ದರ್ಶನ್ ನಮ್ಮ ಗರಡಿಯ ಪೈಲ್ವಾನ್, ಅವರಿದ್ದರೆ ನೂರಾರು ಕೋಟಿ ವ್ಯವಹಾರ ನಡೆಯುತ್ತೆ- ಎಸ್.ನಾರಾಯಣ್
'ದರ್ಶನ್' ಕೇವಲ ನೇರಾ ನೇರ ನಡುವಳಿಕೆಗೆ ಹೆಸರಾದವರಲ್ಲ. ಬದಲಿಗೆ ನೇರವಂತಿಕೆಯ ಜೊತೆಗೆ ಹೃದಯವಂತಿಕೆ ಕೂಡಾ ಅವರ ವ್ಯಕ್ತಿತ್ವದ ಟ್ರೇಡ್ಮಾರ್ಕ್. ತಾನು ಬೆಳೆಯುತ್ತಲೇ ಇತರರನ್ನೂ ಬೆಳೆಸಬೇಕೆಂಬ ಇರಾದೆಯ ದರ್ಶನ್ ಅವರದ್ದು. ಆದರೆ, ದುರ್ದೈವ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ದರ್ಶನ್, ಅ'ಪವಿತ್ರ' ಸಂಬಂಧಕ್ಕೆ ಹಾತೊರೆದರು. ಸಹವಾಸ ದೋಷದಿಂದ ತಮ್ಮ ಇಮೇಜ್ನ ತಾವೇ ಡ್ಯಾಮೇಜ್ ಮಾಡಿಕೊಂಡರು.
ಸದ್ಯ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಮತ್ತೊಮ್ಮೆ ಸೆರೆವಾಸ ಅನುಭವಿಸುತ್ತಿದ್ದಾರೆ. ಈ ಬಾರಿ ದರ್ಶನ್ ಅದ್ಯಾವಾಗ ಈ ನರಕದಿಂದ ಹೊರ ಬರುತ್ತಾರೋ ಗೊತ್ತಿಲ್ಲ. ಆದರೆ, ದರ್ಶನ್ ಅವರ ಅನುಪಸ್ಥಿತಿ ಕನ್ನಡ ಚಿತ್ರರಂಗಕ್ಕೆ ಕಾಡುತ್ತಿದೆ. ಯಾಕೆಂದರೆ, ಎಲ್ಲರಿಗೆ ಗೊತ್ತಿರುವಂತೆ ಪ್ಯಾನ್ ಇಂಡಿಯಾದ ಈ ಕಾಲದಲ್ಲಿ ಕನ್ನಡಕ್ಕೆ ಸೀಮಿತವಾದವರು ದರ್ಶನ್. ಕನ್ನಡ ಚಿತ್ರರಂಗದ ನಂಬರ್ ಒನ್ ಹೀರೋ. ವರ್ಷಕ್ಕೆ ಎರಡು ಚಿತ್ರಗಳನ್ನು ಖಾಯಂ ಆಗಿ ಮಾಡುವ ಸ್ಟಾರ್.

ಇಂಥಾ ದರ್ಶನ್ ಕಂಬಿ ಹಿಂದೆ ಇದ್ದಾರೆ. ಸಹಜವಾಗಿಯೇ ದರ್ಶನ್ ಜೈಲಿನಲ್ಲಿರುವ ಕಾರಣದಿಂದ ಚಿತ್ರರಂಗವನ್ನೇ ನಂಬಿಕೊಂಡ ಅನೇಕ ಕುಟುಂಬಗಳಿಗೆ ಸಮಸ್ಯೆಯಾಗುತ್ತಿದೆ. 2024ರಲ್ಲಿ ದರ್ಶನ್ ಜೈಲು ಪಾಲಾದಾಗ ಅವರ ಗೆಳೆಯ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಕೂಡ ಈ ಮಾತನ್ನು ಹೇಳಿದ್ದರು. ದರ್ಶನ್ ನಂಬ್ಕೊಂಡು 200-300 ಕುಟುಂಬಗಳಿವೆ ಎಂದಿದ್ದರು. ಕನ್ನಡ ಚಿತ್ರರಂಗದಲ್ಲಿ ಇನ್ನೂರು, ಮೂನ್ನೂರು ಕೋಟಿ ರೂಪಾಯಿ ವ್ಯವಹಾರ ನಡೆಸುವ ಸ್ಟಾರ್ ಅವರು ಎಂದು ಹೇಳಿದ್ದರು. ಕನ್ನಡ ಚಿತ್ರರಂಗಕ್ಕೆ ದರ್ಶನ್ ಅನಿವಾರ್ಯ ಎಂದಿದ್ದರು. ಸದ್ಯ ಇದೇ ತರಹದ ಮಾತುಗಳನ್ನು ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್. ನಾರಾಯಣ್ ಕೂಡ ಹೇಳಿದ್ದಾರೆ. ದರ್ಶನ್ ಜೈಲಿಂದ ಹೊರಗಡೆ ಬರಲೇಬೇಕು ಎಂದಿದ್ದಾರೆ.
ಈ ಕುರಿತು ''ಬಾಸ್ ಟಿವಿ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಎಸ್. ನಾರಾಯಣ್, ದರ್ಶನ್ ನಮ್ಮ ಗರಡಿಯ ಪೈಲ್ವಾನ್. ಚಿತ್ರರಂಗಕ್ಕೆ ಅವರ ಅನಿವಾರ್ಯತೆ ತುಂಬಾ ಇದೆ ಎಂದು ಹೇಳಿದ್ಧಾರೆ. ನಿಮಗೆ ಗೊತ್ತು ಅವರ ಒಂದು ಸಿನಿಮಾ ಬಿಡುಗಡೆಯಾದರೆ ಎಲ್ಲಾ ದೃಷ್ಟಿಯಿಂದಲೂ ಕೂಡ ನೂರಾರು ಕೋಟಿ ವ್ಯವಹಾರ ನಡೆಯುತ್ತೆ ಎಂದು ಹೇಳಿರುವ ಎಸ್ ನಾರಾಯಣ್, ಅಂತಹವರು ಇಲ್ಲಾ ಅಂದಾಗ ಇಡೀ ವರ್ಷ ಖಾಲಿ ಇರುತ್ತೆ, ಎಷ್ಟು ಜನರಿಗೆ ಸಮಸ್ಯೆಯಾಗುತ್ತೆ, ಈ ಕಾರಣಕ್ಕೆ ಚಿತ್ರರಂಗದ ದೃಷ್ಟಿಯಿಂದ, ವೈಯಕ್ತಿಕವಾಗಿಯೂ ಕೂಡ ಅವರು ಬೇಗ ಬರಬೇಕು ಎನ್ನುವುದು ನನ್ನ ಆಸೆ ಎಂದು ಹೇಳಿದ್ಧಾರೆ. ಭಗವಂತನಲ್ಲಿ ಪ್ರಾರ್ಥನೆ ಮಾಡ್ತೀನಿ ಎಂದಿದ್ದಾರೆ.

