'ಒಬ್ಬನೇ ಯುವ' ದಾಖಲೆ; ಅಪ್ಪು ಅಡ್ಡಾದಲ್ಲಿ 2ನೇ ಸಾಂಗ್ ರಿಲೀಸ್, ಯಾವಾಗ ಗೊತ್ತಾ?
ಸ್ಯಾಂಡಲ್ವುಡ್ನಲ್ಲಿ 'ಯುವ' ಕಾರುಬಾರು ಜೋರಾಗಿದೆ. ಚಾಮರಾಜನಗರದಲ್ಲಿ ಬಿಡುಗಡೆಯಾದ 'ಒಬ್ಬನೇ ಶಿವ ಒಬ್ಬನೇ ಯುವ' ಸಾಂಗ್ ಸೂಪರ್ ಹಿಟ್ ಆಗಿದೆ. ಅಭಿಮಾನಿಗಳ ಮನಗೆದ್ದಿದೆ. ರಿಪೀಟ್ ಮೋಡ್ನಲ್ಲಿ ಅಭಿಮಾನಿಗಳು ಹಾಡು ಕೇಳುತ್ತಲೇ ಇದ್ದಾರೆ. ಯುವ ರಾಜ್ಕುಮಾರ್ ಲುಕ್ಕು, ಡ್ಯಾನ್ಸ್ ಹಾಗೂ ಸಂತೋಷ್ ಆನಂದ್ ರಾಮ್ ಲಿರಿಕ್ಸ್ ಸದ್ದು ಮಾಡ್ತಿದೆ.
ಮಾರ್ಚ್ 28ಕ್ಕೆ 'ಯುವ' ಸಿನಿಮಾ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಚಿತ್ರದ ಇನ್ನುಳಿದ ಹಾಡುಗಳು ಹಾಗೂ ಟ್ರೈಲರ್ ರಿಲೀಸ್ ಪ್ಲ್ಯಾನ್ ನಡೀತಿದೆ. ಸದ್ಯ ಚಿತ್ರದ 2ನೇ ಹಾಡು ಬಿಡುಗಡೆಗೆ ವೇದಿಕೆ ಸಿದ್ಧವಾಗುತ್ತಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಯುವ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಅಣ್ಣಾವ್ರ ಮೊಮ್ಮಗ ರಾಘಣ್ಣನ ಕಿರಿಮಗನ ಸಿನಿಮಾ ಆರಂಗೇಟ್ರಂಗೆ ಅಭಿಮಾನಿಗಳು ಕಾಯುತ್ತಿದ್ದಾರೆ.

ಚಾಮರಾಜನಗರದಲ್ಲಿ 3 ತಾಲೂಕಿನ ಅಭಿಮಾನಿಗಳಿಂದ 'ಯುವ' ಚಿತ್ರದ ಫಸ್ಟ್ ಸಾಂಗ್ ಲೋಕಾರ್ಪಣೆ ಆಗಿತ್ತು. ಅಜನೀಶ್ ಸಂಗೀತ ಹಾಡನ್ನು ನಕಾಶ್ ಅಜೀಜ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಡಿದ್ದಾರೆ. ಆನಂದ್ ಆಡಿಯೋದಲ್ಲಿ ಸಾಂಗ್ ಬಿಡುಗಡೆಯಾಗಿದ್ದು ಯೂಟ್ಯೂಬ್ನಲ್ಲಿ 2 ದಿನಕ್ಕೆ 40 ಲಕ್ಷಕ್ಕೂ ಅಧಿಕ ವೀವ್ಸ್ ಸಾಧಿಸಿದೆ. 'ಒಬ್ಬನೇ ಶಿವ ಒಬ್ಬನೇ ಯುವ' ರೀಲ್ಸ್ ಕಾಂಟೆಸ್ಟ್ ಕೂಡ ಶುರುವಾಗಿದ್ದು ಅಭಿಮಾನಿಗಳು ಯುವ ರೀತಿ ಡ್ಯಾನ್ಸ್ ಮಾಡಿ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಶಿವಣ್ಣ- ಯುವ ಸಣ್ಣ ಡ್ಯಾನ್ಸ್ ಝಲಕ್ ಮೂಲಕ ಇದಕ್ಕೆ ಚಾಲನೆ ಕೊಟ್ಟಿದ್ದರು.
'ಯುವ' ಚಿತ್ರದಲ್ಲಿ ಯುವ ರಾಜ್ಕುಮಾರ್ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗ್ತಿದೆ. ಕಾಲೇಜಿನಲ್ಲಿ ತನ್ನ ಹಾಸ್ಟೆಲ್ ಸಹಪಾಠಿಗಳು ಹಾಗೂ ತನ್ನವರಿಗಾಗಿ ಹೋರಾಡುವ ನಾಯಕನಾಗಿ ನಟಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಚಿತ್ರದಲ್ಲಿ ನಾಯಕ ಪಾತ್ರಕ್ಕೆ ಬಿಲ್ಡಪ್ ಕೊಟ್ಟು ಮೊದಲ ಹಾಡನ್ನು ಕಟ್ಟಿಕೊಡಲಾಗಿದೆ.
"ಸುಮ್ನೆ ಬಂದೋನಲ್ಲ ಸುಮ್ನೆ ಹೋಗೋನಲ್ಲ ಸುಮ್ನೆ ಕೂರೋದಿಲ್ಲ ರಾಜ", "ಎದುರಾಳಿ ಯಾರೇ ಇದ್ದರೇನು ಪ್ರತಿದಾಳಿ ಮಿಸ್ಸೇ ಇಲ್ಲ" ಎನ್ನುವ ಸಾಲುಗಳ ಜೊತೆಗೆ "ಟೀಕೆ ಮಾಡೋರಿಗೆಲ್ಲ ಟೀಗೂ ಕಾಸಿರಲ್ಲ, ಕೇರ್ ಎ ಮಾಡಬೇಡ ರಾಜ" ಎನ್ನುವ ಸಾಲುಗಳು ಅಭಿಮಾನಿಗಳ ಮನಗೆದ್ದಿದೆ.

