ಲಾಂಗ್ ರೀಲ್ಸ್ ವಿವಾದ, ಸೇಬು ಹಣ್ಣು ತಿನ್ನುತ್ತಾ ಜೈಲಿಂದ ಹೊರ ಬಂದ ರಜತ್-ವಿನಯ್..!
ಬಿಗ್ ಬಾಸ್ ಮನೆಗೆ ಹೋಗಿ ಬಂದ ಬಹುತೇಕರು ದೇಶ ಗೆದ್ದು ಬಂದವರಂತೆ ಬೀಗುತ್ತಾರೆ. ತಲೆ ನಿಲ್ಲದವರಂತೆ ವರ್ತಿಸುತ್ತಾರೆ. ಜನಪ್ರಿಯತೆ ಸಿಕ್ಕ ತಕ್ಷಣ ಮೈ ಮರೆಯುತ್ತಾರೆ. ಇದಕ್ಕೆ ಜ್ವಲಂತ ಉದಾಹರಣೆಯಂತೆ ಯಾರನ್ನೋ ಮೆಚ್ಚಿಸಲು ಮಚ್ಚು ಹಿಡಿದು ಪರಪ್ಪನ ಅಗ್ರಹಾರದ ಪಾಲಾಗಿದ್ದ ಬಿಗ್ ಬಾಸ್ ಸ್ಫರ್ಧಿಗಳಾದ ರಜತ್ ಮತ್ತು ವಿನಯ್ ಗೌಡ ಇಂದು ಜೈಲಿಂದ ಬಿಡುಗಡೆಯಾಗಿದ್ದಾರೆ.
ಪೊಲೀಸರ ಪರ ವಾದ ಮಂಡಿಸಿದ ವಕೀಲರು ಆರೋಪಿಗಳು ಸಾಕ್ಷ್ಯ ನಾಶ ಮಾಡಿದ್ದು ಅವರಿಗೆ ಜಾಮೀನು ನೀಡಬಾರದೆಂದು ವಾದಿಸಿದರು. ಇದಕ್ಕೆ ಪ್ರತಿ ವಾದ ಮಂಡಿಸಿದ ವಿನಯ್ ಮತ್ತು ರಜತ್ ಪರ ವಕೀಲರು ಪೊಲೀಸರು ಸರ್ಚ್ ವಾರೆಂಟ್ ಪಡೆದು ಆರೋಪಿಗಳ ಮನೆ ಪರಿಶೀಲಿಸಿದ್ದಾರೆ. ಮುಂದೆ ತನಿಖೆಗೆ ಇಬ್ಬರು ಸಹಕಾರ ಕೂಡ ನೀಡಲಿದ್ದಾರೆ ಎಂದು ಹೇಳಿದರು.

ಈ ಭಾನುವಾರ ವಿನಯ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಬೇಕಿದೆ ಅವರಿಗೆ ಕಣ್ಣಿನ ಸಮಸ್ಯೆ ಕೂಡ ಇದೆ ಹೀಗಾಗಿ ಜಾಮೀನು ನೀಡಬೇಕೆಂದು ಮನವಿಯನ್ನು ಮಾಡಿದರು. ಇನ್ನು ಪೊಲೀಸರು ಕೂಡ ವಿನಯ್ ಮತ್ತು ರಜತ್ ಅವರನ್ನು ವಶಕ್ಕೆ ಪಡೆಯುವ ಅವಶ್ಯಕತೆ ಇಲ್ಲ ಎಂದು ಹೇಳಿದರು. ಈ ಹಿನ್ನೆಲೆ ಜಾಮೀನು ಮಂಜೂರು ಮಾಡಿದ ನ್ಯಾಯಾಧೀಶರು 10 ಸಾವಿರ ರೂ. ಶ್ಯೂರಿಟಿ ಸಲ್ಲಿಸಲು ಆರೋಪಿಗಳಿಗೆ ಸೂಚನೆಯನ್ನು ನೀಡಿದರು.
