ಯಾರಿಗೂ ಹೇಳ್ಬೇಡಿ ; ಬೆಳಗ್ಗೆ ಲಿಂಕ್ ಪೋಸ್ಟ್ ಮಾಡಿ ತಕ್ಷಣ ಡಿಲೀಟ್ ಮಾಡ್ತೀನಿ ಎಂದ ಉಪೇಂದ್ರ - ಏನಿದು ರಹಸ್ಯ?
ಚಿತ್ರರಂಗದ ಯಾವ ಹಿನ್ನೆಲೆ ಇಲ್ಲದೇ ಕಾಶೀನಾಥ್ ಎಂಬ ಅಪ್ರತಿಮ ಪ್ರತಿಭಾವಂತನ ಮನವೊಲಿಸಿ ಅವಕಾಶ ಪಡೆದು, ಬರಹಗಾರನಾಗಿ ಕೆಲಸ ಆರಂಭ ಮಾಡಿದವರು ಉಪೇಂದ್ರ. ಆ ನಂತರ ಸಹ ನಿರ್ದೇಶಕರಾಗಿ ಬಡ್ತಿಯನ್ನು ಪಡೆದು 'ತರ್ಲೆ ನನ್ ಮಗ' ಚಿತ್ರದ ಮೂಲಕ ನಿರ್ದೇಶಕನ ಸ್ಥಾನವನ್ನು ಕೂಡ ಅಲಂಕರಿಸಿದರು. ತಮ್ಮ ಚಿತ್ರಗಳಿಂದ ಭಾರತದ ಚಿತ್ರ ಪ್ರೇಮಿಗಳನ್ನು ನಿಬ್ಬೇರಗಾಗಿಸಿದರು.
ಆ ನಂತರ ನಾಯಕನಾಗಿ ಕೂಡ ಹೊರ ಹೊಮ್ಮಿದರು. ಕನ್ನಡ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಸ್ಥಾನವನ್ನು ಕೂಡ ಅಲಂಕರಿಸಿದರು. ಇನ್ನು ಉಪೇಂದ್ರಗೆ ಕೇವಲ ಕನ್ನಡದಲ್ಲಿ ಮಾತ್ರವಲ್ಲ ಬೇರೆ ಬೇರೆ ಭಾಷೆಯಲ್ಲಿ ಕೂಡ ಅಗಣಿತ ಅಭಿಮಾನಿಗಳಿದ್ದಾರೆ. ಅದರಲ್ಲಿಯೂ ತೆಲುಗಿನಲ್ಲಿ ಉಪೇಂದ್ರ ಅವರಿಗೆ ವಿಶೇಷ ಸ್ಥಾನ ನೀಡಲಾಗಿದೆ.

ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಉಪೇಂದ್ರ ಕೇವಲ ನಾಯಕ ಮಾತ್ರ ಅಲ್ಲ, ನಿರ್ದೇಶಕ ಮಾತ್ರ ಅಲ್ಲ. ಪ್ರಜೆಗಳ ಸೇವಕ ಕೂಡ ಹೌದು. ರಾಜಕೀಯವನ್ನು ಬುಡಸಮೇತ ಕಿತ್ತು ಹಾಕಿ, ಪ್ರಜೆಗಳ ಕೈಯಲ್ಲಿ ಸರ್ಕಾರದ ಕೀಲಿ ಕೈ ಕೊಡಬೇಕೆನ್ನುವ ಆಶಯದಲ್ಲಿ ಉಪೇಂದ್ರ ಕಳೆದ 6-8 ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದಾರೆ.
ಆದರೆ, ಪ್ರಯತ್ನಕ್ಕೆ ಇನ್ನೂ ಫಲ ಸಿಕ್ಕಿಲ್ಲ. ಹಾಗಂಥ ಉಪೇಂದ್ರ ಭರವಸೆಯನ್ನು ಕೂಡ ಕಳೆದುಕೊಂಡಿಲ್ಲ. ಯಾಕೆಂದರೆ ಉಪೇಂದ್ರ ಬುದ್ದಿವಂತ. ಇಂದಲ್ಲ, ನಾಳೆ, ತಮ್ಮ ಬುದ್ದಿವಂತಿಕೆಯಿಂದ ಗೆಲ್ಲುವ ವಿಶ್ವಾಸ ಉಪೇಂದ್ರ ಅವರಿಗಿದೆ.
