ಕಲರ್ಸ್ ಕನ್ನಡ ಜೊತೆ ಕಿರಿಕ್? ಕೊನೆಗೂ ಮೌನ ಮುರಿದ ಸುದೀಪ್
ಇತ್ತೀಚೆಗೆ ನಟ ಸುದೀಪ್ ಇನ್ನು ಮುಂದೆ ನಾನು ಬಿಗ್ಬಾಸ್ ಶೋ ನಿರೂಪಣೆ ಮಾಡಲ್ಲ, ಇದೇ ನನ್ನ ಕೊನೆ ಸೀಸನ್ ಎಂದು ಹೇಳಿದ್ದರು. ಈ ಬಗ್ಗೆ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದರು. ಇದು ಅಭಿಮಾನಿಗಳಿಗೆ ಬೇಸರ ತಂದಿತ್ತು. ಕಿಚ್ಚನ ಈ ದಿಢೀರ್ ನಿರ್ಧಾರಕ್ಕೆ ಕಾರಣವೇನು? ಎನ್ನುವ ಚರ್ಚೆ ನಡೀತಿದೆ.
ಬಿಗ್ಬಾಸ್ ಶೋ ಆಯೋಜಕರ ಜೊತೆಗಿನ ಭಿನ್ನಾಭಿಪ್ರಾಯದಿಂದಲೇ ಸುದೀಪ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಗುಲ್ಲಾಗಿತ್ತು. ಕಿಚ್ಚನಿಗೆ ಅವಮಾನವಾಗಿದೆ. ಅದಕ್ಕೆ ಈ ನಿರ್ಣಯ ಎಂದು ಬಿಗ್ಬಾಸ್ ಮಾಜಿ ಸ್ಪರ್ಧಿ ರೂಪೇಶ್ ರಾಜಣ್ಣ ಹೇಳಿದ್ದರು. ಇದೆಲ್ಲದರ ಬೆನ್ನಲ್ಲೇ ಸುದೀಪ್ ಇದೀಗ ಈ ಬಗ್ಗೆ ಮತ್ತೊಂದು ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.

"ನನ್ನ ಟ್ವೀಟ್ ಬಗ್ಗೆ ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲವನ್ನು ನಾನು ಪ್ರಶಂಸಿಸುತ್ತೇನೆ. ಇದು ನಿಜವಾಗಿಯೂ ನನಗೆ ಖುಷಿ ತಂದಿದೆ. ಆದಾಗ್ಯೂ, ಚಾನಲ್ ಹಾಗೂ ನನ್ನ ನಡುವೆ ಯಾವುದೋ ಸಂಘರ್ಷ ಇದೆ ಎಂದು ಊಹಿಸಿಕೊಂಡು ಕಾಮೆಂಟ್ ಹಾಗೂ ವೀಡಿಯೋ ಮಾಡುವವರಲ್ಲಿ ನಾನು ಕೇಳಿಕೊಳ್ತೀನಿ. ಕಲರ್ಸ್ ಕನ್ನಡ ಹಾಗೂ ನಾನು ಸುದೀರ್ಘ ಮತ್ತು ಸಕಾರಾತ್ಮಕ ಪ್ರಯಾಣವನ್ನು ಹಂಚಿಕೊಂಡಿದ್ದೇವೆ. "ಅಗೌರವ" ಎಂಬ ಪದವನ್ನು ಅದರೊಂದಿಗೆ ಸೇರಿಸುವುದು ಸರಿಯಲ್ಲ ಎಂದಿದ್ದಾರೆ.
"ಈ ಸಮಸ್ಯೆಯ ಸುತ್ತಲಿನ ಯಾವುದೇ ಊಹೆಗಳಿಗೆ ಆಧಾರವಿಲ್ಲ. ಹಾಗೂ ಇದನ್ನು ಸಮರ್ಥಿಸಲು ಸಾಧ್ಯವಿಲ್ಲ. ನನ್ನ ಟ್ವೀಟ್ ನೇರ ಮತ್ತು ಪ್ರಾಮಾಣಿಕವಾಗಿದೆ. ಕಲರ್ಸ್ ಜೊತೆ ನನ್ನ ಸಂಬಂಧ ಅದ್ಭುತವಾಗಿದೆ ಮತ್ತು ಅವರು ಯಾವಾಗಲೂ ನನ್ನನ್ನು ಗೌರವದಿಂದ ನಡೆಸಿಕೊಂಡಿದ್ದಾರೆ. ನಿರ್ದೇಶಕ ಪ್ರಕಾಶ್, ನಂಬಲಾಗದಷ್ಟು ಪ್ರತಿಭಾವಂತ ಮತ್ತು ಶಕ್ತಿಯುತ ವ್ಯಕ್ತಿ, ಮತ್ತು ನಾನು ಅವರ ಬಗ್ಗೆ ಆಳವಾದ ಗೌರವವನ್ನು ಹೊಂದಿದ್ದೇನೆ. ನಾನು ಕೆಲಸ ಮಾಡುತ್ತಿರುವ ತಂಡವು ಅನಗತ್ಯ ಆರೋಪಗಳನ್ನು ಎದುರಿಸುತ್ತಿರುವಾಗ ಸುಮ್ಮನೆ ಕುಳಿತು ಆನಂದಿಸುವವನಲ್ಲ" ಎಂದು ಸುದೀಪ್ ಬೇಸರ ಹೊರ ಹಾಕಿದ್ದಾರೆ.
