Varthur Santosh: 14 ದಿನ ನ್ಯಾಯಾಂಗ ಬಂಧನಕ್ಕೆ ವರ್ತೂರು ಸಂತೋಷ್: ಆರೋಪ ಸಾಬೀತಾದರೆ 7 ವರ್ಷ ಶಿಕ್ಷೆ?
ಬಿಗ್ಬಾಸ್ ಕನ್ನಡ ಸೀಸನ್ 10 ಯಶಸ್ವಿಯಾಗಿ 2 ವಾರ ಪೂರೈಸಿದೆ. 2ನೇ ವಾರ ಬಿಗ್ಬಾಸ್ ಮನೆಯಿಂದ ಯಾರು ಎಲಿಮಿನೇಟ್ ಆಗುತ್ತಾರೆ ಎನ್ನುವ ಕುತೂಹಲ ಇತ್ತು. 'ಸೂಪರ್ ಸಂಡೇ' ಶೋನಲ್ಲಿ ಗೌರೀಶ್ ಅಕ್ಕಿ ಬಿಗ್ಬಾಸ್ ಮನೆ ಆಟ ಮುಗಿಸಿ ಬಂದಿದ್ದು ಗೊತ್ತಾಗಿತ್ತು. ಆದರೆ ಬೆಳಗ್ಗೆ ವರ್ತೂರು ಸಂತೋಷ್ ಬಂಧನ ಸುದ್ದಿ ಎಲ್ಲರಿಗೂ ಶಾಕ್ ಕೊಟ್ಟಿತ್ತು.
ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಇತಿಹಾಸದಲ್ಲೇ ಈ ರೀತಿ ಮನೆಯೊಳಗೆ ಇರುವ ಸ್ಪರ್ಧಿಯನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿರಲಿಲ್ಲ. ಹಳ್ಳಿಕಾರ್ ಒಡೆಯ ಎಂದು ಖ್ಯಾತಿ ಗಳಿಸಿ ಬಿಗ್ಬಾಸ್ ಮನೆ ಪ್ರವೇಶಿಸಿದ್ದ ವರ್ತೂರು ಸಂತೋಷ್ ಬಂಧನವಾಗಿದೆ. ಬಿಗ್ಬಾಸ್ ಮನೆಯಿಂದಲೇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಸಂತೋಷ್ ಕುತ್ತಿಗೆಯಲ್ಲಿ ಧರಿಸಿದ್ದ ಸರದಲ್ಲಿದ್ದ ಹುಲಿ ಉಗುರು ಇದಕ್ಕೆ ಕಾರಣವಾಗಿದೆ. ಹಾಗಾಗಿ ವನ್ಯಜೀವಿ ಕಾಯಿದೆ ಉಲ್ಲಂಘನೆ ಹಿನ್ನೆಲೆ ಅವರನ್ನು ಬಂಧಿಸಲಾಗಿದೆ.

ರಾಮೋಹಳ್ಳಿ ಅರಣ್ಯಾಧಿಕಾರಿಗಳು ವರ್ತೂರು ಸಂತೋಷ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ವರ್ತೂರು ಸಂತೋಷ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣ ಸಂಬಂಧ ಅರಣ್ಯಾಧಿಕಾರಿಗಳು ಸಂತೋಷ್ ಅವರನ್ನು 2ನೇ ಎಸಿಜೆಎಂ ಕೋರ್ಟ್ ಮ್ಯಾಜಿಸ್ಟ್ರೇಟ್ ನಿವಾಸಕ್ಕೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಸಂತೋಷ್ ಅವರನ್ನು ಒಪ್ಪಿಸಿದ್ದಾರೆ. ಸದ್ಯ ಸಂತೋಷ್ ಅವರನ್ನು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕರೆದುಕೊಂಡು ಹೋಗುತ್ತಿರುವುದಾಗಿ ಹೇಳಲಾಗುತ್ತಿದೆ.
