ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಬಂದ ದರ್ಶನ್ ವಿರುದ್ಧ ಮತ್ತೊಂದು ದೂರು
ಅದ್ಯಾಕೋ ನಟ ದರ್ಶನ್ ಟೈಮೇ ಸರಿ ಇಲ್ಲ ಎನಿಸುತ್ತದೆ. ಈಗಾಗಲೇ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ದರ್ಶನ್ ಜೈಲಿನಲ್ಲಿ ಇದ್ದಾಗಲೂ ದೂರುಗಳು ದಾಖಲಾಗಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ವಿಚಾರಕ್ಕೆ ಸಂಬಂಧಿಸಿ 3 ಎಫ್ಐಆರ್ ದಾಖಲಾಗಿತ್ತು.
ಕಳೆದ ತಿಂಗಳು ಬೆದರಿಕೆ ಆರೋಪ ಸಂಬಂಧ ಸಿನಿಮಾ ನಿರ್ಮಾಪಕ ಭರತ್ ಎಂಬುವವರು ದರ್ಶನ್ ವಿರುದ್ಧ ದೂರು ನೀಡಿದ್ದು ಗೊತ್ತೇಯಿದೆ. ದರ್ಶನ್ ಅಭಿಮಾನಿಗಳಿಂದ ನನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಅವರು ಆರೋಪಿಸಿದ್ದರು. ಇದೀಗ ಬೆದರಿಕೆ ಆರೋಪದಲ್ಲೇ ಲಾಯರ್ ಜಗದೀಶ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇತ್ತೀಚೆಗೆ ದರ್ಶನ್ ವಿರುದ್ಧ ಜಗದೀಶ್ ವೀಡಿಯೋ ಮಾಡಿ ಮಾತನಾಡುತ್ತಿದ್ದಾರೆ. ಹಾಗಾಗಿ ತಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಇದೀಗ ದೂರು ನೀಡಿದ್ದಾರೆ.

ನಟ ದರ್ಶನ್ ಹಾಗೂ ದರ್ಶನ್ ಅಭಿಮಾನಿ ರಿಷಿ ಎಂಬಾತನ ವಿರುದ್ಧ
ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಜಗದೀಶ್ ದೂರು ದಾಖಲಿಸಿದ್ದಾರೆ. ಬಳಿಕ ಪೊಲೀಸ್ ಠಾಣೆ ಎದುರು ವೀಡಿಯೋ ಮಾಡಿ ಈ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಅಭಿಮಾನಿ ರಿಷಿ ಎಂಬಾತ ಪದೇ ಪದೇ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಜಗದೀಶ್ ಆರೋಪಿಸಿದ್ದಾರೆ. 10 ಸಾವಿರ ಕರೆಗಳು ಬಂದಿವೆ ಎಂದು ವೀಡಿಯೋದಲ್ಲಿ ಹೇಳಿದ್ದಾರೆ.
ನಮ್ ಬಾಸ್ ಬಗ್ಗೆ ಎಕವಚನದಲ್ಲಿ ಮಾತನಾಡುತ್ತೀಯಾ ಎಂದು ರಿಷಿ ಎಂಬಾತ ಕೇಳುತ್ತಾನೆ. ರಚಿತಾ ರಾಮ್ ಬಗ್ಗೆ ಕೂಡ ಮಾತನಾಡ್ತೀಯಾ ಎಂದು ಕನ್ನಡ ಇಂಡಸ್ಟ್ರಿಗೆ ಹೇಗೆ ಎಂಟ್ರಿ ಕೊಡ್ತೀಯಾ ನೋಡೋಣ ಎನ್ನುತ್ತಾನೆ. ಮೆಡಿಕಲ್ ಬೇಲ್ ಮೇಲೆ ಹೊರಗೆ ಇರುವ ದರ್ಶನ್ ಇದೆಲ್ಲಾ ಮಾಡಿಸ್ತಿದ್ದಾನಾ? ಇಲ್ಲಾ ಅವನ ಹೆಸರೇಳಿಕೊಂಡು ಇವರು ಮಾಡ್ತಿದ್ದಾರಾ? ಗೊತ್ತಿಲ್ಲ ಎಂದು ಬಿಗ್ಬಾಸ್ ಜಗದೀಶ್ ತಿಳಿಸಿದ್ದಾರೆ.

