ಕನ್ನಡ ತಾಯಿಯ ದಯೆಯಿಂದಲೇ ನನ್ನ ಮಗ ವಿಶ್ವಖ್ಯಾತಿ ಪಡೆದಿದ್ದಾನೆ ಎಂದ ರಾಜಮೌಳಿ ತಂದೆ!
ರಾಜಮೌಳಿಗೂ ಕರ್ನಾಟಕಕ್ಕೂ ನಂಟಿದೆ ಎಂಬ ವಿಚಾರ ಹಲವರಿಗೆ ತಿಳಿದಿರುವ ವಿಷಯವೇ. ಸದ್ಯ ಎಸ್ ಎಸ್ ರಾಜಮೌಳಿ ತೆಲುಗು ಚಿತ್ರರಂಗದ ಲೀಡಿಂಗ್ ನಿರ್ದೇಶಕನಾಗಿದ್ದಾರೆ. ತನ್ನ ಪ್ರತೀ ಸಿನಿಮಾದ ಮೂಲಕವೂ ತೆಲುಗು ಚಿತ್ರರಂಗವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ತೆಲುಗು ಸಿನಿ ರಸಿಕರ ಪ್ರೀತಿಯ ಜಕ್ಕಣ್ಣ ನೆಚ್ಚಿನ ನಿರ್ದೇಶಕನಾಗಿದ್ದಾರೆ.
ಹೀಗೆ ತನ್ನ ಪ್ರತಿಯೊಂದು ಸಿನಿಮಾ ಮೂಲಕವೂ ಇತಿಹಾಸ ಸೃಷ್ಟಿಸುತ್ತಾ ಬಂದಿರುವ ರಾಜಮೌಳಿ ಹುಟ್ಟಿದ್ದು ನಮ್ಮ ಕರ್ನಾಟಕದಲ್ಲಿ. ಹೌದು, ರಾಯಚೂರು ಜಿಲ್ಲೆಯ ಮಾನ್ವಿ ಸಮೀಪದ ಅಮರೇಶ್ವರ ಕ್ಯಾಂಪ್ನಲ್ಲಿ 1973ರ ಅಕ್ಟೋಬರ್ 10ರಂದು ಜನಿಸಿದರು. ತೆಲುಗು ಕುಟುಂಬದಲ್ಲಿ ಜನಿಸಿದರೂ ಸಹ ಹುಟ್ಟಿದ್ದು ಕರ್ನಾಟಕದ ನೆಲದಲ್ಲಾದ ಕಾರಣ ಎಸ್ ಎಸ್ ರಾಜಮೌಳಿ ಕನ್ನಡಿಗನೂ ಹೌದು ಎನ್ನುವವರಿದ್ದಾರೆ.

ಇನ್ನು ಇಷ್ಟು ದಿನಗಳ ಕಾಲ ರಾಜಮೌಳಿ ಅವರು ಕರ್ನಾಟಕದವರು ಎಂದು ಯಾರಾದರೂ ಕರೆದರೆ ಕೆಲವೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಕಾಲೆಳೆದದ್ದೂ ಇದೆ. ಅವರು ಪಕ್ಕಾ ತೆಲುಗಿನವರು ಎಂದು ವಾದಿಸಿದ್ದೂ ಇದೆ. ಹೀಗೆ ಇಷ್ಟು ದಿನಗಳ ಕಾಲ ಕೇವಲ ಕೆಲ ಅಭಿಮಾನಿಗಳಿಂದ ಮಾತ್ರ ಕನ್ನಡದವರು ಎನಿಸಿಕೊಳ್ತಿದ್ದ ರಾಜಮೌಳಿ ಈಗ ಅವರ ತಂದೆಯಿಂದಲೂ ಸಹ ಅದೇ ರೀತಿ ಕರೆಯಲ್ಪಟ್ಟಿದ್ದಾರೆ.
ಹೌದು, ನಿನ್ನೆ ( ಮಾರ್ಚ್ 23 ) ಬೆಂಗಳೂರು ಅಂತರರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರಾಜಮೌಳಿ ಅವರ ತಂದೆ ಖ್ಯಾತ ಚಲನಚಿತ್ರಕಥೆ ಬರಹಗಾರ ವಿಜಯೇಂದ್ರ ಪ್ರಸಾದ್ ಅವರೂ ಸಹ ಆಗಮಿಸಿದ್ದರು.
ಉದ್ಘಾಟನೆಯ ಬಳಿಕ ಈ ಫಿಲ್ಮ್ ಫೆಸ್ಟಿವಲ್ ಕುರಿತು ಮಾತನಾಡಿದ ವಿಜಯೇಂದ್ರ ಪ್ರಸಾದ್ "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣನ್ನು ಮೆಟ್ಟಬೇಕು ಅಂತ ಹೇಳಿದ್ದಾರೆ, ಯಾರು ಕನ್ನಡ ಕಂಠೀರವ ಡಾ ರಾಜ್ಕುಮಾರ್ ಅವರು. ನಿಜ.. ನಿಜ.. ಆದರೂ ಅಂತಹ ಅದೃಷ್ಟ ನನಗಿಲ್ಲ. ಆದರೆ ಇನ್ನೊಂದು ಅದೃಷ್ಟ ಇದೆ ನನಗೆ. ನನ್ನ ಮದುವೆ ಇಲ್ಲಿ ಆಗಿದೆ. ನನ್ನ ಮಗಳು ಇಲ್ಲಿ ಹುಟ್ಟಿದ್ದಾಳೆ. ನನ್ನ ಮಗ ( ರಾಜಮೌಳಿ ) ಇಲ್ಲಿ ಹುಟ್ಟಿದ್ದಾನೆ. ಈ ಕನ್ನಡ ತಾಯಿ ದಯೆ ಇಂದಲೇ ನನ್ನ ಮಗ ಇಂದು ವಿಶ್ವವಿಖ್ಯಾತಿ ಗಳಿಸಿದ್ದಾನೆ ಎಂದು ನಾನು ನಂಬುತ್ತೇನೆ. ನಾನು ಹೇಗೆ ಈ ತಾಯಿಗೆ ಧನ್ಯವಾದ ಹೇಳಲಿ. ತಾಯಿ ಏನನ್ನು ಬಯಸುತ್ತಾಳೆ, ತಾಯಿ ಏನನ್ನೂ ಬಯಸುವುದಿಲ್ಲ, ಬದಲಾಗಿ ಮಕ್ಕಳಿಗೆ ಏನು ಬೇಕೆಂದು ಕೇಳುತ್ತಾಳೆ" ಎಂದು ಹೇಳಿಕೆ ನೀಡಿದ್ದಾರೆ.