ಸದ್ಯ ಹೊಸಪೇಟೆಯಲ್ಲಿ ಮುಂದಿನ ವಾರ 'ಯುವ' 2ನೇ ಹಾಡು ಬಿಡುಗಡೆ ಆಗುತ್ತದೆ ಎನ್ನುವ ಚರ್ಚೆ ಶುರುವಾಗಿದೆ. ಹೊಸಪೇಟೆಯ ವಿಎನ್ಸಿ ಮೈದಾನದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಸಿ ಅಭಿಮಾನಿಗಳಿಂದಲೇ ಹಾಡು ಬಿಡುಗಡೆ ಮಾಡಿಸುವ ಲೆಕ್ಕಚಾರದಲ್ಲಿ ಚಿತ್ರತಂಡ ಇದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇದು ಸಹಜವಾಗಿಯೇ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.
ಹೊಸಪೇಟೆಯಲ್ಲಿ ಸ್ಯಾಂಡಲ್ವುಡ್ ದೊಡ್ಮನೆಗೆ ದೊಡ್ಡ ಅಭಿಮಾನಿ ಬಳಗವಿದೆ. ಈ ಹಿಂದೆ ಪುನೀತ್ ರಾಜ್ಕುಮಾರ್ ಕೂಡ ಈ ಮಾತನ್ನು ಹೇಳಿದ್ದರು. ಅಪ್ಪುಗೆ ಬಹಳ ಜನ ಅಭಿಮಾನಿಗಳು ಅಲ್ಲಿದ್ದಾರೆ. ಯುವ ರಾಜ್ಕುಮಾರ್ ಅವರಲ್ಲಿ ಸಾಕಷ್ಟು ಜನ ಪುನೀತ್ ರಾಜ್ಕುಮಾರ್ನ ನೋಡುತ್ತಿದ್ದಾರೆ. ಇದೀಗ ಹೊಸಪೇಟೆಯಲ್ಲಿ 'ಯುವ' ಚಿತ್ರದ ಸಾಂಗ್ ಬಿಡುಗಡೆ ಆಗುತ್ತದೆ ಎನ್ನುವ ಸುದ್ದಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲ. 2ನೇ ಹಾಡು ಅಲ್ಲಿ ಬಿಡುಗಡೆ ಆಗದಿದ್ದರೂ 'ಯುವ' ಪ್ರಚಾರಕ್ಕೆ ಚಿತ್ರತಂಡ ಹೊಸಪೇಟೆಗೆ ಹೋಗುವುದಂತೂ ಪಕ್ಕಾ.
ಇನ್ನು 'ಯುವ' ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಕಿಶೋರ್, ಸುಧಾರಾಣಿ ಕೂಡ ತಾರಾಗಣದಲ್ಲಿದ್ದಾರೆ. ಶ್ರೀಶ ಕುದುವಲ್ಲಿ ಛಾಯಾಗ್ರಹಣ, ಆಶಿಕ್ ಕುಸುಗೊಳಿ ಸಂಕಲನ ಚಿತ್ರಕ್ಕಿದೆ.


Click it and Unblock the Notifications











