"ಯಾರು ಕಿತ್ತೋದ್ ನನ್ಮಗ, ಜಗ್ಗೇಶ್!?"; ಕ್ಷಮೆ ಕೇಳದಿದ್ದರೆ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ
ಸ್ಯಾಂಡಲ್ವುಡ್ನಲ್ಲಿ ತಣ್ಣಗಾಗಿದ್ದ ಹುಲಿ ಉಗುರು ಪ್ರಕರಣ ಮತ್ತೆ ನಿಧಾನವಾಗಿ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಬಿಗ್ಬಾಸ್ ಸ್ಫರ್ಧಿ ವರ್ತೂರ್ ಸಂತೋಷ್ ಕುರಿತು ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ನೀಡಿದ ಹೇಳಿಕೆ. ತಾವು ಏನೋ ಮಾತನಾಡಿದರೆ ಅದು ಮತ್ತೇನೋ ಸುದ್ದಿ ಆಗುತ್ತದೆ ಎಂದು ಹೇಳುವಾಗ ಹುಲಿ ಉಗುರಿನ ಪ್ರಕರಣದ ಬಗ್ಗೆ ನವರಸ ನಾಯಕ ಮಾತನಾಡಿದ್ದರು.
'ರಂಗನಾಯಕ' ಸಿನಿಮಾ ಹಾಡಿನ ಬಿಡುಗಡೆ ಸಮಾರಂಭದ ವೇದಿಕೆಯಲ್ಲಿ ಜಗ್ಗೇಶ್ ಸಾಕಷ್ಟು ವಿಚಾರಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಹುಲಿ ಉಗುರಿನ ಪ್ರಕರಣದ ಬಗ್ಗೆ ಹೇಳುತ್ತಾ "ಯಾವನೋ ಕಿತ್ತೋದ್ ನನ್ಮಗ ರಿಯಲ್ ಆಗಿ ಹುಲಿ ಉಗುರು ಹಾಕ್ಕೊಂಡು, ಯಾವುದೋ ಟಿವಿಯಲ್ಲಿ ತಗಲಾಕ್ಕೊಂಡ" ಎಂದು ಹೇಳಿದ್ದರು. ವರ್ತೂರ್ ಸಂತೋಷ್ ಬಗ್ಗೆ ಜಗ್ಗೇಶ್ ಹೀಗೆ ಹೇಳಿದ್ದಾರೆ, ಹಿರಿಯ ನಟನಾಗಿ ರಾಜ್ಯಸಭಾ ಸದಸ್ಯ ಇಂತಹ ಪದಗಳನ್ನು ಬಳಸುವುದು ಎಷ್ಟು ಸರಿ? ಎಂದು ಸೋಶಿಯಲ್ ಮೀಡಿಯಾದಲ್ಲಿ ಟೀಕೆ ವ್ಯಕ್ತವಾಗುತ್ತಿದೆ.

ಕೆಲವರು ಜಗ್ಗೇಶ್ ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಈಗಾಗಲೇ ಈ ಬಗ್ಗೆ ವರ್ತೂರು ಸಂತೋಷ್ ಸಹ ಮಾತನಾಡಿದ್ದಾರೆ. "ಬಿಡಿ ಅವ್ರು ದೊಡ್ಡೋರು. ನಾನು ಏನು ಹೇಳ್ತೀನಿ ಅಂದ್ರೆ, ಕಾಲೈ ತಸ್ಮೈ ನಮಃ ಅಷ್ಟೆ. ನಾನು ಏನು ಹೇಳ್ತೀನಿ ಅಂದ್ರೆ, ಕೆಲವೊಂದಕ್ಕೆ ಉತ್ತರ ಕೊಡಬೇಕು. ಕೆಲವೊಂದಕ್ಕೆ ಸೈಲೆಂಟ್ ಆಗಿ ಇದ್ದರೆ ಸಾಕು ಉತ್ತರ ಸಿಗುತ್ತದೆ." ಎಂದಿದ್ದಾರೆ.
ಅಭಿಮಾನಿಗಳು ಮಾತ್ರ ನಟ ಜಗ್ಗೇಶ್ ಕ್ಷಮೆ ಕೇಳಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹೆಬ್ಬಗೋಡಿ ಮಾಜಿ ನಗರಸಭೆ ಸದಸ್ಯ ನಾರಾಯಣ ಸ್ವಾಮಿ ಈ ಬಗ್ಗೆ ವಿಡಿಯೋ ಮಾಡಿ ಜಗ್ಗೇಶ್ ಕ್ಷಮೆಗೆ ಆಗ್ರಹಿಸಿದ್ದಾರೆ. ನಾವು ವರ್ತೂರ್ ಸಂತೋಷ್ ಅಭಿಮಾನಿಗಳು. ಅವರ ಬಗ್ಗೆ ನೀವು ಮಾತನಾಡಿದ ರೀತಿ ಸರಿಯಿಲ್ಲ. ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನಿಮ್ಮ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದಿದ್ದಾರೆ.

