"ರಾಜ್ಕುಮಾರ್ ಕುಟುಂಬವನ್ನು ತೇಜೋವಧೆ ಮಾಡಲು ಬಂದ್ರೆ, ಬುದ್ಧಿ ಕಲಿಸಬೇಕಾಗುತ್ತೆ"
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣ ತಣ್ಣಗಾಗುವಂತೆ ಕಾಣುತ್ತಿಲ್ಲ. ಈ ಘಟನೆಯನ್ನು ಖಂಡಿಸಿ ದರ್ಶನ್ ಅಭಿಮಾನಿಗಳು ಕಿಡಿಕಾರಿದ್ದರು. ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಕಾರಣ ಅಂತ ದೂರಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ.ರಾಜ್ಕುಮಾರ್ ಕುಟುಂಬಕ್ಕೆ ದುನಿಯಾ ವಿಜಯ್ ಬೆಂಬಲ ವ್ಯಕ್ತಪಡಿಸಿದ್ದರು. ಈ ಸಂಬಂಧ ನಿನ್ನೆ (ಡಿಸೆಂಬರ್ 22) ಪತ್ರವನ್ನೂ ಬರೆದಿದ್ದರು. ಈಗ ಕನ್ನಡ ಪರ ಸಂಘಟನೆಗಳು ದರ್ಶನ್ ಈ ಘಟನೆ ಸಂಬಂಧ ಮಾತಾಡಲೇಬೇಕು ಅಂತ ಪಟ್ಟು ಹಿಡಿದು ಕೂತಿದ್ದಾರೆ.
ವಂದೇ ಮಾತರಂ ಸಮಾಜಸೇವಾ ಸಂಸ್ಥೆಯ ಸಿಎಂ ಶಿವಕುಮಾರ್ ನಾಯ್ಕ್ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಹೊರಬಿಟ್ಟಿದ್ದಾರೆ. ಈ ವಿಡಿಯೋದಲ್ಲಿ "ರಾಜ್ಕುಮಾರ್ ಕುಟುಂಬವನ್ನು ತೇಜೋವಧೆ ಮಾಡಲು ಬಂದ್ರೆ, ಬುದ್ಧಿ ಕಲಿಸಬೇಕಾಗುತ್ತೆ. ನಿಮ್ಮ ಅಭಿಪ್ರಾಯವನ್ನು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸಿ, ಇಲ್ಲಾ ಅಂದ್ರೆ ನಿಮ್ಮ ಮನೆ ಮುಂದೆ ಹೋರಾಟ ಮಾಡಬೇಕಾಗುತ್ತೆ" ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ದರ್ಶನ್ಗೆ ಖಡಕ್ ಸಂದೇಶ
"ಡಾ.ರಾಜ್ಕುಮಾರ್ ಅಭಿಮಾನಿಯಾಗಿ, ಕನ್ನಡಾಂಬೆ ಮತ್ತು ಭಾರತಾಂಬೆಯ ಅಭಿಮಾನಿಯಾಗಿ ಖಡಕ್ ಆಗಿ ದರ್ಶನ್ ಅವರಿಗೆ ಒಂದು ಸಂದೇಶ ಕೊಡುತ್ತಿದ್ದೇನೆ. ದರ್ಶನ್ ಅವರೇ ಮೊನ್ನೆ ಹೊಸಪೇಟೆಯಲ್ಲಿ ನಡೆದ ಚಪ್ಪಲಿ ಎಸೆತ ಪ್ರಕರಣಕ್ಕೆ ಜಗಳ ತಂದಿಟ್ಟು ಚಳಿ ಕಾಯಿಸಿಕೊಳ್ಳುತ್ತಿದ್ದೀರಿ? ಬೇಡ.. ಕೂಡಲೇ ನಿಮ್ಮ ಅಭಿಮಾನಿಗಳಿಗೆ ಹೇಳಿ. ರಾಜ್ಕುಮಾರ್ ಕುಟುಂಬದ ವಿರುದ್ಧ ಏನು ಮಾತಾಡುತ್ತಿದ್ದಾರೆ ಅದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲಾ ಅಂದರೆ, ನಿಮ್ಮ ಮನೆ ಮುಂದೆ ಬಂದು ಪ್ರತಿಭಟನೆ ಮಾಡಬೇಕಾಗುತ್ತೆ." ಎಂದು ಎಚ್ಚರಿಕೆ ನೀಡಿದ್ದಾರೆ.

