ಫೇಸ್ ಬುಕ್, ಟ್ರೂ ಕಾಲರ್ ತಂದ ಅವಾಂತರ: ಕನ್ನಡ ನಿರ್ದೇಶಕನಿಗೆ ಬಿತ್ತು ಗೂಸಾ.!
Recommended Video

ಫೇಸ್ ಬುಕ್ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳಿಂದ ಉಪಯೋಗ ಎಷ್ಟು ಇದೆಯೋ, ದುರುಪಯೋಗ ಕೂಡ ಅಷ್ಟೇ ಇದೆ. ಸೋಷಿಯಲ್ ಮೀಡಿಯಾಗಳಿಂದ ಆಗುವ ಕಿರಿಕಿರಿ, ಅವಾಂತರಗಳು ಒಂದೆರಡಲ್ಲ ಬಿಡಿ.
ಪರಿಚಯಸ್ಥರ ಜೊತೆಗೆ ಸದಾ ಮಾತುಕತೆ ನಡೆಸಲು ಫೇಸ್ ಬುಕ್ ಉತ್ತಮ ಸಾಧನ ಹೌದು. ಆದ್ರೀಗ, ಅಪರಿಚಿತರನ್ನು ಪತ್ತೆ ಹಚ್ಚಲು ಫೇಸ್ ಬುಕ್ ಮೇಲೆ ಕೆಲವರು ಅವಲಂಬಿತರಾಗಿರುವುದು ದುರಾದೃಷ್ಟಕರ.
ಹಾಗೆ, ಫೇಸ್ ಬುಕ್ ನಂಬಿಕೊಂಡು ಶಿವಕುಮಾರ್.ಎನ್ ಎಂಬುವರನ್ನು ಹುಡುಕಲು ಹೋಗಿ ಕನ್ನಡ ನಿರ್ದೇಶಕನ ಮೇಲೆ ಹಲ್ಲೆ ನಡೆದಿರುವ ವಿಚಿತ್ರ ಘಟನೆಗೆ ಬೆಂಗಳೂರು ಸಾಕ್ಷಿ ಆಗಿದೆ.
ಜೂನ್ 4 ರಂದು ಬೆಂಗಳೂರಿನ ಕಸ್ತೂರಬಾ ನಗರದಲ್ಲಿ ಆದ ಘಟನೆಯ ಸಂಪೂರ್ಣ ವಿವರ ಇಲ್ಲಿದೆ ಓದಿರಿ...

ನಿರ್ದೇಶಕ ಶಿವಕುಮಾರ್.ಎನ್ ಮನೆಗೆ ನುಗ್ಗಿದ ಇಬ್ಬರು ಅಪರಿಚಿತರು
ಜೂನ್ 4 ರಂದು ಸೋಮವಾರ, ಬೆಂಗಳೂರಿನ ಕಸ್ತೂರಬಾ ನಗರದಲ್ಲಿರುವ ನಿರ್ದೇಶಕ ಶಿವಕುಮಾರ್.ಎನ್ ಎಂಬುವರ ಫ್ಲ್ಯಾಟ್ ಗೆ ಇಬ್ಬರು ಅಪರಿಚಿತರು ನುಗ್ಗಿದರು. ಫೈನಾನ್ಶಿಯರ್ ರಿಂದ ಸಾಲ ಪಡೆದ ಎರಡು ಲಕ್ಷ ರೂಪಾಯಿಯನ್ನು ವಾಪಸ್ ಕೊಡುವಂತೆ ಒತ್ತಾಯ ಮಾಡಿ ನಿರ್ದೇಶಕ ಶಿವಕುಮಾರ್.ಎನ್ ಮೇಲೆ ಆ ಇಬ್ಬರು ಅಪರಿಚಿತರು ಹಲ್ಲೆ ನಡೆಸಿದರು.

