲ್ಲಿ ಹೊಸಬರ ದಂಡೇ ಇದೆ. ಯುವ ಪ್ರತಿಭೆ ಪೃಥ್ವಿ ಶಾಮನೂರು ನಾಯಕನಾದರೆ, ಅಂಜಲಿ ಅನೀಶ್ ಮತ್ತು ಯಶ ಶಿವಕುಮಾರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಒಬ್ಬ ನಾಯಕ ಇಬ್ಬರು ನಾಯಕಿಯರು ಇರುವುದರಿಂದ ಈ ಚಿತ್ರ ತ್ರಿಕೋನ ಪ್ರೇಮ ಕಥೆ ಎನ್ನುವ ಸುಳಿವು ಬಿಟ್ಟು ಕೊಟ್ಟಿದೆ. 'ಪದವಿ ಪೂರ್ವ' ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಇದೆ. ಖ್ಯಾತ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಕ್ಯಾಮೆರಾ ಹಿಡಿದಿದ್ದಾರೆ.

5ನೇ ಹಂತದ ಚಿತ್ರೀಕರಣಕ್ಕೆ ಚಿತ್ರ ತಂಡ ಸಜ್ಜು!
ದಿವ್ಯಾ ಉರುಡುಗ ನಟಿಸಲಿರುವ ಭಾಗದ ಚಿತ್ರೀಕರಣವು ಬೆಂಗಳೂರು ಹಾಗು ಮಂಗಳೂರಿನ ಸುತ್ತಮುತ್ತ ನಡೆಯಲಿದೆ. ಶೀಘ್ರದಲ್ಲೇ ಚಿತ್ರೀಕರಣ ಶುರು ಆಗಲಿದ್ದು, ಚಿತ್ರದ ಐದನೇ ಹಂತದ ಚಿತ್ರೀಕರಣಕ್ಕೆ ಚಿತ್ರ ತಂಡ ಸಕಲ ಸಿದ್ಧತೆ ನಡೆಸಿದೆ. ಈ ಚಿತ್ರಕ್ಕೆ ನಟಿ ದಿವ್ಯಾ ಸೇರಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಮೂಲಕ ನಿರ್ದೇಶಕ ಹರಿಪ್ರಸಾದ್ ಜಯಣ್ಣ ಅವರು ಹೊಸದು ಏನ್ನನ್ನೋ ಸಿನಿಪ್ರಿಯರ ಮುಂದೆ ಇಡಲು ಸಜ್ಜಾಗಿದ್ದಾರೆ.


Click it and Unblock the Notifications











