'ಕಾಂತಾರ-1' ಚಿತ್ರದಲ್ಲಿ ತುಳುನಾಡಿನ ಆದಿ ದೈವ ಬೆರ್ಮೆ ಕಥೆ ಹೇಳ್ತಿದ್ದಾರಾ ರಿಷಬ್?
ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ 'ಕಾಂತಾರ- 1' ಟ್ರೈಲರ್ ಕೊನೆಗೂ ಬಿಡುಗಡೆಯಾಗಿದೆ. ಅದ್ಧೂರಿ ಮೇಕಿಂಗ್, ಗ್ರಾಫಿಕ್ಸ್, ರಿಷಬ್ ಆರ್ಭಟ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. ಚಿತ್ರದ ಕಥೆ ಏನಿರಬಹುದು ಎನ್ನುವ ಲೆಕ್ಕಾಚಾರವೂ ಶುರುವಾಗಿದೆ. ಈ ಬಾರಿ ಹಲವು ಸಂಗತಿಯನ್ನು ಚಿತ್ರದಲ್ಲಿ ಹೇಳಲು ರಿಷಬ್ ಶೆಟ್ಟಿ ಮುಂದಾಗಿದ್ದಾರೆ.
3 ವರ್ಷಗಳ ಹಿಂದೆ ಬಂದಿದ್ದ 'ಕಾಂತಾರ' ಚಿತ್ರದಲ್ಲಿ ತುಳುನಾಡಿನ ದೈವಗಳು, ಅಲ್ಲಿನ ಆಚಾರ-ವಿಚಾರ, ಸಂಪ್ರದಾಯವನ್ನು ರಿಷಬ್ ತೆರೆಗೆ ತಂದಿದ್ದರು. ಮುಖ್ಯವಾಗಿ ಪಂಜುರ್ಲಿ ಹಾಗೂ ಗುಳಿಗ ದೈವಗಳ ವಿಚಾರಗಳನ್ನು ಪ್ರಸ್ತಾಪಿಸಿದ್ದರು. ಇದೀಗ ಪ್ರೀಕ್ವೆಲ್ನಲ್ಲಿ ತುಳುನಾಡ ದೈವಗಳ ಮೂಲಕ್ಕೆ ಹೋಗಿ ಕಥೆ ಹೇಳುವ ಪ್ರಯತ್ನ ಮಾಡಿದಂತೆ ಕಾಣುತ್ತಿದೆ. ಮುಖ್ಯದಲ್ಲಿ ಚಿತ್ರದಲ್ಲಿ ರಿಷಬ್ ಅಂದರೆ ನಾಯಕನ ಪಾತ್ರದ ಹೆಸರು ಕುತೂಹಲ ಮೂಡಿಸಿದೆ.

ಕಾಡಿನ ಬುಡಕಟ್ಟು ಜನರ ನಡುವೆ ಸಿಗುವ ನವಜಾತ ಶಿಶುವಿಗೆ ಬೆರ್ಮೆ ಎಂದು ಹೆಸರಿಡುವ ಸನ್ನಿವೇಶ ಇದೆ. ಬೆರ್ಮೆರ್ ಅರ್ಥವಾ ಬೆರ್ಮೆ, ತುಳುನಾಡಿನ ಆದಿ ದೈವ, ಪ್ರಮುಖ ದೈವ. ತುಳುನಾಡಿನ ಸೃಷ್ಟಿಕರ್ತ ಮತ್ತು ಎಲ್ಲ ದೈವಗಳ ಅಧಿನಾಯಕನೆಂದು ನಂಬಲಾಗುತ್ತದೆ. ತುಳುನಾಡನ್ನು ಬರ್ಮೆ ಸೃಷ್ಟಿಸಿದ್ದಾ? ಪರುಶುರಾಮ ಸೃಷ್ಟಿಸಿದ್ದಾ? ಎನ್ನುವ ಚರ್ಚೆ ಕೂಡ ಇದೆ. ಬೆರ್ಮೆರಾಧನೆ ತುಳುನಾಡಿನ ಮೂಲ ಧರ್ಮದ ಒಂದು ಭಾಗ. ನಾಗರಾಧನೆ ಮತ್ತು ದೈವಾರಾಧನೆಯೊಂದಿಗೆ ಬೆರ್ಮೆರನ್ನು ಅಲ್ಲಿ ಪೂಜಿಸಲಾಗುತ್ತದೆ. ಇದೇ ಕಾರಣಕ್ಕೆ 'ಕಾಂತಾರ- 1' ಸಿನಿಮಾ ಕತೆ ಬಗ್ಗೆ ಬಹಳ ಕುತೂಹಲ ಮೂಡುತ್ತದೆ.
'ಬೆರ್ಮೆ' ಎಂಬುದು 'ಬ್ರಹ್ಮ' ಎಂಬ ಪದದ ತುಳು ರೂಪ ಎನ್ನಲಾಗುತ್ತದೆ. ಬೆರ್ಮೆರ್ ಎಂಬ ಪದ ಪೆರಿಯಮ್ಮೆರ್ ಪದದಿಂದ ಹುಟ್ಟಿದೆ, ಬ್ರಹ್ಮ ಪದದಿಂದ ಅಲ್ಲ ಎನ್ನುವ ವಾದವೂ ಇದೆ. ಅದನ್ನೆಲ್ಲಾ ಪಕ್ಕಕ್ಕಿಟ್ಟರೆ 'ಕಾಂತಾರ- 1' ಚಿತ್ರದಲ್ಲಿ ಕರಾವಳಿ ದೈವಗಳ ಮೂಲದ ಕತೆಯನ್ನೇ ಹೇಳುತ್ತಿರುವಂತೆ ಕಾಣುತ್ತಿದೆ. ನೈಜ ಘಟನೆಗಳನ್ನು ಆಧರಿಸಿ ರಿಷಬ್ ಶೆಟ್ಟಿ ಸಿನಿಮಾ ಮಾಡುತ್ತಿದ್ದಾರಾ? ಎನ್ನುವುದನ್ನು ಕಾದು ನೋಡಬೇಕಿದೆ.

