ಅರ್ಚಕರಾಗಬೇಕಿದ್ದ ರತ್ನಾಕರ್ 'ಹಾಸ್ಯರತ್ನ'ರಾದ ಕಥೆ ಇದು
ಅಪ್ಪನ ಆಸೆ ಒಂದು ಕಡೆ...ಮಗನ ಕನಸು ಮತ್ತೊಂದು ಕಡೆ.. ಕೊನೆಗೂ ಈ ಜಟಾಪಟಿಯಲ್ಲಿ ಗೆದ್ದಿದ್ದು ಮಗನೇ. ದೇವಸ್ಥಾನದಲ್ಲಿ ಅರ್ಚಕರಾಗಬೇಕಿದ್ದ ಹುಡುಗ ತನ್ನ ಪ್ರತಿಭೆಯ ಮೂಲಕ 'ಹಾಸ್ಯರತ್ನ' ಎಂಬ ಬಿರುದು ಪಡೆಯುತ್ತಾನೆ. ಅವರೇ ರತ್ನಾಕರ್.
ಹಾಸ್ಯ ನಟ ರತ್ನಾಕರ್ ಅವರ ಬಗ್ಗೆ ಇಂದಿನ ಪೀಳಿಗೆಯ ಪ್ರೇಕ್ಷಕರಿಗೆ ಹೆಚ್ಚು ತಿಳಿದಿದೆಯೋ ಇಲ್ಲವೋ ಆದರೆ, ಅವರ ಕಾಮಿಡಿ ದೃಶ್ಯವನ್ನು ಎಲ್ಲರೂ ನೋಡಿರುತ್ತಾರೆ. 'ಗುರು ಶಿಷ್ಯರು' ಸಿನಿಮಾದಲ್ಲಿ ಇವರು ಮಾಡಿದ ತರ್ಲೆಯನ್ನು ಯಾರಾದರೂ ಮರೆಯಲು ಸಾಧ್ಯವೇ.
ತಮ್ಮ ವಿಶಿಷ್ಟ ಧ್ವನಿಯ ಮೂಲಕ ಕನ್ನಡ ಚಿತ್ರರಂಗದ ಪ್ರಮುಖ ಹಾಸ್ಯ ನಟರಲ್ಲಿ ರತ್ನಾಕರ್ ಸಹ ಒಬ್ಬರಾಗಿದ್ದಾರೆ. ಇಂದು ಅವರ ಹುಟ್ಟುಹಬ್ಬದ ದಿನವಾಗಿದ್ದು, ಅವರ ಬಗ್ಗೆ ಒಂದು ವಿಶೇಷ ಲೇಖನ ಮುಂದಿದೆ ಓದಿ...

ಅರ್ಚಕರಾಗಬೇಕಿದ್ದ ರತ್ನಾಕರ್
ಕೊಲ್ಲೂರು ರತ್ನಾಕರ್ ಹುಟ್ಟೂರು. ಅವರ ತಂದೆ ಮಂಜುನಾಥ ಭಟ್ಟರು ಮೂಕಾಂಬಿಕೆ ಕ್ಷೇತ್ರದ ಅರ್ಚಕರಾಗಿದ್ದರು. ತಮ್ಮ ರೀತಿ ಮಗ ಕೂಡ ಅರ್ಚಕ ಕಾರ್ಯವನ್ನು ಮುಂದುವರೆಸಬೇಕು ಎಂಬುದು ಅವರ ಆಸೆಯಾಗಿತ್ತು. ಆದರೆ, ಓದಿ ಏನಾದರೂ ಸಾಧನೆ ಮಾಡಬೇಕು ಎಂದುಕೊಂಡಿದ್ದ ರತ್ನಾಕರ್ ತಮ್ಮ ಆಸೆಯಂತೆ ಮೈಸೂರಿಗೆ ಹೋದರು. ಆದರೆ, ಅಲ್ಲಿ ಮನೆಗೆಲಸ ಮಾಡಬೇಕಾದ ಪರಿಸ್ಥಿತಿ ಬಂತು.

