''ರೇಣುಕಾಸ್ವಾಮಿಯಂಥಹ ಗಂಡ ಯಾಕೆ ಬೇಕು'' - ತನಿಷಾ 'ಬೆಂಕಿ' ಮಾತು...!
ತಮ್ಮ ನೇರ ನಡೆ ನುಡಿಗಳಿಂದ ಹೆಸರುವಾಸಿಯಾದವರು ತನಿಷಾ ಕುಪ್ಪಂಡ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೊನೆಯ ಹಂತದವರೆಗೆ ತಲುಪಿ, ಬೆಂಕಿ ಎಂಬ ಬಿರುದಿನೊಂದಿಗೆ ಮರಳಿದ ತನಿಷಾ ಕುಪ್ಪಂಡಗೆ ಕನ್ನಡ ಚಿತ್ರರಂಗದ ಕುಖ್ಯಾತ ನಾಯಕ ದರ್ಶನ್ ಅಂದ್ರೆ ಪ್ರಾಣ. ಎಷ್ಟರ ಮಟ್ಟಿಗೆ ಅಂದರೆ, ಸದ್ಯಕ್ಕೆ ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ಇವರ ಕನಸಿನಲ್ಲಿ ಎಲ್ಲ ಬಂದು ಕಾಡ್ತಾರೆ. ಖುದ್ದು ತನಿಷಾ ಅವರೇ ಹಿಂದೆ ಸಂದರ್ಶನವೊಂದರಲ್ಲಿ ಈ ಮಾತು ಹೇಳಿದ್ದರು. ಇಂಥ ತನಿಷಾ ಕುಪ್ಪಂಡ ಈಗ ದರ್ಶನ್ ಪ್ರಕರಣದ ಕುರಿತು ಮಾತನಾಡಿದ್ದಾರೆ. ಸಹಜವಾಗಿ ದರ್ಶನ್ ಅವರ ಪರ ವಕಾಲತ್ತು ವಹಿಸಿಯೇ ತನಿಷಾ ಮಾತನಾಡಿದ್ದಾರೆ.
ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ತನಿಷಾ ಕುಪ್ಪಂಡ, ದರ್ಶನ್ ಸರ್.. ನನ್ನ ಪಾಲಿಗೆ ಮೊದಲಿಂದ ಸ್ಫೂರ್ತಿಯ ಚಿಲುಮೆ ಎಂದಿದ್ದಾರೆ. ದರ್ಶನ್ ಸರ್ ಜೈಲು ಸೇರಿದ ಕಾರಣಕ್ಕೆ ತುಂಬಾ ದುಃಖ ಆಗಿದೆ ಅಂದಿದ್ದಾರೆ. ಇನ್ನೂ ನಮ್ಮ ಸುತ್ತ ಮುತ್ತ ಹಲವು ಘಟನೆ ನಡೆಯುತ್ತವೆ. ಆ ಪೈಕಿ ಕೇವಲ ಒಳ್ಳೇ ಘಟನೆಯನ್ನ ಅಷ್ಟೇ ನಾವು ನೆನಪಿನಲ್ಲಿಡಬೇಕು ಎಂದಿದ್ದಾರೆ. ಕಹಿ ಘಟನೆಗಳನ್ನು ಜೀರ್ಣ ಮಾಡ್ಕೋಬೇಕು ಇಲ್ಲ ಬಿಟ್ಟು ಮುಂದೆ ಹೋಗಬೇಕು. ಸಾಧ್ಯವಾದರೆ ಎಲ್ಲರಿಗೂ ಎಲ್ಲದಕ್ಕೂ ನ್ಯಾಯ ಸಿಗಲಿ. ಯಾರು ಕಷ್ಟದಲ್ಲಿ ಇದ್ದಾರೆ ಅವರು ಕಷ್ಟ ಮುಗಿದು ಹೊರಗೆ ಬರಲಿ ಎಂದಿದ್ದಾರೆ.