ಇನ್ನುಳಿದಂತೆ ಕೆಲ ದಿನಗಳ ಹಿಂದೆ ದರ್ಶನ್ ಬಿಡುಗಡೆಯ ಕುರಿತು ಮಾತನಾಡಿದ್ದ ಕನಸುಗಾರ ರವಿಚಂದ್ರನ್,ಡಿಬಾಸ್ ಹೊರ ಬರ್ತಾರೆ ಬಿಡೋ.. ಇನ್ನೆರಡು ತಿಂಗಳಲ್ಲಿ ಆಚೆ ಬರ್ತಾರಂತೆ ಎಂದು ಹೇಳಿದ್ದರು. ನಿಮಗೆ ಅವನು ಡಿಬಾಸ್.. ಆ ಡಿಬಾಸ್ ನನಗೆ ಮಗ ನೆನಪಿರಲಿ.. ಬರ್ತಾರೆ.. ನೋಡ್ತಾಯಿರಿ.. ಒಂದು ಕೆಟ್ಟ ಘಳಿಗೆ.. ಅದು ಮನುಷ್ಯನನ್ನು ಕುಗ್ಗಿಸುತ್ತೆ.. ಅಷ್ಟು ಆಳಕ್ಕೆ ಕುಗ್ಗಿಸುವಾಗ ಯಾವಾಗಲೋ ಒಂದು ದಿನ ಮೇಲೆ ಎಬ್ಬಿಸಬೇಕು. ಅದಕ್ಕೆ ಎಲ್ಲರೂ ಕಾಯೋಣ.. ಎಲ್ಲರೂ ಮನಸ್ಸಿನಲ್ಲಿಟ್ಟುಕೊಂಡು ಪೂಜೆ ಮಾಡಿ, ಬರ್ತಾರೆ ಎಂದು ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ್ದರು.
ಸದ್ಯ ದರ್ಶನ್ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಜೈಲಿನ ಚಿತ್ರ ಹಿಂಸೆ ಅನುಭವಿಸಲಾಗದೇ ಹೈರಾಣಾಗಿದ್ದಾರೆ. ಮನೆಯ ತುಂಬಾ ನಾಯಿಗಳ ಜೊತೆ ದಿಕ್ಕು ತಪ್ಪಿಸುವ ನರಿಗಳನ್ನೂ ಕೂಡ ಸಾಕಿ ಕಳೆದ ವರ್ಷ ಅಕ್ಷರಶಃ ನರಕ ಯಾತನೆಯನ್ನು ಅನುಭವಿಸುತ್ತಿದ್ದಾರೆ. ಇದೇ ವೇಳೆ ಪೊಲೀಸರ ತನಿಖೆಯ ಮೇಲೆಯೇ ಹಲವರು ಅನುಮಾನ ವ್ಯಕ್ತಪಡಿಸುತ್ತಿದ್ದು, ಎಸಿಪಿ ಚಂದನ್ ಮತ್ತು ಇನ್ಸ್ಪೆಕ್ಟರ್ ಗಿರೀಶ್ ನಾಯಕ್ ಅವರು ನಟ ದರ್ಶನ್ ವಿರುದ್ಧ ತನಿಖೆಯ ಹೆಸರಿನಲ್ಲಿ 'ನಕಲಿ ದಾಖಲೆ'ಗಳನ್ನು ಸೃಷ್ಟಿಸಿದ್ದಾರೆ ಎಂಬ ಗಂಭೀರ ಆರೋಪವನ್ನು ಕರ್ನಾಟಕ ಸಂಘಟನೆಗಳ ಕನ್ನಡ ಒಕ್ಕೂಟದ ಪ್ರಮುಖರಾದ ನಟರಾಜ್ ಬೊಮ್ಮಸಂದ್ರ ಮಾಡಿದ್ದಾರೆ. ಮಾರ್ಚ್ 11ರಂದು ಪ್ರತಿಭಟನೆ ಮಾಡುವುದಾಗಿ ಹೇಳಿದ್ಧಾರೆ.


Click it and Unblock the Notifications











