"ನೀನು ದೊಡ್ಡ ಮಹಾನಟಿನಾ, ಎಷ್ಟು ಅಹಂಕಾರ"; ನಟಿ ಪ್ರೇಮಾ ಬಗ್ಗೆ 'ಯಜಮಾನ' ನಿರ್ಮಾಪಕ ಆಕ್ರೋಶ
ಕನ್ನಡ ಚಿತ್ರರಂಗದ ಬ್ಲಾಕ್ಬಸ್ಟರ್ ಹಿಟ್ 'ಯಜಮಾನ' ಸಿನಿಮಾ ಈ ವಾರ ಮರುಬಿಡುಗಡೆ ಆಗ್ತಿದೆ. 25 ವರ್ಷಗಳ ಹಿಂದೆ ತೆರೆಕಂಡಿದ್ದ ಸಿನಿಮಾ ಸತತ 35 ವಾರ ಪ್ರದರ್ಶನ ಕಂಡು ದಾಖಲೆ ಬರೆದಿತ್ತು. ಸಾಹಸಸಿಂಹ ವಿಷ್ಣುವರ್ಧನ್, ಪ್ರೇಮಾ, ಶಶಿಕುಮಾರ್, ಅಭಿಜಿತ್, ಟೆನ್ನಿಸ್ ಕೃಷ್ಣ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿತ್ತು.
'ಯಜಮಾನ' ಚಿತ್ರವನ್ನು ಹೊಸ ರೂಪದಲ್ಲಿ ಮತ್ತೆ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ. ಇತ್ತೀಚೆಗೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದೆ. ಚಿತ್ರದ ಪ್ರಚಾರಕ್ಕೆ ನಟಿ ಪ್ರೇಮಾ ಬರಲಿಲ್ಲ ಎಂದು ನಿರ್ಮಾಪಕ ರೆಹಮಾನ್ ಅಸಮಾಧಾನ ಹೊರ ಹಾಕಿದ್ದಾರೆ. ನಾನೇ ಖುದ್ದಾಗಿ ಕರೆದರೂ ನನಗೆ 'ಮಹಾನಟಿ' ಶೋ ಇದೆ. ಬರಲು ಸಾಧ್ಯವಿಲ್ಲ ಎಂದರು ಅಂತ ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೆಹಮಾನ್ "ನಾನೇ ಖುದ್ದಾಗಿ ಪ್ರೇಮಾ ಅವರನ್ನು ಸುದ್ದಿಗೋಷ್ಠಿಗೆ ಕರೆದಿದ್ದೆ. ಮಹಾನಟಿ ಕಾರ್ಯಕ್ರಮ ಇದೆ ಬರೋಕೆ ಸಾಧ್ಯವಿಲ್ಲ ಎಂದರು. ನೀನು ಬಿಡಮ್ಮಾ ದೊಡ್ಡ ಮಹಾನಟಿ ಬರಬೇಡ ಎಂದೆ. ಆಕೆಯ ಈ ಚಿತ್ರಕ್ಕಿಂತ 'ಮಹಾನಟಿ' ಶೋ ದೊಡ್ಡದಂತೆ. ಮಾತನಾಡೋಕೆ ನನಗೆ ಯಾವ ಹೆದರಿಕೆ ಇಲ್ಲ. ಯಾಕೆ ಹೆದರಿಕೆ. ನಾನು ನಾಯಕಿಯಾಗಿ ಆಯ್ಕೆ ಮಾಡಿದ್ದು ಅಂದು. ಹಾಗಿರುವಾಗ ನಾನು ಯಾಕೆ ಹೆದರಲಿ" ಎಂದಿದ್ದಾರೆ.
