CCL 2026 Semifinal ; ಚೆನ್ನೈ ವಿರುದ್ಧ ಸೇಡು ತೀರಿಸಿಕೊಂಡ ಕರ್ನಾಟಕ ಬುಲ್ಡೋಜರ್ಸ್-ಫೈನಲ್ಗೆ ಕಿಚ್ಚನ ಪಡೆ
ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್ ಕೇವಲ ನಾಯಕ ಮಾತ್ರ ಅಲ್ಲ ನಿರ್ದೇಶಕ ಕೂಡ ಹೌದು. ಗಾಯಕ ಕೂಡ ಹೌದು. ಇಷ್ಟೇ ಅಲ್ಲ ಸುದೀಪ್ ಅತ್ಯದ್ಭುತ ಕ್ರಿಕೆಟ್ ಪ್ಲೇಯರ್ ಕೂಡ ಹೌದು. ಸಿನಿಮಾದಷ್ಟೇ ಕ್ರಿಕೆಟ್ನ್ನು ಕೂಡ ಅತೀವವಾಗಿ ಇಷ್ಟ ಪಡುವ ಸುದೀಪ್ ಚೂರು ಬಿಡುವು ಸಿಕ್ಕರೂ ಸಾಕು ಕಾಣಿಸುವುದು ಮೈದಾನದಲ್ಲಿಯೇ.
ಇಂಥಾ ಸುದೀಪ್ ಕಳೆದ ವರ್ಷ ಸಿಸಿಎಲ್ನಲ್ಲಿ ತಮ್ಮ ಹುಡುಗರ ಜೊತೆ ಫೈನಲ್ ತಲುಪಬೇಕಿತ್ತು. ಆದರೆ, ಸೆಮಿಫೈನಲ್ನಲ್ಲಿ ಚೆನ್ನೈ ರೈನೋಸ್ ತಂಡವನ್ನು ಮಣಿಸುವಲ್ಲಿ ನಮ್ಮ ಕರ್ನಾಟಕ ಬುಲ್ಡೋಜರ್ಸ್ ತಂಡ ಸೋತಿತ್ತು. ಸುದೀಪ್ ಪಡೆಗೆ ಸೆಡ್ಡು ಹೊಡೆದು ಆರ್ಯ ತಂಡ ಫೈನಲ್ ಪ್ರವೇಶ ಮಾಡಿತ್ತು. ಅಂದಿನಿಂದ ಸೇಡು ತೀರಿಸಿಕೊಳ್ಳಲು ಹಾತೊರೆಯುತ್ತಿದ್ದ ಕಿಚ್ಚನ ಹುಡುಗರು ಇಂದು (ಜನವರಿ 31) ನಡೆದ ರಣ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಚೆನ್ನೈ ತಂಡವನ್ನು ಬಗ್ಗು ಬಡಿದಿದ್ದಾರೆ. ಮನೆಗೆ ಕಳುಹಿಸಿದ್ದಾರೆ.

ಹೌದು. ಕೋಯಮತ್ತೂರಿನಲ್ಲಿ ಇಂದು ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ವೇಲ್ಸ್ ಚೆನ್ನೈ ಕಿಂಗ್ಸ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ಚೆನ್ನೈ ತಂಡದ ನಾಯಕ ವಿಕ್ರಾಂತ್ ಸಂತೋಷ್ ಮತ್ತು ರಮಣ ಆರಂಭಿಕರಾಗಿ ಕಣಕ್ಕಿಳಿದರು. ಉತ್ತಮ ಆರಂಭವನ್ನು ಕೂಡ ನೀಡಿದರು.
ಅದರಲ್ಲಿಯೂ ಕ್ಯಾಪ್ಟನ್ ವಿಕ್ರಾಂತ್ ಸಂತೋಷ್ ಕೇವಲ 16 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ಈ ಹಿನ್ನೆಲೆ ಬುಲ್ಡೋಜರ್ಸ್ ಕ್ಯಾಂಪ್ನಲ್ಲಿ ಆತಂಕ ಮನೆ ಮಾಡಿತ್ತು.
ಆದರೆ. ಬೇಕಿದ್ದ ಮೊದಲ ವಿಕೆಟ್ ಡಾರ್ಲಿಂಗ್ ಕೃಷ್ಣ ಕಬಳಿಸಿದರು. ಮತ್ತೊಂದು ಬದಿಯಲ್ಲಿದ್ದ ರಮಣ ಅವರನ್ನು ಔಟ್ ಮಾಡಿದರು. ರಮಣ ನಂತರ ಬಂದ ಶಾಂತನು ಅವರಿಗೆ ಚಂದನ್ ಪೆವಿಲಿಯನ್ ದಾರಿ ತೋರಿಸಿದರು. ಶಾಂತನು ಕೇವಲ 5 ರನ್ ಗಳಿಸಿ ಔಟಾದರು. ಪೃಥ್ವಿ ಪಾಂಡಿರಾಜನ್ ಶೂನ್ಯ ಸುತ್ತಿ ಗೂಡು ಸೇರಿದರು.