ವರ್ತೂರು ಸಂತೋಷ್ ಪರ ವಕೀಲ ನಟರಾಜ್ ಮಾತನಾಡಿ " ಜಾಮೀನು ಅರ್ಜಿ ಹಾಕಿದ್ದೇವೆ. ಹಬ್ಬದ ಬಳಿಕ ಬುಧವಾರ ಅರ್ಜಿ ವಿಚಾರಣೆ ನಡೆಯಲಿದೆ. ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ದೂರದಾರಿಗೆ ಸೂಚಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ತನಿಖಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನಂತರ ಸಂತೋಷ್ ಬಂಧನವಾಗಿದೆ. ಆ ಉಗುರು ನಿಜವಾಗಿಯೂ ಹುಲಿಯದ್ದು ಎಂದು ಹೇಳ್ತಿದ್ದಾರೆ. ಎಕ್ಸ್ಫರ್ಟ್ ಪರಿಶೀಲನೆ ನಡೆಸಿ ವರದಿ ಬಂದ ಬಳಿಕ ಸಂಪೂರ್ಣ ಮಾಹಿತಿ ಸಿಗಲಿದೆ"
ಸಂತೋಷ್ ಅವರು ಹೊಸೂರು ರಸ್ತೆಯಲ್ಲಿ ಮೂರು ವರ್ಷದ ಹಿಂದೆ ಅದನ್ನು ಖರೀದಿ ಮಾಡಿದ್ದಾರೆ. ಬಿಲ್ ಬಗ್ಗೆ ಯಾವುದೇ ಮಾಹಿತಿ ಇನ್ನು ಸಿಕ್ಕಿಲ್ಲ. ಸದ್ಯ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಕೋರ್ಟ್ ರಜೆ ಇರುವ ಹಿನ್ನೆಲೆ ಬುಧವಾರ ಆಕ್ಷೇಪಣಾ ಅರ್ಜಿ ಸಲ್ಲಿಸಲಾಗುತ್ತದೆ" ಎಂದು ವಕೀಲ ಕೆ. ನಟರಾಜ್ ಮಾಹಿತಿ ನೀಡಿದ್ದಾರೆ.
ರಾತ್ರಿಯಿಂದಲೇ ವರ್ತೂರು ಸಂತೋಷ್ ಅವರನ್ನು ಅರಣ್ಯಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ತಮಗೆ ಹುಲಿ ಉಗುರು ಸಿಕ್ಕಿದ್ದೇಗೆ? ಯಾರು ಕೊಟ್ಟರು? ಎಲ್ಲಿಂದ ಖರೀದಿ ಮಾಡಿದ್ದು? ಮಾರಿದವರು ಈಗ ಎಲ್ಲಿದ್ದಾರೆ? ಎಷ್ಟು ಮಂದಿಗೆ ಈ ರೀತಿ ಉಗುರು ಮಾರಲಾಗಿದೆ? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಅರಣ್ಯಾಧಿಕಾರಿಗಳು ಸಂತೋಷ್ ಮುಂದೆ ಇಟ್ಟಿದ್ದಾರೆ. ಆ ಪ್ರಶ್ನೆಗಳಿಗೆ ಸಂತೋಷ್ ಉತ್ತರಿಸಿದ್ದಾರೆ ಎನ್ನಲಾಗ್ತಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ವರ್ತೂರು ಸಂತೋಷ್ ಬಂಧನವಾಗಿದೆ. ಒಂದು ವೇಳೆ ಆರೋಪ ಸಾಬೀತಾದರೆ ಮೂರರಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಆಗುತ್ತದೆ. ಹತ್ತು ಸಾವಿರದಿಂದ ಇಪ್ಪತ್ತೈದು ಸಾವಿರದವರೆಗೆ ದಂಡ ವಿಧಿಸುವ ಸಾಧ್ಯತೆಯೂ ಇದೆ ಎನ್ನಲಾಗ್ತಿದೆ.
ಹಳ್ಳಿಕಾರ್ ತಳಿಯ ಜಾನುವಾರು ಸಾಕಾಣಿಕೆ ಮೂಲಕ ಜನಪ್ರಿಯತೆ ವರ್ತೂರು ಸಂತೋಷ್ ಜನಪ್ರಿಯರಾಗಿದ್ದಾರೆ. ಯೂಟ್ಯೂಬ್ ಸಂದರ್ಶನಗಳಲ್ಲಿ ತಮ್ಮ ಹೈನುಗಾರಿಕೆ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. ಆ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿದ್ದರು. ಸಂತೋಷ್, ಹಳ್ಳಿಕಾರ್ ಕ್ಯಾಟಲ್ ಬ್ರೀಡ್ ಅಥವಾ ಅಖಿಲ ಭಾರತ ಹಳ್ಳಿಕಾರ್ ತಳಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾಗಿದ್ದಾರೆ.


Click it and Unblock the Notifications