ತಮಿಳಿನ 'ವಾನತ್ತಿಪೋಲ' ಚಿತ್ರದ ರೀಮೆಕ್ 'ಯಜಮಾನ'. ಪ್ರೇಮಾ ನಾಯಕಿಯಾಗಿ ಚಿತ್ರಕ್ಕೆ ಬೇಡ ಎಂದು ವಿಷ್ಣು ಸರ್ ಹೇಳಿದ್ರು ನಾನೇ ಅವ್ರನ್ನು ಒಪ್ಪಿಸಿದ್ದೆ ಎಂದು ರಹಮಾನ್ ನೆನಪಿಸಿಕೊಂಡಿದ್ದಾರೆ. "ವಿಷ್ಣು ಸರ್ ಬೇಡ ಎಂದರೂ ನಾನು ಬಲವಂತ ಮಾಡಿ ಒಪ್ಪಿಸಿದ್ದೀನಿ. ಆ ಅಡ್ವಾನ್ಸ್ ತಗೊಂಡಾಗ ರೆಹಮಾನ್ ಯಾರು ಅಂತ ಗೊತ್ತಿತ್ತಾ? ಈಗ ಮಹಾನಟಿನಾ? ಏನಿದು ಅಹಂಕಾರ. ಭಾರತಿ ಮೇಡಂ ಅವರನ್ನು ಕರೆಯಲು ಹೋಗಿದ್ದೆ. ಅವರಿಗೆ ಆರೋಗ್ಯ ಸರಿ ಇರಲಿಲ್ಲ. ಹಾಗಾಗಿ ಅವರು ಬರಲಿಲ್ಲ. ಆದರೆ ಪ್ರೇಮಾ ಅವರನ್ನು ಕರೆದ್ರೆ ಮಹಾನಟಿ ಅಂದ್ರು. ಅಬ್ಬಬ್ಬಾ.. ಯಜಮಾನ ಮಾಡಿದ್ಮೇಲೆ ಮಹಾನಟಿ. ಅದಕ್ಕೂ ಮುನ್ನ ಯಾವ ಮಹಾನಟಿ" ಎಂದು ಬೇಶರ ಹೊರ ಹಾಕಿದ್ದಾರೆ.

ಶಶಿಕುಮಾರ್, ಅಭಿಜಿತ್, ರಮೇಶ್ ಭಟ್ ಎಲ್ಲರೂ ಇವತ್ತು ಇಲ್ಲಿಗೆ ಬಂದಿದ್ದಾರೆ. ಇವರು ನಿಜವಾದ ಮಹಾನಟರು. ಅವರಿಗೆ ಗೌರವ ಕೊಡ್ತೀನಿ. ಫೋನ್ ಮಾಡಿ ಕರೆದರೆ ಕೂಡ ಬಂದರು ಎಂದು ರೆಹಮಾನ್ ವಿವರಿಸಿದ್ದಾರೆ. ಸಿನಿಮಾ ಕಲೆಕ್ಷನ್ ಬಗ್ಗೆ ಮಾತನಾಡಿದ್ದ ಅವರು ಅವತ್ತಿನ ಕಾಲಕ್ಕೆ 35 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಆದರೆ ನನಗೆ ಒಂದೂವರೆ ಕೋಟಿ ರೂ. ಮಾತ್ರ ಬಂತು. ನಾನು ಎಲ್ಲಾ ಏರಿಯಾ ರೈಟ್ಸ್ ಮಾಡಿಬಿಟ್ಟಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.
ಶೇಷಾದ್ರಿ ಹಾಗೂ ರಾಧ ಭಾರತಿ 'ಯಜಮಾನ' ಚಿತ್ರ ನಿರ್ದೇಶನ ಮಾಡಿದ್ದರು. ಪವಿತ್ರಾ ಲೋಕೇಶ್, ಲಕ್ಷ್ಮಿ ದೇವಿ, ಶಿವರಾಂ, ಶೋಭರಾಜ್, ಮೈಕಲ್ ಮಧು ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಡಾ. ರಾಜ್ಕುಮಾರ್ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಯಾವುದೇ ನಿರೀಕ್ಷೆ ಇಲ್ಲದೇ ಬಂದಿದ್ದ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ರಾಜೇಶ್ ರಾಮನಾಥ್ ಸಂಗೀತದಲ್ಲಿ ಕೆ. ಕಲ್ಯಾಣ್ ಸಾಹಿತ್ಯದಲ್ಲಿ ಹಾಡುಗಳು ಹಿಟ್ ಆಗಿ ಚಿತ್ರಕ್ಕೆ ಶಕ್ತಿ ತುಂಬಿತ್ತು.
'ಪ್ರೇಮಾ ಚಂದ್ರಮ', 'ನಮ್ಮ ಮನೆಯಲಿ ದಿನವೂ ಮಿನುಗೋ', 'ಮೈಸೂರು ಮಲ್ಲಿಗೆ', 'ಓ ಮೈನಾ ಓ ಮೈನಾ' ಚಿತ್ರದ ಎಲ್ಲಾ ಹಾಡುಗಳು ಇವತ್ತಿಗೂ ಸಿನಿರಸಿಕರ ಹಾಟ್ ಫೇವರಿಟ್ ಎನಿಸಿಕೊಂಡಿದೆ. ರಮೇಶ್ ಬಾಬು ಛಾಯಾಗ್ರಹಣ, ಸೌಂದರ್ ರಾಜ್ ಸಂಕಲನ 'ಯಜಮಾನ' ಚಿತ್ರಕ್ಕಿತ್ತು.


Click it and Unblock the Notifications











