3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಹಾಗೂ ಜಾಕಿ ಭಾವನಾ ಒಟ್ಟಿಗೆ 2 ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೊದಲಿಗೆ 'ಟಗರು' ಶಿವನ ಜೋಡಿ ಪಂಚಮಿ ಆಗಿ ಕೇರಳ ಚೆಲುವೆ ಮಿಂಚಿದ್ದರು. ಈ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಬಳಿಕ 'ಭಜರಂಗಿ-2' ಚಿತ್ರದಲ್ಲಿ ಜೊತೆಯಾಗಿದ್ದರು. ಆ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ.
ಇದೀಗ ಸೆಂಚುರಿ ಸ್ಟಾರ್ ಹಾಗೂ ಭಾವನಾ ಮೆನನ್ ಮತ್ತೆ ಜೊತೆಯಾಗುವ ಸುದ್ದಿ ಬಂದಿದೆ. ಇಬ್ಬರು ಮತ್ತೆ ಒಟ್ಟಿಗೆ ನಟಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಶಿವಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಚಿತ್ರೀಕರಣದಿಂದ ಬಿಡುವು ಪಡೆದು ಶಿವಮೊಗ್ಗದಲ್ಲಿ ಪತ್ನಿ ಗೀತಾ ಪರ ಲೋಕಸಭೆ ಚುನಾವಣೆಗೆ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಗೀತಾ ಶಿವರಾಜ್ಕುಮಾರ್ ಕಣಕ್ಕಿಳಿದಿದ್ದಾರೆ.

ಸಿನಿಮಾಗಳ ವಿಚಾರಕ್ಕೆ ಬಂದರೆ ಶಿವಣ್ಣ '45' ಹಾಗೂ 'ಬೈರತಿ ರಣಗಲ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. '45' ಚಿತ್ರಕ್ಕೆ ಅರ್ಜುನ್ ಜನ್ಯಾ ಆಕ್ಷನ್ ಕಟ್ ಹೇಳುತ್ತಿದ್ದು ಉಪೇಂದ್ರ, ರಾಜ್ ಬಿ. ಶೆಟ್ಟಿ ಕೂಡ ಜೊತೆಯಾಗಿದ್ದಾರೆ. ನರ್ತನ್ ನಿರ್ದೇಶನದ 'ಬೈರತಿ ರಣಗಲ್' ಚಿತ್ರವನ್ನು ತಮ್ಮದೇ ಬ್ಯಾನರ್ನಲ್ಲಿ ನಿರ್ಮಾಣ ನಿರ್ಮಿಸುತ್ತಿದ್ದಾರೆ.
ಮತ್ತೆ ಕೆಲವು ಸಿನಿಮಾಗಳಲ್ಲಿ ಶಿವಣ್ಣ ನಟಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ತೆಲುಗಿನಲ್ಲಿ ರಾಮ್ಚರಣ್ ಜೊತೆ ಒಂದು ಚಿತ್ರ ಒಪ್ಪಿಕೊಂಡಿದ್ದಾರೆ. ತಮಿಳು ಕಥೆಗಳನ್ನು ಕೇಳುತ್ತಿದ್ದಾರೆ. ಇದೆಲ್ಲದರ ನಡುವೆ ಡಾಲಿ ಧನಂಜಯ್ ನಟನೆಯ 'ಉತ್ತರಕಾಂಡ' ಚಿತ್ರದಲ್ಲೂ ಶಿವಣ್ಣ ನಟಿಸುವುದು ಪಕ್ಕಾ ಆಗಿದೆ. ರೋಹಿತ್ ಪದಕಿ ನಿರ್ದೇಶನದ 'ಉತ್ತರಕಾಂಡ' ಸಿನಿಮಾ ಚಿತ್ರೀಕರಣ ಇತ್ತೀಚೆಗೆ ಶುರುವಾಗಿದೆ. ಕೆಆರ್ಜಿ ಸ್ಟುಡಿಯೋಸ್ ಬ್ಯಾನರ್ನಲ್ಲಿ ಸಿನಿಮಾ ಮೂಡಿ ಬರುತ್ತಿದೆ.

