ಬಾಲಿವುಡ್ ನಟ, ನಿರ್ದೇಶಕ ಅನುರಾಗ್ ಕಶ್ಯಪ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ? ಯಾವ ಸಿನಿಮಾ ಅಂದ್ರೆ?
ಪ್ಯಾನ್ ಇಂಡಿಯಾ ಸಿನಿಮಾಗಳ ದರ್ಬಾರ್ ಜೋರಾಗಿದೆ. ಭಾಷೆಯ ಗಡಿ ಮೀರಿ ಕಲಾವಿದರು, ತಂತ್ರಜ್ಞರು ಕೆಲಸ ಮಾಡಲು ಆರಂಭಿಸಿದ್ದಾರೆ. ಕನ್ನಡ ಕಲಾವಿದರು, ಫಿಲ್ಮ್ ಮೇಕರ್ಸ್ ಬೇರೆ ಬೇರೆ ಭಾಷೆಗಳಲ್ಲಿ ನಟಿಸೋದು ಹೆಚ್ಚಾಗಿದೆ. ಅದೇ ರೀತಿ ಬಾಲಿವುಡ್ ಸ್ಟಾರ್ ನಟ, ನಟಿಯರು ಕನ್ನಡಕ್ಕೆ ಬರ್ತಿದ್ದಾರೆ.
ಇದೀಗ ಬಾಲಿವುಡ್ ನಿರ್ದೇಶಕ, ನಟ ಅನುರಾಗ್ ಕಶ್ಯಪ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಮೊದಲಿನಿಂದಲೂ ದಕ್ಷಿಣದ ಒಳ್ಳೆ ಸಿನಿಮಾಗಳು, ಪ್ರತಿಭೆಗಳ ಬಗ್ಗೆ ಅನುರಾಗ್ ಮೆಚ್ಚುಗೆ ಸೂಚಿಸುತ್ತಾ ಬರ್ತಿದ್ದಾರೆ. ಕನ್ನಡದ ತಿಥಿ ಹಾಗೂ 'ಗರುಡ ಗಮನ ವೃಷಭ ವಾಹನ' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಈಗಾಗಲೇ ತಮಿಳು ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಇತ್ತೀಚೆಗೆ ತೆಲುಗು ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದೀಗ ಕನ್ನಡ ಸಿನಿಮಾ ಸರದಿ.

ಅಡವಿ ಶೇಷ್ ನಟನೆಯ 'ಡಕಾಯಿತ್' ತೆಲುಗು ಚಿತ್ರದಲ್ಲಿ ಅನುರಾಗ್ ಕಶ್ಯಪ್ ಬಣ್ಣ ಹಚ್ಚಿದ್ದಾರೆ. ಖಡಕ್ ಲುಕ್ನಲ್ಲಿ ಇತ್ತೀಚೆಗೆ ಪೋಸ್ಟರ್ ಸಹ ಬಿಡುಗಡೆ ಆಗಿತ್ತು. ಸದ್ಯ ದಕ್ಷಿಣದ ಸಿನಿಮಾಗಳ ಕಡೆ ಒಲವು ತೋರಿಸಿರುವ ಅನುರಾಗ್ ಬಾಲಿವುಡ್ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲಿ ಸದಾ ದುಡ್ಡಿನ ಬಗ್ಗೆ ಮಾತನಾಡುತ್ತಾರೆ. ಒಳ್ಳೆ ಸಿನಿಮಾ, ಒಳ್ಳೆ ಪಾತ್ರಗಳ ಬಗ್ಗೆ ಯಾರು ಮಾತನಾಡಲ್ಲ ಎಂದಿದ್ದಾರೆ.
ಕನ್ನಡದ '8' ಎಂಬ ಚಿತ್ರದಲ್ಲಿ ಅನುರಾಗ್ ಕಶ್ಯಪ್ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಹಾಸ್ಯನಟ ಸುಜಯ್ ಶಾಸ್ತ್ರೀ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಾಲಿವುಡ್ ಖ್ಯಾತ ನಟ 'AK' ನಮ್ಮ ಚಿತ್ರದಲ್ಲಿ ನಟಿಸುತ್ತಾರೆ ಎಂದು ಪೋಸ್ಟರ್ವೊಂದು ಬಂದಿತ್ತು. ಆ 'AK' ಮತ್ಯಾರೂ ಅಲ್ಲ ಅನುರಾಗ್ ಕಶ್ಯಪ್ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದೆ. ಎವಿಆರ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಅರವಿಂದ್ ವೆಂಕಟೇಶ್ ರೆಡ್ಡಿ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ.