ಕಕ್ಕಾಬಿಕ್ಕಿಯಾದ ಶಿವಕುಮಾರ್.ಎನ್
ತಮ್ಮ ಮನೆಗೆ ನುಗ್ಗಿ ಹಲ್ಲೆ ಮಾಡಿದವರ ಪರಿಚಯ ನಿರ್ದೇಶಕ ಶಿವಕುಮಾರ್.ಎನ್ ರವರಿಗಿಲ್ಲ. ಹಾಗೇ, ಅವರು ಯಾರ ಬಳಿಯೂ ಎರಡು ಲಕ್ಷ ರೂಪಾಯಿ ಸಾಲ ಪಡೆದಿಲ್ಲ. ಹೀಗಾಗಿ, ಕ್ಷಣಕಾಲ ಶಿವಕುಮಾರ್.ಎನ್ ಕಕ್ಕಾಬಿಕ್ಕಿ ಆದರು.

ಹೊಯ್ಸಳ ಪೊಲೀಸರು ಎಂಟ್ರಿ.!
ಅಷ್ಟಕ್ಕೂ, ಶಿವಕುಮಾರ್.ಎನ್ ರವರ ಫೋಟೋ ಹಿಡಿದು ಆ ಇಬ್ಬರು ಅಪರಿಚಿತರು ಗೇಟ್ ಮುಂದೆ ಓಡಾಡುತ್ತಿದ್ದರು. ಯಾರಿರಬಹುದು ಎಂದು ಶಿವಕುಮಾರ್.ಎನ್ ಮನೆ ಬಾಗಿಲು ತೆರೆದಾಗ, ಅವರನ್ನ ಒಳಕ್ಕೆ ತಳ್ಳಿ ಕಣ್ಣಿಗೆ ಪಂಚ್ ಕೊಟ್ಟಿದ್ದಾರೆ ಕಿಡಿಗೇಡಿಗಳು. ಸಾಲದಕ್ಕೆ, ಶಿವಕುಮಾರ್.ಎನ್ ರವರ ಬಟ್ಟೆ ಹರಿದು ಹಾಕಿ, ಹಣ್ಣುಗಾಯಿ ನೀರುಗಾಯಿ ಮಾಡಿದರು. ಇದನ್ನೆಲ್ಲ ಗಮನಿಸಿದ ಪಕ್ಕದ ಮನೆಯವರು ಹೊಯ್ಸಳ ಪೊಲೀಸರಿಗೆ ದೂರು ಕೊಟ್ಟರು. ಕೂಡಲೆ ಸ್ಥಳಕ್ಕೆ ಬಂದ ಪೊಲೀಸರು ಕಿಡಿಗೇಡಿಗಳನ್ನ ವಶಕ್ಕೆ ಪಡೆದರು.

ಮಾರನೇ ದಿನ ಪೊಲೀಸ್ ಸ್ಟೇಷನ್ ಗೆ ಹೋದ ಶಿವಕುಮಾರ್.ಎನ್
ಮಾರನೇ ದಿನ ಶಿವಕುಮಾರ್.ಎನ್ ಪೊಲೀಸ್ ಸ್ಟೇಷನ್ ಗೆ ಹೋದರು. ಆಗಲೇ, ರಂಗನಾಥ್ ಎಂಬುವರು ಎರಡು ಲಕ್ಷ ಸಾಲ ವಸೂಲಿ ಮಾಡಲು ಇಬ್ಬರು ಹುಡುಗರನ್ನು ಕಳುಹಿಸಿರುವ ವಿಷಯ ಶಿವಕುಮಾರ್.ಎನ್ ಗೆ ಗೊತ್ತಾಗಿದ್ದು. ಆದ್ರೆ, ಆ ರಂಗನಾಥ್ ಯಾರು ಎಂಬುದೇ ಶಿವಕುಮಾರ್.ಎನ್ ಗೆ ಗೊತ್ತಿಲ್ಲ. ಇದನ್ನ ನಂಬಲು ಪೊಲೀಸ್ ಕೂಡ ತಯಾರು ಇರಲಿಲ್ಲ.

