ಕೆಎಸ್ಆರ್ಟಿಸಿ ಬಸ್ಸಿನಲ್ಲಿ 'ಗೀತ ಗೋವಿಂದಂ' ಸೀನ್: ಯುವಕನ ವಿರುದ್ಧ ದೂರು
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ನಟಿಸಿದ್ದ 'ಗೀತಾ ಗೋವಿಂದಂ' ಸಿನಿಮಾ ನೆನಪಿರಬೇಕು. ಕನ್ನಡಕ್ಕೆ ಡಬ್ ಆಗಿಯೂ ಈ ಸಿನಿಮಾ ಬಿಡುಗಡೆ ಆಗಿತ್ತು. ಈ ಸಿನಿಮಾವನ್ನು 'ಸ್ಪೂರ್ತಿ'ಯಾಗಿ ತೆಗೆದುಕೊಂಡ ಯುವಕನೊಬ್ಬ ಯಡವಟ್ಟು ಮಾಡಿಕೊಂಡಿದ್ದಾನೆ.
'ಗೀತಾ-ಗೋವಿಂದಂ' ಸಿನಿಮಾದಲ್ಲಿ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಬಸ್ಸಿನಲ್ಲಿ ಮಲಗಿರಬೇಕಾದರೆ ಆಕೆಗೆ ಮುತ್ತು ಕೊಡುತ್ತಾನೆ, ಇದು ಇಬ್ಬರ ನಡುವೆ ದ್ವೇಷಕ್ಕೆ ಆ ನಂತರ ಪ್ರೀತಿಗೆ ಕಾರಣವಾಗುತ್ತದೆ.
ಇದೀಗ ಯುವಕನೊಬ್ಬ ಹೀಗೆಯೇ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಯುವತಿಯೊಬ್ಬರು ಮಲಗಿದ್ದ ಮುತ್ತು ಕೊಟ್ಟು ಓಡಿಹೋಗಿದ್ದಾನೆ. ಯುವತಿಯು ಹುಡುಗನ ವಿರುದ್ಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಕಲಿಯುತ್ತಿದ್ದ ಯುವತಿ ಮೊನ್ನೆ (ಸೆಪ್ಟೆಂಬರ್ 15)ರ ರಾತ್ರಿ ಬಳ್ಳಾರಿಯಿಂದ ಬೆಂಗಳೂರಿಗೆ ಕೆಎಸ್ಆರ್ಟಿಸಿ ಐರಾವತ ಬಸ್ ಹತ್ತಿದ್ದಾಳೆ. ಅದೇ ಬಸ್ಸಿಗೆ ಬಳ್ಳಾರಿಯಲ್ಲಿಯೇ ಯುವಕನೊಬ್ಬ ಹತ್ತಿದ್ದಾನೆ. ಅಲ್ಲಿಂದಲೂ ಯುವತಿಯನ್ನು ನೋಡುವುದು, ವಿಚಿತ್ರ ಸಂಜ್ಞೆ ಮಾಡುವುದು, ನಗುವುದು ಮಾಡುತ್ತಿದ್ದ ಯುವಕ, ಬಸ್ಸು ಬೆಳಗಿನ ಜಾವ ಪೀಣ್ಯ ಬರುತ್ತಿದ್ದಂತೆ ತನ್ನ ಸೀಟಿನ ಮೇಲೆ ಮಲಗಿದ್ದ ಯುವತಿಗೆ ಹೋಗಿ ಮುತ್ತು ಕೊಟ್ಟಿದ್ದಾನೆ. ಯುವತಿ ಪ್ರತಿಭಟಿಸಿದ ಕೂಡಲೇ ಬಸ್ಸು ಇಳಿದು ಓಡಿಹೋಗಿದ್ದಾನೆ.
ಯುವತಿಯು ಕೂಡಲೇ ಪೀಣ್ಯ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಮುತ್ತು ಕೊಟ್ಟು ಓಡಿ ಹೋದ ಯುವಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

'ಗೀತಾ-ಗೋವಿಂದಂ' ಸಿನಿಮಾದಲ್ಲಿಯೂ ರಶ್ಮಿಕಾ ಮಂದಣ್ಣ ಬಸ್ಸಿನಲ್ಲಿ ಮಲಗಿದ್ದಾಗ ವಿಜಯ್ ದೇವರಕೊಂಡ ರಶ್ಮಿಕಾಗೆ ಮುತ್ತು ಕೊಡುತ್ತಾರೆ. ಇದರಿಂದ ಇಬ್ಬರ ನಡುವೆ ದ್ವೇಷ ಮೂಡುತ್ತದೆ ಆ ನಂತರ ಇಬ್ಬರೂ ಪ್ರೇಮಿಗಳಾಗುತ್ತದೆ. ಇದೇ ಸಿನಿಮಾದ ಅಂತ್ಯದಲ್ಲಿ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡಗೆ ಬಸ್ಸಿನಲ್ಲಿಯೇ ಗಾಢವಾಗಿ ಮುತ್ತು ಕೊಡುವ ದೃಶ್ಯವೂ ಇದೆ.


Click it and Unblock the Notifications