ಮುಂದುವರೆದು ಮಾತನಾಡಿರುವ ತನಿಷಾ, ಗಂಡ ಎಂದು ಎನಿಸಿಕೊಂಡ ಮೇಲೆಯೂ ತನ್ನ ಖಾಸಗಿ ಭಾಗದ ಅಂಗದ ಫೋಟೊ ತೆಗೆದು ಬೇರೆಯವರಿಗೆ ಕಳಿಸ್ತಾರೆ ಅಂದರೆ ಅಂತ ಗಂಡನೇ ನನಗೆ ಬೇಕಾಗಿಲ್ಲ ಎಂದಿದ್ದಾರೆ. ಇನ್ನೂ.. ರೇಣುಕಾ ಸ್ವಾಮಿ ಹೊಟ್ಟೆಯಲ್ಲಿರುವ ಮಗು ಜಗತ್ತು ನೋಡಲು ಶುರು ಮಾಡಿದ ನಂತರ, ಆ ಮಗು ಅವನ ಅಪ್ಪನ ಬಗ್ಗೆ ಕೇಳಿದರೆ ಏನ್ ಹೇಳ್ಬೇಕು ಅನ್ನುವ ಪ್ರಶ್ನೆ ಅನೇಕರಲ್ಲಿದೆ. ಈ ಪ್ರಶ್ನೆಯನ್ನು ತನಿಷಾ ಕುಪ್ಪಂಡ ಅವರಿಗೆ ಈ ಹಿಂದೆ ಒಬ್ಬ ಪತ್ರಕರ್ತರು ಕೇಳಿದ್ದಾರೆ ಕೂಡ. ಆ ಪ್ರಶ್ನೆಗೆ ಅವತ್ತು ನೀಡಿದ ಉತ್ತರವನ್ನೇ ಪುನರುಚ್ಚಿಸಿರುವ ತನಿಷಾ ಇಂತಹ ವ್ಯಕ್ತಿತ್ವ ಹೊಂದಿದ್ದ ವ್ಯಕ್ತಿಯ ಮುಖವನ್ನು ಆ ಮಗು ನೋಡದೇ ಇರುವುದೇ ಒಳ್ಳೇಯದು ಅನಸುತ್ತೆ ಅಂದಿದ್ದಾರೆ.
ಇನ್ನೂ.. ಕೇವಲ ರೇಣುಕಾ ಸ್ವಾಮಿ ಮಾತ್ರ ಅಲ್ಲ, ರೇಣುಕಾ ಸ್ವಾಮಿಯ ಮನಸ್ಥಿತಿಯನ್ನೇ ಹೊಂದಿರುವ ಅನೇಕರು.. ದಿನನಿತ್ಯ ಕ್ರೂರವಾಗಿ, ಭೀಕರವಾಗಿ ಮೆಸೆಜ್ಗಳನ್ನು ಮಾಡ್ತಾನೇ ಇರ್ತಾರೆ ಎಂದಿರುವ ತನಿಷಾ, ಇಂತಹ ಕೆಲಸದ ವಿರುದ್ಧ ದೂರು ದಾಖಲಿಸಿದರೂ, ಆ ವ್ಯಕ್ತಿಯ ಜಾತಕವನ್ನೇ ನಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು.. ನಮಗೆ ಸಿಗಬೇಕಾದ ಸ್ಪಷ್ಟೀಕರಣ ಸಿಗಲ್ಲ ಎಂದಿದ್ದಾರೆ.