'ಉತ್ತರಕಾಂಡ' ಚಿತ್ರದಲ್ಲಿ ಶಿವಣ್ಣ ಪ್ರಮುಖವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅವರ ಜೋಡಿಯಾಗಿ ಭಾವನಾ ಮೆನನ್ ನಟಿಸುವುದು ಬಹುತೇಕ ಖಚಿತವಾಗಿದೆ. ಜನವರಿ ತಿಂಗಳಲ್ಲೇ 'ಉತ್ತರಕಾಂಡ' ಚಿತ್ರಕ್ಕಾಗಿ ತಮ್ಮನ್ನು ಸಂಪರ್ಕಿಸಿದ್ದಾಗಿ ಭಾವನಾ OTT play ವೆಬ್ಸೈಟ್ಗೆ ಮಾಹಿತಿ ನೀಡಿದ್ದಾರೆ. ಏಪ್ರಿಲ್ನಲ್ಲಿ ಶೂಟಿಂಗ್ ಅಂದಿದ್ದರು. ನನ್ನ ಭಾಗದ ಚಿತ್ರೀಕರಣ ಮೇ ತಿಂಗಳಲ್ಲಿ ಎಂದು ಹೇಳಿರುವುದಾಗಿ ಭಾವನಾ ತಿಳಿಸಿದ್ದಾರೆ. ಬೆಂಗಳೂರು ಮೂಲದ ನವೀನ್ ಎಂಬುವವರನ್ನು ಭಾವನಾ ಮದುವೆಯಾಗಿ ಇಲ್ಲೇ ನೆಲೆಸಿದ್ದಾರೆ. ಇತ್ತೀಚೆಗೆ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಜನವರಿಯಲ್ಲಿ ಬಿಡುಗಡೆಯಾದ ಸಸ್ಪೆನ್ಸ್ ಥ್ರಿಲ್ಲರ್ 'ಕೇಸ್ ಆಫ್ ಕೊಂಡಾಣ' ಚಿತ್ರದಲ್ಲಿ ಎಸಿಪಿ ಲಕ್ಷ್ಮಿ ಆಗಿ ಭಾವನಾ ನಟಿಸಿದ್ದರು. ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದಲ್ಲಿ ವಿಜಯ್ ರಾಘವೇಂದ್ರ ಲೀಡ್ ರೋಲ್ನಲ್ಲಿ ನಟಿಸಿದ್ದರು.
'ಉತ್ತರಕಾಂಡ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಈ ಹಿಂದೆ ಚಿತ್ರಕ್ಕೆ ರಮ್ಯಾ ನಾಯಕಿಯಾಗಿ ಆಯ್ಕೆ ಆಗಿದ್ದರು. ಆದರೆ ಇತ್ತೀಚೆಗೆ ತಾವು ಚಿತ್ರದಿಂದ ಹೊರ ನಡೆದಿರುವುದಾಗಿ ಆಕೆ ಹೇಳಿದ್ದರು. ಬಳಿಕ ಆ ಪಾತ್ರಕ್ಕೆ ಬೇರೆ ನಟಿಯ ಹುಡುಕಾಟ ಶುರುವಾಯಿತು. ಚಿತ್ರದಲ್ಲಿ ಧನಂಜಯ್ ಗಬ್ರು ಸತ್ಯ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ.
'ಲಚ್ಚಿ' ಎನ್ನುವ ಪಾತ್ರಕ್ಕೆ ಚೈತ್ರಾ ಆಚಾರ್ ಆಯ್ಕೆ ಆಗಿದ್ದಾರೆ. ಮಲ್ಲಿಗೆ ಎನ್ನುವ ಪಾತ್ರಕ್ಕೆ ದೂದ್ ಪೇಡ ದಿಗಂತ್ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಅವರ ಲುಕ್ ರಿವೀಲ್ ಆಗಿದೆ. ಪಾಟೀಲ ಆಗಿ ನಿರ್ದೇಶಕ ಯೋಗರಾಜ್ ಭಟ್ ಬಣ್ಣ ಹಚ್ಚುತ್ತಿದ್ದಾರೆ. ಶೀಘ್ರದಲ್ಲೇ ಇನ್ನಷ್ಟು ಪಾತ್ರಗಳ ಪರಿಚಯ ಮಾಡಿಸುವುದಾಗಿ ಚಿತ್ರತಂಡ ಹೇಳಿದೆ.
ಈ ಹಿಂದೆ 'ರತ್ನನ್ ಪ್ರಪಂಚ' ಸಿನಿಮಾ ಮಾಡಿದ ಬಹುತೇಕ ತಂಡ 'ಉತ್ತರಕಾಂಡ' ಕಥೆ ಕಟ್ಟಿಕೊಡುತ್ತಿದೆ. ಉತ್ತರಕರ್ನಾಟಕದಲ್ಲಿ ಕಥೆ ನಡೆಯಲಿದ್ದು ಆ ಶೈಲಿಯ ಭಾಷೆಯನ್ನು ಬಳಸಿಕೊಳ್ಳಲಾಗುತ್ತಿದೆ. ಉತ್ತರ ಕರ್ನಾಟಕ ಭಾಗಗಳಲ್ಲಿ ಕೂಡ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಸೆಟ್ ಹಾಕಲಿದ್ದಾರೆ. 'ಟಗರು' ಹಾಗೂ 'ಬೈರಾಗಿ' ಚಿತ್ರಗಳ ಬಳಿಕ ಶಿವಣ್ಣ-ಧನು ಜೊತೆಯಾಗುತ್ತಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.


Click it and Unblock the Notifications