ಫುಟ್ಬಾಲ್ ಆಟದ ಸುತ್ತ ನಡೆಯುವ ಕಥೆ '8' ಚಿತ್ರದಲ್ಲಿದೆ. 'ನೊಂದ ನಾಣಿ' ಯೂಟ್ಯೂಬ್ ಸರಣಿ ಮೂಲಕ ಸುಜಯ್ ಗಮನ ಸೆಳೆದಿದ್ದರು. 'ಬೆಲ್ಬಾಟಂ' ಚಿತ್ರದಲ್ಲಿ ಸಗಣಿ ಪಿಂಟೋ ಎಂಬ ಪಾತ್ರದಲ್ಲಿ ನಟಿಸಿ ಸುಜಯ್ ಗಮನ ಸೆಳೆದಿದ್ದರು. ಇದೀಗ ನಿರ್ದೇಶಕರಾಗಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಅನುರಾಗ್ ಕಶ್ಯಪ್ ಬೆಂಗಳೂರಿಗೆ ಬಂದು ನೆಲೆಸಲು ನಿರ್ಧರಿಸಿದ್ದಾರೆ. ಬಾಲಿವುಡ್ ನೋಡಿ ನೋಡಿ ಸಾಕಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
"ನಾನು ಮುಂಬೈ ಬಿಡುತ್ತಿದ್ದೇನೆ. ಸಿನಿಮಾ ಜನರಿಂದ ಸ್ವಲ್ಪ ದೂರ ಉಳಿಯಬೇಕು ಎಂದುಕೊಂಡಿದ್ದೇನೆ. ಇಂಡಸ್ಟ್ರಿ ಬಹಳ ಟಾಕ್ಸಿಕ್ ಆಗಿಬಿಟ್ಟಿದೆ. ಎಲ್ಲರೂ 500 ಕೋಟಿ ರೂ. 800 ಕೋಟಿ ರೂ. ಸಿನಿಮಾಗಳ ಹಿಂದೆ ಬಿದ್ದಿದ್ದಾರೆ. ಇಲ್ಲಿ ಕ್ರಿಯೇಟಿವ್ ವಾತಾವರಣ ಕಾಣುತ್ತಿಲ್ಲ. ಆದರೆ ಎಲ್ಲಿ ಹೋಗಿ ವಾಸ್ತವ್ಯ ಹೂಡಲು ಬಯಸಿದ್ದಾರೆ ಎಂದು ಹೇಳಿಲ್ಲ. ಕೆಲವರು ಪ್ರಕಾರ ಬೆಂಗಳೂರಿಗೆ ಬಂದು ನೆಲೆಸುತ್ತಾರೆ ಎನ್ನಲಾಗ್ತಿದೆ.
'ಲಸ್ಟ್ ಸ್ಟೋರೀಸ್', 'ಗ್ಯಾಂಗ್ಸ್ ಆಫ್ ವಸ್ಸೇಪುರ್' ರೀತಿ ವಿಭಿನ್ನ ಸಿನಿಮಾಗಳನ್ನು ಕಟ್ಟಿಕೊಟ್ಟವರು ಅನುರಾಗ್ ಕಶ್ಯಪ್. ತಮ್ಮ ವಿಭಿನ್ನ ಆಲೋಚನೆ, ಸಿನಿಮಾಗಳಿಂದ ಬಾಲಿವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. 25 ವರ್ಷಗಳ ಹಿಂದೆ ನಟನಾಗಿಯೂ ಅವರು ಗುರ್ತಿಸಿಕೊಂಡರು. 'ಭೂತ್ನಾಥ್ ರಿಟರ್ನ್ಸ್', 'ಅಕಿರಾ', 'ದಾಸ್ ದೇವ್', 'AK vs AK' ರೀತಿಯ ಹಿಂದಿ ಸಿನಿಮಾಗಳಲ್ಲಿ ಮಿಂಚಿದ್ದಾರೆ. ತಮಿಳಿನಲ್ಲಿ 'ಲಿಯೋ', 'ಮಾಹಾರಾಜ', 'ಇಮೈಕ್ಕಾ ನೋಡಿಗಲ್' ಎಂಬ ಚಿತ್ರಗಳಲ್ಲಿ ಅಬ್ಬರಿಸಿದ್ದಾರೆ. ತಮಿಳು, ತೆಲುಗು ಬಳಿಕ ಕನ್ನಡ ಚಿತ್ರದಲ್ಲಿ ನಟಿಸ್ತಾರಾ? ಕಾದು ನೋಡಬೇಕಿದೆ.


Click it and Unblock the Notifications