ನಾನು ಬಿಗ್ಬಾಸ್ನಲ್ಲಿ ಹೆಸರು ಮಾಡಿರುವುದು ದರ್ಶನ್ ಪಟಾಲಂಗೆ ಇಷ್ಟ ಇಲ್ಲ ಅನ್ನಿಸುತ್ತೆ. ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಉಳಿದಿದ್ದು ಮುಂದೆ ಮಾತನಾಡ್ತೀನಿ ಎಂದು ವೀಡಿಯೋದಲ್ಲಿ ಹೇಳಿದ್ದಾರೆ. ಸದ್ಯ ಜಗದೀಶ್ ವೀಡಿಯೋ ವೈರಲ್ ಆಗುತ್ತಿದೆ.
ಬಿಗ್ಬಾಸ್ ಸೀಸನ್ 11ಕ್ಕೆ ಸ್ಪರ್ಧಿಯಾಗಿ ಲಾಯರ್ ಜಗದೀಶ್ ಎಂಟ್ರಿ ಕೊಟ್ಟಿದ್ದರು. ಮನೆಯೊಳಗೆ ತಮ್ಮ ಆರ್ಭಟದಿಂದ ಬಹಳ ಸದ್ದು ಮಾಡಿದ್ದರು. ಆದರೆ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ ಆರೋಪ ಹಿನ್ನೆಲೆ ಶೋನಿಂದ ಹೊರ ಬಂದಿದ್ದರು. ಮನೆಯಿಂದ ಹೊರ ಹೋಗುವಂತೆ ಬಿಗ್ಬಾಸ್ ಶಿಕ್ಷೆ ನೀಡಿದ್ದರು. ಇತ್ತೀಚೆಗೆ ತಮಗೆ ಭದ್ರತೆ ಕೋರಿ ಜಗದೀಶ್ ಕಮೀಷನರ್ ಬಳಿ ಮನವಿ ಮಾಡಿದ್ದರು.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಆರೋಪಿಯಾಗಿ ಜೈಲು ಸೇರಿದ್ದರು. 131 ದಿನಗಳ ಬಳಿಕ ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದಾರೆ. 6 ವಾರಗಳ ಕಾಲ ಚಿಕಿತ್ಸೆಗಾಗಿ ಹೈಕೋರ್ಟ್ ಜಾಮೀನು ನೀಡಿದೆ. ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದರ್ಶನ್ ಮುಂದಾಗಿದ್ದಾರೆ. ಈಗಾಗಲೇ ವೈದ್ಯರು ಫಿಸಿಯೋ ಥೆರಪಿ ಆರಂಭಿಸಿದ್ದಾರೆ. ಬೆನ್ನುಹುರಿಯಿಂದ ನಟ ದರ್ಶನ್ ಸಂಕಷ್ಟ ಎದುರಿಸುತ್ತಿದ್ದಾರೆ. ಸಮಸ್ಯೆ ತೀವ್ರ ಸ್ವರೂಪ ಪಡೆದ ಕಾರಣ ಚಿಕಿತ್ಸೆಗಾಗಿ ಕೋರ್ಟ್ ಜಾಮೀನು ನೀಡಿದೆ.
ಅಕ್ಟೋಬರ್ 30ರಂದು ದರ್ಶನ್ಗೆ ರಿಲೀಫ್ ಸಿಕ್ಕಿತ್ತು. ಹೈಕೋರ್ಟ್ 6 ವಾರಗಳ ಮಧ್ಯಂತರ ಜಾಮೀನು ನೀಡಿತ್ತು. ಸಂಜೆ ವೇಳೆಗೆ ಬಿಡುಗಡೆಯ ಪ್ರಕ್ರಿಯೆಗಳನ್ನು ಮುಗಿಸಿ ದರ್ಶನ್ ಬಳ್ಳಾರಿ ಜೈಲಿನಿಂದ ಹೊರ ಬಂದರು. ಸಂಜೆ 6 ಗಂಟೆ 10 ನಿಮಿಷ ಸುಮಾರಿಗೆ ಹೊರಬಂದ ದರ್ಶನ್ ಪತ್ನಿ ಜೊತೆ ಕಾರಿನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಒಂದಷ್ಟು ಷರತ್ತುಗಳನ್ನು ವಿಧಿಸಿ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.


Click it and Unblock the Notifications