"ಬಿಗ್ಬಾಸ್ ಖ್ಯಾತಿಯ ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್ ಬಗ್ಗೆ ರಾಜ್ಯಸಭಾ ಸದಸ್ಯ. ಚಲನಚಿತ್ರ ನಟ ಜಗ್ಗೇಶ್ ನಾಲಾಯಕ್ ಎಂದಿದ್ದಾರೆ. ಸಂತೋಷ್ ಒಳ್ಳೆಯ ಮನುಷ್ಯ. ಸಣ್ಣ ಹುಡುಗನನ್ನು ಕೂಡ ಅಣ್ಣ ಎಂದು ಕರೆಯುವ ಒಳ್ಳೆ ಹೃದಯ, ಸ್ನೇಹಜೀವಿ. ಅಂತಹವರ ಬಗ್ಗೆ ಕೆಟ್ಟ ಪದಗಳನ್ನು ಬಳಸಲಾಗಿದೆ. ಇದರಲ್ಲೇ ನೀನು ಎಲ್ಲರಿಗೂ ಯಾವ ರೀತಿ ಮರ್ಯಾದೆ ಕೊಡುತ್ತೀಯ ಎನ್ನುವುದು ಗೊತ್ತಾಗುತ್ತಿದೆ. ಕೂಡಲೇ ಮಾಧ್ಯಮದ ಮುಂದೆ ಬಂದು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ನಿಮ್ಮ ಮನೆಗೆ ಮುತ್ತಿಗೆ ಹಾಕಿ ಧರಣಿ ಕೂರುತ್ತೇವೆ" ಎಂದಿದ್ದಾರೆ.
"ಕ್ಷಮೆ ಕೇಳದಿದ್ದರೆ ವರ್ತೂರು ಸಂತೋಷ್ ಅಭಿಮಾನಿಗಳು ನಿನಗೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ. ಸಂತೋಷ್, ಕ್ಷತ್ರಿಯ ವಂಶದಲ್ಲಿ ಹುಟ್ಟಿದ್ದಾನೆ. ಅಂತಹ ಹುಡುಗನ ಬಗ್ಗೆ ಕೀಳುಮಟ್ಟದ ಭಾಷೆ ಬಳಸಿದ್ದೀಯ. ವಹ್ನಿಕುಲ ಕ್ಷತ್ರಿಯರ ಹುಡುಗ ಆತ. ಈಗ ಅವನು ಬೆಳವಣಿಗೆ ಆಗುತ್ತಿದ್ದಾನೆ ಎಂದು ಹೊಟ್ಟೆ ಕಿಚ್ಚಿನಿಂದ ಈ ರೀತಿಯ ಪದಗಳನ್ನು ಬಳಸುತ್ತಿದ್ದೀಯಾ? ಅಂದು ನೀನು ಯಾಕೆ ಕೋರ್ಟ್ ಮೊರೆ ಹೋದೆ ಹೇಳು" ಎಂದು ಪ್ರಶ್ನಿಸಿದ್ದಾರೆ.
ಹುಲಿ ಉಗುರಿನ ಪೆಂಡೆಂಟ್ ಹೊಂದಿದ್ದ ಕಾರಣಕ್ಕೆ ಬಿಗ್ಬಾಸ್ ಮನೆಯಿಂದಲೇ ವರ್ತೂರು ಸಂತೋಷ್ ಬಂಧನವಾಗಿತ್ತು. ಬಳಿಕ ಜೈಲುಶಿಕ್ಷೆಯನ್ನು ಅನುಭವಿಸಿ ಬಳಿಕ ಜಾಮೀನು ಪಡೆದು ಬಂದಿದ್ದರು. ಮತ್ತೆ ಬಿಗ್ಬಾಸ್ ಮನೆ ಒಳಗೆ ಹೋಗಿ ಫಿನಾಲೆವರೆಗೂ ಬಂದಿದ್ದರು. ಇನ್ನು ವರ್ತೂರು ಸಂತೋಷ್ ಹುಲಿ ಉಗುರಿನ ವಿಚಾರ ಹೊರಬರುತ್ತಿದ್ದಂತೆ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ ಮನೆಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಪೆಂಡೆಂಟ್ ವಶಕ್ಕೆ ಪಡೆದಿದ್ದರು.


Click it and Unblock the Notifications