ಇನ್ನೂ ಮುಂದುವರಿದು ಮಾತನಾಡಿದ ವಿಜಯೇಂದ್ರ ಪ್ರಸಾದ್ "ಕನ್ನಡ ತಾಯಿಯಲ್ಲಿ ನನ್ನದು ಒಂದೇ ಪ್ರಾರ್ಥನೆ. ಅಮ್ಮಾ.. ನನ್ನ ಮಗನಿಗೆ ಏನು ಯಶಸ್ಸನ್ನು ನೀಡಿದ್ದೀಯೋ, ಅದೇ ಯಶಸ್ಸನ್ನು ಕನ್ನಡ ನಾಡಿನಲ್ಲಿ ಹುಟ್ಟಿರುವ ಎಲ್ಲರಿಗೂ ನೀಡು. ಈ ತಾಯಿಗೆ ನನ್ನ ಹೃತ್ಪೂರ್ವಕ ಪ್ರಣಾಮಗಳನ್ನು ಸಲ್ಲಿಸುವುದನ್ನು ಬಿಟ್ಟು ಬೇರೇನನ್ನೂ ನೀಡಲಾಗುವುದಿಲ್ಲ" ಎಂದು ಹೇಳಿಕೆ ನೀಡಿದರು. ಇನ್ನು ಕಾರ್ಯಕ್ರಮದಲ್ಲಿ ಹಾಜರಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಆರ್ ಅಶೋಕ್, ಅಶೋಕ್ ಕಶ್ಯಪ್ ಅವರಿಗೆ ಧನ್ಯವಾದ ತಿಳಿಸಿದ ವಿಜಯೇಂದ್ರ ಪ್ರಸಾದ್ ಅವರು ಎರಡು ಅಂಶಗಳು ಖುಷಿ ಕೊಟ್ಟಿದೆ ಎಂದರು. ಒಂದು ನನ್ನ ಮಗ ಹುಟ್ಟಿ ಹತ್ತು ವರ್ಷಗಳು ಬೆಳೆದ ಜಾಗಕ್ಕೆ ನಾನು ಬಂದಿದ್ದೇನೆ ಹಾಗೂ ಈಗ ಕನ್ನಡ ಚಿತ್ರಗಳು ಅಭೂತಪೂರ್ವ ಯಶಸ್ಸನ್ನು ಸಾಧಿಸಿದ್ದು, ಸಿಗಬೇಕಾದ ಗೌರವ ದಕ್ಕಿದೆ ಎಂದರು. ಇನ್ನು ಕೆಜಿಎಫ್ 1, 2 ಹಾಗೂ ಕಾಂತಾರ ಚಿತ್ರಗಳ ಯಶಸ್ಸನ್ನು ವಿಜಯೇಂದ್ರ ಪ್ರಸಾದ್ ಉಲ್ಲೇಖಿಸಿದರು.


Click it and Unblock the Notifications