ಹೀಗೆ ಒಂದು ಬದಿಯಲ್ಲಿ ಸತತ ವಿಕೆಟ್ ಬೀಳುತ್ತಿದ್ದರು ಆಕ್ರಮಣಕಾರಿ ಆಟ ಮುಂದುವರೆಸಿದ್ದ ವಿಕ್ರಾಂತ್ ಸಂತೋಷ್ ಕೊನೆಗೆ ಚಂದನ್ ಬೀಸಿದ ಬಲೆಗೆ ಬಿದ್ದರು. 24 ಎಸೆತಗಳಲ್ಲಿ 66 ರನ್ ಗಳಿಸಿ ಔಟಾದರು. ವಿಕ್ರಾಂತ್ ಸಂತೋಷ್ ಔಟಾದ ನಂತರ ಚೆನ್ನೈ ಮತ್ತೆ ಸತತಾಗಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದ ಆಧವ್ ತಂಡವನ್ನು ಸಂಕಷ್ಟದಿಂದ ಮೇಲೆತ್ತುವ ಪ್ರಯತ್ನ ಮಾಡಿದರು. 26 ಎಸೆತಗಳಲ್ಲಿ 31 ರನ್ ಗಳಿಸಿದರು. ಅಂತಿಮವಾಗಿ 19.5 ಓವರ್ಗೆ ಆಲೌಟ್ ಆದ ಚೆನ್ನೈ ಕಿಂಗ್ಸ್ ತಂಡ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ 161 ರನ್ಗಳ ಗುರಿ ನೀಡಿತು.

ಕರ್ನಾಟಕ ಬುಲ್ಡೋಜರ್ಸ್ ಪರ ಡಾರ್ಲಿಂಗ್ ಕೃಷ್ಣ 1, ಚಂದನ್ ಕುಮಾರ್ 2, ಕರಣ್ ಆರ್ಯನ್ 2, ಸಚಿನ್ 3 ವಿಕೆಟ್ ಕಬಳಿಸಿದರು. ಚೆನ್ನೈ ನೀಡಿದ್ದ 161ರನ್ಗಳ ಗುರಿ ಬೆನ್ನತ್ತಿದ್ದ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಡಾರ್ಲಿಂಗ್ ಕೃಷ್ಣ ಮತ್ತು ನಿರೂಪ್ ಭಂಡಾರಿ ಉತ್ತಮವಾದ ಆರಂಭ ನೀಡಿದರು.
ಆದರೆ,14 ಎಸೆತಗಳಲ್ಲಿ 25 ರನ್ ಗಳಿಸಿದ್ದಾಗ ನಿರೂಪ್ ಭಂಡಾರಿ ಔಟಾದರು. ನಿರೂಪ್ ಔಟಾದ ಬೆನ್ನಲ್ಲೇ ಚಂದನ್ ಕುಮಾರ್ ಕೂಡ ಡಕ್ ಔಟ್ ಆದರು. ಸಾವಧಾನದಿಂದ ಆಡುತ್ತಿದ್ದ ಡಾರ್ಲಿಂಗ್ ಕೃಷ್ಣ 18 ಬಾಲ್ಗಳಲ್ಲಿ 20 ರನ್ಗಳಿಸಿ ವಿಕೆಟ್ ಚೆಲ್ಲಿದರು. ಇನ್ನು ಈ ಬಾರಿ ಕರ್ನಾಟಕ ಬುಲ್ಡೋಜರ್ಸ್ ಪರ ಅತೀ ಹೆಚ್ಚು ರನ್ ಗಳಿಸಿರುವ ರಾಜೀವ್ ಹನು ಕೂಡ ನಿರಾಸೆ ಮಾಡಿದರು. ಪರಿ ಬೌಲಿಂಗ್ನಲ್ಲಿ ಶೂನ್ಯಕ್ಕೆ ಔಟಾದರು.
ಕ್ರೀಸ್ಗೆ ಬಂದ ಕ್ಷಣದಿಂದಲೇ ರನ್ ಓಡಲು ಕಷ್ಟ ಪಡುತ್ತಿದ್ದ ಕರಣ್ 12ನೇ ಓವರ್ನಲ್ಲಿ ಓಡಲು ಆಗದೇ ಕುಸಿದು ಬಿದ್ದರು. 13ನೇ ಓವರ್ನಲ್ಲಿ ಔಟಾಗಿ ಪೆವಿಲಿಯನ್ ಸೇರಿದರು. 14ನೇ ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 100 ರನ್ ಗಡಿದಾಟಿದ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಕೊನೆಯ 30 ಬಾಲ್ನಲ್ಲಿ 51 ರನ್ಗಳ ಅವಶ್ಯಕತೆ ಇತ್ತು.