ರಂಗಭೂಮಿ ಮತ್ತು ಸಿನಿಮಾ ಪ್ರವೇಶ
ಹೀಗಿರುವಾಗ, ಒಮ್ಮೆ ಹಿರಿಯ ನಟ ದಿವಂಗತ ಡಿಕ್ಕಿ ಮಾಧವರಾವ್ ಅವರ ಪರಿಚಯ ರತ್ನಾಕರ್ ಅವರಿಗೆ ಆಯ್ತು. ಮುಂದೆ ಇದು ರತ್ನಾಕರ್ ಸಿನಿ ಜರ್ನಿ ಶುರು ಆಗಲು ಕಾರಣವಾಯ್ತು. ‘ವಿಚಿತ್ರಪ್ರಪಂಚ' ಚಿತ್ರದ ಮೂಲಕ ಚಿತ್ರರಂಗ ಅವರು ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಜೊತೆ ಜೊತೆಗೆ ದಿ. ಎಚ್ ಎಲ್ ಎನ್ ಸಿಂಹ ಅವರ ನಾಟಕ ಕಂಪೆನಿ ಮೂಲಕ ರಂಗವೇರಿದರು.. ಅಲ್ಲಿ ಡಾ. ರಾಜ್ ಕುಮಾರ್ ಅವರ ತಂದೆ ಸಿಂಗನಲ್ಲೂರ ಪುಟ್ಟಸ್ವಾಮಯ್ಯ ಅವರಂಥ ರಂಗನಟರೊಂದಿಗೆ ಕೆಲಸ ಮಾಡಿದರು.

ವಿಶಿಷ್ಟ ಧ್ವನಿ ಹಾಗೂ ಬಾಡಿ ಲಾಂಗ್ವೇಜ್
ವೀರಕೇಸರಿ, ದಶಾವತಾರ, ಭಕ್ತ ಕನಕದಾಸ, ಸ್ವರ್ಣ ಗೌರಿ, ನವಜೀವನ, ಕರುಳಿನ ಕರೆ, ಗುರುಶಿಷ್ಯರು, ಯಜಮಾನ, ಆಪ್ತರಕ್ಷಕ ಹೀಗೆ ಸಾಕಷ್ಟು ಸಿನಿಮಾ ಅವರ ಖಾತೆಗೆ ಸೇರಿತು. ಹಾಸ್ಯ ಪಾತ್ರಗಳು ಮಾತ್ರವಲ್ಲದೆ ಪೋಷಕ ನಟ ಪಾತ್ರದಲ್ಲಿಯೂ ಮಿಂಚಿದರು. ವಿಶಿಷ್ಟ ಧ್ವನಿ ಹಾಗೂ ಬಾಡಿ ಲಾಂಗ್ವೇಜ್ ಅವರ ನಟನೆಯ ಶಕ್ತಿಯಾಗಿತ್ತು.

ರಾಜ್, ವಿಷ್ಣುಗೆ ನಿರ್ದೇಶನ ಮಾಡಿದ್ರು
ನಟನೆ ಮಾತ್ರವಲ್ಲದೆ ನಿರ್ದೇಶನ ಕೂಡ ಮಾಡಿ ತಮ್ಮ ತಾಕತ್ತು ತೋರಿಸಿದರು. ಡಾ. ರಾಜ್ ಕುಮಾರ್, ಲೀಲಾವತಿ ಜೋಡಿಗೆ ‘ಭಾಗ್ಯದೇವತೆ' ಎಂಬ ಭಕ್ತಿ ಪ್ರಧಾನ ಸಿನಿಮಾ ಮಾಡಿದರು. ವಿಷ್ಣುವರ್ಧನ್ ರಿಗೆ ‘ಶನಿಪ್ರಭಾವ' ಎಂಬ ಚಿತ್ರವನ್ನು ಸಹ ನಿರ್ದೇಶಿಸಿ ಯಶಸ್ವಿಯಾದರು. ದ್ವಾರಕೀಶ್ ಅವರ ಸಾಕಷ್ಟು ಚಿತ್ರಗಳಿಗೆ ಡೈರೆಕ್ಟರ್ ಆಗಿದ್ದರು.

ದೊಡ್ಡಣ್ಣ, ಜಗ್ಗೇಶ್, ಟೆನ್ನಿಸ್ ಕೃಷ್ಣರಿಗೆ ಸಹಕಾರ
ರತ್ನಾಕರ್ ಅನೇಕ ಕಲಾವಿದರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ದೊಡ್ಡಣ್ಣ, ಜಗ್ಗೇಶ್, ದಿನೇಶ್, ದಿವಂಗತ ಸುನಿಲ್, ಟೆನ್ನಿಸ್ ಕೃಷ್ಣ ಸೇರಿದಂತೆ ಅನೇಕರು ರತ್ನಾಕರ್ ನೆರವಿನೊಂದಿಗೆ ಚಿತ್ರರಂಗವನ್ನು ಬಂದರು. ಸೆಪ್ಟೆಂಬರ್ 20, 2010ರಲ್ಲಿ ಬಡತನದ ಬವಣೆಯಲ್ಲಿಯೇ ಕೊನೆಯೂಸಿರೆಳೆದರು. ನೇತ್ರದಾನ ಮಾಡಿ ಸಾವಿನಲ್ಲಿಯೂ ಸಾರ್ಥಕತೆ ಮೆರೆದರು.


Click it and Unblock the Notifications