'ಅವರಿವರ ಅಭಿಮಾನಿ ಅಂತ ಹೋರಾಟ ಮಾಡಲ್ಲ'
"ದರ್ಶನ್ ಅವರೇ ನಿಮ್ಮ ಮನೆಗೆ ಕಲ್ಲು ಹೊಡೆದಾಗ, ಇದೇ ರಾಜರಾಜೇಶ್ವರಿ ಸರ್ಕಲ್ನಲ್ಲಿ ನಿಂತು ನಾವು ಹೋರಾಟ ಮಾಡಿದ್ದೇವೆ. ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ರಾಬರ್ಟ್ ಚಲನಚಿತ್ರಕ್ಕೆ ತೊಂದರೆ ಆದಾಗ ಹೋರಾಟ ಮಾಡಿದ್ದೇವೆ. ಅವರ ಅಭಿಮಾನಿ, ಇವರ ಅಭಿಮಾನಿ ಅಂತ ಹೋರಾಟ ಮಾಡಿಲ್ಲ. ಕನ್ನಡಿಗರಿಗೆ ತೊಂದರೆ ಆಗಬಾರದು ಅಂತ ನಾವು ಹೋರಾಟ ಮಾಡಿರೋದು. ಮೊನ್ನೆ ರಿಜಿಸ್ಟರ್ ಮಾಡಿದ್ದಾರೆ. ಅದ್ಯಾರೋ ಜುಟ್ಟು ಪುನೀತ್ ಕರೆಹಳ್ಳಿ ಅನ್ನೋನು ವಕಾಲತ್ತು ವಹಿಸಿಕೊಂಡು ರಾಜ್ಕುಮಾರ್ ಕುಟುಂಬವನ್ನು ತೇಜೋವಧೆ ಮಾಡಲು ಬಂದರೆ, ಸರಿಯಾದ ರೀತಿಯಲ್ಲಿ ಬುದ್ಧಿ ಕಲಿಸಬೇಕಾಗುತ್ತೆ."

ಅಪ್ಪು ಯಾರ ಬಗ್ಗೆನೂ ಮಾತಾಡುತ್ತಿರಲಿಲ್ಲ
"ನಾನು ಹೊಸಪೇಟೆಯಲ್ಲಿಯೇ ಬಂದು ಹೋರಾಟ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದೇವೆ. ಯಾಕಂದ್ರೆ ಯಾವತ್ತಾದ್ರೂ, ರಾಜ್ಕುಮಾರ್ ಕುಟುಂಬ ಬೇರೆ ನಟರ ಬಗ್ಗೆ ಮಾತಾಡಿದ್ದು ನೋಡಿದ್ದೀರಾ? ಪುನೀತ್ ರಾಜ್ಕುಮಾರ್ ಯಾರ ಬಗ್ಗೆ ಮಾತಾಡಿದ್ದನ್ನೂ ನೋಡಿದ್ದೀರಾ? " ಎಂದು ದರ್ಶನ್ ಹಾಗೂ ಅವರ ಅಭಿಮಾನಿಗಳಿಗೆ ಕನ್ನಡ ಪರ ಹೋರಾಟಗಾರ ಪ್ರಶ್ನೆ ಮಾಡಿದ್ದಾರೆ.

'ಮನೆ ಮುಂದೆ ಹೋರಾಟ ಮಾಡಬೇಕಾಗುತ್ತೆ'
"ನಿಮ್ಮ ಮೇಲೆ ಚಪ್ಪಲಿ ಎಸೆದಿದ್ದಾರೆ ಅದಕ್ಕೆ ಬೇಸರ ವ್ಯಕ್ತಪಡಿಸುತ್ತೇವೆ. ಆ ಕಿಡಿಗೇಡಿಗಳನ್ನು ಬಂಧಿಸಬೇಕು. ಆದರೆ, ನಟ- ನಟರ ನಡುವೆ ಗಲಾಟೆ ತಂದಿಟ್ಟು ಚಳಿಕಾಯಿಸಿಕೊಳ್ಳೋದು ಸರಿಯಾದ ನಿರ್ಧಾರ ಅಲ್ಲ. ಬೇರೆ ರಾಜ್ಯದ ಜನರು ನೋಡಿ ನಗುವಂತಹದ್ದು ಆಗಬಾರದು. ಈ ರಾಜ್ಯದಲ್ಲಿ ನಾವೆಲ್ಲ ಒಂದೇ ಅನ್ನೋದು ಸಾಬೀತು ಪಡಿಸಬೇಕು. ನಿಮ್ಮ ಅಭಿಪ್ರಾಯವನ್ನು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸಿ, ಇಲ್ಲಾ ಅಂದ್ರೆ ನಿಮ್ಮ ಮನೆ ಮುಂದೆ ಹೋರಾಟ ಮಾಡಬೇಕಾಗುತ್ತೆ."


Click it and Unblock the Notifications