ಅಂದ್ಹಾಗೇ ರೀಲ್ಸ್ ಹುಚ್ಚಿಂದ ಸಂಕಷ್ಟಕ್ಕೆ ಸಿಲುಕಿದ್ದ ರಜತ್ ಮತ್ತು ವಿನಯ್ ಗೌಡ ಅವರಿಗೆ 24ನೇ ಎಸಿಎಂಎಂ ನ್ಯಾಯಾಲಯ ನಿನ್ನೆ ಷರತ್ತು ಬದ್ದ ಜಾಮೀನು ಮಂಜೂರು ಮಾಡಿತ್ತು. ಆದರೆ ಜಾಮೀನು ಆದೇಶದ ಪ್ರತಿ ಪೊಲೀಸರಿಗೆ ತಡವಾಗಿ ಸಿಕ್ಕಿತ್ತು. ಈ ಹಿನ್ನೆಲೆ ನಿನ್ನೆ ರಾತ್ರಿ ಪರಪ್ಪನ ಅಗ್ರಹಾರದಲ್ಲಿಯೇ ಕಳೆದ ಇಬ್ಬರು ಇಂದು ಬಿಡುಗಡೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳನ್ನು ಪೂರೈಸಿ ಜೈಲಿಂದ ಹೊರ ಬಂದಿದ್ದಾರೆ.
ಬಿಡುಗಡೆಯಾದ ಬೆನ್ನಲ್ಲೇ ಮಾಧ್ಯಮದವರ ಜೊತೆ ಮಾತನಾಡಿದ ವಿನಯ್ ಗೌಡ ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದ ಹೇಳಿದ್ದಾರೆ. ಎಲ್ಲರೂ ಸೇರಿ ಮಾತನಾಡೋಣ ಎಂದು ಹೇಳಿ ತೆರಳಿದ್ದಾರೆ. ಸೇಬು ಹಣ್ಣು ತಿನ್ನುತ್ತಾ ಬಂದ ರಜತ್ ಕಿಶನ್ ಈಗ ಮಾತನಾಡಲ್ಲ ಮುಂದೆ ನೋಡೋಣ ಎಂದು ತೆರಳಿದ್ದಾರೆ. ಇದೇ ಸಮಯದಲ್ಲಿ ಜೈಲಿಗೆ ಬಂದಿದ್ದ ಕೆಲ ವಿಸಿಟರ್ಗಳ ಜೊತೆ ಸೆಲ್ಫಿಗೆ ಪೋಸ್ ನೀಡಿದ್ದಾರೆ.
ಇನ್ನುಳಿದಂತೆ ಸಾರ್ವಜನಿಕವಾಗಿ ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಹಿನ್ನೆಲೆ ಪೊಲೀಸರು ರಜತ್ ಕಿಶನ್ ಮತ್ತು ವಿನಯ್ ಗೌಡ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರಿನ ಬಸವೇಶ್ವರ ನಗರ ಠಾಣೆಯ ಪೊಲೀಸರು ನೋಟಿಸ್ ನೀಡಿದ್ದರು. ಆ ನಂತರ ವಿಚಾರಣೆಗೆ ಹಾಜರಾಗಿದ್ದ ಇಬ್ಬರು ಅದು ಫೈಬರ್ ಮಚ್ಚು ಎಂದು ಹೇಳಿದ್ದರು. ಆ ನಂತರ ರಜತ್ ಪತ್ನಿ ಅಕ್ಷತಾ ಪೊಲೀಸರಿಗೆ ಫೈಬರ್ ಮಚ್ಚನ್ನು ತಂದು ನೀಡಿದ್ದರು.
ಆದರೆ ಆ ನಂತರ ರೀಲ್ಸ್ನಲ್ಲಿರುವ ಮಚ್ಚು ಮತ್ತು ಠಾಣೆಗೆ ನೀಡಲಾದ ಮಚ್ಚಿನಲ್ಲಿ ವ್ಯತ್ಯಾಸ ಇರುವುದನ್ನು ಗಮನಿಸಿದ ಪೊಲೀಸರು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಇಬ್ಬರನ್ನು ಬಂಧಿಸಿದ್ದರು. ಸ್ಥಳ ಮಹಜರು ನಡೆಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿ ಏಪ್ರಿಲ್ 9ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇದರ ನಡುವೆ ಜಾಮೀನಿಗೆ ಇಬ್ಬರ ಪರ ವಕೀಲರು ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದರು. ಈಗ ಇಬ್ಬರಿಗೂ ಷರತ್ತುಬದ್ದ ಜಾಮೀನು ಮಂಜೂರು ಆಗಿದೆ. ಪರಪ್ಪನ ಅಗ್ರಹಾರದಿಂದ ಮುಕ್ತಿ ಸಿಕ್ಕಿದೆ.


Click it and Unblock the Notifications











