ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಅದ್ಧೂರಿ ಚಾಲನೆ ನೀಡಿದ ಸಿಎಂ ಯಡಿಯೂರಪ್ಪ
12ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಂಗಳೂರು ಚಿತ್ರೋತ್ಸವವನ್ನು ಉದ್ಘಾಟಿಸಿ ಶುಭಕೋರಿದ್ದಾರೆ.
Recommended Video
ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನೆ ಕಾರ್ಯಕ್ರಮದಲ್ಲಿ, ಬಾಲಿವುಡ್ ಗಾಯಕ ಸೋನು ನಿಗಮ್, ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್, ಕನ್ನಡದ ನಟ ಯಶ್, ಹಾಗೂ ಹಿರಿಯ ನಟಿ ಜಯಪ್ರದ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.
ಚಿತ್ರೋತ್ಸವ ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ "ಕನ್ನಡ ಚಿತ್ರಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಗುಣಮಟ್ಟ ಹೆಚ್ಚಾಗಬೇಕು ಅನ್ನೋ ನಿರೀಕ್ಷೆ ಇದೆ. ಸಿನಿಮಾಗೆ ಸರ್ಕಾರ ಸವಲತ್ತು ಕೊಡುತ್ತಿದೆ. ಆದರೆ ಅದನ್ನು ಚಿತ್ರರಂಗ ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎನ್ನುವುದು ನನ್ನ ಆಸೆ" ಎಂದರು. ಇನ್ನು ಭಾರತೀಯ ಚಿತ್ರರಂಗ ಕಂಡ ಮಹಾನ್ ದಿಗ್ಗಜರಲ್ಲಿ ಒಬ್ಬರಾದ ಸತ್ಯ ಜಿತ್ ರೇ ಅವರನ್ನು ಸಿಎಂ ನೆನಪಿಸಿಕೊಂಡರು.

ಇನ್ನು ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದ ಹಿರಿಯ ನಟಿ ಜಯಪ್ರದ ಮಾತನಾಡಿ "ನನಗೆ ಕನ್ನಡ ಚಿತ್ರರಂಗ ಅಂದರೆ ತುಂಬ ಪ್ರೀತಿ. ರಾಜ್ ಕುಮಾರ್ ಅವರ ಸನಾದಿ ಅಪ್ಪಣ್ಣ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದೆ. ರಾಜ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಎಲ್ಲರು ತುಂಬ ಪ್ರೀತಿ ಕೊಟ್ಟಿದ್ದಾರೆ. ನಾನು ಅವರನ್ನ ಮಿಸ್ ಮಾಡಿಕೊಳ್ಳುತ್ತೇನೆ" ಎಂದರು.
ಇನ್ನು ಯಶ್ ಮಾತನಾಡಿ ''ಕರ್ನಾಟಕದಲ್ಲಿ ಒಂದು ಫಿಲಂ ಸ್ಟುಡಿಯೋ ಕಟ್ಟಿಕೊಡಿ. ನಾವು ಬೇರೆ ಕಡೆ ಹೋಗಿ ಅವರ ವ್ಯವಸ್ಥೆಗೆ ತಕ್ಕಂತೆ ಕೆಲಸ ಮಾಡಬೇಕು, ನಮ್ಮಲ್ಲಿ ಸ್ಟುಡಿಯೋ ಆದರೆ ನಮ್ಮಂತೆ ಅನೇಕ ಯುವ ಪ್ರತಿಭೆಗಳು ಬೆಳಕಿಗೆ ಬರುತ್ತೆ'' ಎಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದರು.
ಚಿತ್ರೋತ್ಸವದ ಉದ್ಘಾಟನೆ ಚಿತ್ರವಾಗಿ ಪರ್ಷಿಯನ್, ಇರಾನ್ ಭಾಷೆಯ 'ಸಿನಿಮಾ ಖಾರ್' ಇಂದು ಸಂಜೆ 9.45ಕ್ಕೆ ಪ್ರದರ್ಶನಗೊಂಡಿದೆ.
ಫೆಬ್ರವರಿ 26 ರಿಂದ ಮಾರ್ಚ್ 4ರ ವರೆಗೂ ಸುಮಾರು 200 ಚಿತ್ರಗಳು ಪ್ರದರ್ಶನವಾಗಲಿದೆ. ಒರೆಯಾನ್ ಮಾಲ್, ನವರಂಗ್ ಚಿತ್ರಮಂದಿರ, ಕಲಾವಿದರ ಸಂಘದ ರಾಜ್ ಕುಮಾರ್ ಭವನ, ಸುಚಿತ್ರ ಫಿಲಂ ಸಿಟಿಯಲ್ಲಿ ಸಿನಿಮಾಗಳು ಪ್ರದರ್ಶನವಾಗಲಿದೆ.


Click it and Unblock the Notifications