ಇದ್ದಕ್ಕಿದಂತೆ ಬಿಗ್ಬಾಸ್ ಶೋಗೆ ಸುದೀಪ್ ಗುಡ್ ಬೈ ಹೇಳಿದಾಗ ಸಹಜವಾಗಿಯೇ ಅದಕ್ಕೆ ಕಾರಣವೇನು? ಎನ್ನುವ ಗೊಂದಲ ಶುರುವಾಗಿತ್ತು. ಕಿಚ್ಚನಿಗೆ ಅವಮಾನವಾಗಿದೆ, ಅದಕ್ಕೆ ಶೋ ಬಿಡುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕೊಡ್ತೀನಿ ನಾಳೆ ಎಂದು ರೂಪೇಶ್ ರಾಜಣ್ಣ ಮೊದಲು ಟ್ವೀಟ್ ಮಾಡಿದ್ದರು. ಬಳಿಕ ಒಂದು ವೀಡಿಯೋ ಮಾಡಿ ಈ ವಿಚಾರದ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದರು.
ಬಿಗ್ಬಾಸ್ ಶೋನಲ್ಲಿ ಇತ್ತೀಚೆಗೆ ಸ್ಪರ್ಧಿಗಳು ಹೆಚ್ಚು ಇಂಗ್ಲೀಷ್ ಬಳಸುತ್ತಿದ್ದಾರೆ. ಈ ಹಿಂದೆ ಯಾರಾದರೂ ಹೀಗೆ ಮಾಡಿದರೆ ಕೂಡಲೇ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡು ಹಾಕಿ ಎಚ್ಚರಿಸಲಾಗುತ್ತಿತ್ತು. ಆದರೆ ಬರಬರುತ್ತಾ ಅದನ್ನು ನಿಲ್ಲಿಸಿದ್ದಾರೆ, ಈ ಬಗ್ಗೆ ಸುದೀಪ್ ಗಮನ ಸೆಳೆದರೂ ಆಯೋಜಕರು ತಲೆ ಕೆಡಿಸಿಕೊಳ್ಳಲಿಲ್ಲ. ಇನ್ನು ಶೋಗೆ ಪ್ರಕಾಶ್ ಎಂಬ ಹೊಸಬರು ಈಗ ನಿರ್ದೇಶಕರಾಗಿದ್ದಾರೆ. ಅವರು ಮೂಲತಃ ತಮಿಳಿನವರು. ಇನ್ನು ಶೋ ಆಯೋಜಕಿ ಸುಷ್ಮಾ ಮರಾಠಿಯವರು. ಹಾಗಾಗಿ ಸ್ಪರ್ಧಿಗಳ ಇಂಗ್ಲೀಷ್ ಬಳಕೆ ಬಗ್ಗೆ ಕ್ಯಾರೇ ಅನ್ನುತ್ತಿಲ್ಲ.
ಈ ಬಾರಿ ಸ್ವರ್ಗ ಹಾಗೂ ನರಕ ಎನ್ನುವ ಕಾನ್ಸೆಪ್ಟ್ನಲ್ಲಿ ಬಿಗ್ಬಾಸ್ ಸೀಸನ್ ಆರಂಭವಾಗಿತ್ತು. ನರಕದ ತಂಡದಲ್ಲಿದ್ದ ಮಹಿಳೆಯರಿಗೆ ಸರಿಯಾದ ಶೌಚಾಲಯದ ವ್ಯವಸ್ಥೆ ಇರಲಿಲ್ಲ, ಇನ್ನು ವೀಕೆಂಡ್ ಎಪಿಸೋಡ್ಗಳಲ್ಲಿ ನರಕ ವಾಸಿಗಳು ನಿಂತೇ ಸುದೀಪ್ ಜೊತೆ ಮಾತನಾಡಬೇಕಾಗಿತ್ತು. ಅವರು ಕೂರಲು ಅವಕಾಶ ಕೊಡುವಂತೆ ಸುದೀಪ್ ಹೇಳಿದರೂ ಕೇಳಲಿಲ್ಲ, ಇನ್ನು ರಮ್ಮಿ ಆಪ್ ಹೆಸರನ್ನು ಕಿಚ್ಚ ಶೋನಲ್ಲಿ ಹೇಳಲು ಹಿಂಗೇಟು ಹಾಕುತ್ತಿದ್ದರು. ಆದರೆ ಅದಕ್ಕೆ ಆಯೋಜಕರು ಒಪ್ಪುತ್ತಿರಲಿಲ್ಲ. ಹೀಗೆ ಹಲವು ಕಾರಣಗಳಿಂದ ಸುದೀಪ್ ಶೋ ತೊರೆಯುತ್ತಿದ್ದಾರೆ ಎಂದು ರೂಪೇಶ್ ರಾಜಣ್ಣ ಹೇಳಿದ್ದರು.
ಸದ್ಯ ಎಲ್ಲಾ ಗೊಂದಲಕ್ಕೂ ಸುದೀಪ್ ತೆರೆ ಎಳೆದಿದ್ದಾರೆ. ಕಲರ್ಸ್ ಜೊತೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಈ ಬಗ್ಗೆ ಕೇಳಿಬರುತ್ತಿರುವ ವದಂತಿಗಳೆಲ್ಲಾ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.


Click it and Unblock the Notifications











