ಬಿಗ್ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಮತ್ತೆ ಬಂಧನ
ಪದೇ ಪದೇ ವಿವಾದಗಳಿಂದ ಬಿಗ್ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಸುದ್ದಿ ಆಗುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಬಾಯಿಗೆ ಬಂದಂತೆ ಮಾತನಾಡುವುದು, ಬಳಿಕ ಕ್ಷಮೆ ಕೇಳುವುದು ಮಾಡುತ್ತಾರೆ. ಹೀಗೆ ಮಾತನಾಡುತ್ತಲೇ ಬಿಗ್ಬಾಸ್ ಸೀಸನ್ 12ರ ಸ್ಪರ್ಧಿಯಾಗಿದ್ದರು. ಅಲ್ಲಿಗೂ ಅದೇ ಕಿರಿಕ್, ನಾಲಿಗೆ ಹರಿಬಿಟ್ಟು ಮನೆಯಿಂದ ಹೊರಬಿದ್ದಿದ್ದರು. ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.
ಜಾತಿ ನಿಂದನೆ ಆರೋಪದಡಿ ಲಾಯರ್ ಜಗದೀಶ್ ಅವರನ್ನು ಇಂದು(ಆಗಸ್ಟ್ 22) ಕೊಡಿಗೇಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಜುನಾಥ್ ಎಂಬುವವರು ದೂರು ಆಧರಿಸಿ ಪೊಲೀಸರು ಎಫ್ಐಆರ್ ಹಾಕಿದ್ದರು. ಪ್ರಕರಣದಲ್ಲಿ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆ ಅವರಿಗೆ ಜಾಮೀನು ನೀಡಲು ಪೊಲೀಸರು ಮನೆ ಬಳಿ ತೆರಳಿದ್ದರು. ಆದರೆ ಬಾಗಿಲು ತೆಗೆಯದ ಕಾರಣ ಪೊಲೀಸರು ವಾಪಸ್ ಆಗಿದ್ದರು.

ಪೊಲೀಸ್ ಬಂಧನದ ವೇಳೆ ಕೂಡ ಜಗದೀಶ್ ಫೇಸ್ಬುಕ್ ಲೈವ್ ವೀಡಿಯೋ ಮಾಡಿದ್ದಾರೆ. "ನಮಸ್ಕಾರ ಕರ್ನಾಟಕ.. ಇಂದು ಕೊಡಿಗೆಹಳ್ಳಿ ಪೊಲೀಸರು ನನ್ನನ್ನು ಪೊಲೀಸ್ ವಶಕ್ಕೆ ಪಡೆದಿದ್ದಾರೆ. ನಾನು ಧರ್ಮಸ್ಥಳ ಅತ್ಯಾಖಂಡ ವಿರುದ್ಧ ಸತ್ಯವನ್ನು ಹೇಳಿದ್ದೇ ತಪ್ಪೇ? ಸಮಾಜದಲ್ಲಿ ತಪ್ಪು ನಡೆದಾಗ ಧ್ವನಿ ಎತ್ತುವುದು ನಮ್ಮ ಸಂವಿಧಾನಿಕ ಹಕ್ಕು. ನ್ಯಾಯಕ್ಕಾಗಿ ಹೋರಾಡುವುದು ಅಪರಾಧವಲ್ಲ" ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
ಪೊಲೀಸರು ಬಂಧಿಸುವಾಗ ವೀಡಿಯೋ ಮಾತನಾಡಿ "ಆರಾಮಾಗಿರಿ, ಯಾರು ಅಶಾಂತಿ ಮಾಡಲು ಹೋಗಬೇಡಿ. ಇದೆಲ್ಲಾ ಸಾಮಾನ್ಯ ಪ್ರಕ್ರಿಯೆ" ಎಂದು ಹೇಳಿದ್ದಾರೆ. ಬಳಿಕ ಪೊಲೀಸರ ಜೀಪ್ ಏರಿ ಹೊರಟಿರುವುದನ್ನು ವೀಡಿಯೋದಲ್ಲಿ ನೋಡಬಹುದು. ಕೆಲವೇ ಗಂಟೆಗಳ ಮುನ್ನ ಫೇಸ್ಬುಕ್ನಲ್ಲಿ ಜಗದೀಶ್ ಮತ್ತೊಂದು ಪೋಸ್ಟ್ ಮಾಡಿದ್ದರು.
