ಭಾರತ–ಪಾಕಿಸ್ತಾನ ಉದ್ವಿಗ್ನತೆ ; ಈ ವರ್ಷ ಹುಟ್ಟುಹಬ್ಬ ಆಚರಿಸಲ್ಲ ಎಂದ ಸಿಂಹಿಣಿ ಸಂಗೀತಾ ಶೃಂಗೇರಿ..!
ಚಾರ್ಲಿ ಚಿತ್ರದ ಮೂಲಕ ಜನಜನಿತವಾದವರು ಸಂಗೀತಾ ಶೃಂಗೇರಿ. ಆ ನಂತರ ಸಂಗೀತಾ ಒಂದಾದ ಮೇಲೊಂದು ಸಿನಿಮಾ ಮಾಡ್ತಾರೆ ಎಂದೇ ಎಲ್ಲ ಅಂದುಕೊಂಡಿದ್ದರು. ಆದರೆ ಸಂಗೀತಾ ಮಾತ್ರ ಸೀದಾ ಹೋಗಿದ್ದು ಬಿಗ್ ಬಾಸ್ ಮನೆಗೆ. ಸಾಮಾನ್ಯವಾಗಿ ಹೊರ ಜಗತ್ತಿನಲ್ಲಿ ಒಳ್ಳೆ ಹೆಸರು ಮಾಡಿದ್ದವರೂ ಕೂಡಾ ಬಿಗ್ ಬಾಸ್ ಮನೆಯೊಳಗಿನ ವರ್ತನೆಗಳಿಂದ ಹೆಸರು ಕೆಡಿಸಿಕೊಂಡಿದ್ದಿದೆ. ಆದರೆ..
ಅದೆಂಥಾ ಸವಾಲುಗಳು ಬಂದರೂ ತಾವು ತಾವಾಗೇ ಉಳಿದ, ಸಹಜವಾದ ಮಾತು ವರ್ತನೆಗಳಿಂದನೇ ಅನೇಕರ ಹೃದಯವನ್ನ ಗೆದ್ದ ಸಂಗೀತಾ ಶೃಂಗೇರಿ, ಸಿಂಹಿಣಿ ಎಂಬ ಬಿರುದನ್ನೂ ಅಭಿಮಾನಿಗಳಿಂದ ಪಡೆದರು. ಇಂಥಾ ಸಿಂಹಿಣಿ ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧಾರ ಮಾಡಿದ್ದಾರೆ.

ಹೌದು, ಅಸಲಿಗೆ ದೇಶಭಕ್ತಿ-ದೇಶ ಸೇವೆ ಸಂಗೀತಾ ಅವರ ರಕ್ತದಲ್ಲಿಯೇ ಇದೆ. ಯಾಕೆಂದರೆ.. ಸಂಗೀತಾ ಶೃಂಗೇರಿ ಅವರ ತಂದೆ ಶಿವಕುಮಾರ್ ಭಾರತೀಯ ವಾಯುಪಡೆಯಲ್ಲಿ ಕೆಲಸವನ್ನು ಮಾಡಿದವರು. ಇನ್ನು ಎಲ್ಲರಿಗೆ ಗೊತ್ತಿರುವಂತೆ ಪಹಲ್ಗಾಮ್ ದುರಂತದ ನಂತರ ಭಾರತ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಉಗ್ರರ ರಣಬೇಟೆಯಾಡುತ್ತಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನೆಲೆ ತಮ್ಮ ಬರ್ತ್ಡೇ ಸಂಭ್ರಮಕ್ಕೆ ಸಂಗೀತಾ ಶೃಂಗೇರಿ ಸದ್ಯಕ್ಕೆ ಬ್ರೇಕ್ ಹಾಕಿದ್ದಾರೆ. ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಸುದೀರ್ಘವಾದ ಪತ್ರವನ್ನು ಕೂಡ ಬರೆದಿದ್ದಾರೆ. ಹಾಗಿದ್ದರೆ ಸಂಗೀತಾ ಶೃಂಗೇರಿ ತಮ್ಮ ಅಭಿಮಾನಿಗಳಿಗೆ ಹೇಳಿದ್ದೇನು ? ಸಂಗೀತಾ ಬರೆದ ಪತ್ರದಲ್ಲೇನಿದೆ ಎಂದು ತಿಳಿಯಲು ಮುಂದೆ ಓದಿ.
ಸಂಗೀತಾ ಶೃಂಗೇರಿ ಬರೆದ ಪತ್ರ
ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು, ನನ್ನನ್ನೂ ಸರ್ಫ್ರೈಸ್ ಮಾಡಲು, ನನ್ನ ಜೊತೆ ನನ್ನ ಬರ್ತ್ಡೇಯನ್ನು ಆಚರಿಸಲು ನೀವೆಲ್ಲ ಪ್ಲಾನ್ ಮಾಡಿರುತ್ತೀರಾ ಎನ್ನುವುದು ನನಗೆ ಚೆನ್ನಾಗಿ ಗೊತ್ತು. ನಿಮ್ಮೆಲ್ಲರ ಈ ಉತ್ಸಾಹ ಮತ್ತು ಪರಿಶ್ರಮವನ್ನು ನಾನು ಯಾವತ್ತು ಮರೆಯುವುದಿಲ್ಲ. ಯಾಕೆಂದರೆ ಪ್ರತಿ ಬಾರಿ ಕೂಡ ನಿಮ್ಮ ಈ ಪ್ರೀತಿ ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿಸಿದೆ. ಆದರೆ ಈ ವರ್ಷ ಪರಿಸ್ಥಿತಿ ಮೊದಲಿನಂತೆ ಇಲ್ಲ. ಭಿನ್ನವಾಗಿದೆ.