ಇನ್ನು ಟ್ರೈಲರ್ನಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳಿವೆ. 'ಬೆರ್ಮೆ' ಹೆಬ್ಬುಲಿಗೆ ಎದಿರಾಗುವ ಸನ್ನಿವೇಶವೂ ಇದೆ. ಆ ದೃಶ್ಯದಲ್ಲಿ ಸಿಜಿ ವರ್ಕ್ ಚೆನ್ನಾಗಿ ಮೂಡಿ ಬಂದಿದೆ. ಮತ್ತೊಂದು ದೃಶ್ಯದಲ್ಲಿ ಪುಟ್ಟ ಮಗುವಿನ ಸುತ್ತಾ ಹೆಬ್ಬುಲಿ ಸುಳಿದಾಡುವ ಸನ್ನಿವೇಶವೂ ಹುಬ್ಬೇರಿಸುವಂತಿದೆ.
'ಕಾಂತಾರ'-1 ಚಿತ್ರದಲ್ಲಿ ಗುಹೆಯ ಸನ್ನಿವೇಶಗಳು ಬಹಳ ಕುತೂಹಲ ಮೂಡಿಸಿದೆ. ಈ ಹಿಂದೆ ರಿಷಬ್ ಶೆಟ್ಟಿ ಕೊಡಲಿ, ಗುರಾಣಿ ಹಿಡಿದು ಬರುವ ಪೋಸ್ಟರ್ನಲ್ಲಿ ಕೂಡ ಅದು ಹೈಲೆಟ್ ಆಗಿತ್ತು. ಮೇಕಿಂಗ್ ವೀಡಿಯೋದಲ್ಲಿ ಸಹ ಅದನ್ನು ನೋಡಬಹುದಿತ್ತು. ಸ್ಟಂಟ್ ಮಾಸ್ಟರ್ ಮಾತನಾಡುತ್ತಾ ಗುಹೆಯ ಸನ್ನಿವೇಶದ ಬಗ್ಗೆ ಮಾತನಾಡಿದ್ದರು. ಹಾಗಾಗಿ ಅದು ಕೂಡ ಕುತೂಹಲ ಮೂಡಿಸಿದೆ.
'ಕಾಂತಾರ' ಚಿತ್ರದಲ್ಲಿ ಇವತ್ತಿನ ಕಥೆಯನ್ನು ರಿಷಬ್ ಶೆಟ್ಟಿ ಹೇಳಿದ್ದರು. ಭೂತಕೋಲದ ಕಥೆಯನ್ನು ಹೇಳಿದ್ದರು. ಆ ದೈವದ ಹಿನ್ನೆಲೆ? ಆ ದಂತಕತೆ ಏನ್ನುವುದನ್ನು ಪ್ರೀಕ್ವೆಲ್ನಲ್ಲಿ ಹೇಳುತ್ತಿದ್ದಾರೆ. ಅಪ್ಪಯ್ಯ ಇಲ್ಲೇ ಎಂಥಕೆ ಮಾಯವಾಗಿದ್ದು ಎಂದು ಬಾಲಕನೊಬ್ಬ ಕೇಳುವ ಸನ್ನಿವೇಶದೊಂದಿಗೆ ಟ್ರೈಲರ್ ಶುರುವಾಗುತ್ತದೆ. ಇದೇ ನಮ್ಮ ಮೂಲ ಮಗ, ನಮ್ಮ ಹಿರಿಯರೆಲ್ಲಾ ಇದ್ದಿದ್ದು ಇಲ್ಲೇ ಅದೊಂದು ದೊಡ್ಡ ದಂತಕತೆ ಎನ್ನುವ ಹಿನ್ನೆಲೆ ಧ್ವನಿ ಕಾಂತಾರ ಪ್ರಪಂಚದೊಳಗೆ ನೋಡುಗರನ್ನು ಕರೆದುಕೊಂಡು ಹೋಗುತ್ತದೆ.
ಅಧರ್ಮ ಹೆಚ್ಚಾದಾಗ ಅದನ್ನು ಸರಿಪಡಿಸಲು ಶಿವನು ತನ್ನ ಗಣಗಳನ್ನು ಕಳಿಸುತ್ತಾನೆ. ಆ ಗಣಗಳು ಬಂದು ನೆಲೆಸಿದ್ದು ಈ ಪುಣ್ಯ ಮಣ್ಣಿನಲ್ಲಿ ಎನ್ನುವ ರಿಷಬ್ ಶೆಟ್ಟಿ ಹಿನ್ನೆಲೆ ಧ್ವನಿ ಕೂಡ ಕೇಳಬಹುದು. ಬ್ರಹ್ಮರಾಕ್ಷಸನಿದ್ದಾನೆ ಎನ್ನುವ ಪ್ರಸ್ತಾಪವೂ ಇದೆ. ಒಟ್ಟಾರೆ ಟ್ರೈಲರ್ ಸಿನಿಮಾ ಬಗ್ಗೆ ಬಹಳ ಕುತೂಹಲ ಮೂಡುವಂತೆ ಮಾಡಿದೆ.


Click it and Unblock the Notifications