ಈ ಸಮಯದಲ್ಲಿ 10 ಬಾಲ್ನಲ್ಲಿ 14 ರನ್ ಗಳಿಸಿದ್ದ ಮಂಜುನಾಥ್ ಚೆನ್ನೈ ತಂಡದ ಕ್ಯಾಪ್ಟನ್ ವಿಕ್ರಾಂತ್ ಬೌಲಿಂಗ್ನಲ್ಲಿ ಕೀಪರ್ ಸತ್ಯಗೆ ಕ್ಯಾಚ್ ನೀಡಿದರು. ಆದರೆ ಇದೇ ಸಮಯದಲ್ಲಿ ಇನ್ನೊಂದು ಬದಿಯಲ್ಲಿ ಅಂಟಿಕೊಂಡಿದ್ದ ಜೆಕೆ ನಿಧಾನವಾಗಿ ಚೆನ್ನೈ ಮೇಲೆ ಆಕ್ರಮಣ ಮಾಡಿದರು. 17ನೇ ಓವರ್ನಲ್ಲಿ ನಾಯಕ ವಿಕ್ರಾಂತ್ ಬೌಲಿಂಗ್ನಲ್ಲಿ ಎರಡು ಬೌಂಡರಿ ಸೇರಿ ಎರಡು ಸಿಕ್ಸರ್ ಸಿಡಿಸಿದರು. ಈ ಮೂಲಕ ಸೋಲಿನ ಭಯದಲ್ಲಿದ್ದ ಕರ್ನಾಟಕ ಬುಲ್ಡೋಜರ್ಸ್ ತಂಡದ ಕ್ಯಾಂಪ್ನಲ್ಲಿ ಭರವಸೆ ಮೂಡಿಸಿದರು.
ಕೊನೆಯ ಹನ್ನೆರಡು ಬಾಲ್ಗಳಲ್ಲಿ 14 ರನ್ಗಳ ಅವಶ್ಯಕತೆ ಇತ್ತು. 19ನೇ ಓವರ್ನಲ್ಲಿ ಆಧವ್ ಮೊದಲ 3 ಬಾಲ್ ಕರಾರುವಕ್ಕಾದ ಬೌಲಿಂಗ್ ಮಾಡಿದರು. ಕೇವಲ 1 ರನ್ ನೀಡಿದರು. ನಾಲ್ಕನೇ ಎಸೆತದಲ್ಲಿ ಜೆಕೆ ಬೌಂಡರಿ ಬಾರಿಸಿದರು. ಈ ಮೂಲಕ 43 ಬಾಲ್ಗಳಲ್ಲಿ ಅರ್ಧ ಶತಕ ಪೂರೈಸಿದರು. ಆದರೆ ಮರು ಎಸೆತದಲ್ಲಿ ಸಿಕ್ಸ್ ಹೊಡೆಯುವ ಭರದಲ್ಲಿ ಔಟ್ ಆದರು. ಆ ನಂತರ ಬಂದ ಪ್ರತಾಪ್ ಮೊದಲ ಎಸೆತದಲ್ಲಿಯೇ ಬೌಂಡರಿ ಬಾರಿಸಿದರು.
ಕೊನೆಯ ಓವರ್ನಲ್ಲಿ 5 ರನ್ಗಳ ಅವಶ್ಯಕತೆ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಇತ್ತು. ಕ್ರೀಸ್ನಲ್ಲಿ ಸುದೀಪ್ ಮತ್ತು ಪ್ರತಾಪ್ ಇದ್ದರೆ ಬೌಲಿಂಗ್ ಜವಾಬ್ಧಾರಿಯನ್ನು ಚೆನ್ನೈ ಪರವಾಗಿ ಅಶೋಕ್ ಸೆಲ್ವನ್ ವಹಿಸಿಕೊಂಡಿದ್ದರು. ಸುದೀಪ್ ಮೊದಲ ಬಾಲ್ನಲ್ಲಿ ಒಂದು ರನ್ ಗಳಿಸಿದರು. ಎರಡನೇ ಎಸೆತದಲ್ಲಿ ಪ್ರತಾಪ್ ಕೂಡ ಸಿಂಗಲ್ ತಗೊಂಡರು. ಕೊನೆಯ ಮೂರು ಬಾಲ್ನಲ್ಲಿ ಎರಡು ರನ್ಗಳ ಅವಶ್ಯಕತೆ ಇತ್ತು. ಕೊನೆಯದಾಗಿ ಸುದೀಪ್ ಬೌಂಡರಿ ಬಾರಿಸಿ ಗೆಲುವಿನ ನಗೆ ಬೀರಿದರು. ಕಳೆದ ವರ್ಷದ ಸೇಡು ತೀರಿಸಿಕೊಂಡರು. ಕನ್ನಡದ ಧ್ವಜ ಹಾರಿಸಿ ಸಂಭ್ರಮ ಪಟ್ಟರು. ನಾಳೆ (ಫೆಬ್ರವರಿ 1) ಫೈನಲ್ ಪಂದ್ಯ ನಡೆಯಲಿದ್ದು ಬೆಂಗಾಲ್ ಟೈಗರ್ಸ್ ತಂಡ ಕರ್ನಾಟಕ ಬುಲ್ಡೋಜರ್ಸ್ ತಂಡದ ವಿರುದ್ದ ಕಣಕ್ಕಿಳಿಯಲಿದೆ.


Click it and Unblock the Notifications