ಉಪೇಂದ್ರ ಅವರ ಈ ಆಸೆ ಈಡೇರುತ್ತಾ ? ಎನ್ನುವುದಕ್ಕೆ ಉತ್ತರ ಕಾಲವೇ ನೀಡಲಿದೆಯಾದರೂ ಸದ್ಯ ಚಿತ್ರರಂಗದ ಜೊತೆ ರಾಜಕೀಯದ ಚದುರಂಗವಾಡುವಲ್ಲಿಯೂ ಕೂಡ ಬ್ಯುಸಿಯಾಗಿರುವ ಉಪೇಂದ್ರ ಮತ್ತೊಮ್ಮೆ ತಮ್ಮ ಎಂದಿನ ಶೈಲಿಯಲ್ಲಿ ಜನರ ತಲೆಗೆ ಹುಳ ಬಿಡುವ ಪ್ರಯತ್ನ ಮಾಡಿದ್ದಾರೆ.ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಎಚ್ಚರಿಕೆ ಸಂದೇಶವನ್ನು ಹಂಚಿಕೊಂಡಿದ್ಧಾರೆ.
ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಪ್ರಕಟಣೆ ಹೊರಡಿಸಿರುವ ಉಪೇಂದ್ರ, ನಾಳೆ ಬೆಳಗ್ಗೆ 10 ಗಂಟೆಗೆ ಒಂದು ಲಿಂಕ್ ಪೋಸ್ಟ್ ಮಾಡ್ತೀನಿ. ಇದನ್ನ ಸಾರ್ವಜನಿಕವಾಗಿ ಹಂಚಿಕೊಳ್ಳಬೇಡಿ ಅಂತ ನನಗೆ ಸೂಚನೆ ಇದೆ. ಹಾಗಾಗಿ ಪೋಸ್ಟ್ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಡಿಲೀಟ್ ಮಾಡಿದ್ರೂ ಮಾಡಬಹುದು. ನೀವು ಇದನ್ನು ನೋಡಿದ್ರೆ, ಬೇರೆ ಯಾರ ಹತ್ತಿರವೂ ಹೇಳ್ಬೇಡಿ. ಸದ್ಯಕ್ಕೆ ಇದು ನಮ್ಮ ನಡುವೆ ಮಾತ್ರ ಇರಲಿ. ಲಿಂಕ್ ನೋಡಿ ಸುಮ್ಮನಿದ್ದುಬಿಡು ಎಂದು ಬರೆದುಕೊಂಡಿದ್ದಾರೆ.

ಉಪೇಂದ್ರ ಅವರ ಈ ಬರಹ ಸದ್ಯ ಹಲವರ ಕುತೂಹಲ ಕೆರಳಿಸಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹಲವರು ಉಪೇಂದ್ರ ಮುಂದಿನ ನಡೆಯ ಕುರಿತು ಲೆಕ್ಕಾಚಾರ ಹಾಕುತ್ತಿದ್ದಾರೆ. ಕೆಲವರು ಉಪೇಂದ್ರ ತಮ್ಮ ಮುಂದಿನ ನಿರ್ದೇಶನದ ಚಿತ್ರದ ಕುರಿತು ಮಾಹಿತಿ ನೀಡುತ್ತಾರೆ, ತಮ್ಮ ಹೊಸ ಚಿತ್ರದ ಘೋಷಣೆ ಮಾಡುತ್ತಾರೆ ಎಂದು ಮಾತನಾಡಿಕೊಂಡು ಸಂಭ್ರಮ ಪಡುತ್ತಿದ್ದಾರೆ.
