ಹೀರೋ ಆದ 'ಬಿಗ್ ಬಾಸ್' ಖ್ಯಾತಿಯ ಗಾಯಕ ನವೀನ್ ಸಜ್ಜು
Recommended Video
'ಬಿಗ್ ಬಾಸ್ 6' ಖ್ಯಾತಿಯ ಗಾಯಕ ಮತ್ತು ಸಂಗೀತ ನಿರ್ದೇಶಕ ನವೀನ್ ಸಜ್ಜು ಈಗ ಮತ್ತೊಂದು ಸಾಧನೆ ಮಾಡಲು ಸಜ್ಜಾಗಿದ್ದಾರೆ. ಹೌದು, ನವೀನ್ ಸಜ್ಜು ಈಗ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ನಾಯಕನಾಗಿ ತೆರೆಮೇಲೆ ಮಿಂಚಬೇಕು ಎನ್ನುವುದು ನವೀನ್ ಅವರ ದೊಡ್ಡ ಕನಸಾಗಿದ್ದಂತೆ. ಆ ಕನಸೀಗ ನನಸಾಗುತ್ತಿದೆ.
ಕೆಲವುದಿನಗಳಿಂದ ನವೀನ್ ನಾಯಕನಾಗಿ ಮಿಂಚಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದ್ರೀಗ ಅಧಿಕೃತವಾಗಿದೆ. ಅಂದ್ಹಾಗೆ ನವೀನ್ ನಾಯಕನಾಗಿ ಮಿಂಚುತ್ತಿರುವ ಚೊಚ್ಚಲ ಚಿತ್ರಕ್ಕೆ 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರದ ಖ್ಯಾತಿಯ ನಿರ್ದೇಶಕ ಕುಮಾರ್ ಅಕ್ಷನ್ ಕಟ್ ಹೇಳುತ್ತಿದ್ದಾರೆ.
ಚಿತ್ರಕ್ಕೆ 'ಚಾರ್ಲಿ ಚಾಪ್ಲಿನ್' ಎಂದು ಹೆಸರಿಟ್ಟಿದ್ದಾರೆ. ಚಿತ್ರದಲ್ಲಿ ಹಾಸ್ಯವೆ ಪ್ರಧಾನ ಆಗಿರುವುದರಿಂದ ಈ ಶೀರ್ಷಿಕೆ ಇಟ್ಟಿದ್ದಾರಂತೆ. ಹಾಸ್ಯ ಭರಿತ ಔಟ್ ಅಂಡ್ ಔಟ್ ಮನರಂಜನೆಯ ಸಿನಿಮಾದಲ್ಲಿ ನವೀನ್ ನಾಯಕನಾಗಿ ಮಿಂಚಲಿದ್ದಾರೆ. 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವ ಖುಷಿಯಲ್ಲಿರುವ ನಿರ್ದೇಶಕ ಕುಮಾರ್ ಅದೆ ಸಂತಸದಲ್ಲಿ 'ಚಾರ್ಲಿ ಚಾಪ್ಲಿನ್' ಕೈಗೆತ್ತಿಕೊಂಡಿದ್ದಾರೆ.

ಈ ಚಿತ್ರ ಜರ್ನಿ ಬೇಸ್ಡ್ ಸಿನಿಮಾವಾಗಿದೆಯಂತೆ. ಬೆಂಗಳೂರಿನಿಂದ ಮಡಿಕೇರಿಗೆ ಹೋಗುವ ಒಂದು ತಂಡ ಅಲ್ಲಿ ಏನೆಲ್ಲ ಆಗುತ್ತೆ ಎಂಬುವುದನ್ನ 'ಚಾರ್ಲಿ ಚಾಪ್ಲಿನ್' ಚಿತ್ರದ ಮೂಲಕ ಕಟ್ಟಿಕೊಡಲಿದ್ದಾರಂತೆ ನಿರ್ದೇಶಕರು. ಚಿತ್ರದಲ್ಲಿ ನವೀನ್ ಗೆ ನಾಯಕಿಯಾಗಿ ಸಂಜನಾ ಆನಂದ್ ಕಾಣಿಸಿಕೊಳ್ಳಲಿದ್ದಾರಂತೆ.
ಸದ್ಯ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದ್ದು ಚಿತ್ರ ಜುಲೈನಲ್ಲಿ ಸೆಟ್ಟೇರುವ ಸಾಧ್ಯತೆ ಇದೆ. 'ಬಿಗ್ ಬಾಸ್' ಶೋಯಿಂದ ಹೊರ ಬಂದ ನಂತರ ಸಾಕಷ್ಟು ಕತೆಗಳನ್ನು ಕೇಳಿರುವ ನವೀನ್, 'ಚಾರ್ಲಿ ಚಾಪ್ಲಿನ್' ಕತೆ ಕೇಳಿ ಇಂಪ್ರೆಸ್ ಆಗಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸದ್ಯ ಭರ್ಜರಿ ತಯಾರಿಯಲ್ಲಿರುವ ಚಿತ್ರತಂಡ ಸಧ್ಯದಲ್ಲೇ ಹೆಚ್ಚಿನ ಮಾಹಿತಿಯನ್ನು ನೀಡಲಿದೆ.


Click it and Unblock the Notifications