ಸದ್ಯ ಗಡಿಯಲ್ಲಿ ಏನೇನೋ ನಡೆಯುತ್ತಿದೆ. ನಮ್ಮ ಹೆಮ್ಮೆಯ ಸೈನಿಕರು ಗಡಿಯಲ್ಲಿ ಬಂಡೆಗಲ್ಲಿನಂತೆ ನಿಂತಿದ್ದಾರೆ. ನಮ್ಮ ರಕ್ಷಣೆ ಮಾಡುತ್ತಿದ್ದಾರೆ. ಮತ್ತೊಂದೆಡೆ ಮುಗ್ದ ಜೀವಗಳು ಪ್ರಾಣ ಕಳೆದುಕೊಂಡಿವೆ. ನನ್ನ ಹೃದಯ ಇದರಿಂದ ಭಾರವಾಗಿದೆ.
ನಮ್ಮ ಹಲವಾರು ಜನ ನೋವಲ್ಲಿದ್ದಾಗ, ಹಲವಾರು ಜನ ತಮ್ಮ ಪ್ರೀತಿ ಪಾತ್ರರು ಸುರಕ್ಷಿತವಾಗಿರಲಿ ಎಂದು ಪ್ರಾರ್ಥನೆಯನ್ನು ಮಾಡಿಕೊಳ್ಳುತ್ತಿರುವಾಗ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದು ಸರಿಯಲ್ಲ ಎನ್ನುವುದು ನನ್ನ ಅಭಿಪ್ರಾಯ. ಹೀಗಾಗಿ ಈ ವರ್ಷ ನಾನು ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧಾರ ಮಾಡಿದ್ದೇನೆ.
ನೋವಲ್ಲಿರುವವರಿಗೆ ಸಹಾನುಭೂತಿ ಮತ್ತು ಒಗ್ಗಟ್ಟಿನಿಂದ ನಿಲ್ಲುವ ಉದ್ದೇಶದಿಂದ ನಾನು ಈ ನಿರ್ಧಾರ ತೆಗೆದುಕೊಂಡಿದ್ದು ಎನ್ನುವುದು ನಿಮಗೆಲ್ಲ ಅರ್ಥವಾಗುತ್ತೆ ಎಂದು ನಾನು ಭಾವಿಸುತ್ತೇನೆ. ನಾನು ಯಾಕೆ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಬಯಸುತ್ತಿಲ್ಲ ಎನ್ನುವುದು ನೀವು ಅರ್ಥ ಮಾಡಿಕೊಳ್ಳುತ್ತೀರಾ ಎಂದು ನಾನು ನಂಬಿದ್ದೇನೆ, ದಯವಿಟ್ಟು ನೋವಲ್ಲಿರುವವರನ್ನು ಮತ್ತು ನಮ್ಮ ಸೈನಿಕರನ್ನು ನಿಮ್ಮ ಹೃದಯದಲ್ಲಿಡಿ, ನಿಮ್ಮ ಪ್ರಾರ್ಥನೆಯಲ್ಲಿ ನೆನಪಿಡಿ, ನೀವು ಸದಾ ಕಾಲ ನನಗೆ ಪ್ರೀತಿಯನ್ನು ನೀಡಿದ್ದಕ್ಕೆ ಧನ್ಯವಾದಗಳು. ಮೌನದಲ್ಲಿ ಕೂಡ ನಿಮ್ಮೆಲ್ಲರ ಪ್ರೀತಿ ನನಗೆ ತಲುಪಲಿದೆ. ಜೈ ಹಿಂದ್
ಹೀಗೆ ಸಂಗೀತಾ ಶೃಂಗೇರಿ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಬರೆದುಕೊಂಡಿದ್ದಾರೆ. ಅಂದ್ಹಾಗೇ ಸಂಗೀತಾ ಶೃಂಗೇರಿ ಅವರ ಹುಟ್ಟುಹಬ್ಬ ಈ ಮೇ 13ಕ್ಕೆ ಇದೆ. ಈ ಹಿನ್ನೆಲೆ ತಮ್ಮ ಮನೆಯ ಬಳಿ ಅಭಿಮಾನಿಗಳು ಬಾರದಿರಲಿ ಎನ್ನುವ ಉದ್ದೇಶದಿಂದ ಸಂಗೀತಾ ಶೃಂಗೇರಿ ಸಾಮಾಜಿಕ ಜಾಲತಾಣದ ಮೂಲಕ ಈ ಪ್ರಕಟಣೆ ಹೊರಡಿಸಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಸಂಗೀತಾ ಶೃಂಗೇರಿ ಅವರ ಈ ನಿರ್ಧಾರವನ್ನು ಸ್ವಾಗತಿಸಿರುವ ಅನೇಕರು ಸದ್ಯ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.


Click it and Unblock the Notifications











