ಗೀತಸಾಹಿತಿ ಪುತ್ರ, ಸೊಸೆಯ ಆತ್ಮಹತ್ಯೆಗೆ ಕಾರಣ ಏನು?
ಬಾಲಿವುಡ್ ಗೀತಸಾಹಿತಿ ಸಂತೋಷ್ ಆನಂದ್ ಅವರ ಪುತ್ರ, ಸೊಸೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆಯಿಂದ ಸಂತೋಷ್ ಆನಂದ್ ಕುಟುಂಬ ವಿಷಾದದಲ್ಲಿ ಮುಳುಗಿದೆ. ಸಂತೋಷ್ ಅವರ ಪುತ್ರ ಸಂಕಲ್ಪ್ ಅನಂದ್ (38) ಹಾಗೂ ಸೊಸೆ ನಂದಿನಿ (34) ವೇಗವಾಗಿ ಬರುತ್ತಿದ್ದ ರೈಲಿನ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಕ್ಟೋಬರ್ 15ರ ಮುಂಜಾನೆ ಈ ಘಟನೆ ನಡೆದಿದೆ. ಕೋಸಿಕಾಲನ್ ಟೌನ್ ಗೆ ಕೆಲವು ಕಿ.ಮೀಗಳ ಅಂತರದಲ್ಲಿ ಈ ದಾರುಣ ಘಟನೆ ನಡೆದಿದೆ. ಘಟನೆಯಲ್ಲಿ ಸಂಕಲ್ಪ್ ಹಾಗೂ ನಂದಿನಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಈ ದಂಪತಿಗಳ ಐದು ವರ್ಷದ ಮಗು ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ರೈಲು ಹಳಿಗಳ ಪಕ್ಕದಲ್ಲೇ ನಿಲ್ಲಿಸಿದ್ದ ಕಾರಿನಲ್ಲಿ ಹತ್ತು ಪುಟಗಳ ಸೂಸೈಡ್ ನೋಟ್ ಲಭ್ಯವಾಗಿದೆ. ಆರ್ಥಿಕ ಮುಗ್ಗಟ್ಟಿನ ಕಾರಣ ತಾವು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಅದರಲ್ಲಿ ಬರೆಯಲಾಗಿದೆ. ಸೂಸೈಡ್ ನೋಟ್ ಪಕ್ಕದಲ್ಲೇ ಸಂಕಲ್ಪ್ ಅವರ ಮತದಾರರ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್ ಸಿಕ್ಕಿದ್ದು ಅವರನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗಿದೆ.
ಸೆಂಟರ್ ಫಾರ್ ಇನ್ಸ್ ಟಿಟ್ಯೂಟ್ ಆಫ್ ಕ್ರಿಮಿನಾಲಜಿ ಅಂಡ್ ಫೋರೆನ್ಸಿಕ್ ಸೈನ್ಸ್ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸಂಕಲ್ಪ್ ಅವರು ಕಾರ್ಯನಿರ್ವಹಿಸುತ್ತಿದ್ದರು. ಆತ್ಮಹತ್ಯೆಗೂ ಕೆಲ ದಿನಗಳ ಮುಂಚಿತವಾಗಿಯೇ ಅವರು ದೆಹಲಿಯಿಂದ ಆಗಮಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಮ್ಮ ಪುತ್ರ ಹಾಗೂ ಸೊಸೆ ಆತ್ಮಹತ್ಯೆಗೆ ಶರಣಾದ ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಸಂತೋಷ್ ಆನಂದ್ ಆಗಮಿಸಿದರು. ಈ ಘಟನೆಯ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.


Click it and Unblock the Notifications