ಇನ್ನೂ.. ನಡೆಯುವ ಕೊಲೆ, ಅತ್ಯಾಚಾರಕ್ಕೆಲ್ಲ ಹುಡುಗಿಯರು ಹಾಕಿಕೊಳ್ಳುವ ಬಟ್ಟೆ ಕಾರಣ ಅನ್ನುವ ಮಾತುಗಳನ್ನು ಕಾಲ..ಕಾಲಕ್ಕೆ.. ಅನೇಕರು ಹೇಳಿದ್ದಾರೆ. ತನಿಷಾ ಅವರ ಕಿವಿಗೆ ಕೂಡ ಈ ಮಾತು ಬಿದ್ದಿದೆ. ಬಟ್ಟೆಯ ಬಗ್ಗೆ ಅನೇಕರು ತನಿಷಾ ಅವರಿಗೆ ಪಾಠವನ್ನೂ ಮಾಡಿದ್ದಾರೆ. ಆ ಸಾಮಾನ್ಯ ವ್ಯಕ್ತಿಗಳ ಮೇಲೆ ಕೂಡ ಕೆಂಡ ಕಾರಿರುವ ತನಿಷಾ, ನಿಮ್ಮಂತವರು ಇರುವುದರಿಂದಾನೆ ಗುರು ನಮ್ಮಂತವರಿಗೆ ನಮ್ಮ ಕೆಲಸವನ್ನು ನಿಯತ್ತಾಗಿ ಮಾಡಲು ಆಗ್ತಿಲ್ಲ ಎಂದಿದ್ದಾರೆ. ಹೆಣ್ಣು ಮಕ್ಕಳಿಗೆ ಗೌರವ ಕೊಡುವುದನ್ನು ಮೊದಲು ಕಲಿರಿ ಎಂದು ಕೂಡ ತನಿಷಾ ಹೇಳಿದ್ದಾರೆ. ಮುಂದುವರೆದು ಬೇಕಾ ಬಿಟ್ಟಿ ಕಮೆಂಟ್ ಮಾಡುವ ಬದಲು, ಜೀವನದಲ್ಲಿ ಮೊದಲು ಏನಾದರೂ ಸಾಧನೆ ಮಾಡಿ ಎಂದಿರುವ ತನಿಷಾ, ನಮ್ಮಂತೆಯೇ ಸಾಧನೆ ಮಾಡಿ, ಮನೆಯವರಿಗೆ ತೋರಿಸಿ ಆ ನಂತರ ಮಾತನಾಡಿ ಎಂಬ ಸವಾಲನ್ನೂ ಹಾಕಿದ್ದಾರೆ ತನಿಷಾ ಕುಪ್ಪಂಡ.
ಇದನ್ನು ಹೊರತು ಪಡಿಸಿ ಟಿವಿ09ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ತನಿಷಾ ಕುಪ್ಪಂಡ, ದರ್ಶನ್ ಅವರು ತಪ್ಪು ಮಾಡಿದಾರಾ, ಇಲ್ಲವಾ.. ಅದೆಲ್ಲವೂ ಕಾನೂನು ಪ್ರಕಾರವೇ ಗೊತ್ತಾಗಲಿದೆ ಎಂದಿದ್ದಾರೆ. ತಪ್ಪು ಮಾಡಿದ ರೇಣುಕಾ ಸ್ವಾಮಿಯನ್ನು ಪ್ರಶ್ನೆ ಮಾಡಲು ಆಗಲ್ಲ. ಯಾಕೆಂದರೆ ಆ ವ್ಯಕ್ತಿಯೇ ಇಲ್ಲ ಅಂದಿದ್ಧಾರೆ. ಈ ತರಹದ ವಿಚಾರಗಳಿಗೆ ಕಠಿಣ ಶಿಕ್ಷೆ ಇದ್ದಿದ್ದರೆ ರೇಣುಕಾ ಸ್ವಾಮಿ ಅಂತವರು ಈ ತರಹದ ಧೈರ್ಯ ಮಾಡುತ್ತಿರಲಿಲ್ಲ. ಇಂತಹದ್ದೊಂದು ಪ್ರಕರಣನೇ ಆಗ್ತಿರಲಿಲ್ವೇನೋ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.


Click it and Unblock the Notifications