ಪೊಲೀಸ್ ಸ್ಟೇಷನ್ ಗೆ ಬಂದ ರಂಗನಾಥ್
ಪೊಲೀಸ್ ಸ್ಟೇಷನ್ ಗೆ ರಂಗನಾಥ್ ಬಂದ್ಮೇಲೆ, ಅಸಲಿ ಮ್ಯಾಟರ್ ಹೊರಗೆ ಬಂದಿದ್ದು. ಸದ್ಯ ಕಿಡಿಗೇಡಿಗಳಿಂದ ಗೂಸಾ ತಿಂದ ಶಿವಕುಮಾರ್.ಎನ್ ಗೂ ರಂಗನಾಥ್ ಗೂ ಪರಿಚಯ ಇಲ್ಲ ಎಂಬ ಸತ್ಯ ಪೊಲೀಸರಿಗೆ ಅರಿವಾಯಿತು. ಅಷ್ಟಕ್ಕೂ, ರಂಗನಾಥ್ ರಿಂದ ಎರಡು ಲಕ್ಷ ರೂಪಾಯಿ ಸಾಲ ಪಡೆದ ಶಿವಕುಮಾರ್ ಬೇರೆಯವರು. ಹಾಗಾದ್ರೆ, ಮಿಸ್ಟೇಕ್ ಆಗಿದ್ದು ಎಲ್ಲಿ.?

ಎಡವಟ್ಟು ಆಗಿದ್ದು ಇಲ್ಲಿ...
''ಶಿವಕುಮಾರ್ ಎಂಬುವರನ್ನು ಹುಡುಕಿ ಎರಡು ಲಕ್ಷ ಸಾಲ ವಸೂಲಿ ಮಾಡು''ವಂತೆ ಇಬ್ಬರು ಹುಡುಗರಿಗೆ ರಂಗನಾಥ್ ಸೂಚಿಸಿದ್ದರು. ಹಾಗೇ ಅವರ ಫೋನ್ ನಂಬರ್ ಕೊಟ್ಟಿದ್ದರು. ರಂಗನಾಥ್ ಕೊಟ್ಟ ಫೋನ್ ನಂಬರ್ ನ ಟ್ರೂ ಕಾಲರ್ ಗೆ ಹಾಕಿದಾಗ, 'ಶಿವಕುಮಾರ್.ಎನ್.ಎಸ್' ಎಂಬ ಹೆಸರು ಬಂದಿದೆ. ಅದೇ ಹೆಸರನ್ನ ಫೇಸ್ ಬುಕ್ ನಲ್ಲಿ ಹುಡುಕಿದಾಗ ಆ ಇಬ್ಬರು ಹುಡುಗರಿಗೆ ಕಾಣಿಸಿದ್ದು ಕನ್ನಡ ನಿರ್ದೇಶಕ ಶಿವಕುಮಾರ್.ಎನ್.ಎಸ್ ರವರ ಫೋಟೋ.! ಹೀಗಾಗಿ, ಹಿಂದು ಮುಂದು ನೋಡದೆ, ಹೊಟ್ಟೆ ತುಂಬ ಎಣ್ಣೆ ಇಳಿಸಿ ಶಿವಕುಮಾರ್.ಎನ್.ಎಸ್ ಮೇಲೆ ಹಲ್ಲೆ ನಡೆಸಿದರು.

ಪ್ರಕರಣ ದಾಖಲು
ಸದ್ಯ ಹಲ್ಲೆ ನಡೆಸಿದ ಇಬ್ಬರು ಬ್ಯಾಟರಾಯನಪುರ ಪೊಲೀಸರ ಅತಿಥಿಗಳಾಗಿದ್ದಾರೆ. ಐಪಿಸಿ ಸೆಕ್ಷನ್ 341, 448, 323, 504 ಪ್ರಕಾರ ಪ್ರಕರಣ ದಾಖಲಾಗಿದೆ. ಫೇಸ್ ಬುಕ್ ಹಾಗೂ ಟ್ರೂ ಕಾಲರ್ ನಿಂದ ಹೀಗೂ ಆಗಬಹುದು ಅಂತ ನೀವು ಊಹಿಸಿದ್ರಾ.?


Click it and Unblock the Notifications