ಇನ್ನೂ ಕೆಲವರು ಪ್ರಜಾಕೀಯದ ಕುರಿತು ಮಹತ್ವದ ಮಾಹಿತಿಯನ್ನು ಉಪೇಂದ್ರ ಹಂಚಿಕೊಳ್ಳಬಹುದು ಎಂದು ಊಹೆ ಮಾಡುತ್ತಿದ್ದಾರೆ. ಮತ್ತೂ ಕೆಲವರು ಕರ್ನಾಟಕದಲ್ಲಿ ಸದ್ಯಕ್ಕಂತೂ ವಿಧಾನ ಸಭಾ ಚುನಾವಣೆ ಇಲ್ಲ, ಈ ಹಿನ್ನೆಲೆ ಉಪೇಂದ್ರ ರಾಜಕೀಯದ ಕುರಿತು ಈಗ ಮಾತನಾಡುವುದಿಲ್ಲ, ಯಾಕೆಂದರೆ ಉಪೇಂದ್ರ ಅವರಲ್ಲಿನ ಪ್ರಜಾಕಾರಣಿ ಎಚ್ಚೆತ್ತುಕೊಳ್ಳುವುದೇ ಎಲೆಕ್ಷನ್ ಸುತ್ತ ಮುತ್ತ ಎಂಬ ಅಭಿಪ್ರಾಯವನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸುತ್ತಿದ್ದಾರೆ.
ಅಂದ್ಹಾಗೇ ಕೆಲ ದಿನಗಳ ಹಿಂದೆ "ಪ್ರಜಾಕೀಯ" ವ್ಯವಸ್ಥೆ ಬಯಸುವ, ಬರಿಸುವ ಮುಂದಾಳುಗಳ ಗಮನಕ್ಕೆ
"ಸೂತ್ರಧಾರಿ,ಪಾತ್ರಧಾರಿ" ನಿಮಗಾಗಿ, ನೀವೇ ನಡೆಸುವ ಒಂದು ತಂತಜ್ಞಾನದ ಅಸ್ತ್ರ,ಅದರ ಮಾದರಿ ....ನಿಮ್ಮ ಸಲಹೆಗಾಗಿ ಮತ್ತು ನಿಮ್ಮ ಆ ದೇಶಕ್ಕಾಗಿ .... ಸದ್ಯದಲ್ಲೇ ಬರುತ್ತಿದೆ ... ಎಂದು ಬರೆದುಕೊಂಡಿದ್ದರು. ಯಾರಿಗೆ ಗೊತ್ತು ಉಪೇಂದ್ರ ತಮ್ಮ ಬತ್ತಳಿಕೆಯಿಂದ ತಂತ್ರಜ್ಞಾನದ ಅಸ್ತ್ರವನ್ನು ಕೂಡ ಬಿಡಬಹುದು. ಡಿಜಿಟಲ್ ಲೋಕದಲ್ಲಿ ಸಂಚಲನ ಮೂಡಿಸಬಹುದು.
ಒಟ್ನಲ್ಲಿ ಸದ್ಯಕ್ಕೆ ಉಪೇಂದ್ರ ಅವರ ಅಭಿಮಾನಿಗಳು ಮಾರ್ಚ್ 15ರ ಬೆಳಿಗ್ಗೆ 10 ಗಂಟೆಗೆ ಕಾದು ಕುಳಿತಿದ್ದಾರೆ. ಪೋಸ್ಟ್ ಬಂದ ತಕ್ಷಣ ಅದನ್ನು ನೋಡಲು ಉತ್ಸುಕರಾಗಿದ್ದಾರೆ. ಆ ಲಿಂಕ್ನಲ್ಲಿ ಅಂತಹದ್ದೇನಿರುತ್ತೆ? ಅದನ್ನು ನೋಡಿದವರು ನಿಜಕ್ಕೂ ಶೇರ್ ಮಾಡದೇ ಇರುತ್ತಾರಾ? ಅಥವಾ ಅದು ಉಪೇಂದ್ರ ಅವರ ಮತ್ತೊಂದು ಮಾಸ್ಟರ್ ಪ್ಲಾನಾ..? ನಿಖರ ಉತ್ತರ ಇನ್ನೇನು ಕೆಲವೇ ಘಂಟೆಗಳಲ್ಲಿ ಸಿಗಲಿದೆ.


Click it and Unblock the Notifications











