"ನಾನು ಕೈ ಹಿಡಿಯುವ ಹುಡುಗಿ ಸಿಎಂ ಸಿದ್ದರಾಮಯ್ಯ, ರವಿಚಂದ್ರನ್ ಅವ್ರ ಹೆಂಡ್ತಿ ತರ ಅಂದುಕೊಳ್ಳಿ"
ಒಳ್ಳೆ ಹುಡುಗ ಪ್ರಥಮ್ ಇತ್ತೀಚೆಗೆ ಸದ್ದಿಲ್ಲದೇ ನಿಶ್ಚಿತಾರ್ಥ್ ಮಾಡಿಕೊಂಡಿದ್ದರು. ನಂತರ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಆಪ್ತರು, ಅಭಿಮಾನಿಗಳು ಜೋಡಿಗೆ ಶುಭ ಹಾರೈಸಿದ್ದರು. ಪ್ರಥಮ್ ಕೈಹಿಡಿಯುತ್ತಿರುವ ಹುಡುಗಿ ಯಾರು? ಆಕೆಯ ಹಿನ್ನೆಲೆ ಏನು ಎನ್ನುವ ಬಗ್ಗೆ ಮಾಹಿತಿ ಕೂಡ ಸಿಕ್ಕಿತ್ತು. ಇದೀಗ ತಮ್ಮಾ ಭಾವಿ ಪತ್ನಿ ಬಗ್ಗೆ ಪ್ರಥಮ್ ತಮ್ಮದೇ ಶೈಲಿಯಲ್ಲಿ ವಿವರಿಸಿದ್ದಾರೆ.
ಬಿಗ್ಬಾಸ್ ಖ್ಯಾತಿಯ ಪ್ರಥಮ್ ಮಂಡ್ಯ ಮೂಲಕ ಭಾನುಶ್ರೀ ಎಂಬುವವರ ಕೈ ಹಿಡಿಯುತ್ತಿದ್ದಾರೆ. ಆಕೆ ಮಂಡ್ಯದ ಒಂದು ಹಳ್ಳಿಯವರು. ಸದ್ಯ ಡಿಗ್ರಿ ಮುಗಿಸಿ ಡಬಲ್ ಡಿಗ್ರಿ ಮಾಡಲು ಸಿದ್ಧತೆ ನಡೆಸಿದ್ದಾರೆ. 'ಕರ್ನಾಟಕ ಅಳಿಯ' ಚಿತ್ರದಲ್ಲಿ ನಟಿಸುತ್ತಿರುವ ಪ್ರಥಮ್ ಈಗ ಮಂಡ್ಯ ಅಳಿಯ ಆಗುತ್ತಿದ್ದಾರೆ. ದಿಢೀರನೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಯಾಕೆ? ಮದುವೆ ಯಾವಾಗ? ಹೇಗಿರುತ್ತೆ? ಎನ್ನುವುದರ ಬಗ್ಗೆ ಕೂಡ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಪ್ರಥಮ್ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

ಸಿನಿಮಾ ನಿರ್ದೇಶಕರಾಗಿದ್ದ ಪ್ರಥಮ್ ಬಿಗ್ಬಾಸ್ ಸೀಸನ್- 4ರಲ್ಲಿ ಭಾಗಿ ಆಗಿದ್ದರು. ತಮ್ಮ ನೇರ ಹಾಗೂ ನಾನ್ಸ್ಟಾಪ್ ಮಾತಿನಿಂದ ಎಲ್ಲರ ಗಮನ ಸೆಳೆದಿದ್ದರು. ಕೊನೆಯ ಶೋನಲ್ಲಿ ವಿಜೇತರಾಗಿ ಟ್ರೋಫಿಗೆ ಮುತ್ತಿಟ್ಟಿದ್ದರು. ನಂತರ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರು. ಕಳೆದ ವರ್ಷ 'ನಟ ಭಯಂಕರ' ಸಿನಿಮಾ ನಿರ್ದೇಶಿಸಿ, ನಟಿಸಿದ್ದರು.
ನನ್ನದು ಅರೇಂಜ್ ಮ್ಯಾರೇಜ್
ಸದ್ಯ ಪ್ರಥಮ್ ಫೇಸ್ಬುಕ್ನಲ್ಲಿ ತಮ್ಮ ಮದುವೆ ಬಗ್ಗೆ ಈ ರೀತಿ ಬರೆದುಕೊಂಡಿದ್ದಾರೆ. "ನನ್ನದು ಕಂಪ್ಲೀಟ್ ಅರೇಂಜ್ ಮ್ಯಾರೇಜ್; ಯಾವುದೇ ಆಡಂಬರ, ವೈಭವ ಇರುವುದಿಲ್ಲ. ನೀವೆಲ್ಲರೂ ಹೇಗೆ ಬದುಕುತ್ತಿದ್ದೀರೋ ನಾವು ಕೂಡ ಹಾಗೇ... ನನ್ನ ಕೈಹಿಡಿಯುವವರು ಮಾಧ್ಯಮ, ಸೋಶಿಯಲ್ ಮೀಡಿಯಾ, ಪಬ್ಲಿಸಿಟಿಯಿಂದ ತುಂಬಾ ದೂರ... ಸಿದ್ಧರಾಮಯ್ಯ, ರವಿಚಂದ್ರನ್ ಅವ್ರ ಹೆಂಡ್ತಿ ಥರ ಅಂದುಕೊಳ್ಳಿ."
ನಮ್ಮ ಕುಟುಂಬದ ಕೊನೆ ನಾನ್ವೆಜ್ ಊಟ
"ಮದುವೆ ಅವ್ರು ಹೇಗೇ ಮಾಡುತ್ತಾರೋ ಅವರಿಷ್ಟ. ನನಗೆ ದೇವಸ್ಥಾನದಲ್ಲಿ ಆಗುವ ಆಸೆ. ಅವ್ರಿಷ್ಟದಂತೆ ಅವ್ರು ಮಾಡ್ಲಿ ಬಿಡಿ. ನನ್ನ ಕಡೆಯಿಂದ ಒಂದು 200-300 ಜನರಿಗೆ ಒಂದು ಸಿಂಪಲ್ ಬೀಗರ ಊಟ. ಬಹುಶಃ ನಮ್ಮ ಕುಟುಂಬದ ಕೊನೆಯ ನಾನ್ವೆಜ್ ಊಟ ಇದಾಗಿರಬಹುದು. ಇದಿಷ್ಟೇ ನನ್ನ ಮದುವೆಯ ಮೆನು. ನೀವು ಹರಸಿ" ಎಂದು ಪ್ರಥಮ್ ಪೋಸ್ಟ್ ಮಾಡಿದ್ದಾರೆ.