"ನಮ್ಮ ಮನೆಯ ಮತ್ತೊಂದು ನಾಯಿಯ ಕಾಲಿಗೆ ಬಲವಾಗಿ ಒಡೆದು ಭಾರಿ ನೋವುಂಟು ಮಾಡಿದ್ದಾರೆ. ನಿರಪರಾಧ ಪ್ರಾಣಿಗೆ ಇಂತಹ ಕ್ರೂರ ಕೃತ್ಯ ಮಾಡಿದವರ ವಿರುದ್ಧ ನ್ಯಾಯ ದೊರಕಬೇಕೆಂದು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ಪ್ರಾಣಿಗಳನ್ನು ಪ್ರೀತಿಸಿ. ಅವುಗಳಿಗೂ ಜೀವ, ಭಾವನೆ ಇದೆ.
ಕ್ರೂರತೆಗೆ ನಾವು ಮೌನವಾಗಬಾರದು" ಎಂದು ಬರೆದುಕೊಂಡಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಜಾತಿ ಬಗ್ಗೆ ಮಾತನಾಡಿದ್ದಕ್ಕೆ ಬಿಎನ್ಎಸ್ ಸೆಕ್ಷನ್ ಅಡಿಯಲ್ಲಿ ಜಗದೀಶ್ ವಿರುದ್ಧ ಪ್ರಕರಣ ದಾಖಲಾಗಿದೆ. ಜಾತಿ ಆಧರಿತ ಪ್ರಚೋದನಾಕಾರಿ ಮಾತುಗಳನ್ನಾಡಿ ಸಮಾಜದಲ್ಲಿ ಅಶಾಂತಿ ಮೂಡಿಸಿದ ಆರೋಪದ ಮೇಲೆ ಜಗದೀಶ್ ವಿರುದ್ಧ ಮಂಜುನಾಥ್ ಎಂಬುವವರು ದೂರು ನೀಡಿದ್ದಾರೆ.
ಇತ್ತೀಚೆಗೆ ಲಾಯರ್ ಜಗದೀಶ್ ವಿರುದ್ದ ಬಿಜೆಪಿ ನಾಯಕ ಎಸ್ಆರ್ ವಿಶ್ವನಾಥ್ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸಿದ್ದರು. ತಮ್ಮ ವಿರುದ್ಧ ಜಗದೀಶ್ ಸೋಶಿಯಲ್ ಮೀಡಿಯಾದಲ್ಲಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅದಕ್ಕೆ ಯಾವುದೇ ಸಾಕ್ಷಿ ಇಲ್ಲ. ಸೋಶಿಯಲ್ ಮೀಡಿಯಾದಲ್ಲಿ ನನ್ನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿರುವುದರಿಂದ ಅಪಪ್ರಚಾರವಾಗುತ್ತಿದೆ. ಮಾತನಾಡುವುದು ನನ್ನ ಹಕ್ಕು. ಆದರೆ ಲಾಯರ್ ಜಗದೀಶ್ ನನ್ನ ಮೇಲೆ ಆಧಾರ ರಹಿತ ಆರೋಪ, ತೇಜೋವಧೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಹಕ್ಕುಚ್ಯುತಿ ಮಂಡಿಸಿದ್ದರು.
ಮೊದಲಿನಿಂದಲೂ ಜಗದೀಶ್ ಸೋಶಿಯಲ್ ಮೀಡಿಯಾದಲ್ಲಿ ಇದೇ ರೀತಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡುತ್ತ ಬರುತ್ತಿದ್ದಾರೆ. ಏಕವಚನದಲ್ಲಿ ಎಲ್ಲರ ಬಗ್ಗೆ ಮಾತನಾಡಿ ಆಕ್ರೋಶ ಹೊರಹಾಕುತ್ತಾ ಬರ್ತಿದ್ದಾರೆ. ಈ ಹಿಂದೆ ನಟ ದರ್ಶನ್ ಬಗ್ಗೆ ಮಾತನಾಡಿ ಅವರ ಅಭಿಮಾನಿಗಳನ್ನು ಕೆರಳಿಸಿದ್ದರು. ಇದೀಗ ಜಾನಿ ನಿಂದನೆ ಆರೋಪ ಪ್ರಕರಣದಲ್ಲಿ ಬಂಧನವಾಗುವಂತಾಗಿದೆ. ಬಿಗ್ಬಾಸ್ ಮನೆಯಲ್ಲಿ ಕೂಗಾಡಿ ಗಲಾಟೆ ಮಾಡಿ 15 ದಿನಕ್ಕೆ ಮನೆಯಿಂದ ಹೊರ ಬರುವಂತಾಗಿತ್ತು.


Click it and Unblock the Notifications