ಹನೂರಲ್ಲಿ ಬೀಗರಊಟ
ಟ್ವಿಟ್ಟರ್ನಲ್ಲಿ ತಮ್ಮ ಎಂಗೇಜ್ಮೆಂಟ್ ಬಗ್ಗೆ ಕೂಡ ಬರೆದುಕೊಂಡಿದ್ದಾರೆ. "ಎಂಗೇಜ್ಮೆಂಟ್ ಮೊನ್ನೆ ಆಯ್ತು. ನಾಲ್ಕು ಜನರ ಕರೆದು ಊಟ ಹಾಕಿಸಬೇಕಿತ್ತು ಅನ್ನೋದು ಹಲವರ ಅಭಿಪ್ರಾಯ. ಇನ್ನೆರಡು ದಿನದಲ್ಲಿ ವೃದ್ಧಾಶ್ರಮವೊಂದರ 138 ಜನರಿಗೆ ಸಿಹಿ ಊಟ. ಚಳಿಗಾಲದ ಆಸರೆಗಾಗಿ ಒಂದು ಶಾಲು. ಮದುವೆ ಅವ್ರಿಷ್ಟದಂತೆ ಅವ್ರು ಮಾಡಬಹುದು. ನನ್ನ ಕಡೆಯಿಂದ ಒಂದು 200 ಜನರಿಗೆ ನಮ್ಮೂರು ಕೊಳ್ಳೇಗಾಲ, ಹನೂರಲ್ಲಿ ಬೀಗರಊಟ. ಇಷ್ಟೇ ನನ್ನ ಮದುವೆಯ ಮೆನು" ಎಂದಿದ್ಧಾರೆ.
ನನ್ನ ಎಂಗೇಜ್ಮೆಂಟ್ ದೇಶದ ದೊಡ್ಡ ಸುದ್ಧಿಯಲ್ಲ
ಸೋಮವಾರ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಪ್ರಥಮ್, "ಒಂದು ಸುಂದರ ಕ್ಷಣ. ಇವತ್ತು ನನ್ನ ಎಂಗೇಜ್ಮೆಂಟ್ ಆಯ್ತು. ಯಾವ ಆಡಂಬರ, ಸಂಭ್ರಮ, ತೋರ್ಪಡಿಕೆ ಇಲ್ಲದೇ ಬಹಳ ಸರಳವಾಗಿ ಕುಟುಂಬದವರು ಮೆಚ್ಚಿದವರ ಜೊತೆಯಾದೆ. ನಾನು ತುಂಬಾ ಸರಳವಾಗಿಯೇ ಬದುಕಿದವನು. ಹಾಗೇ ಇರೋಕೆ ಇಷ್ಟ. ನನ್ನ ಎಂಗೇಜ್ಮೆಂಟ್ ಈ ದೇಶದ ದೊಡ್ಡ ಸುದ್ಧಿಯಲ್ಲ. ಆದರೆ ನನ್ನ ಇಷ್ಟಪಡುವ ಸ್ಬೇಹಿತರು ಆತ್ಮೀಯರಿಗೆ ವಿಚಾರ ಹಂಚಿಕೊಳ್ಳೋಣ ಅನ್ನೋ ಕಾರಣಕ್ಕೆ ನಿಮ್ಗೆ ತಿಳಿಸಿದ್ದೇನೆ ಅಷ್ಟೇ. ಮದುವೆ ಎಷ್ಟು ಅದ್ಧೂರಿಯಾಗಿ ಆದೆ ಅನ್ನೋದಕ್ಕಿಂತ ಎಷ್ಟು ಚೆನ್ನಾಗಿ ಬದುಕು ಕಟ್ಟಿಕೊಂಡ್ವಿ ಅನ್ನೋದೇ ನಿಜವಾದ ಸಾಧನೆ. ನನಗೆ ಹಾಗಿರೋಕೆ ಇಷ್ಟ. ಹೀಗೇ ಇದ್ದು ಬಿಡ್ತೀನಿ. ಹರಸುವವರು ಅಲ್ಲಿಂದಲೇ ಹರಸಿ. ಅದೇ ಆಶೀರ್ವಾದ" ಎಂದು ಪೋಸ್ಟ್ ಮಾಡಿದ್ದರು.


Click it and Unblock the Notifications











